Advertisement

ಮಂದಿರ ನಿರ್ಮಾಣದ ಹಾದಿಯಲ್ಲಿ

10:09 AM Feb 08, 2020 | mahesh |

ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಕನಸು ನನಸಾಗುವ ಹಾದಿಯತ್ತ ಸಾಗುತ್ತಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮಂದಿರ ನಿರ್ಮಾಣದ ಮೇಲುಸ್ತುವಾರಿ ನೋಡಿಕೊಳ್ಳುವುದಕ್ಕಾಗಿ 15 ಸದಸ್ಯರ ಟ್ರಸ್ಟ್‌ ಸ್ಥಾಪಿಸಿರುವುದಾಗಿ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಘೋಷಿಸಿದ್ದಾರೆ. ನ್ಯಾಯವಾದಿ, ಅಧಿಕಾರಿಗಳು, ನಾಗರಿಕರು ಮತ್ತು ಪ್ರಮುಖ ಮಠಾಧಿಪತಿಗಳನ್ನು ಒಳಗೊಂಡಿರುವ “ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ’ ಟ್ರಸ್ಟ್‌ ತಾತ್ಕಾಲಿಕವಾಗಿ ದೆಹಲಿಯಿಂದ ಕಾರ್ಯನಿರ್ವಹಿಸಲಿದೆ. ಟ್ರಸ್ಟ್‌ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ರಾಮಮಂದಿರಕ್ಕೆ ಸಂಬಂಧಿಸಿದ ಪೂರ್ಣ ಜವಾಬ್ದಾರಿಯನ್ನು ಇದಕ್ಕೆ ನೀಡಲಾಗಿದೆ…ಏನಿದು ಟ್ರಸ್ಟ್‌, ಯಾರೆಲ್ಲ ಇದ್ದಾರೆ, ಹೇಗೆ ಕಾರ್ಯನಿರ್ವಹಿಸಲಿದೆ? ಇಲ್ಲಿದೆ ಮಾಹಿತಿ…

Advertisement

ಮಂದಿರ ನಿರ್ಮಾಣದ ಜವಾಬ್ದಾರಿ ಇವರಿಗೆ…
 ಕೆ.ಪರಾಶರನ್‌, ಹಿರಿಯ ನ್ಯಾಯವಾದಿ
ಪರಾಶರನ್‌ ಅವರು ಅಯೋಧ್ಯೆ ಪ್ರಕರಣದಲ್ಲಿ ದೀರ್ಘಾವಧಿಯಿಂದ ಹಿಂದೂಗಳ ಪರ ವಾದಿಸಿದವರು. ತೀರ್ಪು ರಾಮಲಲ್ಲಾನ ಪರ ಬರುವಲ್ಲಿ ಅವರ ಯೋಗದಾನ ಪ್ರಮುಖವಾಗಿದೆ. 92 ವರ್ಷದ ಪರಾಶರನ್‌ ಸೇತುಸಮುದ್ರಂ ಯೋಜನೆಯ ವಿರುದ್ಧವೂ ಹೋರಾಡಿದವರು. ಅವರಿಗೆ ಪದ್ಮಭೂಷಣ ಮತ್ತು ಪದ್ಮ ವಿಭೂಷಣದಿಂದ ಸಮ್ಮಾನಿಸಲಾಗಿದೆ. ಶಬರಿಮಲೆ ವಿಚಾರದಲ್ಲಿ ಭಗವಾನ್‌ ಅಯ್ಯಪ್ಪನ ಪರ ವಕೀಲರಾಗಿದ್ದ ಪರಾಶರನ್‌ ಭಾರತೀಯ ಇತಿಹಾಸ, ವೇದಪುರಾಣ ಮತ್ತು ಧರ್ಮದ ಜತೆ ಜತೆಗೆ ಸಂವಿಧಾನದಲ್ಲೂ ಅಪಾರ ಜ್ಞಾನ ಹೊಂದಿದ್ದಾರೆ. ಅಯೋಧ್ಯೆ ಪ್ರಕರಣದ ಸಮಯದಲ್ಲಿ ಸ್ಕಂದ ಪುರಾಣದ ಶ್ಲೋಕಗಳನ್ನು ಉಲ್ಲೇಖೀಸಿ ರಾಮಮಂದಿರದ ಅಸ್ತಿತ್ವ ಸಾಬೀತುಪಡಿಸುವ ಪ್ರಯತ್ನ ಮಾಡಿದ್ದರು.

