Advertisement

ಗಂಡಹೆಂಡಿರ ಜಗಳಕ್ಕೆ ನೂರೈವತ್ತು ವರ್ಷ !

10:16 AM Jan 27, 2020 | mahesh |

ಗಂಡಹೆಂಡಿರ ಜಗಳ ಉಂಡು ಮಲಗುವವರೆಗೆ ಅಂತ ಹೇಳುತ್ತಾರೆ. ಒಂದು ವೇಳೆ ಅದು ನೂರೈವತ್ತು ವರ್ಷಗಳವರೆಗೂ ನಡೆದರೆ? ಈಗಂತೂ ಅದು ಸಾಧ್ಯವೇ ಇಲ್ಲ ಅಂತೀರಾ? ಹೌದು! ಅದು ನಡೆದಿರುವುದೂ ಹೌದು, ನಾವದನ್ನು ಕೇಳಿರುವುದೂ ಹೌದು. ಎಲ್ಲಿ ಅಂತ ಕುತೂಹಲವೇ? ಹಾಗಾದರೆ ಅದಕ್ಕೆ ಉತ್ತರ ಇಲ್ಲಿದೆ: ಅದು ಮುದ್ದಣ್ಣ ಕವಿಯ ಶ್ರೀ ರಾಮಾಶ್ವಮೇಧಂ ಎನ್ನುವ ಕೃತಿಯಲ್ಲಿ ನಡೆದಿರುವ ಜಗಳ. ಅದು ಆರಂಭವಾಗುವುದೇ ಹೀಗೆ:

Advertisement

ಹೆಂಡತಿ: ಹಗಲು ರಾತ್ರಿ ಅಂತ ಮಳೆ ಸುರಿಯುತ್ತಲೇ ಇದೆ, ಅದ್ರಿಂದ ಏನಾದರೊಂದು ಒಳ್ಳೆಯ ಕಥೆ ಹೇಳಿ.
ಗಂಡ: ಯಾವ ಕಥೆ ಹೇಳಲಿ? ಭೋಜ ಪ್ರಬಂಧ? ವಿಕ್ರಮ ವಿಜಯ? ಮಹಾವೀರ ಚರಿತ?
ಹೆಂಡತಿ: ಇಸ್ಸಿ ! ಇವೆಲ್ಲ ನನಗೆ ಇಷ್ಟ ಇಲ್ಲ.
ಗಂಡ: ನಿನಗೆ ಯಾವ ರಸ ಇಷ್ಟ?
ಹೆಂಡತಿ: ಯಾವ ರಸ ಆದರೇನು? ನವರಸದಲ್ಲಿ.
ಗಂಡ: ಹಾಗಾದರೆ ಆ ಕಥೆ ಯಾವುದು?
ಹೆಂಡತಿ: ರಾಮಾಯಣದಲ್ಲಿ ಯಾವುದಾದರೊಂದು.
ಗಂಡ: ಹಾಗೆಯೇ ಆಗಲಿ, ಸೀತಾಸ್ವಯಂವರವನ್ನು ಹೇಳುತ್ತೇನೆ.
ಹೆಂಡತಿ: ನಾನು ಮೊದಲೇ ಕೇಳಿರುವೆನಲ್ಲ?
ಗಂಡ: ಏನು ಸೀತಾಪಹರಣದ ಬಯಕೆಯೆ?
ಹೆಂಡತಿ: ನನಗೆ ಬೇಡ !
ಗಂಡ: ಮತ್ತೆ ಯಾವ ಕಥೆಯನ್ನು ಹೇಳುವೆನೊ?
ಹೆಂಡತಿ: ಯಾಕೆ ಹೀಗೆ ಹೇಳ್ತೀಯಾ? ನಾಡಲ್ಲಿ ಎಷ್ಟೋ ರಾಮಾಯಣಗಳಿರುವವು. ನೀನು ಕೇಳಿರುವುದರಲ್ಲಿ ಒಂದನ್ನು ಪ್ರೀತಿಯಿಂದ ಹೇಳು.
ಗಂಡ: ನೀನೇ ಆರಿಸಿಕೋ !
ಹೆಂಡತಿ: ಶ್ರೀರಾಮ ಅಶ್ವಮೇಧವನ್ನು ಕೈಗೊಂಡ ಅಂತಾರಲ್ಲ- ಆ ಕಥೆಯೇ ಆಗಬಹುದು.

