Advertisement

ಒಂದು ರಾಷ್ಟ್ರ; ಒಂದು ಚುನಾವಣೆ; ಬದಲಾವಣೆಗೆ ನಾಂದಿ

11:25 PM Mar 26, 2021 | Team Udayavani |

ರಾಷ್ಟ್ರದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಕೆಲವೊಮ್ಮೆ ಅನಾವಶ್ಯಕ ಚರ್ಚೆಗಳು ಕಾಲಹರಣಕ್ಕೆ ಕಾರಣವಾಗುತ್ತದೆ. “ಒಂದು ರಾಷ್ಟ್ರ ಒಂದು ಚುನಾವಣೆ’ ಈ ಚರ್ಚೆಗಳಿಂದ ಹೊರತಾಗಿರಬೇಕಾದ್ದು. ಹಾಗೆಂದಾಕ್ಷಣ ಇದು ಪ್ರಜಾಪ್ರಭುತ್ವಕ ವಿರೋಧಿ  ನಿಲುವಲ್ಲ.
ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳ ಚುನಾ ವಣೆಗಳನ್ನು ಏಕಕಾಲಿಕವಾಗಿ ನಡೆಸಬೇಕೆಂಬ ಚರ್ಚೆ ಹೊಸತೇ ನಲ್ಲ. 1967ರವರೆಗೆ ಭಾರತದಲ್ಲಿ ಚುನಾವಣೆಗಳು ಇದೇ ದಿಸೆ ಯಲ್ಲಿ ನಡೆದಿದ್ದವು. 1968-69ರ ಕಾಲದಲ್ಲಿ ಕೆಲವು ವಿಧಾನ ಸಭೆಗಳ ವಿಸರ್ಜನೆಯಿಂದ 1970ರಲ್ಲಿ ಲೋಕಸಭೆಯ ವಿಸರ್ಜನೆ ಈ ವ್ಯವಸ್ಥೆಯ ದಿಕ್ಕನ್ನು ಬದಲಿಸಿತು.

Advertisement

ಚುನಾವಣ ಆಯೋಗದ 1983ರ ವಾರ್ಷಿಕ ವರದಿ, 2014 ಬಿಜೆಪಿ ಚುನಾವಣ ಪ್ರಣಾಳಿಕೆ, 2016ರಲ್ಲಿ ಮೋದಿ ಹೇಳಿಕೆ, 2017ರಲ್ಲಿ ನೀತಿ ಆಯೋಗದ ವರ್ಕಿಂಗ್‌ ಪೇಪರ್‌, 2018ರ ಲಾ ಕಮಿಷನ್‌ನ ವರ್ಕಿಂಗ್‌ ಪೇಪರ್‌ ಎಲ್ಲವೂ ಈ ಬಗ್ಗೆ ತಮ್ಮ ತಿಳಿವಳಿಕೆಯನ್ನು ಪ್ರಕಟಪಡಿಸಿವೆ. ಈ ಚರ್ಚೆಯಲ್ಲಿರುವುದು ಕೇವಲ ಮೂರು ಅಂಶಗಳು; ಒಂದು ಈ ರೀತಿಯ ಬದ ಲಾವಣೆಯು (Procedural) ಪ್ರಕ್ರಿಯಾತ್ಮಕ ಪ್ರಜಾಪ್ರ ಭುತ್ವಕ್ಕೆ ಮಹತ್ವ ನೀಡುತ್ತದೆ. ಎರಡನೆಯದು ಈ ಮೂಲಕ ಅಸ್ತಿತ್ವ ಸೂಚಕ (Substantive) ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಮೂರನೆಯದಾಗಿ ಈ ಮೂಲಕ ಏಕಪಕ್ಷ ಹಾಗೂ ಏಕ ವ್ಯಕ್ತಿಯ ಆಡಳಿತ ಮತ್ತೂಮ್ಮೆ ಅ ಪಥ್ಯ ಸಾಧಿಸುತ್ತದೆ ಎಂಬುದು.

