Advertisement

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡ

01:04 AM Dec 03, 2021 | Team Udayavani |

ದಕ್ಷಿಣ ಆಫ್ರಿಕಾದಲ್ಲಿ ಮೊದಲಿಗೆ ಕಾಣಿಸಿಕೊಂಡು, ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಹರಡಿದ್ದ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್‌, ಈಗ ಭಾರತಕ್ಕೂ ಪ್ರವೇಶ ಕೊಟ್ಟಿದೆ. ಅದೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ಇಬ್ಬರಲ್ಲಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕಕ್ಕೂ ಕಾರಣವಾಗಿದೆ.

Advertisement

ಸದ್ಯ ಈ ವೈರಸ್‌ ಎಷ್ಟು ಅಪಾಯ ತರಬಲ್ಲದು ಎಂಬ ಬಗ್ಗೆ ನಾನಾ ಗೊಂದಲಗಳಿವೆ. ಕೆಲವರು ಅಂಥ ಗಂಭೀರವಾದ ಪರಿಣಾಮ ಬೀರಲ್ಲ ಎಂದಿದ್ದರೆ, ಇನ್ನೂ ಕೆಲವರು ಒಂದು ವಾರ ಕಳೆದ ಮೇಲಷ್ಟೇ ಹೇಳಲು ಸಾಧ್ಯ ಎಂದಿದ್ದಾರೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು, ಈ ಹೊಸ ರೂಪಾಂತರಿ ಭಾರತದಲ್ಲಿ ಹೆಚ್ಚು ಹರಡದಂತೆ ತಡೆಯುವ ಅಗತ್ಯವಿದೆ. ನಿಯಂತ್ರಣಕ್ಕೆ ಬೇಕಾದ ಸಿದ್ಧತೆಗಳಾದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚೆಚ್ಚು ಪರೀಕ್ಷೆ ನಡೆಸುವುದು, ಬೇಗನೆ ಪರೀಕ್ಷಾ ವರದಿ ನೀಡುವುದು, ಸಾಧ್ಯವಾದಷ್ಟು ಕಠಿನ ಐಸೊಲೇಶ‌ನ್‌ ನಿಯಮ ಜಾರಿ ತರಬೇಕಾದ ಅಗತ್ಯವಿದೆ.

ಇತ್ತ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾದವರೇ ಒಬ್ಬರು ಮತ್ತು ಬೆಂಗಳೂರಿನ ವೈದ್ಯರೊಬ್ಬರಿಗೆ ಈ ಸೋಂಕು ತಗಲಿರುವುದು ಪತ್ತೆಯಾಗಿದೆ. ವಿಚಿತ್ರವೆಂದರೆ ನ.20ರಂದು ಬೆಂಗಳೂರಿಗೆ ಬಂದಿದ್ದ ದಕ್ಷಿಣ ಆಫ್ರಿಕಾದ ಪ್ರಜೆ, ನ.27ರಂದು ವಾಪಸ್‌ ಹೋಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಪತ್ತೆಯಾಗಿರುವ ವೈದ್ಯರಿಗೆ ಯಾವುದೇ ವಿದೇಶಿ ಪ್ರಯಾಣದ ಹಿನ್ನೆಲೆ ಇಲ್ಲ. ಅಲ್ಲದೆ ದಕ್ಷಿಣ ಆಫ್ರಿಕಾದ ಪ್ರಜೆ ಜತೆಗೂ ಸಂಪರ್ಕ ಇರಲಿಲ್ಲ. ಇವರಿಗೆ ಹೇಗೆ ಈ ಸೋಂಕು ತಗಲಿತು ಎಂಬುದೇ ಪ್ರಶ್ನೆಯಾಗಿದೆ.