ವಾಸುದೇವಾನಂದ ಸರಸ್ವತಿ ಸ್ವಾಮೀಜಿ, ಪ್ರಯಾಗ್‌ರಾಜ್‌ ಜ್ಯೋತಿಷ ಪೀಠ
ವಿಎಚ್‌ಪಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ವಾಸುದೇವಾನಂದರು ಜ್ಯೋತಿಷ ಪೀಠದ ಮಹಾಗುರುಗಳಾಗಿದ್ದಾರೆ. ರಾಮಮಂದಿರ ನಿರ್ಮಾಣದ ವಿಚಾರದಲ್ಲಿ 1980ರ ದಶಕದಿಂದಲೂ ಪ್ರಮುಖ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ.

ಸ್ವಾಮಿ ಗೋವಿಂದ ದೋವಗಿರಿ ಜಿ. ಮಹಾರಾಜ್‌, ಪುಣೆ
ಮಹಾರಾಷ್ಟ್ರದ ದೇವಗಿರಿ ಮಹಾರಾಜ್‌, ರಾಮಮಂದಿರ ನಿರ್ಮಾಣಕ್ಕಾಗಿ ದಶಕಗಳಿಂದ ಹೋರಾಡಿದವರು. ರಾಮಾಯಣ, ಭಗವದ್ಗೀತೆ, ಮಹಾಭಾರತದ ಕುರಿತು ದೇಶ-ವಿದೇಶಗಳಲ್ಲಿ ಪ್ರವಚನ ನೀಡುತ್ತಾ ಬಂದಿದ್ದಾರೆ.

 ಕಾಮೇಶ್ವರ ಚೌಪಾಲ್‌
ಶಿಲಾನ್ಯಾಸ ನೆರವೇರಿಸಿದ್ದ ದಲಿತ ವ್ಯಕ್ತಿ ದಲಿತ ಸಮುದಾಯದ ಕಾಮೇಶ್ವರ ಚೌಪಾಲ್‌ರಿಗೂ ಟ್ರಸ್ಟ್‌ನಲ್ಲಿ ಸ್ಥಾನ ದೊರೆತಿದೆ. 1989ರಲ್ಲಿ ರಾಮಮಂದಿರ ಆಂದೋಲನದ ಸಮಯದಲ್ಲಿ ನಡೆದ ಶಿಲಾನ್ಯಾಸದಲ್ಲಿ ಬಿಹಾರ ಮೂಲದ ಕಾಮೇಶ್ವರ್‌ ಅವರೇ ಮಂದಿರಕ್ಕಾಗಿ ಮೊದಲ ಇಟ್ಟಿಗೆ ಇಟ್ಟಿದ್ದರು. 1991ರಲ್ಲಿ ಅವರು ರಾಂ ವಿಲಾಸ್‌ ಪಾಸ್ವಾನ್‌ರ ವಿರುದ್ಧ ಹಾಗೂ 2014ರಲ್ಲಿ ಬಿಜೆಪಿಯಿಂದ ಟಿಕೆಟ್‌ ಪಡೆದು ಲೋಕಸಭಾ ಚುನಾವಣೆಯನ್ನೂ ಎದುರಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕಾಮೇಶ್ವರ್‌ ಅವರಿಗೆ “ಪ್ರಥಮ ಕರಸೇವಕ’ ದರ್ಜೆಯನ್ನೂ ನೀಡಿದೆ.

