ಬಾಗಲಕೋಟೆ: ನಾನು ಮಾಡಿದ ಸಾಧನೆಯನ್ನು ಜನರ ಮುಂದೆ ತೋರಿಸಲು ಎಂದೂ ಪ್ರಚಾರ ಬಯಸಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಅನೇಕ ಯೋಜನೆಗಳ ಮುಖಾಂತರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಶೀಘ್ರ ಸಾಧನೆಗಳ ಪಟ್ಟಿ ಮಾಡಿ ವಿರೋಧ ಪಕ್ಷದವರ ಮನೆಗೆ ಅಂಚೆ ಮೂಲಕ ಕಳುಹಿಸುವುದಾಗಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಸೋಮವಾರ ರಾಂಪುರ ಮತ್ತು ಬೇವೂರ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಗ್ರಾಮಸ್ಥರ ಮುಂದೆ ಮತಯಾಚಿಸಿ ಅವರು ಮಾತನಾಡಿದರು. ನಾನು ಪ್ರಚಾರ ಪ್ರಿಯನಲ್ಲ. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ವಿರೋಧ ಪಕ್ಷದವರ ಕೊಡುಗೆ ಶೂನ್ಯ. ಅವರಿಗೆ ನಾನೂ ಪ್ರಶ್ನೆ ಮಾಡಬಲ್ಲೆ, ಆದರೆ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ ಹೆಮ್ಮೆ ನನಗಿದೆ ಎಂದು ತಿಳಿಸಿದರು.
ಪ್ರಸ್ತುತ ಲೋಕಸಭೆಯ ಚುನಾವಣೆ ದೇಶದ ಪ್ರತಿಷ್ಠೆಯಾಗಿದೆ. ಇಡೀ ಪ್ರಪಂಚವೇ ಪ್ರಧಾನಿ ನರೇಂದ್ರ ಮೋದಿಯತ್ತ ನೋಡುತ್ತಿದೆ. ಭಾರತದ ಪರಿಕಲ್ಪನೆಯನ್ನು ಜಗತ್ತಗೆ ಸಾರಿದ ಏಕೈಕ ಪ್ರಧಾನಿ ನರೇಂದ್ರ ಮೋದಿ. ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡಿದ್ದಾರೆ ಎಂದರು.
ಲೋಕಸಭೆ ಕ್ಷೇತ್ರದ ಚುನಾವಣೆ ಉಸ್ತುವಾರಿ ಕೆ.ಎಸ್. ಈಶ್ವರಪ್ಪ, ಶಾಸಕ ಡಾ| ವೀರಣ್ಣ ಚರಂತಿಮಠ, ಮಾಜಿ ಶಾಸಕರಾದ ಪಿ.ಎಚ್. ಪೂಜಾರ, ನಾರಾಯಣಸಾ ಬಾಂಡಗೆ, ಮುಖಂಡರಾದ ಜಿ.ಎನ್. ಪಾಟೀಲ, ನಿಂಗಪ್ಪ ಮಾಗನೂರ, ಯಂಕಣ್ಣಗೌಡ ಮಾಗನೂರ, ಈರಣ್ಣ ಮುರನಾಳ, ಚೇತನ ದರಿಯನ್ನವರ, ವಿರಣ್ಣ ಹಿರೆಮಠ, ರಾಜು ರೇವಣಕರ, ರಾಧಾ ಆಕಳವಾಡಿ, ಸಂಗಣ್ಣ ಕಲಾದಗಿ ಉಪಸ್ಥಿತರಿದ್ದರು.
ಉಗ್ರರನ್ನು ಮಟ್ಟ ಹಾಕಿ ದೇಶದ ಭದ್ರತೆ ಕಾಪಾಡಲು ಮೊತ್ತೂಮ್ಮ ಮೋದಿ ಪ್ರಧಾನಿಯಾಗಬೇಕಿದೆ. ಈ ಸಲ ಪ್ರಧಾನಿಮೋದಿ ಅವರನ್ನು ಬೆಂಬಲಿಸುವುದಾಗಿ ಕೆಲವು ಆಪ್ತ ಕಾಂಗ್ರೆಸ್ ಮುಖಂಡರು ನನ್ನ ಬಳಿ ಹೇಳಿದ್ದಾರೆ.
ಕೆ.ಎಸ್. ಈಶ್ವರಪ್ಪ, ಬಿಜೆಪಿಯ ಚುನಾವಣೆ ಉಸ್ತುವಾರಿ
ಕಾಂಗ್ರೆಸನವರು ಜಾತಿ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ.ಅವರನ್ನು ವಿರೋಧಿಸಿ ದೇಶದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಮತ ನೀಡಿ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕಿದೆ.
ಡಾ| ವೀರಣ್ಣ ಚರಂತಿಮಠ, ಶಾಸಕ