Advertisement

ಬಾಬ್ರಿ ಪ್ರಕರಣ: ಅಂದು ನಡೆದ ಘಟನೆ ಬಗ್ಗೆ ಹಲ್ಲೆಗೊಳಗಾದ ಪತ್ರಕರ್ತರು ಹೇಳುವುದೇನು?

02:47 PM Sep 30, 2020 | Karthik A |

ಮಣಿಪಾಲ: ಬಾಬರಿ ಮಸೀದಿ ನೆಲಸಮಗೊಂಡ ಸುಮಾರು 28 ವರ್ಷಗಳ ಬಳಿಕ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಇದೀಗ ಸಿಬಿಐ ವಿಶೇಷ ನ್ಯಾಯಾಲಯ ಎಲ್ಲರನ್ನೂ ಖುಲಾಸೆಗೊಳಿಸಿದೆ. ಆರೋಪಿಗಳ ವಿರುದ್ಧ ನಮಗೆ ಯಾವುದೇ ಪುರಾವೆಗಳು ದೊರೆತಿಲ್ಲ. ಛಾಯಾಚಿತ್ರಗಳಿಂದ ಯಾರೂ ತಪ್ಪಿತಸ್ಥರೆಂದು ಹೇಳಲಾಗುವುದಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

Advertisement

ಈ ಸಂಪೂರ್ಣ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿತ್ತು. ಇಡೀ ಪ್ರಕರಣದಲ್ಲಿ ಪತ್ರಕರ್ತರು ಸಾಕ್ಷಿಗಳ ಮೂಲವಾಗಿದ್ದರು. ಪತ್ರಕರ್ತರೂ ಹಲವರ ಮೇಲೆ ಎಫ್ಐಆರ್‌ ದಾಖಲಿಸಿದ್ದರು. ಮಸೀದಿಯನ್ನು ಕೆಡವಿದ ದಿನ ಅಯೋಧ್ಯೆಯಲ್ಲಿ ವರದಿ ಮಾಡುತ್ತಿದ್ದ ಭಾರಿ ಸಂಖ್ಯೆಯ ಪತ್ರಕರ್ತರ ಮೇಲೆ ಹಲ್ಲೆಯಾಗಿತ್ತು. ಕ್ಯಾಮೆರಾಗಳನ್ನು ಕಸಿದುಕೊಂಡು ಮುರಿಯಲಾಗಿತ್ತು. 1992ರ ಡಿಸೆಂಬರ್‌ 6ರಂದು ಅಯೋಧ್ಯೆಯಲ್ಲಿ ಸುದ್ದಿ ಪ್ರಸಾರಕ್ಕಾಗಿ ಹಾಜರಿದ್ದ 4 ಪತ್ರಕರ್ತರು  ಅಲ್ಲಿ ನಿಜಕ್ಕೂ ಆಗಿದ್ದೇನು ಎಂಬುದನ್ನು ವಿವರಿಸಿದ್ದಾರೆ.