ಗಂಡ: ಈಗ ಗೊತ್ತಾಯಿತು, ಶೇಷರಾಮಾಯಣ ಅನ್ನು !
ಹೆಂಡತಿ: ಹೌದು ಹೌದು. ಆದರೆ, ಮೊದಲು ಮೊದಲು ಯಾರಿಗೆ ಇದನ್ನು ಹೇಳಿದರು?
ಗಂಡ: ಮೊದಲು ಶೇಷನು, ವಾತ್ಸಾಯನನಿಗೆ ಇದನ್ನು ಹೇಳಿದ, ಅದನ್ನೇ ನಿನಗೂ ಹೇಳುತ್ತೇನೆ. ಆದರೆ, ದೊಡ್ಡ ಕಥೆ.
ಹೆಂಡತಿ: ಇರಲಿ ಒಂದೊಂದು ದಿವಸ ಇಷ್ಟಿಷ್ಟು ಹೇಳಿದರಾಯಿತು.
ಗಂಡ: ಆಗಲಿ, ಗದ್ಯದಲ್ಲಿ ಹೇಳಲೇ, ಪದ್ಯದಲ್ಲಿ ಹೇಳಲೇ?
ಹೆಂಡತಿ: ಪದ್ಯ ವದ್ಯ, ಗದ್ಯ ಹೃದ್ಯ: ಹೃದ್ಯವಾದ ಗದ್ಯದಲ್ಲಿಯೇ ಹೇಳು.
ಗಂಡ: ಅದಿರಲಿ, ಇಂತಹ ಒಳ್ಳೆಯ ಕಥೆಯನ್ನು ಅರಮನೆಯಲ್ಲಿ ನಾನು ಹೇಳಿದರೆ ನನಗೆ ರತ್ನದ ಕಡಗವನ್ನೋ, ಚಿನ್ನದ ಕಂಠ ಸರವನ್ನೋ ಕೊಡುವರು. ನೀನೇನು ಕೊಡುವೆ?
ಹೆಂಡತಿ: ಬೇರೇನು, ನನ್ನನ್ನೇ ನಾನು ಕೊಡುತ್ತೇನೆ.
ಗಂಡ: ಬಹಳ ಜೋರಿನವಳು, ಗೊತ್ತಿಲ್ಲವೇ, ಮೊದಲೇ ನಿನ್ನ ತಾಯ್‌ತಂದೆಯರು ನನಗೆ ಕೊಟ್ಟರೆಂದು?
ಹೆಂಡತಿ: ಹೋಗ! ನಾನು ಪರಾಧೀನೆಯಂತೆ, ಪುರಾಣವನ್ನು ಓದಿದ ಮೇಲೆ ತಾನೇ ದಕ್ಷಿಣೆಯನ್ನು ಕೊಡುವುದು. ಅರಮನೆಯವರೂ ಕಾವ್ಯವನ್ನು ಕಂಡ ಮೇಲೆ ಅಲ್ಲವೇ ಬಹುಮಾನವನ್ನು ಕೊಡುವುದು, ನಾನೂ ಕಥೆ ಕೇಳಿದ ಮೇಲೆ ಸೊಗಸಾಗಿದ್ದರೆ ತಿಳಿದಂತೆ ಸನ್ಮಾನಿಸುತ್ತೇನೆ.
.
-ಹೀಗೆ ಈ ಸರಸ ಸಲ್ಲಾಪ ಸಾಗುತ್ತದೆ. ಇಲ್ಲಿಯ ಗಂಡ ಮುದ್ದಣ- ಹೆಂಡತಿ ಮನೋರಮೆ ಅಂತ ಸಾಹಿತ್ಯಪ್ರಿಯರು ಬಲ್ಲರು. ಹೀಗೆ, ಈ ಕಥೆ ಮುಂದುವರೆಯುತ್ತದೆ. ಮುದ್ದಣ ಕವಿಯ ಕಥಾ ಹೂರಣವೇ ಹೀಗಿದೆ. ಅದು ಗಂಡಹೆಂಡಿರ ಸರಸ-ಸಲ್ಲಾಪದೊಂದಿಗೆ ಸಾಗುವ ಸರಸ ಕಾವ್ಯ. ಒಂದರ್ಥದಲ್ಲಿ ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ ಕವನಗಳಲ್ಲಿ ಹೆಂಡತಿಯೇ ಪ್ರಧಾನವಾಗಿರುವಂತೆ ಇಲ್ಲಿಯೂ ಹೆಂಡತಿಯೇ ಮುಖ್ಯ ಪಾತ್ರ.