ಮೊದಲಿಗೆ ಭಾರತದಲ್ಲಿ ಊಳಿಗಮಾನ್ಯ ರಾಜಕೀಯ ವ್ಯವಸ್ಥೆ ಸುಧಾರಿಸುವ ಹಂತದಲ್ಲಿ ಚುನಾವಣೆಗಳು ಈ ಪ್ರಕ್ರಿಯಾತ್ಮಕ ಪ್ರಜಾಪ್ರಭುತ್ವದ ತಳಹದಿಯಾಗಿದೆ. ಇದು ಅವಶ್ಯಕ. ಆದರೆ ಇದೇ ಪ್ರಜಾಪ್ರಭುತ್ವವಲ್ಲ. ಮರಗಳಿದ್ದರೆ ಕಾಡು. ಆದರೆ ಮರವೇ ಕಾಡಲ್ಲ ಎಂಬಂತೆ ಚುನಾವಣೆಗಳು ಪ್ರಜಾಪ್ರಭುತ್ವದ ಆರೋಗ್ಯ ಸೂಚಕಗಳು. ಪ್ರತಿ ಐದು ವರ್ಷಗಳಿಗೊಮ್ಮೆ ಇದು ನಡೆದರೆ ಮತದ ಹಕ್ಕನ್ನು ಚಲಾಯಿಸುವ ಜನತೆಯ ವೈಚಾರಿಕತೆ ಇದರಿಂದ ಪ್ರತಿಬಿಂಬಿಸಲ್ಪಡುತ್ತದೆ. ಪ್ರಜಾಪ್ರಭುತ್ವದ ಉಳಿವಿಕೆಗೆ ಇದು ಮೂಲ ಮಂತ್ರವಾಗುತ್ತದೆ.

ಎರಡನೆಯದಾಗಿ ಅಸ್ತಿತ್ವಸೂಚಕ (Substantive) ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವುದು. ಇಲ್ಲಿ ವಿಧಾನ ಹಾಗೂ ಲೋಕಸಭೆಗಳ ಕಾಲಮಿತಿಯನ್ನು ಐದು ವರ್ಷಗಳಿಗೆ ಶಾಶ್ವತವಾಗಿ ಮಾಡಿ, ಈ ಕಾಲದಲ್ಲಿ ಅಸ್ತಿತ್ವದಲ್ಲಿನ ಸರಕಾರಗಳು ವಿಶ್ವಾಸಮತದಲ್ಲಿ ಸೋತರೆ, ಪಕ್ಷಾಂತರ, ಸಂವಿಧಾನಿಕ ಕಾರ್ಯಗಳ ಕುಸಿಯುವಿಕೆ ಹಾಗೂ ಇನ್ನಿತರ ಕಾರಣಗಳಿಂದ ಕಾಲಾವಧಿ ಪೂರ್ಣಗೊಳಿಸದ ಸಂದರ್ಭದಲ್ಲಿ ರಾಜ್ಯವನ್ನು ರಾಷ್ಟ್ರಾಧ್ಯಕ್ಷರ ಆಡಳಿತ, ರಾಜ್ಯಪಾಲರ ಆಡಳಿತದ ಅಡಿಯಲ್ಲಿ ತರುವ ವ್ಯವಸ್ಥೆ ಪ್ರಜಾಪ್ರಭುತ್ವ ವಿರೋಧಿ ಎಂದು ವಾದಿಸುವ ಬುದ್ಧಿವಂತರು ಈಗಾಗಲೇ ಈ ನಿಟ್ಟಿನಲ್ಲಿ ಆದ ಹಲವಾರು ಸರಕಾರದ ಅಪ್ರತಿನಿಧಿತ್ವತೆ ಬಗ್ಗೆ ಏನು ಮಾಡಿದ್ದಾರೆ. ಬೊಮ್ಮಾಯಿ ಕೇಸ್‌’ ನಲ್ಲಿ ಈ ವಿಚಿತ್ರ ಬೆಳವಣಿಗೆಗೆ ಪರಿಹಾರ ಇದೆ ಎಂದು ಕೊಂಡವರಿಗೂ ಇದು ತಿಳಿಯಲಾರದ ಒಗಟಾಗಿದೆ.

ಇಲ್ಲಿ ಡಾ|ಬಿ.ಆರ್‌.ಅಂಬೇಡ್ಕರ್‌ ಅವರು ಹೇಳಿದಂತೆ ಸಂವಿಧಾನದ ತಪ್ಪಿಲ್ಲ. ಅದನ್ನು ತಪ್ಪಾಗಿಸುವಂತೆ ನಡೆದುಕೊಳ್ಳುವ ರಾಜಕಾರಣಿಗಳ ಜಾಣತನಕ್ಕೆ ವೈಚಾರಿಕತೆ ಹೊಂದಿರುವ ಮತದಾರನ ಪ್ರತಿಕ್ರಿಯೆಯಾದರೂ ಏನು? ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಹಣ ಮತ್ತಿತರ ಆಮಿಷಕ್ಕೆ ಬಲಿ ಬಿದ್ದು ಮತಗಳನ್ನೇ’ ಮಾರಿಕೊಳ್ಳುವ ಈ ಜನತೆಗೆ, ಪಕ್ಷಗಳಿಗೆ ಇದರಿಂದ ಮುಕ್ತಿ ಬೇಡವೇ? ಅಥವಾ ಅಸ್ತಿತ್ವ ಸೂಚಕ ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಜಾಪ್ರಭುತ್ವದ ಬುನಾದಿಯನ್ನೇ ಭ್ರಷ್ಟಗೊಳಿಸುವುದೇ ಸರಿಯೇ? ಚಿಂತಿಸಿ.

