Advertisement

ವಿಪಕ್ಷಗಳಿಗೆ ಧನಬಲವಿದ್ದರೆ  ನಮಗೆ ಜನಬಲವಿದೆ: ಮೋದಿ

12:40 AM Jan 21, 2019 | Team Udayavani |

ಹೊಸದಿಲ್ಲಿ: ನಮ್ಮ ವಿರೋಧಿಗಳ ಜತೆ ಹಣಬಲ ವಿದೆ. ಆದರೆ ನಮ್ಮ ಬಳಿ ಜನಬಲವಿದೆ. ಹಾಗಾಗಿ, ಲೋಕ ಸಭಾ ಚುನಾವಣೆಯಲ್ಲಿ ಗೆಲುವು ನಮ್ಮದೇ ಎನ್ನುವ ವಿಶ್ವಾಸ ವಿದೆ ಎಂದು ವಿಪಕ್ಷಗಳ ಮಹಾಘಟಬಂಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾತಿನ ತಿರುಗೇಟು ನೀಡಿದ್ದಾರೆ. 
ಗೋವಾ ಬಿಜೆಪಿಯ ಬೂತ್‌ಮಟ್ಟದ ಕಾರ್ಯಕರ್ತ ರೊಂದಿಗೆ ರವಿವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ ಮೋದಿ, ಕೋಲ್ಕತಾದಲ್ಲಿ ಶನಿವಾರ ನಡೆದ ವಿಪಕ್ಷಗಳ ಮಹಾ ಘಟಬಂಧನದ ರ್ಯಾಲಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. 

Advertisement

ಇವಿಎಂ ಟೀಕಿಸಿದ್ದ ನಾಯಕರು 
ಘಟಬಂಧನದ ರ್ಯಾಲಿ ಯಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಸಹಿತ ಅನೇಕ ನಾಯಕರು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಮತಪತ್ರ ವ್ಯವಸ್ಥೆಯೇ ಜಾರಿಗೊಳ್ಳ ಬೇಕು ಎಂದು ಆಗ್ರಹಿಸಿದ್ದರು. ಗೋವಾ ಕಾರ್ಯಕರ್ತ ರೊಂದಿಗೆ ಮಾತನಾಡುವಾಗ, ಈ ವಿಚಾರ ಪ್ರಸ್ತಾವಿಸಿದ ಮೋದಿ, “ಬಿಜೆಪಿ ವಿರುದ್ಧ ಒಗ್ಗೂಡಿರುವ ಎಲ್ಲ ವಿಪಕ್ಷಗಳಿಗೂ ತಮ್ಮ ರಾಜ್ಯಗಳಲ್ಲಿ ಸೋಲುವ ಭೀತಿ ಆವರಿಸಿದೆ. ಅದನ್ನು ಮರೆ ಮಾಚಲು ಇವಿಎಂ ಕಾರ್ಯ ವೈಖರಿಯ ಬಗ್ಗೆ ಅನು ಮಾನ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆಯಾಗಿ ಹೇಳ ಬೇಕೆಂದರೆ, ವಿಪಕ್ಷಗಳ ಮಹಾ ಘಟಬಂಧನವು ಭ್ರಷ್ಟಾಚಾರ, ನಕಾರಾ ತ್ಮಕತೆ, ಅಸ್ಥಿರತೆಯ ಸಂಕೇತ’ ಎಂದು ಟೀಕಿಸಿದ್ದಾರೆ.

ಗಣಿಗಾರಿಕೆ ಸಮಸ್ಯೆ ಪರಿಹಾರ
ಈ ನಡುವೆ, “ಇದೇ ವರ್ಷದ ಮಾರ್ಚ್‌ನಿಂದ ಗೋವಾದಲ್ಲಿ ಸ್ತಬ್ಧವಾಗಿರುವ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಕಾನೂನಾತ್ಮಕ ಚೌಕಟ್ಟಿ ನಲ್ಲಿ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮೋದಿ ಭರವಸೆ ನೀಡಿದ್ದಾರೆ.

