Advertisement

ಶರಾವತಿಗೆ ಅಘನಾಶಿನಿ ಅರಣ್ಯ ಸೇರ್ಪಡೆಗೆ ವಿರೋಧ

12:13 PM Sep 18, 2019 | Team Udayavani |

ಭಟ್ಕಳ: ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭಾಗ ಸೇರಿಸುವುದನ್ನು ಕೈಬಿಡುವಂತೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

Advertisement

ಮನವಿಯಲ್ಲಿ ಈಗಾಗಲೆ ಅಸ್ತಿತ್ವದಲ್ಲಿರುವ ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಕಣಿವೆಯ 30 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಸೇರ್ಪಡೆ ಮಾಡಿ ರಾಜ್ಯ ವನ್ಯಜೀವಿ ಅರಣ್ಯ ಇಲಾಖೆ ಆದೇಶ ಹೊರಡಿಸಿದ್ದರಿಂದ ಅರಣ್ಯ ಭೂಮಿಯನ್ನು ವಾಸ್ತವ್ಯ, ಸಾಗುವಳಿ, ಅವಲಂಬನೆಗಾಗಿ ಸ್ಥಳೀಯ ಅರಣ್ಯವಾಸಿಗಳು ತಲೆತಲಾಂತರದಿಂದ ಅರಣ್ಯ ಪ್ರದೇಶಗಳ ಮೇಲೆ ಅವಲಂಬಿತವಾಗಿರುವವರಿಗೆ ತೀವ್ರ ತೊಂದರೆ ಆಗಲಿದೆ. ಅರಣ್ಯವಾಸಿಗಳ ಅನುಭೋಗ, ಸ್ವತಂತ್ರ ಹಾಗೂ ಭೂ ಹಕ್ಕಿನಿಂದ ವಂಚಿತರಾಗುವ ಸಂದರ್ಭ ಬಂದೊದಗಿದೆ.

ಜಿಲ್ಲೆಯ ಅಘನಾಶಿನಿ ಕಣಿವೆಯ ಅರಣ್ಯ ಪ್ರದೇಶ, ಶರಾವತಿ ಅಭಯಾರಣ್ಯ ಸಿಂಗಳೀಕ ಇನ್ನಿತರ ವಿನಾಶದ ಅಂಚಿನ ವನ್ಯ ಜೀವಿಗಳ ಉಳಿವಿನ ಸಲುವಾಗಿ ಶರಾವತಿ ಅಭಯಾರಣ್ಯವನ್ನು 1978ರಲ್ಲೇ ರಚಿಸಲಾಗಿದೆ. ಇದರ ವ್ಯಾಪ್ತಿ 43 ಸಾವಿರ ಹೆಕ್ಟೇರ್‌ ಇದೆ. ಇದಕ್ಕೆ ಶಿವಮೊಗ್ಗ ಜಿಲ್ಲೆಯ 4 ಸಾವಿರ ಹೆಕ್ಟೇರ್‌ ಹಾಗೂ ಉತ್ತರ ಕನ್ನಡ ಜಿಲ್ಲೆಯ 44 ಸಾವಿರ ಹೆಕ್ಟೇರ್‌ ಅರಣ್ಯ ಸೇರ್ಪಡೆ ಮಾಡುವುದರಿಂದ ಅರಣ್ಯ ವನ್ಯಜೀವಿ ಸಂರಕ್ಷಣೆಗೆ ಇನ್ನಷ್ಟು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಕಣಿವೆಯ ಅರಣ್ಯ ಭೂಮಿಯನ್ನು ಅಘನಾಶಿನಿ ಸಿಂಗಳಿಕ ಸಂರಕ್ಷಿತ ಪ್ರದೇಶವೆಂದು ಘೋಷಿಸಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಶಿವಮೊಗ್ಗದಲ್ಲಿ ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಪ್ರದೇಶವನ್ನು ಸೇರಿಸುವುದಕ್ಕೆ ಅರಣ್ಯವಾಸಿಗಳ ಸಂಪೂರ್ಣ ವಿರೋಧವಿದೆ. ಅಲ್ಲದೇ ಈ ಯೋಜನೆ ತಕ್ಷಣ ಕೈಬಿಡಬೇಕೆಂದು ಹೋರಾಟಗಾರರ ವೇದಿಕೆ ಅಗ್ರಹಿಸಿದೆ.

