Advertisement

ಅಂದು ಒಲಿಂಪಿಯನ್‌ ಬಾಕ್ಸರ್‌, ಇಂದು ಟ್ಯಾಕ್ಸಿ ಡ್ರೈವರ್‌

08:05 AM Dec 26, 2017 | Harsha Rao |

ಛತ್ತೀಸ್‌ಗಢ: ಒಂದು ಕಾಲದಲ್ಲಿ ಅಪ್ರತಿಮ ಸಾಧನೆಗೈದ ಕ್ರೀಡಾಪಟುಗಳು ಬೀದಿ ಬದಿಯಲ್ಲಿ ತರಕಾರಿ ಮಾರುತ್ತಾರೆ. ಮತ್ತೂಂದೆಡೆ ಮಾಜಿ ಕ್ರೀಡಾಪಟು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. ಕೂಲಿ ಕೆಲಸಕ್ಕೆ ಹೋಗಿ ಕಷ್ಟದ ನಡುವೆಯೇ ಕುಟುಂಬ ಮುನ್ನಡೆಸುತ್ತಿರುವ ಅದೆಷ್ಟೋ ಕ್ರೀಡಾಪಟುಗಳು ನಮ್ಮ ನಿಮ್ಮ ಮುಂದಿದ್ದಾರೆ.

Advertisement

ಅಂತೆಯೇ ಇಲ್ಲೊಬ್ಬರು ಬಾಕ್ಸರ್‌ ಇದ್ದಾರೆ. ಅವರು ಏಶ್ಯನ್‌ ಗೇಮ್ಸ್‌ ಕಂಚಿನ ಪದಕ ವಿಜೇತ, ಒಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸಿದ ಪ್ರತಿಭಾವಂತ. ಆದರೆ ಇಂದು ತುತ್ತಿನ ಕೂಳಿಗಾಗಿ ಕಾರು ಚಾಲಕ. ಬದುಕಿಗಾಗಿ ಬಂಡಿ ಎಳೆಯುವುದಕ್ಕಾಗಿ ಕೇವಲ 8 ಸಾವಿರ ರೂ.ಗೆ ಪಡೆದು ಸರ್ಕಸ್‌ ನಡೆಸುತ್ತಿರುವ ಬಾಕ್ಸರ್‌ ಬದುಕಿನ ನೋವಿನ ಕಥೆ ಇಲ್ಲಿದೆ ನೋಡಿ.

ಲಖಾ ಸಿಂಗ್‌ ಹೆಸರೇ ಖ್ಯಾತಿ: ಹೆಸರು ಲಖಾ ಸಿಂಗ್‌. ಊರು ಪಂಜಾಬ್‌ನ ಲೂಧಿ ಯಾನ. ಅವರು 1994ರ ಏಶ್ಯನ್‌ ಗೇಮ್ಸ್‌ ಬಾಕ್ಸಿಂಗ್‌ ಕೂಟದ 81 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಮರು ವರ್ಷವೇ ಇದೇ ಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು. 2 ವರ್ಷದಲ್ಲಿ ಒಂದರ ಹಿಂದೆ ಒಂದರಂತೆ ಪದಕ ಗೆದ್ದು ಬೀಗಿದರು. ಅಷ್ಟೇ ಅಲ್ಲ ಸತತ 5 ರಾಷ್ಟ್ರೀಯ ಪ್ರಶಸ್ತಿ ಗೆದ್ದು ಆ ಕಾಲದಲ್ಲಿ ಭಾರತದ ಶ್ರೇಷ್ಠ ಬಾಕ್ಸರ್‌ ಆಗಿದ್ದರು. ಈ ಕಾರಣಕ್ಕಾಗಿ ಅವರು 1996 ಅಟ್ಲಾಂಟ ಒಲಿಂಪಿಕ್ಸ್‌ ಬಾಕ್ಸಿಂಗ್‌ಗೆ ಅರ್ಹತೆ ಪಡೆದರು. ಕೂಟದಲ್ಲಿ ಇವರು ಪದಕ ಗೆಲ್ಲುವುದು ಖಚಿತ ಎಂದೇ ಭಾವಿಸಲಾಗಿತ್ತು.  ಆದರೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಇವರು 91 ಕೆ.ಜಿ ವಿಭಾಗದಲ್ಲಿ 17ನೇಯವರಾಗಿ ಸ್ಪರ್ಧೆ ಮುಗಿಸಲಷ್ಟೇ ಶಕ್ತರಾದರು. 
ಇದಾದ ಬಳಿಕ ಇವರು ಕ್ರೀಡಾಕೂಟದಲ್ಲಿ  ಭವಿಷ್ಯ ಕಾಣದೇ ಸಂಪೂರ್ಣ ಕತ್ತಲೆಗೆ ಬಿದ್ದರು.