ಪಾರೀಕರ್‌ಗೆ ಶುಭಕಾಮನೆ
ಹಲವಾರು ದಿನಗಳಿಂದ ಅನಾರೋಗ್ಯ ಪೀಡಿತರಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪಾರೀಕರ್‌ ಅವರು ಶೀಘ್ರ ಗುಣಮುಖ ರಾಗಲೆಂದು ಮೋದಿ ಹಾರೈಸಿದರು. ಅವರ ನಾಯಕತ್ವ ಗುಣವನ್ನು ಕೊಂಡಾಡಿದ ಪ್ರಧಾನಿ, “ಪಾರೀಕರ್‌ ಅವರು ಆಧುನಿಕ ಗೋವಾದ ನಿರ್ಮಾತೃ’ ಎಂದು ಬಣ್ಣಿಸಿದರು. 

ಸಿನ್ಹಾ ವಿರುದ್ಧ ಕ್ರಮ? 
ವಿಪಕ್ಷಗಳ ಮಹಾ ಘಟಬಂಧನದ ರ್ಯಾಲಿಯಲ್ಲಿ ಪಾಲ್ಗೊಂಡು, ಬಿಜೆಪಿಗೆ ಇರುಸು ಮುರುಸು ಉಂಟುಮಾಡಿರುವ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರ ವಿರುದ್ಧ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. 

Advertisement

ಸಿನ್ಹಾ ನಡೆ ಬಿಜೆಪಿಯ ಬಹುಪಾಲು ನಾಯಕರನ್ನು ಕೆರಳಿ ಸಿದ್ದು, ಸಿನ್ಹಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. 

ಇವಿಎಂ ಕುರಿತು ಫಾರೂಕ್‌ ಅಬ್ದುಲ್ಲಾ ಅವರ ಮಾತನ್ನು ಕಾಂಗ್ರೆಸ್‌ ಒಪ್ಪುವುದಾದರೆ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಗಳಿಸಿದ ಯಶಸ್ಸೂ ಮೋಸದಿಂದ ಆದದ್ದೇ?
ರಾಮ್‌ ಮಾಧವ್‌, ಬಿಜೆಪಿ ನಾಯಕ

ಬಿಜೆಪಿ ವಿರುದ್ಧದ ವಿಪಕ್ಷಗಳ ಮೈತ್ರಿಯ ನೇತೃತ್ವವನ್ನು ಕಾಂಗ್ರೆಸ್‌ ವಹಿಸಿಕೊಳ್ಳಬೇಕು. ಜತೆಗೆ, ಪ್ರಾದೇಶಿಕ ಪಕ್ಷಗಳಿಗೂ ಸೂಕ್ತ ಸ್ಥಾನಮಾನ ನೀಡುವ ಹೃದಯವೈಶಾಲ್ಯವನ್ನು ಕಾಂಗ್ರೆಸ್‌ ಮೆರೆಯಬೇಕು.
ತೇಜಸ್ವಿ ಯಾದವ್‌, ಆರ್‌ಜೆಡಿ ನಾಯಕ

ಮೋದಿಯವರಿಗೆ ಪರ್ಯಾಯವಾದ ನಾಯಕ ಮತ್ತೂಬ್ಬರಿಲ್ಲದಿರುವುದರಿಂದ ಮೋದಿ ಹೊರತಾದ ಬೇರೊಂದು ಸರಕಾರ ಅಸ್ತಿತ್ವಕ್ಕೆ ಬಂದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ.
ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ 

ನಾವು ಪ್ರಧಾನಿ ಮೋದಿಯವರ ಗುಲಾಮರಲ್ಲ. ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಆವಶ್ಯಕತೆ ನಮಗಿಲ್ಲ.
 ಮಮತಾ ಬ್ಯಾನರ್ಜಿ, ಪ.ಬಂಗಾಳ ಸಿಎಂ

