Advertisement

ಪದ್ಮಾ ಶೆಣೈ : ಬರೆಯುತ್ತ ಬರೆಯುತ್ತ ಅರಳಿತು ಬದುಕು

10:04 AM Dec 14, 2019 | mahesh |

ಕಥನ ಸಾಹಿತ್ಯದ ಮೂಲಕ ಅಪಾರ ಓದುಗ ವರ್ಗವನ್ನು ಸೃಷ್ಟಿಸಿದ ಕನ್ನಡದ ಜನಪ್ರಿಯ ಲೇಖಕಿಯರಲ್ಲಿ ಪದ್ಮಾ ಶೆಣೈ ಕೂಡ ಒಬ್ಬರು. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದ ಪದ್ಮಾ ಶೆಣೈ ಕಳೆದ ಆರು ದಶಕಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ತ್ರಿವೇಣಿ, ಅನುಪಮಾ, ಗೀತಾ ಕುಲಕರ್ಣಿ ಮೊದಲಾದ ಪ್ರತಿಭಾವಂತ ಲೇಖಕಿಯರ ಸಾಲಿನಲ್ಲಿ ಗುರುತಿಸಲ್ಪಟ್ಟಿರುವ ಪದ್ಮಾ ಶೆಣೈ ತಮ್ಮ ಎಲ್ಲ ಕೃತಿಗಳಲ್ಲೂ ಸಮಕಾಲೀನ ವಿದ್ಯಮಾನಗಳಿಗೆ ಒತ್ತು ನೀಡಿದ್ದಾರೆ.

Advertisement

1933 ನವೆಂಬರ್‌ 3ರಂದು ಮದರಾಸಿನಲ್ಲಿ ಪದ್ಮಾರವರ ಜನನ. ಇವರ ತಂದೆ ರಾಮ ಬಾಳಿಗ. ತಾಯಿ ಲಕ್ಷ್ಮೀದೇವಿ. ತಮ್ಮ ಬಾಲ್ಯದ ದಿನಗಳನ್ನು ಬೇರೆ ಬೇರೆ ಊರುಗಳಲ್ಲಿ ಕಳೆದ ಪದ್ಮಾರವರು ಮೆಟ್ರಿಕ್‌ ಮುಗಿಸಿ ನೆಲೆನಿಂತದ್ದು ಉಡುಪಿಯಲ್ಲಿ. ಕಾಲೇಜು ಪ್ರಾಧ್ಯಾಪಕರಾಗಿದ್ದ ತಂದೆಯವರ ಪ್ರಭಾವವು ಎಳೆಯ ವಯಸ್ಸಿನಲ್ಲಿಯೇ ಇವರ ಮೇಲೆ ಪರಿಣಾಮ ಬೀರುತ್ತದೆ. ಉಡುಪಿಯ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಉದ್ಯೋಗಿಯಾಗಿಯೂ ಸುಮಾರು ನಾಲ್ಕು ವರ್ಷಗಳ ಕಾಲ ವೃತ್ತಿನಿರತರಾಗಿದ್ದರು. ಮುಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯನಿರ್ವಾಹಕರಾಗಿದ್ದ ಉದ್ಯಮಿ ಮೋಹನ ಶೆಣೈಯವರೊಂದಿಗೆ ದಾಂಪತ್ಯ ಬದುಕಿಗೆ ಕಾಲಿಟ್ಟ ಪದ್ಮಾ ಉದ್ಯೋಗಸ್ಥೆ, ಗೃಹಿಣಿಯಾಗಿ ತಮ್ಮ ಭವಿಷ್ಯದ ಬದುಕಿನ ರೂಪಣೆಯಲ್ಲಿ ಸಂಪೂರ್ಣವಾಗಿ ಮಗ್ನರಾದರು.