ಪೂಜೆಗೆಂದು ಸಭೆ ಸೇರಲಾಗಿತ್ತು; ಆದರೆ
ರಾಜೇಂದ್ರ ಸೋನಿ 30 ವರ್ಷಗಳಿಂದ ಅಯೋಧ್ಯೆಯಲ್ಲಿ ಪತ್ರಕರ್ತರಾಗಿದ್ದರು. ಪ್ರಸ್ತುತ ಆಲ್‌ ಇಂಡಿಯಾ ರೇಡಿಯೋ ಮತ್ತು ದೂರದರ್ಶನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹೇಳುವಂತೆ “ಸಿಬಿಐ ನನಗೆ ಸಮನ್ಸ್‌ ಕಳುಹಿಸಿತ್ತು. ನಾನು ಅಂದು ಪತ್ರಿಕೆ ವರದಿಗಾರನಾಗಿದ್ದೆ. ವಾಸ್ತವವಾಗಿ ಡಿಸೆಂಬರ್‌ 6ರ ಬೆಳಗ್ಗೆ ಕರಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ವಿಎಚ್‌ಪಿ ಅಂದು ರಾಮ ಜನ್ಮಭೂಮಿಗೆ ಸರಯೂ ನದಿಯ ಜಲ ಮತ್ತು ಮರಳಿನೊಂದಿಗೆ ಪೂಜೆ ಮಾಡಲು ಬಂದಿದ್ದರು. ಇದಕ್ಕಾಗಿ ಪ್ರದೇಶವನ್ನು ಶುದ್ಧಮಾಡಲು ದೇಶದ ಎಲ್ಲೆಡೆಯಿಂದಲೂ ಜನರನ್ನು ಕರೆಸಲಾಗಿತ್ತು. ವಿಎಚ್‌ಪಿ ಮತ್ತು ಸಂಘದ ಜನರು ಆ ಸ್ಥಳವನ್ನು ಸ್ವಚ್ಛಮಾಡುತ್ತಾ ಪೂಜೆಗೆ ಅಣಿಯಾಗುತ್ತಿದ್ದರು. ಇದರಿಂದ ಅಲ್ಲಿ ಯಾವುದೇ ಸಮಸ್ಯೆ ಇದ್ದಿರಲಿಲ್ಲ.

ಬೆಳಗ್ಗೆ ಅಲ್ಲಿದ್ದ ಜನಸಮೂಹವು ಒಂದಷ್ಟು ಚೂಪಾದ ಉಪಕರಣಗಳೊಂದಿಗೆ ಮಸೀದಿಯ ಕಡೆಗೆ ಮುನ್ನುಗ್ಗಲು ಮುಂದಾಗುತ್ತಾರೆ. ಆದರೆ ಸಂಘದ ಜನರು ಅವರನ್ನು ತಡೆದು ಮಾರಕಾಸ್ತ್ರಗಳನ್ನು ಕಸಿದುಕೊಂಡರು. ಆದರೆ ಜನಸಮೂಹ ಇವರ ಮಾತನ್ನು ಆಲಿಸುವ ಸ್ಥಿತಿಯಲ್ಲಿ ಇರಲಿಲ್ಲ. ನಮ್ಮ ಸಭೆಯ ಉದ್ದೇಶ ಇಲ್ಲಿ ದುರುಪಯೋಗವಾಗುತ್ತಿದೆ ಎಂದು ವಿಎಚ್‌ಪಿ ನಾಯಕ ಅಶೋಕ್‌ ಸಿಂಘಾಲ್‌ ಮೈಕ್‌ ನಲ್ಲಿ ಹೇಳುತ್ತಿದ್ದರು ಎಂಬುದನ್ನು ರಾಜೇಂದ್ರ ಸೋನಿ ನೆನಪಿಸಿದ್ದಾರೆ.

ಅಯೋಧ್ಯೆಯಲ್ಲಿ ನೆರವೇರುವ ಪೂಜಾ ಕಾರ್ಯಕ್ರಮದ ಪ್ರಸಾರಕ್ಕಾಗಿ ವಿಎಚ್‌ಪಿ ಕಾರ್ಯಕರ್ತರು ಮಾಧ್ಯಮದವರಿಗೆ ಮಾನಸ್‌ ಭವನದ ಬಳಿ ವ್ಯವಸ್ಥೆ ಮಾಡಿತ್ತು. ಆದರೆ ಅಷ್ಟರಲ್ಲಿ ಭಾರೀ ಸಂಖ್ಯೆಯ ಕರಸೇವಕರು ಮಸೀದಿಯತ್ತ ಮುನ್ನುಗ್ಗಿ ಅದನ್ನು ನೆಲಸಮಗೊಳಿಸಲು ಮುಂದಾದರು. ಇದನ್ನು ಸೆರೆಹಿಡಿಯುತ್ತಿದ್ದ ಪತ್ರಕರ್ತರನ್ನು ಥಳಿಸಲಾಯಿತು. ವರದಿಗಾರರ ಕ್ಯಾಮೆರಾಗಳನ್ನು ಕಸಿದುಕೊಂಡರು. ಅದಕ್ಕಾಗಿ ಅಂದು ಪತ್ರಕರ್ತರು ಎಫ್ಐಆರ್‌ ದಾಖಲಿಸಬೇಕಾಯಿತು.