Advertisement

ಇನ್ನು ಮೂರನೆಯದಾಗಿ ಏಕಪಕ್ಷ-ಏಕವ್ಯಕ್ತಿಯ ಪ್ರಜಾಪ್ರಭುತ್ವದ ಬಗ್ಗೆ ಭಯ ಹುಟ್ಟಿಸುವ ನಾಯಕರು ಅಧಿಕಾರದಲ್ಲಿ ಅದರ ಚಲಾವಣೆಯಲ್ಲಿ ಅಡೆತಡೆ ಸಮ ತೂಕ (ಚೆಕ್ಸ್ ಆ್ಯಂಡ್‌ ಬ್ಯಾಲೆನ್ಸ್‌) ಬಗ್ಗೆ ಓದಿಕೊಳ್ಳಬೇಕು. ಮಾಂಟೆಸ್ಕ್ ಇದನ್ನೇ ತನ್ನ ಥಿಯರಿ ಆಫ್‌ ಸಪರೇಷನ್‌ ಆಫ್‌ ಪವರ್ಸ್‌’ನಲ್ಲಿ ಹೇಳಿ- ಯಾವ ವ್ಯಕ್ತಿಯೂ ಏಕಪಕ್ಷವಾಗಿ, ವ್ಯಕ್ತಿಯಾಗಿ ಪ್ರಜಾಪ್ರಭುತ್ವವನ್ನು ದುರುಪಯೋಗ ಪಡಿಸದಂತೆ ಪ್ರಜಾಪ್ರಭುತ್ವದ ಸರ್ವಾಧಿಕಾರವನ್ನು ಜನತೆಗೆ’ ಸಮರ್ಪಿಸಲಾಗಿದೆ ಹಾಗೂ ಅಧಿಕಾರ ವಿಭಜನೆ ಮಾಡಲಾಗಿದೆ ಎಂದಿದ್ದಾರೆ. ಹೀಗಾಗಿ ನಮ್ಮ ಒಳಿತಿಗಾಗಿ ನಾವು ಬದಲಾವಣೆ ತಂದುಕೊಳ್ಳಬೇಕು.

ಯಾವುದೇ ಬದಲಾವಣೆಯು ಪ್ರಯತ್ನ ಟೀಕೆಗಳಿಂದ ಮುಕ್ತಿ ಹೊಂದಿರಲಾರದು. ಹಾಗೆಯೇ ಈ ಒಂದು ರಾಷ್ಟ್ರ-ಒಂದು ಚುನಾವಣೆ’ ಕೂಗು ಕೂಡಾ ಆಗು-ಹೋಗು ಗಳ ಬಗ್ಗೆ ಚಿಂತನೆ-ಚರ್ಚೆ, ಪರ-ವಿರೋಧಗಳನ್ನು ಪರಾಮರ್ಶಿ ಸಬೇಕು. ಆದರೆ ಹಾಗೆ ಮಾಡುವುದಷ್ಟೇ ಪ್ರಜಾಪ್ರಭುತ್ವದ ತಣ್ತೀÌ, ಮೂಲಾರ್ಥ ಎಂದುಕೊಂಡರೆ ಅದು ತಪ್ಪಾಗುತ್ತದೆ. ಯಾವುದೇ ಚರ್ಚೆ ಇತಿ-ಮಿತಿ ಹೊಂದಿದ್ದು, ನಿರ್ಧಾರ ತೆಗೆದು ಕೊಳ್ಳಲು ಪೂರಕವಾಗಿರಬೇಕು. ಹಾಗಾಗದ ಪಕ್ಷದಲ್ಲಿ ಕೊನೆಯೇ ಇಲ್ಲದ ಚರ್ಚೆ ಬದಲಾವಣೆಯನ್ನು ಸಾಧಿಸಲಾಗದಂತಾಗಿಸುತ್ತದೆ.