ಸಣ್ಣಕತೆಗಳನ್ನು ತನ್ನ ಬಾಲ್ಯಕಾಲದಲ್ಲೇ ಬರೆದು ಪತ್ರಿಕೆಗಳಿಗೆ ಕಳುಹಿಸುತ್ತಿದ್ದ ಪದ್ಮಾರವರದ್ದು ಅತ್ಯಂತ ಸುಲಲಿತ ಬರಹ, ಮನಮುಟ್ಟುವ ಭಾಷೆ, ಸರಳ ಸುಂದರ ಶೈಲಿ ಹಾಗೂ ನೈಜ ವಾಸ್ತವ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಬರೆಯುವ ಸೊಗಸಾದ ವಿವರಣೆ. ಇವರ ಕಥಾಪಾತ್ರಗಳು ಗಟ್ಟಿಯಾದ ಆದರ್ಶವಾದಿ ನಿಲುವನ್ನು ತಳೆಯುತ್ತಿದ್ದುವಲ್ಲದೆ ಸೊಗಸಾದ ವಿವರಣೆಯು ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು. ಉತ್ತಮ ಬರಹಗಾರ್ತಿಯಾಗಿ ಕನ್ನಡದ ಸಾವಿರಾರು ಓದುಗರ ಮನಗೆದ್ದ ಕಥೆಗಾರ್ತಿ ಪದ್ಮಾ ಶೆಣೈ ಸಾಹಿತ್ಯಾಸಕ್ತರಿಗೆ ಓರ್ವ ಮಾದರಿ ವ್ಯಕ್ತಿತ್ವ. ಓರ್ವ ಗೃಹಿಣಿಯಾಗಿ, ಇಬ್ಬರು ವೈದ್ಯ ಮಕ್ಕಳ ತಾಯಿಯಾಗಿ, ಉದ್ಯಮಿ ಪತಿಯ ನೆಚ್ಚಿನ ಮಡದಿಯಾಗಿ ಸುಮಾರು 30 ಗಮನಾರ್ಹ ಕೃತಿಗಳನ್ನು ಸಾಹಿತ್ಯ ಸರಸ್ವತಿಗೆ ಅರ್ಪಿಸಿದ ಈ ಮಾನವತಾವಾದಿ ಲೇಖಕಿ. ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಜೀವನ ಮೌಲ್ಯಗಳಿಗೆ, ಆದರ್ಶ ಚಿಂತನೆಗಳಿಗೆ ಒತ್ತುಕೊಟ್ಟು ಸಾಹಿತ್ಯ ರಚಿಸಿದವರು. ತಮ್ಮ ಮನದಲ್ಲಿ ಸ್ಪುರಿಸಿದ ಭಾವಬಂಧಗಳನ್ನು ಅಕ್ಷರ ರೂಪದಲ್ಲಿ ವ್ಯಕ್ತಪಡಿಸಲು ಇವರು ಆರಿಸಿದ್ದು ಕಥನ ಸಾಹಿತ್ಯ ಪ್ರಕಾರವನ್ನು. ಅವರು ಮೊದಲು ಬರೆದು ಪ್ರಕಟಿಸಿದ್ದೇ ಸಣ್ಣಕಥೆಗಳನ್ನು. ಆ ಬಳಿಕ ಕಾದಂಬರಿಗಳನ್ನು ಬರೆದರು. ಅವರ ಲೇಖನಿಯಿಂದ ಮಕ್ಕಳ ಸಾಹಿತ್ಯ, ವೈಚಾರಿಕ, ಆಧ್ಯಾತ್ಮಿಕ, ಪ್ರವಾಸ ಸಾಹಿತ್ಯಗಳೂ ಬರೆಯಲ್ಪಟ್ಟವು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿದ್ದರೂ ಇವರು ಜನಪ್ರಿಯರಾದುದು ಕಥನ ಸಾಹಿತ್ಯದಲ್ಲಿಯೇ.