ದಕ್ಷಿಣ ಕನ್ನಡದ ಕಡೆ ಮನೆಗೆ ಬಂದವರನ್ನು ಮೊದಲು ಮಾತಾಡಿಸುವುದು ಮಹಿಳೆಯರೇ. ಹಾಗೆಯೇ ಇಲ್ಲಿಯೂ ತುಳುನಾಡಿನ ಪರಂಪರೆಯಂತೆ ಸಹೃದಯರನ್ನು ಮೊದಲು ಮಾತಾಡಿಸುವುದು ಮನೋರಮೆಯೇ. ಮನೆಯಲ್ಲಿ ಗಂಡ ಹೆಚ್ಚು-ಕಡಿಮೆ ಹೆಂಡತಿಯ ಮುಖವಾಣಿಯಷ್ಟೇ. ಇಲ್ಲಿಯೂ ಅಷ್ಟೇ. ಮುದ್ದಣನ ಪಾತ್ರ ಏನಿದ್ದರೂ ಹೆಂಡತಿಗೆ ಬೇಕಾದ ಹಾಗೆ ಕಥೆ ಹೇಳುವ ಕೆಲಸ ಮಾಡುವುದಷ್ಟೇ ಆಗಿದೆ.

ಹೀಗೆ ಮುದ್ದಣ- ಮನೋರಮೆಯರ ಮೂಲಕ ಸಾಗಿಬಂದ ಶ್ರೀರಾಮಾಶ್ವಮೇಧ ಕೃತಿಗೆ ಈಗ 150 ವರ್ಷಗಳು ತುಂಬಿವೆ. ನಂದಳಿಕೆ ಲಕ್ಷ್ಮೀನಾರಣಪ್ಪ ಎನ್ನುವ (1870-1901) ಮುದ್ದಣನನ್ನು ಹೊಸಗನ್ನಡದ ಅರುಣೋದಯದ ಮುಂಗೋಳಿ ಎನ್ನುವುದುಂಟು. ಈ ವಿಷಯವಾಗಿ ಕೆಲವರು ತಕರಾರು ತೆಗೆಯುವುದಿದೆ. ಆದರೆ, ಈ ರೀತಿಯ ಕಥನ ಕ್ರಮವು ಮುದ್ದಣನಿಂದಲೇ ಆರಂಭವಾಗಿರುವುದು ಎನ್ನುವುದರಲ್ಲಿ ಅನುಮಾನವೇನೂ ಇಲ್ಲ. ಅಂದರೆ, ಗದ್ಯವನ್ನು ಕಥೆ ಹೇಳುವ ತಂತ್ರಗಾರಿಕೆಯಾಗಿ ದೀರ್ಘ‌ವಾಗಿ ಬಳಸುವುದು ಮತ್ತು ಗದ್ಯದ ಪರವಾಗಿ ಮಾತಾಡುವುದು ಮತ್ತು ಸರಳವಾಗಿ, ಅದರಲ್ಲಿಯೂ ಸಂಭಾಷಣೆಯ ಮೂಲಕವೇ ಕಥೆಯನ್ನು ಹೇಳುವುದು ಮುದ್ದಣನ ಹೆಚ್ಚುಗಾರಿಕೆಯಾಗಿದೆ. ಇದು ಕಾದಂಬರಿ ಎನ್ನುವ ಪ್ರಕಾರವೊಂದನ್ನು ಮುದ್ದಣ ಕನ್ನಡಕ್ಕೆ ಪರಿಚಯ ಮಾಡುವುದಕ್ಕೆ ಪ್ರಯತ್ನ ಮಾಡುವ ರೀತಿ ಎಂದು ತಿಳಿದರೆ ಈ ಸಂಭಾಷಣೆಯ ಮಾದರಿಗೆ ಬೇರೆಯದೇ ಅರ್ಥ ಬರುತ್ತದೆ. ಏಕೆಂದರೆ, ಸಣ್ಣ ಸಣ್ಣ ಗದ್ಯವಾಕ್ಯಗಳು, ಪ್ರಶ್ನೆ ಮಾಡುವುದು, ಕಥೆಯನ್ನು ಸಮಕಾಲೀನಗೊಳಿಸಿ ಹೇಳುವುದು- ಇವೆಲ್ಲವೂ ಕಾದಂಬರಿಯ ಲಕ್ಷಣಗಳೇ ಆಗಿವೆ. ಪದ್ಯದಲ್ಲಿ ಪ್ರಶ್ನೆಗೆ ಅವಕಾಶವಿಲ್ಲ. ಅಲ್ಲಿ ಏನಿದ್ದರೂ ವರ್ಣನೆಗೆ ಮಾತ್ರವೇ ಅವಕಾಶ. ಆದರೆ, ಮುದ್ದಣನಿಗೆ ನೇರವಾಗಿ ಕಾದಂಬರಿಯೊಂದನ್ನು ಬರೆದರೆ ಜನ ಸ್ವೀಕರಿಸುತ್ತಾರೋ ಇಲ್ಲವೋ ಎನ್ನುವ ಅಳುಕು! ಅದಕ್ಕಾಗಿ ಕಾದಂಬರಿಯನ್ನು ಹೋಲುವ ರಾಮಾಯಣದ ಕಥೆಯನ್ನು ಹೇಳುತ್ತೇನೆ ಎಂದು ಈ ಮೂಲಕ ಪೀಠಿಕೆ ಹಾಕುತ್ತಾನೆ. ಆದುದರಿಂದ ಶ್ರೀರಾಮಾಶ್ವಮೇಧ ಕೃತಿಯನ್ನು ಕನ್ನಡದ ಮೊದಲ ಕಾದಂಬರಿ ಎಂದರೂ ನಡೆಯುತ್ತದೆ. ಆಗ ಕನ್ನಡದ ಕಾದಂಬರಿ ಪ್ರಕಾರಕ್ಕೂ 150 ವರ್ಷ ಆಯಿತೆಂದು ಹೇಳಿದಂತಾಯಿತು !