Advertisement

 ಮಹಾಂತ ದಿನೇಂದ್ರ ದಾಸ್‌, ನಿರ್ಮೋಹಿ ಅಖಾಡಾ ಮುಖ್ಯಸ್ಥ
ಅಯೋಧ್ಯೆ ವಿವಾದದಲ್ಲಿ ಪ್ರಮುಖ ಅರ್ಜಿದಾರ ಪಕ್ಷವಾಗಿದ್ದ ನಿರ್ಮೋಹಿ ಅಖಾಡಾದ ಅಯೋಧ್ಯೆಯ ಪೀಠಾಧ್ಯಕ್ಷ ಮಹಂತ ದಿನೇಂದ್ರ ದಾಸ್‌ ಅವರಿಗೂ ಟ್ರಸ್ಟ್‌ನಲ್ಲಿ ಸ್ಥಾನ ಸಿಕ್ಕಿದೆ. ಸುಪ್ರೀಂ
ಕೋರ್ಟ್‌ನ ಸಲಹೆಯ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ. ಆದರೆ ಟ್ರಸ್ಟ್‌ನ ಸಭೆಗಳಲ್ಲಿ ಅವರಿಗೆ ಮತದಾನದ ಅಧಿಕಾರ ಇಲ್ಲ.

 ವಿಶ್ವ ಪ್ರಸನ್ನ ತೀರ್ಥಶ್ರೀಪಾದಂಗಳವರು, ಉಡುಪಿ ಪೇಜಾವರ ಮಠ
ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳು, ರಾಮಜನ್ಮಭೂಮಿ ಹೋರಾಟದ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಿದವರು. ಅವರು 2019ರ ಡಿಸೆಂಬರ್‌ 28ರಂದು ಕೃಷ್ಣೆ„ಕ್ಯರಾದರು. ಈಗ ಕೇಂದ್ರ ಸರ್ಕಾರ, ವಿಶ್ವೇಶ ತೀರ್ಥರ ಉತ್ತರಾಧಿಕಾರಿ ವಿಶ್ವಪ್ರಸನ್ನ ತೀರ್ಥರನ್ನು ಟ್ರಸ್ಟ್‌ನ ಸದಸ್ಯರಾಗಿ ನೇಮಿಸುವ ಮೂಲಕ ಗೌರವ ಸೂಚಿಸಿದೆ.

 ವಿಮಲೇಂದ್ರ ಮೋಹನ ಪ್ರತಾಪ್‌ ಮಿಶ್ರಾ, ಸಮಾಜಸೇವಕ, ರಾಜಪರಿವಾರ ವಂಶಜ
ಅಯೋಧ್ಯೆ ರಾಜಪರಿವಾರದ ವಂಶಜ, ರಾಮಾಯಣ ಮೇಳಾ ಸಂರಕ್ಷಣ ಸಮಿತಿಯ ಪ್ರಮುಖ ಸದಸ್ಯ. ಆಗಿರುವ ಮಿಶ್ರಾ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಡಿದವರು. 2009ರಲ್ಲಿ ಬಿಎಸ್‌ಪಿ ಟಿಕೆಟ್‌ನ ಮೇಲೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.

 ಪರಮಾನಂದ ಜೀ ಮಹರಾಜ್‌, ಹರಿದ್ವಾರದ ಅಖಂಡ ಆಶ್ರಮ
ಹರಿದ್ವಾರದ ಅಖಂಡ ಆಶ್ರಮದ ಪೀಠಾಧಿಪತಿಗಳಾಗಿರುವ ಪರಮಾನಂದ ಮಹಾರಾಜ್‌ ಅವರು, ವೇದಾಂತದ ಕುರಿತು 150ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2000ನೇ ಇಸವಿಯಲ್ಲಿ ಅವರು ವಿಶ್ವಸಂಸ್ಥೆ ಆಯೋಜಿಸಿದ್ದ ಆಧ್ಯಾತ್ಮಿಕ ನಾಯಕರ ಶೃಂಗಸಭೆಯಲ್ಲಿ ಭಾಷಣ ಮಾಡಿದ್ದರು.

 ಡಾ.ಅನಿಲ್‌ ಮಿಶ್ರಾ, ಅಯೋಧ್ಯೆಯ ವೈದ್ಯ
ಅಯೋಧ್ಯೆಯ ಹೋಮಿಯೋಪಥಿ ಡಾಕ್ಟರ್‌ ಆಗಿರುವ ಡಾ. ಅನಿಲ್‌ ಮಿಶ್ರಾ ಹೋಮಿಯೋಪಥಿ ಮೆಡಿಸಿನ್‌ ಬೋರ್ಡ್‌ನ ರೆಜಿಸ್ಟ್ರಾರ್‌ ಕೂಡ ಆಗಿದ್ದಾರೆ. ರಾಮಮಂದಿರ ಆಂದೋಲನದಲ್ಲಿ, ಮಾಜಿ ಸಂಸದ ವಿನಯ್‌ ಕಟಿಯಾರ್‌ರ ಜತೆಗೂಡಿ ಮಹತ್ವಪೂರ್ಣ ಪಾತ್ರ ವಹಿಸಿದ್ದಾರೆ.

