Advertisement

One Nation One Election ಕೇಂದ್ರ ಸರಕಾರದ ರಾಜಕೀಯ ತಂತ್ರ; ಸಚಿವ ಎಚ್.ಕೆ. ಪಾಟೀಲ ಆರೋಪ

02:58 PM Sep 01, 2023 | Team Udayavani |

ಗದಗ: ದೇಶದಲ್ಲಿ ಕೇಂದ್ರ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಹೆಸರಿನಲ್ಲಿ ಕೇಂದ್ರ ಸರಕಾರ ತನ್ನ ಅವಧಿಯನ್ನು ಮುಂದೂಡುವ ಪ್ರಯತ್ನ ಮಾಡಿದರೆ ಜನರು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಯ ಹಾಗೂ ಹಣದ ಉಳಿತಾಯ ಕಾರಣ ನೀಡಿ, ಅಧಿಕಾರದ ಅವಧಿಯನ್ನು ಮುಂದುವರಿಸಲು ಪ್ರಯತ್ನ ಪಟ್ಟರೆ ಯಾರೂ ಸಹಿಸುವುದಿಲ್ಲ ಎಂದು ಹೇಳಿದರು.

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಬಗ್ಗೆ ನಮಗೆ ವಿಶೇಷ ಗೌರವವಿದೆ. ಆದರೆ, ಚುನಾವಣೆ ದೃಷ್ಟಿಯಿಂದ ಕೇಂದ್ರ ಸರಕಾರವು ಪೂರ್ವಾಶ್ರಮದಲ್ಲಿ ರಾಜಕೀಯ ವಾಸನೆ ಇರುವವರಿಗೆ ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಸಾಧ್ಯತೆಗಳ ಬಗ್ಗೆ ಅವಲೋಕನ ನಡೆಸಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿರುವುದು ಸರಿಯಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಪ್ರಾಮಾಣಿಕವಾಗಿದ್ದರೆ ಯಾವುದೇ ರಾಜಕೀಯ ವಾಸನೆ ಇಲ್ಲದೇ, ದೇಶವನ್ನು ಮಾತ್ರ ತಮ್ಮ ಗಮನದಲ್ಲಿಟ್ಟುಕೊಂಡ ವ್ಯಕ್ತಿತ್ವ ಹೊಂದಿರುವ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರಂತಹ ವ್ಯಕ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕಿತ್ತು. ಆದರೆ, ಪೂರ್ವಾಶ್ರಮದಲ್ಲಿ ರಾಜಕೀಯ ವಾಸನೆ ಇರುವವರಿಗೆ ಅಧ್ಯಕ್ಷರನ್ನಾಗಿ ಮಾಡಿ ಸಮಿತಿಯ ಶಿಫಾರಸ್ಸು ತೆಗೆದುಕೊಳ್ಳುವುದು ರಾಜಕೀಯ ದುರುದ್ದೇಶದ ಹೆಜ್ಜೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಳೆದ ನಾಲ್ಕು ವರ್ಷಗಳ ಹಿಂದೆಯೇ ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಕುರಿತು ಮಾತನಾಡಿದ್ದ ಕೇಂದ್ರ ಸರಕಾರ ನಾಲ್ಕು ವರ್ಷಗಳ ಕಾಲ ಸುಮ್ಮನಿದ್ದು, ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ದೇಶದ ಪ್ರತಿ ಜಿಲ್ಲೆಗಳಿಗೂ ಇವಿಎಂ ಯಂತ್ರಗಳು ತಲುಪಿದ್ದು, ಪರಿಶೀಲನೆಯೂ ನಡೆದಿವೆ. ಈ ವೇಳೆ ಒಂದು ರಾಷ್ಟ್ರ ಒಂದು ಚುನಾವನೆಯ ಸಮಿತಿ ರಚಿಸುವ ಪ್ರಯತ್ನ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ಕೆಲಸವಾಗಿದೆ.

Advertisement

ಇದನ್ನೂ ಓದಿ:Court Verdict: 1995ರ ಜೋಡಿ ಕೊಲೆ: ಮಾಜಿ ಸಂಸದ ಪ್ರಭುನಾಥ್ ಸಿಂಗ್ ಗೆ ಜೀವಾವಧಿ ಶಿಕ್ಷೆ

ಒಂದು ರಾಷ್ಟ್ರ ಒಂದು ಚುನಾವಣೆಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎನ್ನುವುದನ್ನು ನೋಡಬಾರದು. ಅವರು ಗೆಲ್ಲುತ್ತಾರೆ, ಇವರು ಸೋಲುತ್ತಾರೆ ಎಂಬುದು ಪ್ರಶ್ನೆಯಲ್ಲ. ಚುನಾವಣಾ ಪ್ರಕ್ರಿಯೆ ಆರಂಭವಾದ ಈ ಸಂದರ್ಭದಲ್ಲಿ ಈ ಸಮಿತಿ ಮಾಡಿದ್ದೇ ಅತ್ಯಂತ ದುರ್ದೈವಕರವಾದಂತಹುದು. ಪ್ರಜಾಪ್ರಭುತ್ವದಲ್ಲಿ ಅವಿಶ್ವಾಸ ಮೂಡಿಸುವಂತಹ ಪ್ರಕ್ರಿಯೆ ಮಾಡಿರುವಂತಹುದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಕಾವೇರಿ ನೀರಿನ ವಿಚಾರದಲ್ಲಿ ಸಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ನಮ್ಮ ಸರಕಾರ ಕಾನೂನಾತ್ಮಕವಾಗಿ ಎಲ್ಲ ಹೋರಾಟ ಮಾಡುತ್ತಿದೆ. ರೈತರಿಗಾಗಿ ಯಾವ ಅನುಕೂಲತೆಗಳನ್ನು ಮಾಡಬೇಕು, ಹೇಗೆ ರಕ್ಷಣೆ ಮಾಡಬೇಕು ಎಂಬುದನ್ನು ಚಿಂತಿಸಲಾಗುತ್ತಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ ಅವರು 45 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ. ಪಾಟೀಲ ಅವರು, ಅವರು ಇವರನ್ನು ಸಂಪರ್ಕಿಸಿದ್ದಾರೋ, ಇವರು ಅವರನ್ನು ಸಂಪರ್ಕ ಮಾಡುತ್ತಿದ್ದಾರೋ ಗೊತ್ತಿಲ್ಲ. ಇವೆಲ್ಲವುಗಳ ಉಹಾಪೋಹ. ನಮ್ಮ ಸರಕಾರದ ಐದು ಗ್ಯಾರಂಟಿಗಳ ಯಶಸ್ಸಿನಿಂದ ಜನರ ಮನಸ್ಸನ್ನು ಕದಲಿಸಲು ಹೇಳಿರುವಂತಹ ರಾಜಕೀಯ ಮಾತು ಅವರದ್ದಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next