Advertisement

ಹಿಂದಿನ ಮುಖ್ಯಾಧಿಕಾರಿ ಹಾಜರಿಗೆ ವಿರೋಧ

11:39 AM Dec 11, 2018 | |

ಮುದ್ದೇಬಿಹಾಳ: ಪಟ್ಟಣದ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಮತ್ತೇ ವರ್ಗಗೊಂಡಿರುವ ಹಿಂದಿನ ಮುಖ್ಯಾಧಿಕಾರಿ ಎಸ್‌.ಎಸ್‌. ಬಾಗಲಕೋಟ ಅವರನ್ನು ಹಾಜರು ಮಾಡಿಕೊಳ್ಳಬಾರದು ಮತ್ತು ಕೇವಲ 3 ತಿಂಗಳ ಹಿಂದೆ ಇಲ್ಲಿನ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಬಂದಿರುವ ಎಸ್‌.ಎಫ್‌. ಈಳಗೇರ ಅವರನ್ನು ವರ್ಗಾಯಿಸದೇ ಅವರನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಪುರಸಭೆಯ ಕೆಲ ಸದಸ್ಯರು ವಿಜಯಪುರದ ಅಪರ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

Advertisement

ಬಾಗಲಕೋಟ ಅವರನ್ನು ಮುದ್ದೇಬಿಹಾಳ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾಯಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಬಾಗಲಕೋಟ ಅವರು ಇದೇ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿದ್ದಾಗ ನಿಗದಿತ ಅವಧಿಯಲ್ಲಿ ಕಾಮಗಾರಿ ಟೆಂಡರ್‌ ಕರೆಯುವುದಾಗಲಿ, ಕಾಮಗಾರಿ ಮುಕ್ತಾಯಗೊಳಿಸುವುದಾಗಲಿ ಮಾಡಿಲ್ಲ. ಕೆಲ ಕಾಮಗಾರಿಗಳನ್ನು ನಿಯಮ ಬಾಹಿರವಾಗಿ ಕೈಗೊಂಡು ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. 

ಹಿಂದಿನ ಮುಖ್ಯಾಧಿಕಾರಿ ಬಾಗಲಕೋಟ ಅವರು ಡಸ್ಟಬಿನ್‌ ಟೆಂಡರ್‌ ಅನುಮೋದನೆ ನೀಡಲು ವಿಳಂಬ ಮಾಡಿದ್ದಾರೆ. 2018-19ನೇ ಸಾಲಿನ 14ನೇ ಹಣಕಾಸು ಯೋಜನೆ, ಎಸ್‌ಎಫ್‌ಸಿ ಅಡಿ ಬಿಡುಗಡೆಯಾದ ಅನುದಾನಕ್ಕೆ ನಿಗದಿತ ಅವಧಿಯಲ್ಲಿ ಟೆಂಡರ್‌ ಕರೆಯದೆ ವಿನಾಕಾರಣ ವಿಳಂಬ ಅನುಸರಿಸಿ ಸಾರ್ವಜನಿಕರಿಗೆ ಮೂಲ ಸೌಲಭ್ಯ ನೀಡುವಲ್ಲಿ ವಿಫಲರಾಗಿದ್ದಾರೆ. ಎಸ್‌ಎಫ್‌ಸಿ ಉಳಿಕೆ ಮೊತ್ತದ ಕ್ರಿಯಾಯೋಜನೆ ಮಂಜೂರಾಗಿದ್ದು ಟೆಂಡರ್‌ ಕರೆಯದೆ ವಿಳಂಬ ನೀತಿ ಅನುಸರಿಸಿದ್ದಾರೆ.