ಈ ಮೇಲಿನ ಇಡೀ ಚರ್ಚೆಯ ಮೂಲಾಂಶ ಪ್ರಜಾಪ್ರಭುತ್ವ. ತನ್ನಲ್ಲಿ ತಾನೇ ಪ್ರಾಯೋಗಿಕವಾಗಿ ಬದಲಾವಣೆಗೆ ಪೂರಕವಾಗಿ ಶ್ರಮಿಸದಿದ್ದರೆ, ಅದರೊಳಗಿನ ತಪ್ಪುಗಳು ಇಡೀ ಪ್ರಜಾಪ್ರಭುತ್ವದ ಬುನಾದಿಯನ್ನೇ ನಾಶಗೊಳಿಸುತ್ತದೆ ಎಂಬುದನ್ನು ತಿಳಿಸುವುದಾಗಿದೆ. ಪ್ರಸ್ತುತದಲ್ಲಿ ಭಾರತದ ಪ್ರಜಾಪ್ರಭುತ್ವವು ಚುನಾವಣೆ ಗಳಿಂದ ಮಾತ್ರ (dominate) ಬಲಿಷ್ಠವಾಗಿದೆ ಎಂಬ ಭಾವನೆಯಡಿ ಅದರ ಆಂತರ್ಯದಲ್ಲಿನ ಉತ್ತಮ ಆಡಳಿತ, ಅಭಿವೃದ್ಧಿ, ಜನಪರತೆ, ಆರ್ಥಿಕಾವಕಾಶಗಳು, ಸದಾವಕಾಶಗಳು ಬೆಳವಣಿಗೆ ಎಂಬ ಅಂಶಗಳು ಮಾಸಿ ಹೋಗಿವೆ. ಹಾಗಾಗಿ ಜನರ ಭಾವನೆಯಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಬೇಸರಿಕೆ, ಬದಲಾಯಿಸಲಾಗದ ವ್ಯವಸ್ಥೆ, ಭ್ರಷ್ಟತೆಯ ಆಗರ ಹಾಗೂ ಯಾವುದೇ ಬದಲಾವಣೆಯು ನಕಾರಾತ್ಮಕ ಎಂಬ ಭಾವನೆ ಮೂಡಿದೆ. ಇದು ಸರಿಯಲ್ಲ. ಪ್ರಜಾಪ್ರಭುತ್ವವೇ ಒಂದು ಪ್ರಯೋಗ ಅನ್ನೋದನ್ನು ನಾವು ಮರೆಯಬಾರದು.

ಭೂಪೇಂದ್ರ ಯಾದವ, ಅಮಿತಾಬ್‌ ಕಾಂತ್‌ ಇವರೆಲ್ಲರೂ ಹೇಳುವಂತೆ ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಕಾರಣಕ್ಕಾಗಿ ಯೇ ಅಭಿವೃದ್ಧಿ ಕುಂಠಿತವಾಗುವುದು ಸರಿಯಾದ ಬೆಳವಣಿಗೆಯಲ್ಲ- ಇದನ್ನು ಚರ್ಚಿಸಬೇಕಿಲ್ಲ.

ಆದರೆ ಈ ಬದಲಾವಣೆ ಹೇಳಿದಷ್ಟು ಸುಲಭವಲ್ಲ. ಸಂವಿಧಾನದ 83ನೇ ವಿಧಿ, 85ನೇ ವಿಧಿ, 172ನೇ ವಿಧಿ , 174ನೇ ವಿಧಿ, 356ನೇ ವಿಧಿಗಳಲ್ಲಿ ಹಾಗೂ ಜನಪ್ರತಿನಿಧಿ ಕಾಯ್ದೆಗಳಲ್ಲಿ ತಿದ್ದುಪಡಿ ತರದೆ ಈ ಬದಲಾವಣೆ ಸಾಧ್ಯವಿಲ್ಲ. ಸಂವಿಧಾನದ ನಮನೀಯತೆ ಇದಕ್ಕೆ ಪೂರಕವಾಗಿದ್ದರೂ ಸವಾಲುಗಳಾದ ಸಂಯುಕ್ತ ವ್ಯವಸ್ಥೆಯ ಮೇಲೆ ಇದರ ಪರಿಣಾಮವೇನು? ಐದು ವರ್ಷಗಳ ಗಡಸು ಕಾಲಾವಧಿ ತೀರ್ಮಾನದ ಆಗುಹೋಗುಗಳು ಏನು? ಭಾರತದ ಜನಾದೇಶವು ಯಾವುದನ್ನು ಬಯಸುತ್ತದೆ- ಈ ಬದಲಾವಣೆ ದೇಶದ ಅಭಿವೃದ್ಧಿಗೆ ಸಾಧಕವೇ? ಎಂಬೆಲ್ಲ ಚರ್ಚೆಗಳ ಸಾಧಕ- ಬಾಧಕದ ಮುಕ್ತ ಚರ್ಚೆ ಅವಶ್ಯಕವೆಂಬುದನ್ನು ಎಲ್ಲರೂ ಮನಗಂಡಿರಲೇಬೇಕು.

