Advertisement

ಮತ್ತೆ ತೆಲುಗು ಚಿತ್ರದಲ್ಲಿ ಉಪೇಂದ್ರ

11:34 AM Apr 29, 2020 | Suhan S |

ಕನ್ನಡದ ಕಲಾವಿದರು ಪರಭಾಷೆಗೆ ಹೋಗೋದು, ಪರಭಾಷಾ ಕಲಾವಿದರು ಕನ್ನಡಕ್ಕೆ ಬರೋದು ಸಹಜ. ಈಗಾಗಲೇ ಅನೇಕ ಕನ್ನಡ ಕಲಾವಿದರು ಪರಭಾಷೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅದರಲ್ಲಿ ನಟ ಉಪೇಂದ್ರ ಕೂಡಾ ಒಬ್ಬರು.

Advertisement

ಕನ್ನಡದಲ್ಲಿ ಹೊಸ ಬಗೆಯ ಚಿತ್ರ ನಿರ್ದೇಶನದ ಮೂಲಕ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಉಪೇಂದ್ರ ಅವರಿಗೆ ತೆಲುಗಿನಲ್ಲೂ ಬೇಡಿಕೆ ಇದೆ. ಈಗಾಗಲೇ ಹಲವಾರು ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಉಪೇಂದ್ರ ಈಗ ಮತ್ತೆ ತೆಲುಗಿನತ್ತ ಮುಖ ಮಾಡುತ್ತಿದ್ದಾರೆ. ವರುಣ್‌ ತೇಜ್‌ ನಾಯಕರಾಗಿರುವ ಹೊಸ ಚಿತ್ರದಲ್ಲಿ ಉಪೇಂದ್ರ ಪ್ರಮುಖ ಪಾತ್ರ ಮಾಡುತ್ತಿದ್ದಾರೆನ್ನಲಾಗಿದೆ.

ಈ ಹಿಂದೆ ಅಲ್ಲು ಅರ್ಜುನ್‌ ನಟನೆಯ ಸನ್‌ ಆಫ್ ಸತ್ಯಮೂರ್ತಿ ಚಿತ್ರದಲ್ಲೂ ಉಪೇಂದ್ರ ನಟಿಸಿದ್ದರು. ಉಪೇಂದ್ರ ಅವರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆ ನಂತರ ಸಾಕಷ್ಟು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದರೂ ಅವರ ತೆಲುಗಿನತ್ತ ಹೋಗುವ ಮನಸ್ಸು ಮಾಡಿರಲಿಲ್ಲ. ಈ ನಡುವೆಯೇ ಅವರ ನಟನೆಯ ಐ ಲವ್‌ ಯು ಚಿತ್ರ ಕನ್ನಡದ ಜೊತೆಗೆ ತೆಲುಗಿನಲ್ಲೂ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ಈಗ ಮತ್ತೆ ತೆಲುಗು ಚಿತ್ರದಲ್ಲಿ ನಟಿಸಲು ಉಪೇಂದ್ರ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆನ್ನಲಾಗಿದೆ.

ಸಾಮಾನ್ಯವಾಗಿ ಪರಭಾಷೆಗೆ ಹೋಗುವ ಹಾಗೂ ಪರಭಾಷೆಯಿಂದ ಬರುವ ಹೀರೋಗಳಿಗೆ ವಿಲನ್‌ ಪಾತ್ರ ಸಿಗುತ್ತದೆ. ಹಾಗಾದರೆ ಈ ಬಾರಿ ಉಪೇಂದ್ರ ಕೂಡಾ ವಿಲನ್‌ ಆಗಿ ನಟಿಸುತ್ತಾರಾ ಎಂದು ನೀವು ಕೇಳಬಹುದು. ಆದರೆ, ಹೊಸ ತೆಲುಗು ಚಿತ್ರದಲ್ಲಿ ಉಪೇಂದ್ರ ವಿಲನ್‌ ಅಲ್ಲ. ಬದಲಾಗಿ ಅವರ ಆಲೋಚನೆಗಳಿಗೆ ಹೊಂದುವಂತಹ ಪಾತ್ರ ಸಿಕ್ಕಿದೆಯಂತೆ. ಆ ಕಾರಣದಿಂದಲೇ ಉಪೇಂದ್ರ ಕೂಡಾ ಒಪ್ಪಿಕೊಂಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಉಪೇಂದ್ರ ಅವರ ಕೈಯಲ್ಲಿ ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಿವೆ. ಮುಖ್ಯವಾಗಿ ಆರ್‌.ಚಂದ್ರು ಅಭಿನಯದ

ಕಬ್ಜ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲಿರುವ ಈ ಚಿತ್ರ ಈಗಾಗಲೇ ತೆಲುಗಿನಲ್ಲೂ ಮುಹೂರ್ತ ಕಂಡಿದೆ. ಇದರ ಜೊತೆಗೆ ಬುದ್ಧಿವಂತ 2 ಸೇರಿದಂತೆ ಇನ್ನೊಂದಿಷ್ಟು ಚಿತ್ರಗಳು ಉಪೇಂದ್ರ ಕೈಯಲ್ಲಿವೆ. ಸದ್ಯ ಲಾಕ್‌ ಡೌನ್‌ನಲ್ಲಿ ತಮ್ಮ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವ ಉಪೇಂದ್ರ ಚಿತ್ರರಂಗದ ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next