ನಿರ್ವಹಣೆ ಹೇಗೆ?
ಮೋದಿ ಸರ್ಕಾರದ 8 ನಿಯಮ
1 ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಮೊದಲ ಸಭೆಯಲ್ಲಿ, ಟ್ರಸ್ಟ್‌ನ ಖಾಯಂ ಕಚೇರಿಯ ಬಗ್ಗೆ ಚರ್ಚಿಸಲಾಗುವುದು. ಈ ಟ್ರಸ್ಟ್‌ ತಾತ್ಕಾಲಿಕವಾಗಿ ದೆಹಲಿಯಿಂದ ಕಾರ್ಯನಿರ್ವಹಿಸಲಿದೆ (ಪರಾಶರನ್‌ರ ನಿವಾಸದಿಂದ)

2 ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಈ ಟ್ರಸ್ಟ್‌ ಸಂಪೂರ್ಣ ಸ್ವತಂತ್ರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಂದಿರಕ್ಕೆ ಸಂಬಂಧಿಸಿದ ಎಲ್ಲಾ ಸೌಲಭ್ಯ, ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯೂ ಟ್ರಸ್ಟ್‌ನದ್ದಾಗಿರುತ್ತದೆ (ಅಡುಗೆಮನೆ, ಗೋಶಾಲೆ, ವಸ್ತು ಸಂಗ್ರಹಾಲಯ, ಯಾತ್ರಿ ನಿವಾಸ ಇತ್ಯಾದಿ).

3 ಟ್ರಸ್ಟಿಗಳು ಮಂದಿರ ನಿರ್ಮಾಣ ಮತ್ತು ಸೇವೆಗಳಿಗಾಗಿ, ಯಾವುದೇ ವ್ಯಕ್ತಿ ಮತ್ತು ಸಂಸ್ಥೆಗಳಿಂದ ಸಹಕಾರ ಪಡೆಯಬಹುದು. ದೇಣಿಗೆ, ಅನುದಾನ, ಸ್ಥಿರಾಸ್ತಿಯನ್ನು ಪಡೆಯಬಹುದು. ಇದಷ್ಟೇ ಅಲ್ಲದೇ, ಈ ಟ್ರಸ್ಟ್‌ ಸಾಲ ಕೂಡ ಪಡೆಯಬಹುದಾಗಿದೆ.

4 ಬೋರ್ಡ್‌ ಆಫ್ ಟ್ರಸ್ಟೀಗಳೆಲ್ಲ ಒಬ್ಬರನ್ನು ಅಧ್ಯಕ್ಷರಾಗಿ ನೇಮಿಸಬೇಕು. ಇದೇ ವೇಳೆಯಲ್ಲೇ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಸಹ ನೇಮಿಸಲಾಗುತ್ತದೆ.

5 ದೇಣಿಗೆ ಹಣವನ್ನು ಕೇವಲ ಟ್ರಸ್ಟ್‌ ಸಂಬಂಧಿ ಕೆಲಸಗಳಿಗೆ ಮಾತ್ರ ಬಳಸಬಹುದು. ಮಂದಿರಕ್ಕೆ ಸಂಬಂಧಿಸದ ಇನ್ಯಾವುದೇ ಕೆಲಸಕ್ಕೂ ಬಳಸುವಂತಿಲ್ಲ.

6 ರಾಮಮಂದಿರ ಟ್ರಸ್ಟ್‌ಗೆ ಸಂಬಂಧಿಸಿದ ಯಾವುದೇ ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಹಕ್ಕು ಟ್ರಸ್ಟೀಗಳಿಗೆ ಇರುವುದಿಲ್ಲ.