ಪದ್ಮಾ ಶೆಣೈಯವರ ಸಮಗ್ರ ಸಾಹಿತ್ಯವನ್ನು ಒಟ್ಟು ಮೂರು ವಿಭಾಗಗಳಲ್ಲಿ ವಿಂಗಡಿಸಬಹುದು. ಆದರ್ಶವಾದಿ, ಮನೋವೈಜ್ಞಾನಿಕ ಮತ್ತು ವಾಸ್ತವವಾದಿ ನೆಲೆಗಟ್ಟಿನಲ್ಲಿ ವಿಶ್ಲೇಷಿಸಲ್ಪಟ್ಟಿವೆ. ಇವರ ಉಷಾ, ಪ್ರಭಾ ಮತ್ತು ಸುಧಾ ಎಂಬ ನೀಳ್ಗತೆಗಳು, ಅಣ್ಣ-ತಂಗಿ ಎಂಬ ಹಾಸ್ಯಕಥೆ ಹಾಗೂ ಇನ್ನಿತರ ಕಿರುಗತೆಗಳು ಆ ಕಾಲದ ಪ್ರಸಿದ್ಧ ಪತ್ರಿಕೆಗಳಾದ ನವಯುಗ, ಪ್ರಕಾಶ, ನವಭಾರತ, ರಾಯಭಾರಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಐವತ್ತರ ದಶಕದಲ್ಲಿ ಹಲವು ಸಣ್ಣಕಥೆಗಳನ್ನು ಬರೆದು ಬೆಳಕಿಗೆ ತಂದ ಪದ್ಮಾರವರು ಕಾದಂಬರಿ ರಚನೆಯನ್ನು ಪ್ರಾರಂಭಿಸಿದ್ದು 60ರ ದಶಕದಲ್ಲಿ. ಒಟ್ಟು 11 ಕಾದಂಬರಿಗಳು, 4 ಕಥಾಸಂಕಲನಗಳು, 3 ನೀಳ್ಗತೆಗಳು, 4 ಮಕ್ಕಳ ಸಾಹಿತ್ಯ, 1 ಜೀವನ ಚರಿತ್ರೆ, 1 ಪ್ರವಾಸ ಸಾಹಿತ್ಯ, 3 ಆಧ್ಯಾತ್ಮಿಕ ಸಾಹಿತ್ಯ, 1 ವೈಚಾರಿಕ ಸಾಹಿತ್ಯ, 1 ಕೊಂಕಣಿ ಸಾಹಿತ್ಯ ಹಾಗೂ ತಾತ್ವಿಕ ಹಾಡುಗಳ ಒಂದು ಸಿಡಿ ಕೂಡಾ ಬಿಡುಗಡೆಗೊಂಡಿರುವುದು ಇವರ ಸಾಹಿತ್ಯ ಕೃಷಿಯ ವಿಸ್ತಾರವನ್ನು ತೋರಿಸುತ್ತದೆ.

ಕನ್ನಡ ಕಾದಂಬರಿ ಲೋಕಕ್ಕೆ ಪದ್ಮಾ ಶೆಣೈ ತನ್ನ ಮೊದಲ ಹೆಜ್ಜೆಯೂರಿದ್ದೇ ರಸ-ವಿರಸ ಕಾದಂಬರಿಯ ಮೂಲಕ. 1963ರಲ್ಲಿ ಇದು ಪ್ರಕಟಗೊಂಡಿದೆ. ಆಗಿನ ಮೈಸೂರು ರಾಜ್ಯ ಸರಕಾರದ ಪ್ರಥಮ ಪ್ರಶಸ್ತಿಯನ್ನು ಪಡೆದ ಈ ಕಾದಂಬರಿ ಮುಂದೆ ಕನ್ನಡದ “ಜಾಣ’ ಪರೀಕ್ಷೆಗೆ ಪಠ್ಯವಾಯಿತು. ಮುಂದೆ ಸಂಧಿಕಾಲ, ಕೊನೆಯ ನಿರ್ಧಾರ, ನಾ ನಿನ್ನ ಧ್ಯಾನದೊಳಿರಲು, ನರನಾರಾಯಣ, ಸ್ತ್ರೀಕೇಂದ್ರಿತ ತತ್ವದ ಆಧಾರದಲ್ಲಿ ಬರೆದ ಜಯಶ್ರೀ, ಮನೋವಿಶ್ಲೇಷಣೆಯ ತಂತ್ರದ ಮೂಲಕ ಬರೆಯಲ್ಪಟ್ಟ ಅನಿಶ್ಚಿತ, ಕುಡಿತದ ಚಟದ ಹಿನ್ನೆಲೆಯಲ್ಲಿ ಹೆಣೆದ ಮರೆಯ ನೆರಳುಗಳು ಇತ್ಯಾದಿ. 2007ರಲ್ಲಿ ಬರೆಯಲ್ಪಟ್ಟ ಅನುಗ್ರಹ ಕಾದಂಬರಿ ಮುಂದೆ ವೈಶಾಖ ಫ‌ುಲೊ¤à ಎಂಬುದಾಗಿ ವಿಸ್ತೃತ ನಿರೂಪಣೆಯೊಂದಿಗೆ ಕೊಂಕಣಿ ಭಾಷೆಯಲ್ಲಿ ಪ್ರಕಟಗೊಂಡಿದೆ.