ಮೋದಿ ಐದು ವರ್ಷಗಳ ಚಾಲೆಂಜ್‌
ಇದೇ ವೇಳೆ, ಸಾಮಾಜಿಕ ಜಾಲತಾಣದಲ್ಲಿ ಜನಸಾಮಾನ್ಯರಿಗಾಗಿ ಶುರುವಾಗಿರುವ “5 ವರ್ಷಗಳ ಚಾಲೆಂಜ್‌’ ಅನ್ನು ತಮ್ಮ ಸರಕಾರದ ಪರವಾಗಿ ಸ್ವೀಕರಿಸಿದ ಮೋದಿ, ” ಐದು ವರ್ಷಗಳ ಹಿಂದೆ ಭಾರತ, ಜಗತ್ತಿನ ಅತಿ ದುರ್ಬಲ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿತ್ತು. ಈಗ, ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನ ಐದು ರಾಷ್ಟ್ರಗಳ ಪಟ್ಟಿಗೆ ಸೇರಿದೆ’ ಎಂದಿದ್ದಾರೆ. “5 ವರ್ಷಗಳ ಹಿಂದೆ, ವಿಶ್ವಮಟ್ಟದ ಪತ್ರಿಕೆಗಳಲ್ಲಿ ಭಾರತ ಹಗರಣಗಳ ದೇಶವೆಂದು ಹೇಳಲಾಗಿತ್ತು. ಈಗ, ಭಾರತವು ಯೋಜನೆಗಳ ರಾಷ್ಟ್ರವಾಗಿ ಬದಲಾಗಿದೆ. 5 ವರ್ಷಗಳ ಹಿಂದೆ ವ್ಯಾಪಕವಾಗಿದ್ದ ನಕ್ಸಲರ ಕಾಟ ಈಗ ಕೇವಲ ಒಂದೆರಡು ಜಿಲ್ಲೆಗಳಿಗೆ ಸೀಮಿತವಾಗಿದೆ. 5 ವರ್ಷಗಳ ಹಿಂದೆ, ಅಗತ್ಯ ಶೌಚಾಲಯಗಳಿಲ್ಲದೆ ಮಹಿಳೆಯರಿಗೆ ಮುಜುಗರ ಸ್ಥಿತಿ ಇತ್ತು. ಕಳೆದೈದು ವರ್ಷಗಳಲ್ಲಿ ದೇಶಾದ್ಯಂತ 9 ಕೋಟಿ ಶೌಚಾಲಯ ನಿರ್ಮಾಣಗೊಂಡಿದ್ದು, ನೈರ್ಮಲ್ಯ ವ್ಯಾಪ್ತಿಯು 
ಶೇ. 38ರಷ್ಟು ಹೆಚ್ಚಾಗಿದೆ’ ಎಂದಿದ್ದಾರೆ. 

ರಾಹುಲ್‌ ತಿರುಗೇಟು
ಬಂಗಾಳದಲ್ಲಿ ಮಹಾ ರ್ಯಾಲಿಯಲ್ಲಿ ವಿಪಕ್ಷಗಳು ಬಚಾವೋ, ಬಚಾವೋ ಎಂದು ಕೂಗಿದಂತೆ ಭಾಸವಾಗುತ್ತಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿಯವರೇ, ಬಚಾವೋ, ಬಚಾವೋ ಎಂದು ಕೂಗುತ್ತಿರುವುದು ಬೇರ್ಯಾರೂ ಅಲ್ಲ. ನಿಮ್ಮ ದಬ್ಟಾಳಿಕೆ ಮತ್ತು ಅಸಮರ್ಥತೆಯಿಂದ ರೋಸಿಹೋದಂಥ ನಿರುದ್ಯೋಗಿ ಯುವಕರು, ಸಂಕಷ್ಟದಲ್ಲಿರುವ ರೈತರು, ತುಳಿತಕ್ಕೊಳಗಾದ ದಲಿತರು-ಆದಿವಾಸಿಗಳು, ಅಭದ್ರತೆಯಲ್ಲಿರುವ ಅಲ್ಪಸಂಖ್ಯಾತರು, ಸಣ್ಣ ವ್ಯಾಪಾರಿಗಳು. ನಿಮ್ಮಿಂದ ಅವರನ್ನು ಮುಕ್ತಗೊಳಿಸುವಂತೆ ಬೇಡಿಕೊಳ್ಳುತ್ತಿದ್ದಾರೆ. ಇನ್ನು 100 ದಿನಗಳಲ್ಲಿ ಅವರು ಮುಕ್ತರಾಗಲಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next