ಇದನ್ನೂ ಓದಿ:ಜೋಹರ್‌ ಕಣಿವೆ ರಸ್ತೆ 2023ರಲ್ಲಿ ಮುಕ್ತಾಯ

ಈ ವೈದ್ಯರ ಸೋಂಕಿನ ಕುರಿತು ಇನ್ನೂ ಗೊಂದಲಗಳಿರುವಂತೆಯೇ ಹಾಲಿ ನಡೆಸುತ್ತಿರುವ ಪರೀಕ್ಷೆಗಳಲ್ಲಿ ಕೆಲವಾದರೂ ಮಾದರಿಗಳನ್ನು ವಂಶವಾಹಿ ಪತ್ತೆಗೆ ಕಳುಹಿಸಬೇಕಾದ ಅಗತ್ಯವಿದೆ. ಆರಂಭದಲ್ಲೇ ಇದನ್ನು ಪತ್ತೆ ಮಾಡಿದರೆ ಎಲ್ಲೆಡೆ ಹರಡುವುದನ್ನು ತಪ್ಪಿಸಬಹುದು.

Advertisement

ಬೆಂಗಳೂರಿನಲ್ಲಿಯೇ ಒಮಿಕ್ರಾನ್‌ ಪತ್ತೆಯಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಒಂದಷ್ಟು ಆತಂಕದ ಸನ್ನಿವೇಶ ನಿರ್ಮಾಣವಾಗಿದೆ. ಆದರೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಹೆದರಬೇಡಿ. ಸೋಂಕು ಪತ್ತೆಯಾಗಿರುವ ಇಬ್ಬರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನೂ ಪತ್ತೆ ಹಚ್ಚಿ ಪರೀಕ್ಷೆ ನಡೆಸಲಾಗಿದೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿಯ ಸಂಪರ್ಕಿತರಲ್ಲಿ ಯಾರಿಗೂ ಪಾಸಿಟಿವ್‌ ಬಂದಿಲ್ಲ ಎಂದು ತಿಳಿಸಿದೆ. ಇದು ಒಂದಷ್ಟು ಸಮಾಧಾನಕರ ಸಂಗತಿಯಾಗಿದೆ.

ಸದ್ಯದ ಮಟ್ಟಿಗೆ ಒಮಿಕ್ರಾನ್‌ ಬರದಂತೆ ತಡೆಯುವ ಶಕ್ತಿ ಸರಕಾರಗಳಿಗಾಗಲಿ ಅಥವಾ ಜನರಿಗಾಗಲಿ ಇಲ್ಲ. ಆದರೆ ನಮ್ಮ ಬಳಿ ಬರದಂತೆ ಮಾತ್ರ ನಾವೇ ನೋಡಿಕೊಳ್ಳಬಹುದು. ಅಂದರೆ ಸರಕಾರ ಈಗಾಗಲೇ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅಲ್ಲದೆ ದಕ್ಷಿಣ ಆಫ್ರಿಕಾದ ಪ್ರಕರಣಗಳು ಮತ್ತು ಇಲ್ಲಿನ ಪ್ರಕರಣಗಳನ್ನು ನೋಡಿದರೆ ಒಮಿಕ್ರಾನ್‌ಗೆ ಹೆಚ್ಚು ಹರಡುವ ಶಕ್ತಿ ಇದೆಯೇ ಹೊರತು, ಆರೋಗ್ಯದ ಮೇಲೆ ಗಂಭೀರವಾದ ದುಷ್ಪರಿಣಾಮ ಆಗಿರುವ ವರದಿಗಳಿಲ್ಲ. ಇದನ್ನು ಸಚಿವ ಸುಧಾಕರ್‌ ಅವರೂ ಇಲ್ಲಿನ ಕೇಸ್‌ಗಳನ್ನು ಪರಿಶೀಲಿಸಿ ಹೇಳಿದ್ದಾರೆ. ಹೀಗಾಗಿ ಜನ ಆತಂಕಕ್ಕೆ ಈಡಾಗುವ ಬದಲು ಮುನ್ನೆಚ್ಚರಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಒಮಿಕ್ರಾನ್‌ ಬಂದಿದೆಯಂತೆ, ಇದು ಭಾರೀ ಅಪಾಯವಂತೆ ಎಂಬೆಲ್ಲ ವದಂತಿಗಳನ್ನು ನಂಬ ಬಾರದು ಮತ್ತು ಭಯವನ್ನು ಹರಡಬಾರದು.

Advertisement

Udayavani is now on Telegram. Click here to join our channel and stay updated with the latest news.

Next