Advertisement

ವಿಪಕ್ಷಗಳ ಅಡ್ಡಿ : ಚರ್ಚೆಯಾಗದ ಒಂದು ರಾಷ್ಟ್ರ- ಒಂದು ಚುನಾವಣೆ

01:18 AM Mar 06, 2021 | Team Udayavani |

ಬೆಂಗಳೂರು: ಒಂದು ರಾಷ್ಟ್ರ -ಒಂದು ಚುನಾವಣೆ ಕುರಿತು ಚರ್ಚಿಸುವುದಕ್ಕಾಗಿ ಕರೆಯಲಾಗಿದ್ದ 2 ದಿನಗಳ ವಿಶೇಷ ಅಧಿವೇಶನದಲ್ಲಿ ಆ ಬಗ್ಗೆ ಚರ್ಚೆಯೇ ನಡೆದಿಲ್ಲ !

Advertisement

ವಿಪಕ್ಷ ಕಾಂಗ್ರೆಸ್‌, ಜೆಡಿಎಸ್‌ ಪ್ರತಿರೋಧದಿಂದಾಗಿ ಉಭಯ ಸದನಗಳ ಕಲಾಪಗಳು ಪ್ರತಿಭಟನೆ, ಗದ್ದಲ, ಆರೋಪ-ಪ್ರತ್ಯಾರೋಪಕ್ಕಷ್ಟೇ ಸೀಮಿತವಾದವು.

ಮಾ. 31ರ ವರೆಗೆ ಅಧಿವೇಶನ ನಡೆಯಲಿರುವುದರಿಂದ ಒಂದು ದಿನ ಕಾಂಗ್ರೆಸ್‌ ಮನವೊಲಿಸಿ ಒಂದು ರಾಷ್ಟ್ರ – ಒಂದು ಚುನಾವಣೆ ಚರ್ಚೆ ನಡೆಸಲು ಸ್ಪೀಕರ್‌ ಚಿಂತನೆ ನಡೆಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂದು ಕಾದು ನೋಡಬೇಕಿದೆ.

ಶುಕ್ರವಾರವೂ ಪ್ರತಿಭಟನೆ ಮುಂದುವರಿದಾಗ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು. ಸೋಮವಾರ ಬಜೆಟ್‌ ಮಂಡನೆಯ ಬಳಿಕ ಬಜೆಟ್‌ ಮೇಲಿನ ಚರ್ಚೆ ಇದ್ದು, ಸದ್ಯಕ್ಕೆ ಈ ವಿಚಾರ ಚರ್ಚೆಯಾಗದು.

ವಿಧಾನ ಪರಿಷತ್‌ನಲ್ಲೂ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್‌ ಮತ್ತೆ ಪ್ರತಿಭಟನೆ ಮುಂದುವರಿಸಲು ಮುಂದಾದಾಗ ಇಂದಿನ ಕಾರ್ಯಸೂಚಿಯಲ್ಲಿ ಒಂದು ರಾಷ್ಟ್ರ -ಒಂದು ಚುನಾವಣೆ ವಿಚಾರವೇ ಇಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದರಿಂದ ವಿಷಯಕ್ಕೆ ತೆರೆ ಬಿದ್ದಿತು. ಪ್ರಶ್ನೋತ್ತರ ಕಲಾಪದ ಅನಂತರ ಸದನವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

Advertisement

ವಿಪಕ್ಷ – ಆಡಳಿತ ಪಕ್ಷ ಜಟಾಪಟಿ
ವಿಧಾನಸಭೆಯಲ್ಲಿ ಶುಕ್ರವಾರ ಸಂಗಮೇಶ್‌ ಅಮಾನತು ಹಿಂಪಡೆಯಬೇಕು ಮತ್ತು “ಒಂದು ರಾಷ್ಟ್ರ- ಒಂದು ಚುನಾವಣೆ’ ಕುರಿತು ಚರ್ಚೆಗೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದ ಕಾಂಗ್ರೆಸ್‌ ಧರಣಿ ಮುಂದುವರಿಸಿತು. ಸ್ಪೀಕರ್‌ 2 ಬಾರಿ ಸದನ ಮುಂದೂಡಬೇಕಾಯಿತು. ಹಿಂದೆ ಗೂಳಿಹಟ್ಟಿ ಶೇಖರ್‌ ಬಟ್ಟೆ ಹರಿದುಕೊಂಡದ್ದು ಕಂಡಿದ್ದೇವೆ. ಪರಿಷತ್‌ನಲ್ಲಿ ನಡೆದ ಘಟನೆಯೂ ಗೊತ್ತಿದೆ. ಸಂಗಮೇಶ್‌ ತನ್ನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರಿಂದ ನೊಂದಿದ್ದಾರೆ. ಅಮಾನತು ವಾಪಸ್‌ ಪಡೆಯಲು ಅವಕಾಶವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next