Advertisement

ಕಲ್ಯಾಣ್‌ ಸಿಂಗ್‌ ಅವರ ಸುದ್ದಿಗೆ ಸಂಬಂಧಿಸಿದಂತೆ ಸಿಬಿಐ ಸಮನ್ಸ್‌
ವಿ.ಎನ್‌.ದಾಸ್‌ ಎಂಬವರು ಸುಮಾರು 35 ವರ್ಷಗಳ ಕಾಲ ಅಯೋಧ್ಯೆಯ ನವಭಾರತ್‌ ಟೈಮ್ಸ್‌ ನ ವರದಿಗಾರರಾಗಿದ್ದರು. ವಿವಾದಿತ ಮಸೀದಿಯನ್ನು ಕೆಡವಿದ ದಿನ ಅವರು ಅಯೋಧ್ಯೆಯಲ್ಲಿದ್ದರು. ಸಿಬಿಐ ಸಹ ಸಾಕ್ಷ್ಯಕ್ಕಾಗಿ ಅವರನ್ನು ಕರೆಸಿಕೊಂಡಿತ್ತು. ಕಲ್ಯಾಣ್‌ ಸಿಂಗ್‌ ಅವರ ಸಭೆಗಳಿಗೆ ಸಂಬಂಧಿಸಿದ ಪ್ರಸಾರದ ಬಗ್ಗೆ ನನ್ನನ್ನು ಸಿಬಿಐ ಕರೆದಿತ್ತು ಎಂದು ದಾಸ್‌ ಹೇಳಿದ್ದಾರೆ.

ಈ ಬಾಬರಿ ಮಸೀದಿಯನ್ನು ಕೆಡವಲಾದ ಬಳಿಕ ಕಲ್ಯಾಣ್‌ ಸಿಂಗ್‌ ಅವರು ಆಸುಪಾಸಿನ ಗೊಂಡಾ, ಬಲರಾಂಪುರ, ಅಯೋಧ್ಯೆ ಸೇರಿದಂತೆ ಹತ್ತಿರದ ಹಲವಾರು ಜಿಲ್ಲೆಗಳಲ್ಲಿ ಸಭೆ ನಡೆಸಿದ್ದರು. ಸಭೆಯಲ್ಲಿ ಅವರು ಮಸೀದಿ ನೆಲಸಮವಾಗಿದ್ದನ್ನು ಸಮರ್ಥಿಸಿದ್ದರು. ಈ ಸುದ್ದಿಗೆ ಸಂಬಂಧಿಸಿದಂತೆ ಸಿಬಿಐ ನನ್ನನ್ನು ಪ್ರಶ್ನಿಸಲು ಬಯಸಿತು. ನಾನು ಸಹ ಹಾಜರಿದ್ದೆ. ನನ್ನ ಸುದ್ದಿಯಲ್ಲಿ ಬರೆದದ್ದು ಸರಿಯಾಗಿದೆ ಎಂದು ನಾನು ಸಿಬಿಐಗೆ ಸ್ಪಷ್ಟವಾಗಿ ಹೇಳಿದೆ ಎಂದರು.

ಡಿಸೆಂಬರ್‌ 6ರ ಬಗ್ಗೆ ಮಾತನಾಡುತ್ತಾ ಆ ದಿನ ಎಲ್. ಕೆ. ಅಡ್ವಾಣಿ, ಉಮಾ ಭಾರತಿ, ಅಶೋಕ್‌ ಸಿಂಘಾಲ್‌ ಅವರಂತಹ ಅನೇಕ ಜನರು ಅಲ್ಲಿನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇನ್ನೊಂದು ಬದಿಯಲ್ಲಿನ ಮಾನಸ್‌ ಭವನದಲ್ಲಿ ಪತ್ರಕರ್ತರು ಉಪಸ್ಥಿತರಿದ್ದೆವು. ವಿಎಚ್‌ಪಿಯ ಆ ಕಾರ್ಯಕ್ರಮದಲ್ಲಿ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿ ಪೂಜಿಸಲಾಗುವ ರೂಪುರೇಷೆಯನ್ನು ಇಟ್ಟುಕೊಳ್ಳಲಾಗಿತ್ತು.ಆದರೆ ಕರಸೇವಕರು ಇದನ್ನು ಒಪ್ಪಲಿಲ್ಲ.