ಸಿಂಗ್‌ ಬದುಕು ಎಡವಿದ್ದೆಲ್ಲಿ?
ಲಖಾ ಸಿಂಗ್‌ 1994ರಲ್ಲಿ  ಭಾರತೀಯ ಸೇನೆಗೆ  ಸೇರಿ ದ್ದರು. ಒಲಿಂಪಿಕ್ಸ್‌ ನಡೆದ 2 ವರ್ಷ ಬಳಿಕ ಲಖಾ ಸಿಂಗ್‌ ಜೀವನ ದಾರಿ ತಪ್ಪಿತು. ಅವರೇ ಹೇಳುವ ಪ್ರಕಾರ ಅವರನ್ನು ಅಪರಾಧಿಯಂತೆ ಕಾಣಲಾಯಿತಂತೆ. ಸ್ನೇಹಿತನ ಮೋಸದ ಬಲೆಗೆ ಸಿಲುಕಿ ಅಮೆರಿಕದಲ್ಲಿ ಸಿಕ್ಕಿಬಿದ್ದರಂತೆ. ಅಷ್ಟೇ ಅಲ್ಲ ವೃತ್ತಿಪರ ಬಾಕ್ಸಿಂಗ್‌ಗಾಗಿ ತಲೆತಪ್ಪಿಸಿಕೊಂಡಿದ್ದಾನೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಯಿತಂತೆ. ಬಳಿಕ 8 ವರ್ಷ ಕೂಲಿ ಕಾರ್ಮಿಕನಾಗಿ ದುಡಿದು ಹಣ ಸಂಗ್ರಹಿಸಿ ಹರಸಾಹಸ ಪಟ್ಟರಂತೆ. ಕೊನೆಗೆ ಭಾರತೀಯ ರಾಯಭಾರಿ ಕಚೇರಿ ಸಹಾಯ ಪಡೆದು ಭಾರತಕ್ಕೆ ಮರಳಿದ್ದರಂತೆ. ತನ್ನ ಬದುಕಿನ ಕಷ್ಟದ ದಿನಗಳನ್ನು ಆಂಗ್ಲ ಪತ್ರಿಕೆಯೊಂದರ ಎದುರು ಲಖಾ ಸಿಂಗ್‌ ತೆರೆದಿಟ್ಟದ್ದು ಹೀಗೆ.

