Advertisement

ಗಡಿನಾಡಿನಲ್ಲೂ ಅಂಗನವಾಡಿ ಕೇಂದ್ರ ತೆರೆಯಿರಿ

11:40 AM Jan 18, 2019 | |

ದೇವರಹಿಪ್ಪರಗಿ: ತ್ರಿಶಂಕು ಸ್ಥಿತಿಯಲ್ಲಿರುವ ಗಡಿನಾಡಿನ ಮಕ್ಕಳ ಶಿಕ್ಷಣದ ಬುನಾದಿಗೆ ಅಂಗನವಾಡಿಗಳ ಅವಶ್ಯಕತೆಯಿದ್ದು, ರಾಜ್ಯ ಸರಕಾರ ಈ ಕುರಿತು ಕಾಳಜಿ ವಹಿಸಬೇಕೆಂದು ಅಕ್ಕಲಕೋಟೆಯ ಮಂಗರೂಳೆ ಪ್ರೌಢಶಾಲೆ ವಿದ್ಯಾರ್ಥಿನಿ ವರ್ಷಾರಾಣಿ ಪ್ರಚಂಡೆ ಆಗ್ರಹಿಸಿದಳು.

Advertisement

ಪಟ್ಟಣದ ಸಿದ್ಧೇಶ್ವರ ಶಾಲೆಯಲ್ಲಿ ನಡೆದ 9ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ‘ಹೊಸ ಚಿಗುರು-ಹಳೇ ಬೇರು’ ಗೋಷ್ಠಿಯಲ್ಲಿ ‘ಗಡಿನಾಡಿನಲ್ಲಿ ಕನ್ನಡ ಮಕ್ಕಳ ಸಮಸ್ಯೆಗಳು’ ಕುರಿತು ಮಾತನಾಡಿದಳು. ಗಡಿನಾಡಿನ ಮಕ್ಕಳಾದ ನಾವು ಅನಿವಾರ್ಯವಾಗಿ ಮರಾಠಿ ಭಾಷೆಯಲ್ಲಿ ಅಂಗನವಾಡಿ ಕಲಿತು ನಂತರ ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಯುವಂತಾಯಿತು. ಇದರಿಂದ ಕನ್ನಡ ಶಬ್ದಗಳ ಬಳಕೆಯಲ್ಲಿ ಸ್ವಲ್ಪ ಅಡಚಣೆಯಾಗಿ ಭಾಷಾ ದ್ವಂದ್ವತೆಗೆ ಒಳಗಾಗುವಂತಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಗಡಿನಾಡಿನಲ್ಲಿಯೂ ಅಂಗನವಾಡಿಗಳನ್ನು ಆರಂಭಿಸಲಿ ಜೊತೆಗೆ ಗಡಿನಾಡಿನ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಮರಾಠಿ ಭಾಷಿಕರು ನಮ್ಮ ನೆರೆ, ಕನ್ನಡಿಗರಿಗೆ ನಾವು ಬರೆ ಕಷ್ಟದ ಹೊರೆ. ಆದ್ದರಿಂದ ಕರ್ನಾಟಕ ಸರಕಾರ ಎಳೆಯಲಿ ನಮ್ಮ ಸಮಸ್ಯೆಗಳಿಗೆ ಶಾಶ್ವತ ಬರೆ ಎಂದು ಅನಿಸಿಕೆ ವ್ಯಕ್ತಪಡಿಸಿದಳು.

ವಿಜಯಪುರ ರಾಮಕೃಷ್ಣ ವಸತಿ ವಿದ್ಯಾಲಯದ ಭೂಮಿಕಾ ಪೂಜಾರಿ ‘ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು’, ಅಕ್ಕಲಕೋಟೆ ಮಂಗರೂಳೆ ಪ್ರೌಢಶಾಲೆಯ ಸೃಷ್ಟಿ ಚಂಡಕಿ ‘ವಿವಿಧತೆಯಲ್ಲಿ ಏಕತೆ’, ಸ್ಥಳೀಯ ಸಿದ್ಧೇಶ್ವರ ಶಾಲೆಯ ಸಂಗಮ್ಮ ಬಿರಾದಾರ ‘ನಾನೇನಾಗ ಬಯಸುವೆ’, ಗೌರಿ ಮಸಬಿನಾಳ ‘ಮನೆಯೆ ಮೊದಲ ಪಾಠಶಾಲೆ’, ಮೇಘಾ ಹುಲ್ಲೂರ ‘ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರ’, ನಮ್ಮ ಮಕ್ಕಳ ಧಾಮದ ಪರಶುರಾಮ ಬಾಗಡಿ ‘ಮಕ್ಕಳ ಹಕ್ಕುಗಳು’ ಕುರಿತಾಗಿ ಉಪನ್ಯಾಸ ನೀಡಿದರು.

‘ಹಳೇಬೇರು’ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ‘ಮಕ್ಕಳ ಮೇಲಿನ ಒತ್ತಡಗಳು’ ಹಾಗೂ ಮಕ್ಕಳ ಸಾಹಿತಿ ಕೆ.ಸುನಂದಾ ‘ಮಕ್ಕಳಿಗೇಕೆ ಬೇಕು ಸಾಹಿತ್ಯ’ ಹಾಗೂ ಸಾಹಿತಿ ಗುರುಸ್ವಾಮಿ ಗಣಾಚಾರಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ‌ರು. ಸುನೀಲ ಸಾವಳಗಿ ನಿರೂಪಿಸಿದರು. ಕವಿತಾ ಸಣ್ಣಕ್ಕಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next