ಆದರೆ ವಿ.ಎನ್‌.ದಾಸ್‌ ಅವರು ಹೇಳುವಂತೆ ಕರಸೇವಕರು ಅಲ್ಲಿಗೆ ಸ್ವಚ್ಛತಾ ಕಾರ್ಯ ಮತ್ತು ಪೂಜೆಗಾಗಿ ಬಂದಿರಲಿಲ್ಲ. ಅವರು ಅಲ್ಲಿಗೆ ಬಂದಿರುವ ಉದ್ದೇಶವೇ ಮಸೀದಿಯನ್ನು ಕೆಡವುದಾಗಿತ್ತು. ಆಕ್ರೋಶಗೊಂಡ ಜನಸಮೂಹ ಮಧ್ಯಾಹ್ನದ ಹೊತ್ತಿಗೆ ಕಟ್ಟಡವನ್ನು ಕೆಡವಲು ಪ್ರಾರಂಭಿಸಿತು. ಅಷ್ಟರಲ್ಲಿ ನಾನು ನನ್ನ ಸಂಜೆ ಪತ್ರಿಕೆಗೆ ಸುದ್ದಿ ನೀಡಬೇಕಾಗಿತ್ತು. ಅಂದು ಇಂದಿನಂತೆ ಮೇಲ್‌ಗ‌ಳು ಬಳಕೆಯಲ್ಲಿ ಇರಲಿಲ್ಲ. ಹೀಗಾಗಿ ಕಚೇರಿಗೆ ಬಂದು ಸುದ್ದಿ ನೀಡಬೇಕಾಗಿತ್ತು.

ಸಂಜೆ ಮತ್ತೆ ಹಿಂತಿರುಗಿದಾಗ ಕಟ್ಟಡ ನಾಶವಾಗಿತ್ತು. ವಿಎಚ್‌ಪಿಯ ಜನರು ಅಲ್ಲಿ ಇರಲಿಲ್ಲ. ಆದರೆ ದುರ್ಗವಾಹಿನಿ ಮಹಿಳೆಯರು ದೇವಾಲಯಗಳನ್ನು ನಿರ್ಮಿಸುತ್ತಿದ್ದರು ಮತ್ತು ನೆಲಸಮಗೊಳಿಸಲಾದ ಮಸೀದಿಯ ಬದಿಯಲ್ಲಿ ಜೈ ಶ್ರೀರಾಮ್‌ ಘೋಷಣೆಗಳನ್ನು ಕೂಗುತ್ತಿದ್ದರು.