“1998ರಲ್ಲಿ ವಿಶ್ವ ಮಿಲಿಟರಿ ಬಾಕ್ಸಿಂಗ್‌ ಕೂಟಕ್ಕೆ ಆಯ್ಕೆಗೊಂಡೆ. ನನ್ನೊಂದಿಗೆ ದೇಬೇಂದ್ರ ಥಾಪ ಕೂಡ ಇದ್ದರು. ಅವರು ವೃತ್ತಿಪರ ಬಾಕ್ಸಿಂಗ್‌ನಲ್ಲಿ ಭಾಗವಹಿಸಿದ್ದ ಅನುಭವ ಹೊಂದಿದ್ದರು. ಅಮೆರಿಕದ ಟೆಕ್ಸಾಸ್‌ ವಿಮಾನ ನಿಲ್ದಾಣದಲ್ಲಿ ಕೂಟಕ್ಕೆ ತೆರಳಲಿದ್ದ ವೇಳೆ ಥಾಪ ನನ್ನನ್ನು ಸ್ನೇಹಿತರನ್ನು ಭೇಟಿಯಾಗುವುದಿದೆ ಎಂದು ಹೊರಗೆ ಕರೆದುಕೊಂಡು ಬಂದ. ಕಾರಿನಲ್ಲಿ ಬಂದ ಅವರ ಸ್ನೇಹಿತರ ಜತೆಗೂಡಿ ಡ್ರಿಂಕ್ಸ್‌ ಮಾಡಿದೆವು. ಆತನನ್ನು ನಾನು ಬಹಳ ನಂಬಿದ್ದೆ. ಬಳಿಕ ನಾನು ನಿದ್ರೆಗೆ ಜಾರಿದೆ. ಏನಾಯಿತು ಎಂದು ತಿಳಿಯುವಷ್ಟರಲ್ಲಿ ನನ್ನನ್ನು ಕೋಣೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಎಚ್ಚರವಾದಾಗ ಥಾಪ ಅಲ್ಲಿ ಇರಲಿಲ್ಲ. ಬಳಿಕ ನನಗೆ ಸಿಗಲೇ ಇಲ್ಲ. 1 ತಿಂಗಳ ಬಳಿಕ ಅಪರಿಚಿತರು ನನ್ನನ್ನು ಅಪಾರ್ಟ್‌ಮೆಂಟ್‌ ಕೊಠಡಿಯಿಂದ ಹೊರಹಾಕಿದರು. ಹೊರಬಿದ್ದ ನನಗೆ ಏನು ಮಾಡುವುದು ಎಂದು ತಿಳಿಯಲಿಲ್ಲ. ವೀಸಾ ಗಡುವು ಬೇರೆ ಮುಗಿದಿತ್ತು.

Advertisement

ಸುತ್ತಮುತ್ತ ಯಾರೂ ನನಗೆ ಪರಿಚಿತರಿರಲಿಲ್ಲ. ಏಕಾಂಗಿಯಾಗಿ ಅಲೆದೆ. ಕೊನೆಗೆ ಕೆಲ ಏಷ್ಯಾ ಜನರ ಸಹಾಯದಿಂದ ಕ್ಯಾಲಿಫೋರ್ನಿಯಾಗೆ ಬಂದೆ. ಗ್ಯಾಸ್‌ ಸ್ಟೇಷನ್‌, ರೆಸ್ಟೋರೆಂಟ್‌ ಎಂದು ಬೇರೆ ಬೇರೆ ಕಡೆ ಕೆಲಸ ಮಾಡಿದೆ. ಹಣ ಸಂಗ್ರಹಿಸಿದೆ. ಭಾರತಕ್ಕೆ ಮರಳಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಕೊನೆಗೂ ಭಾರತೀಯ ರಾಯಭಾರಿ ಕಚೇರಿ ಸಹಾಯ ಪಡೆದು ಭಾರತಕ್ಕೆ ಬಂದೆ. ಅಷ್ಟರಲ್ಲಿ ನನ್ನನ್ನು ಯಾವುದೇ ತನಿಖೆಗೆ ಒಳಪಡಿಸದೆ ಸೇನೆಯಿಂದ ಕಿತ್ತು ಹಾಕಲಾಗಿತ್ತು’ ಎಂದು ತಿಳಿಸಿದರು.

ನನ್ನ ನೋವಿನ ಕೂಗು ಕೇಳುತ್ತಿಲ್ಲ…
ದಿನನಿತ್ಯದ ಜೀವನ ನಡೆಸುವುದಕ್ಕೂ ತೊಂದರೆ ಅನುಭವಿಸುತ್ತಿದ್ದೇನೆ. ಸಂಬಂಧಪಟ್ಟವರಿಗೆ ನನ್ನ ನೋವಿನ ಕೂಗು ಕೇಳಿಲ್ಲ. ದಿನನಿತ್ಯ ಹೊಟ್ಟೆ ಹೊರೆಯಲು ಟ್ಯಾಕ್ಸಿ ಓಡಿಸುವ ಕಷ್ಟ ತಪ್ಪಿಲ್ಲ. ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
– ಲಖಾ ಸಿಂಗ್‌, ಮಾಜಿ ಬಾಕ್ಸರ್‌

Advertisement

Udayavani is now on Telegram. Click here to join our channel and stay updated with the latest news.

Next