ಬೆಂಗಳೂರು: ಒಂದು ರಾಷ್ಟ್ರ -ಒಂದು ಚುನಾವಣೆ ಕುರಿತು ಚರ್ಚಿಸುವುದಕ್ಕಾಗಿ ಕರೆಯಲಾಗಿದ್ದ 2 ದಿನಗಳ ವಿಶೇಷ ಅಧಿವೇಶನದಲ್ಲಿ ಆ ಬಗ್ಗೆ ಚರ್ಚೆಯೇ ನಡೆದಿಲ್ಲ !
ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಪ್ರತಿರೋಧದಿಂದಾಗಿ ಉಭಯ ಸದನಗಳ ಕಲಾಪಗಳು ಪ್ರತಿಭಟನೆ, ಗದ್ದಲ, ಆರೋಪ-ಪ್ರತ್ಯಾರೋಪಕ್ಕಷ್ಟೇ ಸೀಮಿತವಾದವು.
ಮಾ. 31ರ ವರೆಗೆ ಅಧಿವೇಶನ ನಡೆಯಲಿರುವುದರಿಂದ ಒಂದು ದಿನ ಕಾಂಗ್ರೆಸ್ ಮನವೊಲಿಸಿ ಒಂದು ರಾಷ್ಟ್ರ – ಒಂದು ಚುನಾವಣೆ ಚರ್ಚೆ ನಡೆಸಲು ಸ್ಪೀಕರ್ ಚಿಂತನೆ ನಡೆಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂದು ಕಾದು ನೋಡಬೇಕಿದೆ.
ಶುಕ್ರವಾರವೂ ಪ್ರತಿಭಟನೆ ಮುಂದುವರಿದಾಗ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು. ಸೋಮವಾರ ಬಜೆಟ್ ಮಂಡನೆಯ ಬಳಿಕ ಬಜೆಟ್ ಮೇಲಿನ ಚರ್ಚೆ ಇದ್ದು, ಸದ್ಯಕ್ಕೆ ಈ ವಿಚಾರ ಚರ್ಚೆಯಾಗದು.
ವಿಧಾನ ಪರಿಷತ್ನಲ್ಲೂ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ಮತ್ತೆ ಪ್ರತಿಭಟನೆ ಮುಂದುವರಿಸಲು ಮುಂದಾದಾಗ ಇಂದಿನ ಕಾರ್ಯಸೂಚಿಯಲ್ಲಿ ಒಂದು ರಾಷ್ಟ್ರ -ಒಂದು ಚುನಾವಣೆ ವಿಚಾರವೇ ಇಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದರಿಂದ ವಿಷಯಕ್ಕೆ ತೆರೆ ಬಿದ್ದಿತು. ಪ್ರಶ್ನೋತ್ತರ ಕಲಾಪದ ಅನಂತರ ಸದನವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ವಿಪಕ್ಷ – ಆಡಳಿತ ಪಕ್ಷ ಜಟಾಪಟಿ
ವಿಧಾನಸಭೆಯಲ್ಲಿ ಶುಕ್ರವಾರ ಸಂಗಮೇಶ್ ಅಮಾನತು ಹಿಂಪಡೆಯಬೇಕು ಮತ್ತು “ಒಂದು ರಾಷ್ಟ್ರ- ಒಂದು ಚುನಾವಣೆ’ ಕುರಿತು ಚರ್ಚೆಗೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದ ಕಾಂಗ್ರೆಸ್ ಧರಣಿ ಮುಂದುವರಿಸಿತು. ಸ್ಪೀಕರ್ 2 ಬಾರಿ ಸದನ ಮುಂದೂಡಬೇಕಾಯಿತು. ಹಿಂದೆ ಗೂಳಿಹಟ್ಟಿ ಶೇಖರ್ ಬಟ್ಟೆ ಹರಿದುಕೊಂಡದ್ದು ಕಂಡಿದ್ದೇವೆ. ಪರಿಷತ್ನಲ್ಲಿ ನಡೆದ ಘಟನೆಯೂ ಗೊತ್ತಿದೆ. ಸಂಗಮೇಶ್ ತನ್ನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರಿಂದ ನೊಂದಿದ್ದಾರೆ. ಅಮಾನತು ವಾಪಸ್ ಪಡೆಯಲು ಅವಕಾಶವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.