ಒಂದು ತಂಡ ಪತ್ರಕರ್ತರಿಗೆ ಚಹಾ ನೀಡುತ್ತಿದ್ದರೆ; ಮತ್ತೂಂದು ಗುಂಪು ಹಲ್ಲೆ ಮಾಡುತ್ತಿತ್ತು
ಹಿರಿಯ ಪತ್ರಕರ್ತ ಡಾ| ಉಪೇಂದ್ರ ಎಂಬವರು ಅಂದು ಆ ಸಮಯದಲ್ಲಿ ದೈನಿಕ್‌ ಜಾಗರಣ್  ‌ನ ಅಯೋಧ್ಯೆ ಡೆಸ್ಕ್ ಅನ್ನು ನೋಡಿಕೊಳ್ಳುತ್ತಿದ್ದರು. ಇದಕ್ಕೂ ಮೊದಲು ಅವರು ಅಯೋಧ್ಯೆಯ ಬ್ಯೂರೋ ಮುಖ್ಯಸ್ಥರಾಗಿದ್ದರು. ನಾನು ಆ ಘಟನೆ ದಿನ ಲಕ್ನೋದಲ್ಲಿದ್ದೆ ಎಂದು ಡಾ| ಉಪೇಂದ್ರ ಹೇಳುತ್ತಾರೆ. ನನ್ನ ಸಂಪಾದಕ ವಿನೋದ್‌ ಶುಕ್ಲಾ ಅಯೋಧ್ಯೆಯಲ್ಲಿದ್ದರು. ಘಟನೆಯ ಹಿಂದಿನ ದಿನದವರೆಗೆ ಎಲ್ಲವೂ ಸಾಮಾನ್ಯವಾಗಿತ್ತು.ಆದರೆ ಡಿಸೆಂಬರ್ 5ರ ರಾತ್ರಿ ಸುಮಾರು 10 ಗಂಟೆಗೆ ಕೆಲವು ಜನರಿಂದ ನನಗೆ  ಫೋನ್‌ ಕರೆಗಳು ಬಂದವು. ಲಕ್ನೋದಲ್ಲಿ ನೀವು ಏನು ಮಾಡುತ್ತಿದ್ದೀರಿ ಎಂದು ಎಲ್ಲರೂ ನನ್ನನ್ನು ಕೇಳಲಾರಂಭಿಸಿದರು. “ಇಲ್ಲಿಗೆ ಬನ್ನಿ ನೀವು ಇಲ್ಲದಿದ್ದರೆ ನೀವು ಇದನ್ನು ಯಾವಾಗಲೂ ತಪ್ಪಿಸಿಕೊಳ್ಳುತ್ತೀರಿ.’ ಎಂದು ಹೇಳುತ್ತಿದ್ದದ್ದನ್ನು ಡಾ| ಉಪೇಂದ್ರ ಅವರು ನೆನಪಿಸಿಕೊಂಡರು.

ನಾನು ಲಕ್ನೋದಿಂದ ಫೈಜಾಬಾದ್‌ಗೆ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಕಾರಿನಲ್ಲಿ ಬಂದಿದ್ದೆ. ಅಂದು ಅಲ್ಲೇ ಉಳಿದು ಅಲ್ಲಿಂದ ನೇರವಾಗಿ ಮುಂಜಾನೆ ಬಾಬರಿ ಮಸೀದಿ ಇದ್ದ ಸ್ಥಳ ತಲುಪಿದೆ. ವಿನೋದ್‌ ಶುಕ್ಲಾ, ಬಿಬಿಸಿ ಪತ್ರಕರ್ತ ಮಾರ್ಕ್‌ ಟುಲ್ಲಿ ಮುಂತಾದವರು ಜತೆಗಿದ್ದರು. ಅಂದು ಡಿಸೆಂಬರ್‌ 6ರಂದು ಬೆಳಗ್ಗೆ ಕಾರ್ಯಕ್ರಮದ ವರದಿಗಾರಿಕೆಗೆ ಬಂದ ಪತ್ರಕರ್ತರಿಗೆ ವಿಎಚ್‌ಪಿ ಕಾರ್ಯಕರ್ತರು ಚಹಾ ನೀಡುತ್ತಿದ್ದರು ಎಂಬುದನ್ನು ಪತ್ರಕರ್ತ ಡಾ| ಉಪೇಂದ್ರ ನೆನಪಿಸಿಕೊಂಡಿದ್ದಾರೆ.