Advertisement

ಇವರ ಕೆಲವು ಪ್ರಸಿದ್ಧ ಕಥಾಸಂಕಲನಗಳಲ್ಲಿ ಹರಿದ ಗಾಳಿಪಟ, ಅನುತಾಪ, ಯಾರಿಗೆ ಯಾರು, ವರಾನ್ವೇಷಣೆ, ಯಾರು ಹಿತವರು ಎನಗೆ ಇತ್ಯಾದಿಗಳು ಪ್ರಸಿದ್ಧವಾಗಿವೆ. ಹೆಚ್ಚಿನ ಕಥೆಗಳು ಸ್ತ್ರೀಯರ ಸಮಸ್ಯೆಗಳನ್ನೇ ಮೂಲವಾಗಿಟ್ಟು ಬರೆದವುಗಳು. ನೂಲಿನಂತೆ ಸೀರೆ- ಕಥೆ ತರಂಗ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಬಹಳ ಮೆಚ್ಚುಗೆ ಗಳಿಸಿತ್ತು. ಇದೇ ಕಥೆಯನ್ನು ತೆಲುಗಿಗೂ ಭಾಷಾಂತರಿಸಲಾಗಿದೆ.

ಆದಿಶಂಕರರ ಜೀವನ ಚರಿತ್ರೆ ಮಹಾಸನ್ಯಾಸಿ, ಅಮೆರಿಕದಲ್ಲಿರುವ ಮಗನ ಮನೆಯಲ್ಲಿದ್ದು, ಅಮೆರಿಕ ಸುತ್ತಿ ಬರೆದ ಪ್ರವಾಸ ಕಥನ ಅಮೆರಿಕ-ವಾಸ-ಪ್ರವಾಸ ಅತ್ಯುತ್ತಮ ಮಾಹಿತಿಯ ಆಗರ.

ಪದ್ಮಾ ಶೆಣೈಯವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಮ್ಮಾಯಿಯ ಆನಂದ ಕುಟೀರದಲ್ಲಿ ವಾಸವಾಗಿದ್ದ ಮಹಾನ್‌ಚೇತನ ಎಲ್ಲರಿಂದಲೂ “ಅಜ್ಜ’ ಎಂದೇ ಕರೆಯಲ್ಪಡುತ್ತಿದ್ದ ಮಹಾತ್ಮನ ಸಹಯೋಗದಲ್ಲಿ ಆಧ್ಯಾತ್ಮದ ದಾರಿಯಲ್ಲಿ ಹೆಜ್ಜೆಯೂರಿದ್ದಾರೆ. ಉಪನಿಷತ್ತುಗಳ ಸಾರವೋ ಎಂಬಂತೆ ರಚಿಸಲ್ಪಟ್ಟ ಆನಂದೋಪನಿಷತ್ತು, ತಾತ್ವಿಕ ಕಥೆಗಳು, ತಾತ್ವಿಕ ಹಾಡುಗಳು ಓದುಗರ ಮನತಟ್ಟುತ್ತವೆ.

ಇವರ ಹಾಗೆ ಇವರ ಇಬ್ಬರು ಮಕ್ಕಳೂ ಕೂಡ ಸಾಹಿತ್ಯಾಸಕ್ತರೇ. ಇಬ್ಬರೂ ಹೆಸರಾಂತ ವೈದ್ಯರು. ಹಿರಿಯ ಮಗ ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಪಟ್ಟ ಪಠ್ಯಪುಸ್ತಕ ಗಳನ್ನು ಕೂಡ ರಚಿಸಿದ್ದಾರೆ. ಕಿರಿಯ ಮಗ ಅಮೆರಿಕದಲ್ಲಿ ಹೆಸರಾಂತ ವೈದ್ಯರು.