Advertisement

ಈ ಕಥೆ ಮುಗಿಯುವಾಗ ಕಥೆಯ ಮಧ್ಯೆ ಮೂಗು ತೂರಿಸುತ್ತಿದ್ದ ಹೆಂಡತಿ ಸೀದಾ ಎದ್ದು ಹೋಗುತ್ತಾಳೆ. ಆಗ ಗಂಡ, “ಬಹುಮಾನ ಕೊಡದೆ ಹೋಗಲು ಬಿಡುವುದಿಲ್ಲ’ ಎನ್ನುತ್ತಾನೆ. ಅದಕ್ಕೆ ಆಕೆ, “ಕಥೆಗೆ ಮಂಗಳ ಮಾಡದೆ ಉಡುಗೊರೆ ಕೇಳುವುದೇ?’ ಎನ್ನುತ್ತಾಳೆ. ಆಗ ಹೆಂಡತಿ, “ಈ ಕಾಟಕ್ಕೆ ಇನ್ನೆಲ್ಲಿ ಹೋಗಲಿ ನೀನೇನು ಬೇಡುವುದು’ ಎಂದು ಮಾರುತ್ತರ ಕೊಡುತ್ತಾಳೆ.

ಆಗ ಗಂಡ, “ನಾನೇನು ತಿರುಕನೇ, ಮನೆಗೆ ಬಂದವನೇ? ಬಹುಮಾನ ಕೊಟ್ಟರೆ ತೆ‌ಗೆದುಕೊಳ್ಳುವೆ’ ಎನ್ನುತ್ತಾನೆ. ಆಗ ಹೆಂಡತಿ, “ನಾನಂತು ಪರಾಧೀನೆ ನನಗೇನು ಒಡವೆ? ಏನನ್ನು ಕೊಡಲಿ’ ಎನ್ನುತ್ತಾಳೆ. ಆಗ ಗಂಡ, “ನಾನು ಮೆಚ್ಚುವ ಹಾಗೆ ಏನೋ ಎಂತೋ ಒಂದನ್ನು ಕೊಡು, ಕಥೆಯ ತಿರುಳಿಗೆ ಮೆಚ್ಚುವಂತೆ ನಾಲ್ವರು ತಲೆದೂಗುವಂತೆ ಉಡುಗೊರೆ ಕೊಟ್ಟರೆ ಆಯಿತು’ ಎನ್ನುತ್ತಾನೆ.

ಆಗ ಹೆಂಡತಿ, “ಹಾಗಾದರೆ, ನಿನ್ನ ಈ ಕಾವ್ಯವನ್ನು ಓದುವ ಜಾಣರು ಯಾವ ರೀತಿಯ ಉಡುಗೊರೆಯನ್ನು ಕೊಡಬೇಕೆಂದು ಹೇಳುವರೋ ಆವಾಗ ಬಹುಮಾನವನ್ನು ಕೊಡುತ್ತೇನೆ’ ಎನ್ನುತ್ತಾಳೆ. ಅದಕ್ಕೆ ಗಂಡ, “ಹಾಗೆಯೇ ಆಗಲಿ’ ಎನ್ನುತ್ತಾನೆ. ಹೀಗೆ ಬಹುಮಾನ ಕೊಡುವುದು ಇನ್ನೂ ಹಾಗೆಯೇ ಉಳಿದಿದೆ. ಸಹೃದಯರು ಅದನ್ನು ಮುಂದಕ್ಕೆ ದೂಡುತ್ತಲೇ ಇದ್ದಾರೆ, ಅದು ಹಾಗೆಯೇ ಸಾಗುತ್ತಿರಲಿ!

ಮಾಧವ ಪೆರಾಜೆ

Advertisement

Udayavani is now on Telegram. Click here to join our channel and stay updated with the latest news.

Next