ಬೆಳಗ್ಗೆ 9 ಗಂಟೆ ಆಗಿರಬೇಕು. ಪೂಜೆ ಪ್ರಾರ್ಥನೆಗಳು ನಡೆಯುತ್ತಿದ್ದವು. ಇದ್ದಕ್ಕಿದ್ದಂತೆ ಕರಸೇವಕರ ಗುಂಪು ಬಂದು ವಿಎಚ್‌ಪಿಯ ಮುಖಂಡ ಅಶೋಕ್‌ ಸಿಂಘಾಲ್‌ ಅವರನ್ನು ತಳ್ಳಿತು. ಬಳಿಕ ಅಲ್ಲಿ ಗೊಂದಲ ಪ್ರಾರಂಭವಾಯಿತು. ಅಷ್ಟರಲ್ಲಿ ಕೆಲವರು ಬಿಬಿಸಿಯ ಪತ್ರಕರ್ತ ಮಾರ್ಕ್‌ ಟಲ್ಲಿ ಅವರನ್ನು ನೋಡಿದರು. ವಾಸ್ತವವಾಗಿ ಕರ ಸೇವಕರಿಗೆ ಬಿಬಿಸಿ ಪತ್ರಕರ್ತರ ಮೇಲೆ ಕೋಪ ಇತ್ತು. ಆದರೆ ನೋಡುತ್ತಿದ್ದಂತೆ ಕರಸೇವಕರ ಗುಂಪು ಮಾರ್ಕ್‌ ಟಲ್ಲಿ ಅವರ ಮೇಲೆ ಹಲ್ಲೆ ಮಾಡಿತು. ಆದರೆ ನಾವು ಅವರನ್ನು ಬಚಾವ್‌ ಮಾಡುವಲ್ಲಿ ಯಶಸ್ವಿಯಾದೆವು.

ಇನ್ನು ಸಹಾರಾ ಪತ್ರಿಕೆಯ ಫೋಟೊಗ್ರಾಫ‌ರ್‌ ರಾಜೇಂದ್ರ ಕುಮಾರ್‌ ಅವರು ಮಸೀದಿ ಒಡೆಯುತ್ತಿರುವ ಚಿತ್ರಗಳನ್ನು ಕ್ಲಿಕ್ಕಿಸಿದ್ದರು. ಇದನ್ನು ಗಮನಿಸುತ್ತಿದ್ದ ಗುಂಪು ಅವರ ಮೇಲೆ ಹಲ್ಲೆ ಮಾಡಿ ದವಡೆ ಮುರಿದಿತ್ತು. ಅವರು ಎರಡೂವರೆ ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನನ್ನ 32 ವರ್ಷಗಳ ವೃತ್ತಿಜೀವನದಲ್ಲಿ ಹಲವು ಘಟನೆಗಳನ್ನು ನೋಡಿದ್ದೇನೆ ವರದಿ ಮಾಡಿದ್ದೇನೆ. ಆದರೆ ಪತ್ರಕರ್ತರ ಮೇಲೆ ನಡೆದ ಈ ಮಾದರಿಯ ಹಲ್ಲೆಗಳನ್ನು ನಾನು ಎಂದಿಗೂ ನೋಡಿರಲಿಲ್ಲ. ಬಿಬಿಸಿ, ಸಿಎನ್‌ಎನ್‌, ನ್ಯೂಯಾರ್ಕ ಟೈಮ್ಸ್‌ ಮೊದಲಾದ ಅಂತಾರಾಷ್ಟ್ರೀಯ ವಾಹಿನಿಗಳ ಪತ್ರಕರ್ತರ ಮೇಲೆ ಹಲ್ಲೆಯಾಗಿತ್ತು.

ಕೆಲವು ವರ್ಷಗಳ ಹಿಂದೆ ಸಿಬಿಐ ನನಗೆ ಸಮನ್ಸ್‌ ಕಳುಹಿಸಿತು. ನಾನು ಹಾಜರಿದ್ದು ಮಾಡಿದ ಸುದ್ದಿ ಮತ್ತು ನನ್ನ ಒಂದು ಹೇಳಿಕೆಯನ್ನು ವಿಚಾರಣೆಗೆ ಆಧಾರವಾಗಿರಿಸಲಾಗಿದೆ ಎಂದು ನನಗೆ ಸಿಬಿಐ ಹೇಳಿತ್ತು. ಆ ದಿನ ಅಲ್ಲಿ ಉಮಾ ಭಾರತಿ, ಸಾಧ್ವಿ ರಿತಂಭರ, ಪವನ್‌ ಪಾಂಡೆ, ಸಂತೋಷ್‌ ದುಬೆ ಏನು ಮಾಡುತ್ತಿದ್ದರು ಎಂದು ಸಿಬಿಐ ನನ್ನಲ್ಲಿ ಕೇಳಿತ್ತು. ನಾವು 800 ಮೀಟರ್‌ ದೂರದಲ್ಲಿದ್ದೇವು ಎಂದು ನಾನು ಅವರಿಗೆ ಹೇಳಿದೆ. ಗುಮ್ಮಟವನ್ನು ಯಾರು ಹತ್ತಿದರು ಎಂಬುದು ಸ್ಪಷ್ಟವಾಗಿ ನಮಗೆ ಕಾಣುತ್ತಿರಲಿಲ್ಲ ಎಂದು ಸಿಬಿಐಗೆ ಹೇಳಿದ್ದೆ ಮುಂದೆ ನನ್ನ ಹೇಳಿಕೆಯನ್ನು ದಾಖಲಿಸಲಾಗಿಲ್ಲ.