ಪದ್ಮಾ ಶೆಣೈ ಕರಾವಳಿ ಲೇಖಕಿ-ವಾಚಕಿಯರ ಸಂಘದ ಸ್ಥಾಪಕ ಅಧ್ಯಕ್ಷೆ ಆಗಿ ಸಂಘಟನೆಯನ್ನು ಮುನ್ನಡೆಸಿದವರು. ಕರ್ನಾಟಕ ಲೇಖಕಿಯರ ಸಂಘದ ರಾಜ್ಯಮಟ್ಟದ ಸಮ್ಮೇಳನದ ಅಧ್ಯಕ್ಷತೆಯ ಗೌರವ ಕೂಡ ಇವರಿಗೆ ಸಂದಿದೆ. ಕಿನ್ನಿಗೋಳಿಯಲ್ಲಿ ಜರಗಿದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದರು. ಪದ್ಮಾ ಶೆಣೈ ಅವರ ಸಾಹಿತ್ಯ ಪ್ರತಿಭೆಗೆ ಅನೇಕ ಗೌರವ, ಪ್ರಶಸ್ತಿ, ಸನ್ಮಾನಗಳು ಸಂದಿವೆ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ.

ಪದ್ಮಾ ಶೆಣೈಯವರ ಬದುಕು-ಬರಹದ ಸಾಧನೆ ಯುವ ಬರಹಗಾರರಿಗೆ ಒಂದು ಪ್ರೇರಣೆಯಾಗಿದೆ. ಸಾಹಿತ್ಯಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಅವರದು ವಿನಯವಂತಿಕೆಯ ವ್ಯಕ್ತಿತ್ವ. ಅವರ ಸಮಗ್ರ ಸಾಹಿತ್ಯವು ಸಾಹಿತ್ಯಾಸಕ್ತರಿಗೆ ಲಭ್ಯವಾಗಬೇಕಾಗಿದೆ. ಇಂದಿಗೂ ಕ್ರಿಯಾಶೀಲರಾಗಿರುವ ಪದ್ಮಾ ಶೆಣೈ ಮಂಗಳೂರು ತಾಲೂಕಿನ ಗುರುಪುರದ ಸಮೀಪದ ಪೆರಾರಿಯ “ಅವತಾರ್‌’ ಹಿರಿಯ ನಾಗರಿಕರ ನಿವಾಸದಲ್ಲಿ ಸಂತೃಪ್ತ ಜೀವನವನ್ನು ಸಾಗಿಸುತ್ತಿದ್ದಾರೆ.

ತಾವು ಕೇಳಿದ, ಕಂಡ ಅನುಭವಗಳನ್ನು ಸೇರಿಸಿದರೆ ಪದ್ಮಾಶೆಣೈಯವರದು ಶತಮಾನದ ಸಾಕ್ಷಿಯಂತಿರುವ ಬದುಕು. ಅವರು, ದಕ್ಷಿಣಕನ್ನಡದ ಸಾರಸ್ವತಲೋಕದ ಇತಿಹಾಸವನ್ನು ಸನಿಹದಲ್ಲಿ ಕಾಣುತ್ತ ಬದುಕಿದವರು, ಬರೆದವರು.

ಅವರಿಗೆ ಈಗ 87 ರ ಹರೆಯ.
ಅವರ ಕತೆ, ಕಾದಂಬರಿಗಳನ್ನು ಮತ್ತೆ ಓದೋಣ, ಅಭಿನಂದಿಸೋಣ.
ಈಮೇಲ್‌ ವಿಳಾಸ : padmashenoy1933@gmail.com
ವಾಟ್ಸಾಪ್‌ ನಂಬರ್‌ : 98451 22616

ನಳಿನಾಕ್ಷಿ ಉದಯರಾಜ್‌

Advertisement

Udayavani is now on Telegram. Click here to join our channel and stay updated with the latest news.

Next