ಜಿಲ್ಲಾ ಅರಣ್ಯ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಎ. ರವೀಂದ್ರ ನಾಯ್ಕ ಮಾತನಾಡಿ, ನಮ್ಮ ಜಿಲ್ಲೆಯ ಅರಣ್ಯ ಭೂಮಿಯನ್ನು ಶಿವಮೊಗ್ಗ ಜಿಲ್ಲಾ ಶರಾವತಿ ಅಭಯಾರಣ್ಯಕ್ಕೆ ಸೇರಿಸುವುದರಿಂದ ಇಲ್ಲಿನ ಜನರ ಜೀವನದ ಮೇಲೆ ತೀವ್ರ ಪರಿಣಾಮ ಬೀಳಲಿದ್ದು ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ದೊರೆಯುವುದು ಕಷ್ಟವಾಗುವುದು. ಅಲ್ಲದೇ ಇನ್ನು ಮುಂದೆ ಯಾವುದೇ ಸಣ್ಣಪುಟ್ಟ ಪರವಾನಗಿ ಬೇಕೆಂದರೂ ಶಿವಮೊಗ್ಗಕ್ಕೆ ಅಲೆಯಬೇಕಾಗುವುದು. ಅರಣ್ಯ ಅತಿಕ್ರಮಣದಾರರು ತಮ್ಮ ಹಕ್ಕಿನಿಂದ ವಂಚಿತರಾಗಲಿದ್ದಾರೆ ಎಂದರು. ಈ ರೀತಿ ಸರಕಾರ ಮುಂದುವರಿದರೆ ಮುಂದೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.

Advertisement

ತಾಲೂಕು ಅರಣ್ಯ ಅತಿಕ್ರಮಣದಾರರ ಹೊರಾಟ ಸಮಿತಿ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿ, ತಾಲೂಕಿನ ಅತಿಕ್ರಮಣದಾರರ ಮೂಲಭೂತ ಹಕ್ಕಿಗೇ ಕೊಡಲಿ ಏಟು ಕೊಡಲು ಹೊರಟಿರುವುದನ್ನು ಎಲ್ಲಾ ಅತಿಕ್ರಮಣದಾರರು ಒಕ್ಕೊರಲಿನಿಂದ ಖಂಡಿಸುತ್ತಾರೆ. ಇಲ್ಲಿಯತನಕ ಜನ ಪ್ರತಿನಿಧಿಗಳು, ಶಾಸಕರು, ಮಂತ್ರಿಗಳು ಯಾರೂ ಕೂಡಾ ಅತಿಕ್ರಮಣದಾರರ ಸಹಾಯಕ್ಕೆ ಬಂದಿಲ್ಲ. ಅತಿಕ್ರಮಣದಾರರ ಸಮಸ್ಯೆಗಳನ್ನು ಕೇಳಲಿಕ್ಕೂ ಜನ ಪ್ರತಿನಿಧಿಗಳಿಗೆ ಸಮಯವಿಲ್ಲ ಎನ್ನುವಂತಾಗಿದೆ ಎಂದರು.

ರಾಜ್ಯಪಾಲರಿಗೆ ಬರೆದ ಮನವಿಯನ್ನು ಜಿಲ್ಲಾ ಸಂಚಾಲಕ ದೇವರಾಜ ಮರಾಠಿ ಓದಿದರು. ಸಹಾಯಕ ಕಮಿಷನರ್‌ ಅನುಪಸ್ಥಿತಿಯಲ್ಲಿ ಕಚೇರಿ ಸಹಾಯಕ ಎಲ್.ಎ. ಭಟ್ಟ ಮನವಿ ಸ್ವೀಕರಿಸಿದರು.

ಅತಿಕ್ರಮಣ ಹೋರಾಟಗಾರರ ವೇದಿಕೆಯ ಸುಲೇಮಾನ್‌ ಸಾಬ್‌, ಅಬ್ದುಲ್ ಖಯ್ಯೂಮ್‌, ರಿಜ್ವಾನ್‌, ಎಫ್‌.ಕೆ. ಮೊಗೇರ, ಇನಾಯತುಲ್ಲಾ ಶಾಬಂದ್ರಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next