ದುಷ್ಕರ್ಮಿಗಳು ನನ್ನ ಕೆಮೆರಾವನ್ನು ಕಸಿದುಕೊಂಡರು, ಒಡೆದು ಹಾಕಿದರು
ಸುರೇಂದ್ರ ಕುಮಾರ್‌ ಯಾದವ್‌ ಆ ಸಮಯದಲ್ಲಿ ಉತ್ತರ-ಭಾರತದ ಒಂದು ಮ್ಯಾಗಜೀನ್‌ ಮತ್ತು ಅಮೃತ ಪ್ರಭಾತ್‌ ಪತ್ರಿಕೆಯಲ್ಲಿ ಫೋಟೋ ಜರ್ನಲಿಸ್ಟ್‌ ಆಗಿದ್ದರು. ಪ್ರಸ್ತುತ ಅಲಹಾಬಾದ್‌ ವಿಶ್ವವಿದ್ಯಾಲಯದಲ್ಲಿ ಫೋಟೋಗ್ರಫಿ ಶಿಕ್ಷಕರಾಗಿದ್ದಾರೆ. ಮಸೀದಿ ಉರುಳಿಸುವಿಕೆಯ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ವಿಶೇಷ ಸಿಬಿಐ ನ್ಯಾಯಾಲಯವು 4 ವರ್ಷಗಳ ಹಿಂದೆ ಅವರನ್ನು ಕರೆಸಿತ್ತು.

ಘಟನೆ ಕುರಿತಂತೆ ನನ್ನನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗಿತ್ತು. ಘಟನೆಗಳ ಕುರಿತು ನಾನು ಎಲ್ಲವನ್ನೂ ತಿಳಿಸಿದ್ದೇನೆ ಎಂದು ಯಾದವ್‌ ಹೇಳಿದ್ದಾರೆ. 1992ರ ಡಿಸೆಂಬರ್‌ 6ರಂದು ಸ್ಥಳದಲ್ಲಿದ್ದ ನನ್ನಂತಹ ಅನೇಕ ಪತ್ರಕರ್ತರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ದುಃಖದ ಸಂಗತಿಯೆಂದರೆ ಬಾಬರಿ ಉರುಳಿಸುವಿಕೆಯ ಸಮಯದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಪತ್ರಿಕಾ ಛಾಯಾಗ್ರಾಹಕರನ್ನು ಥಳಿಸಲಾಗಿತ್ತು. ಕೆಮೆರಾಗಳನ್ನು ಕಸಿದುಕೊಂಡು, ಒಡೆದುಹಾಕಿದ್ದರು.

ನಾನು 1992ರ ಡಿಸೆಂಬರ್‌ 8ರಂದು ರಾಮ್‌ ಜನ್ಮಭೂಮಿ ಪೊಲೀಸ್‌ ಠಾಣೆಯಲ್ಲಿ ನನ್ನ ಮೇಲಿನ ಹಲ್ಲೆ ಮತ್ತು ಕೆಮರಾಗಳನ್ನು ಪುಡಿಗಟ್ಟಿದ ಕುರಿತು ಎಫ್ಐಆರ್‌ ದಾಖಲಿಸಿದ್ದೇನೆ. ಆದರೆ ಅದರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಇಲ್ಲಿಯವರೆಗೆ ತಿಳಿದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next