ವ್ಯಕ್ತಿಗಿಂತ- ಸಮುದಾಯ, ಸಮುದಾಯಕ್ಕಿಂತ-ಹಳ್ಳಿ- ನಗರ, ಹಳ್ಳಿ-ನಗರಕ್ಕಿಂತ- ರಾಜ್ಯ, ರಾಜ್ಯಕ್ಕಿಂತ ಮಿಗಿಲಾದದ್ದು ರಾಷ್ಟ್ರವೆಂಬ ಪರಿಕಲ್ಪನೆ ಇರುವ ಭಾರತೀಯರಾದ ನಾವು ಕಾಲಹರಣ ಮಾಡುವ ಚರ್ಚೆಗಿಂತ ಬದಲಾವಣೆ’ ಒಳಿತಿಗಾಗಿ ಆಗಬಾರದೇಕೆ ಎಂಬ ವೈಜ್ಞಾನಿಕ ಮನೋಭಾವನೆಯಲ್ಲಿ ಮುಂದಾಲೋಚನೆ ಹೊಂದುವುದು ಆವಶ್ಯಕ. ಮತದಾರ ಸೋಲಿಸಿರುವ ಪ್ರಜಾಪ್ರಭುತ್ವವನ್ನು ಮತದಾರರ ಮೂಲಕವೇ ಗೆಲ್ಲಿಸಬೇಕಿದೆ. ಹಾಗಾಗಿ ಈ ಬದಲಾವಣೆಗೆ ಅವರದೇ ಮತಬೇಕಿದೆ. ಸಂಯುಕ್ತತೆಯ ತಣ್ತೀ-ಆಚರಣೆಗೆ ಧಕ್ಕೆ ಬಾರದಂತೆ ಈ ಬದಲಾವಣೆ ಬರುವುದರಿಂದ ಈ ಬದಲಾವಣೆ ಆಗಲೇಬೇಕಲ್ಲವೇ? ಅಭಿವೃದ್ಧಿಯೆಡೆಗೆ ಭಾರತ ಸಾಗಲೇಬೇಕಲ್ಲವೇ. ಭಯದ ಹೆಸರಿನಲ್ಲಿ ಬದುಕುವ ಬದಲಾವಣೆಯನ್ನೇ ಬಯಸದ ಸಮಾಜ ಏಳಿಗೆ ಕಾಣುವುದು ಸಾಧ್ಯವೇ?

ಒಂದು ರಾಷ್ಟ್ರ ಒಂದು ಚುನಾವಣೆ’ ಬದಲಾವಣೆಗೆ ನಾಂದಿ ಎಂಬುದನ್ನು ಮರೆಯದೇ ಮುಂದೆ ಸಾಗುವುದೇ ಭಾರತದ ಭವಿತವ್ಯವೆಂದು ನಮ್ಮ ಅನಿಸಿಕೆ. ಟೀಕೆಗೆ ಆಹ್ವಾನವಿದೆ-ಮುಕ್ತ ಚರ್ಚೆಗೆ ಅವಕಾಶವಿದೆ. ಅದೇ ಪ್ರಜಾಪ್ರಭುತ್ವದ ಜೀವಾಳ. ಬನ್ನಿ ಬದಲಿಸೋಣ-ಬದಲಾವಣೆಯ ಭಾಗವಾಗೋಣ.

– ಡಾ|ಹರೀಶ್‌ ರಾಮಸ್ವಾಮಿ, ರಾಯಚೂರು ವಿವಿ ಕುಲಪತಿ,
ಹಾಗೂ
– ಡಾ|ಕಮಲಾಕ್ಷಿ ಜಿ. ತಡಸದ್‌, ಪ್ರಾಧ್ಯಾಪಕರು ರಾಣಿ ಚೆನ್ನಮ್ಮ ವಿವಿ ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next