7 ದೇಣಿಗೆ ಮತ್ತು ಖರ್ಚಿನ ಸಂಪೂರ್ಣ ಲೆಕ್ಕವನ್ನು ಟ್ರಸ್ಟ್‌ ದಾಖಲಿಸಿಟ್ಟುಕೊಳ್ಳಬೇಕು. ಬ್ಯಾಲೆನ್ಸ್‌ ಶೀಟ್‌ಗಳನ್ನು ಸೃಷ್ಟಿಸಿ, ಟ್ರಸ್ಟ್‌ನ ಅಕೌಂಟ್‌ಗಳನ್ನು ಆಡಿಟ್‌ ಮಾಡಲಾಗುತ್ತದೆ.

8 ರಾಮಮಂದಿರ ಟ್ರಸ್ಟ್‌ನ ಸದಸ್ಯರ ಸಂಬಳದ ಕುರಿತು ಯಾವುದೇ ಅಂಶಗಳನ್ನು ನಮೂದಿಸಲಾಗಿಲ್ಲ. ಆದರೆ, ಪ್ರಯಾಣದ ಖರ್ಚನ್ನು ಟ್ರಸ್ಟ್‌ ಭರಿಸುತ್ತದೆ.

ಕೇಂದ್ರ ಸರ್ಕಾರದ ವತಿಯಿಂದ ಒಬ್ಬರು ಐಎಎಸ್‌ ಅಧಿಕಾರಿ ಈ ಟ್ರಸ್ಟ್‌ನಲ್ಲಿ ಕೇಂದ್ರ ಸರ್ಕಾರದ ಒಬ್ಬ ಐಎಎಸ್‌ ಅಧಿಕಾರಿ ಇರುತ್ತಾರೆ. ಇವರು ಹಿಂದೂ ಧರ್ಮ ಆಚರಿಸುವವರು ಆಗಿರಬೇಕು. ಅಲ್ಲದೇ ಜಂಟಿ ಕಾರ್ಯದರ್ಶಿಗಳ ಕೆಳಗಿನ ರ್‍ಯಾಂಕಿನ ಅಧಿಕಾರಿಯಾಗಿರಬಾರದು. ರಾಜ್ಯ ಸರ್ಕಾರ ನೇಮಕ ಮಾಡುವ ಓರ್ವ ಐಎಎಸ್‌ ಅಧಿಕಾರಿ ರಾಜ್ಯ ಸರ್ಕಾರದ ಒಬ್ಬ ಐಎಎಸ್‌ ಅಧಿಕಾರಿ ಟ್ರಸ್ಟಿಗಳಾಗಿರುತ್ತಾರೆ. ಇವರೂ ಕೂಡ ಹಿಂದೂ ಧರ್ಮ ಆಚರಿಸುವವರು ಆಗಿರಬೇಕು ಆಗಿರಬೇಕು. ಇವರ ರ್‍ಯಾಂಕ್‌ ಕೂಡ ಜಂಟಿ ಕಾರ್ಯದರ್ಶಿಗಳ ಕೆಳಗೆ ಇರಬಾರದು. ಆಯೋಧ್ಯೆಯ ಜಿಲ್ಲಾಧಿಕಾರಿ ಅಯೋಧ್ಯೆಯ ಜಿಲ್ಲಾಧಿಕಾರಿಯೂ ಈ ಟ್ರಸ್ಟ್‌ನ ಸದಸ್ಯರಾಗಿರುತ್ತಾರೆ. ಆದರೆ, ಒಂದು ವೇಳೆ ಜಿಲ್ಲಾಧಿಕಾರಿ ಹಿಂದೂ ಆಗಿರದಿದ್ದರೆ, ಅವರ ಜಾಗದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ(ಹಿಂದೂ ಆಗಿರಬೇಕು) ಟ್ರಸ್ಟ್‌ನ ಭಾಗವಾಗುತ್ತಾರೆ.  ಟ್ರಸ್ಟಿಗಳೇ ನೇಮಿಸಿರುವ ಅಧ್ಯಕ್ಷರು ಟ್ರಸ್ಟಿಗಳೇ ನೇಮಿಸುವ ಇಬ್ಬರು ಹಿಂದೂ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next