ಮುದ್ದೇಬಿಹಾಳದಲ್ಲಿ ವಸತಿ ಗೃಹ ಇದ್ದರೂ ಸಹಿತ ಸ್ಥಾನಿಕವಾಗಿ ಇರದೆ ದಿನಂ ಪ್ರತಿ ವಿಜಯಪುರದಿಂದ ಮುದ್ದೇಬಿಹಾಳಕ್ಕೆ ಸಂಚರಿಸುತ್ತಿದ್ದು ಮುಖ್ಯಾಧಿಕಾರಿ ನಿವಾಸ ಆವರಣದಲ್ಲಿ ಸ್ವತ್ಛತೆ ನಗರದ ಸ್ವತ್ಛತೆಯಲ್ಲಿ ನಿರ್ಲಕ್ಷ್ಯ ತೋರಿ ಅಹಿತಕರ ಘಟನೆಗಳು ನಡೆದರೂ ಪರಿಗಣಿಸಿಲ್ಲ. ರಿಸನಂ 10/4ರಲ್ಲಿ ಮೇಲ್ವಿಚಾರಣಾ ಶುಲ್ಕ ಶೇ. 9 ಭರಿಸಿಕೊಳ್ಳದೆ ಉತಾರಿ ನೀಡಿ ಪುರಸಭೆಗೆ ಬರುವ ಆದಾಯ ಕುಂಠಿತಗೊಳಿಸಿದ್ದಾರೆ.

ಪಟ್ಟಣದ ಅಭಿವೃದ್ಧಿ ಕೆಲಸ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿಲ್ಲ. ಸಾಕಷ್ಟು ಬಾರಿ ಠರಾವು ಮಾಡಿಕೊಟ್ಟರೂ ಪುರಸಭೆ ಮಳಿಗೆ ಬಾಡಿಗೆ ಹಣ 2 ವರ್ಷದಿಂದ ವಸೂಲಿ ಮಾಡದೆ ಹಾಗೆಯೇ ಉಳಿಸಿಕೊಂಡು ತೆರಿಗೆ ವಸೂಲಿಯಲ್ಲಿ ಪ್ರಗತಿ ತೋರಿಸಿಲ್ಲ. ಇವರ ಅವಧಿಯಲ್ಲಿ ಸಾಕಷ್ಟು ಸರ್ಕಾರಿ ಜಾಗೆ, ಕೃಷಿ ಜಮೀನುಗಳಲ್ಲಿ ಅನಧಿಕೃತ ಕಟ್ಟಡ ನಿರ್ಮಾಣಗೊಂಡು ಪುರಸಭೆಗೆ ಹಾನಿ ಉಂಟು ಮಾಡಿದ್ದಾರೆ ಎನ್ನುವುದು ಸೇರಿ 9 ಪ್ರಮುಖ ಆರೋಪಗಳನ್ನು ಮನವಿಯಲ್ಲಿ ಉಲ್ಲೇಖೀಸಿದ್ದಾರೆ.

Advertisement

ಈಗಿನ ಮುಖ್ಯಾಧಿಕಾರಿ ಇಲ್ಲಿಗೆ ವರ್ಗಗೊಂಡು ಕೆಲಸಕ್ಕೆ ಹಾಜರಾಗಿ ಇನ್ನೂ 3 ತಿಂಗಳೂ ಕಳೆದಿಲ್ಲ. ಹೀಗಾಗಿ ಈಗಿರುವವರನ್ನೇ ಮುಂದುವರಿಸಬೇಕು ಮತ್ತು ಬಾಗಲಕೋಟ ಅವರನ್ನು ಹಾಜರುಪಡಿಸಿಕೊಳ್ಳಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪುರಸಭೆ ಸದಸ್ಯರಾದ ವೀರೇಶ ಹಡಲಗೇರಿ, ಅಲ್ಲಾಭಕ್ಷ ಢವಳಗಿ, ಮಹಿಬೂಬ ಗೊಳಸಂಗಿ, ಪಿ.ಆರ್‌. ಅಂಗಡಗೇರಿ, ಹನುಮಂತ ಭೋವಿ, ಸೋನಿ ಎನ್‌.ಎನ್‌., ಆರ್‌.ಬಿ. ದ್ರಾಕ್ಷಿ, ಎಸ್‌.ಎಸ್‌. ಹರಿಜನ, ಸಿ.ಎನ್‌. ಮಕಾನದಾರ ಸೇರಿದಂತೆ ಹಲವರು ಮನವಿ ಸಲ್ಲಿಸುವಾಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next