Advertisement

ಹಳೇ ಟ್ರ್ಯಾಕ್‌ ಸ್ಲೋ ರೇಸ್‌

12:01 PM May 26, 2019 | Team Udayavani |

ಅವನ ಹೆಸರು ಶಿವ. ಅವನೊಬ್ಬ ಅನಾಥ ಹುಡುಗ. ತಾನೊಬ್ಬ ಸಿನಿಮಾದ ಹೀರೋ ಆಗಬೇಕು, ಸೂಪರ್‌ ಸ್ಟಾರ್‌ ಆಗಬೇಕು ಎಂಬುದು ಅವನ ಕನಸು. ಹೀರೋ ಆಗಲು ಬೇಕಾದ ಎಲ್ಲಾ ಲಕ್ಷಣಗಳು ಇದ್ದರೂ, ಲಕ್ಷಗಟ್ಟಲೆ ಹಣ ಕೂಡ ಬೇಕು ಅನ್ನೋ ವಾಸ್ತವ ಅವನಿಗೆ ಗೊತ್ತಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ನಿಲ್ಲಲ್ಲು ನೆಲೆ ಕೂಡ ಇಲ್ಲದ, ಖಾಲಿ ಕೈ ಹುಡುಗ‌ ಏನು ಮಾಡುತ್ತಾನೆ.

Advertisement

ಹೀರೋ ಆಗಲು ಬೇಕಾದ ಹಣವನ್ನು ಹೇಗೆ ವ್ಯವಸ್ಥೆ ಮಾಡುತ್ತಾನೆ. ಹಣ ಮಾಡಲು ಯಾವ ದಾರಿ ಹಿಡಿಯುತ್ತಾನೆ. ಈ ದಾರಿಯಲ್ಲಿ ಅವನಿಗೆ ಯಾರು ಎದುರಾಗುತ್ತಾರೆ. ಇದನ್ನೆಲ್ಲ ಕ್ಲೈಮ್ಯಾಕ್ಸ್‌ನಲ್ಲಿ ನೋಡುವ ಕುತೂಹಲವಿದ್ದರೆ, ಈ ವಾರ ತೆರೆಗೆ ಬಂದಿರುವ “ರೇಸ್‌’ ಚಿತ್ರವನ್ನು ನೋಡಬಹುದು. ಹಣವಿಲ್ಲದವರು ಹಣ ಮಾಡಲು ಶ್ರೀಮಂತರ ಹಿಂದೆ ಬೀಳುವುದು, ಶ್ರೀಮಂತರಾಗಲು ಶಾರ್ಟ್‌ಕಟ್‌ ಹಿಡಿಯುವುದು,

ಅದಕ್ಕಾಗಿ ಇನ್ನಿಲ್ಲದಂತೆ ಗೇಮ್‌ ಪ್ಲಾನ್‌ ಮಾಡುವುದು. ಕೊನೆಗೆ ಈ ಪ್ರಯತ್ನದಲ್ಲಿ ಸಫ‌ಲರಾಗುವುದು ಅಥವಾ ವಿಫ‌ಲರಾಗುವುದು…, ಇಂಥ ನೂರಾರು ಚಿತ್ರಗಳು ಕನ್ನಡದಲ್ಲಿ ಈಗಾಗಲೇ ಬಂದು ಹೋಗಿವೆ. ಇಂಥ ಚಿತ್ರಗಳ ಸಾಲಿಗೆ “ರೇಸ್‌’ ಹೊಸ ಸೇರ್ಪಡೆ ಎನ್ನುವುದನ್ನು ಬಿಟ್ಟರೆ, ಚಿತ್ರದ ಕಥಾವಸ್ತುವಿನಲ್ಲಿ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ.

“ರೇಸ್‌’ ಚಿತ್ರದಲ್ಲಿ ಸಾಮಾನ್ಯ ಕಥಾಹಂದರವನ್ನೇ, ನಿರ್ದೇಶಕ ಹೇಮಂತ್‌ ಕೃಷ್ಣ ಹೊಸಥರದಲ್ಲಿ ಹೇಳುವ ಪ್ರಯತ್ನ ಮಾಡಿದ್ದರೂ, ಆ ಪ್ರಯತ್ನ ಅಷ್ಟಾಗಿ ಫ‌ಲಿಸಲಿಲ್ಲ. ಚಿತ್ರಕಥೆ, ಸಂಭಾಷಣೆ, ನಿರೂಪಣೆ ಎಲ್ಲದರಲ್ಲೂ ಪ್ರೇಕ್ಷಕರು ಅನಾಯಾಸವಾಗಿ ಚಿತ್ರದ ಮುಂದಿನ ದೃಶ್ಯಗಳನ್ನು ನಿರೀಕ್ಷಿಸುವಂತೆ ಇರುವುದರಿಂದ, ಸಸ್ಪೆನ್ಸ್‌-ಕ್ರೈಂ ಶೈಲಿಯ “ರೇಸ್‌’ ಎಲ್ಲೂ ನೋಡುಗರಿಗೆ ಕೌತುಕದ, ರೋಚಕತೆಯ ಅನುಭವವನ್ನೇ ಕೊಡುವುದಿಲ್ಲ.

ಮೊದಲರ್ಧ ಅತ್ಯಂತ ನೀರಸವಾಗಿ ಸಾಗುವ ಚಿತ್ರ, ದ್ವಿತಿಯಾರ್ಧ ಒಂದಷ್ಟು ಟ್ವಿಸ್ಟ್‌ಗಳನ್ನು ಕೊಟ್ಟರೂ ಅದು ಹೆಚ್ಚು ಹೊತ್ತು ಉಳಿಯುವುದಿಲ್ಲ. ಹೆಸರಿನಲ್ಲಿ “ರೇಸ್‌’ ಅಂತಿದ್ದರೂ, ಅದೇ ವೇಗವನ್ನು ಚಿತ್ರದಲ್ಲಿ ನಿರೀಕ್ಷಿಸುವಂತಿಲ್ಲ. ಚಿತ್ರಕಥೆ, ನಿರೂಪಣೆಯಲ್ಲಿ ನಿರ್ದೇಶಕರು ಇನ್ನಷ್ಟು ಕೆಲಸ ಮಾಡಿದ್ದರೆ, “ರೇಸ್‌’ ಅನ್ನು ಇನ್ನಷ್ಟು ಸ್ಪೀಡ್‌ ಆಗಿ ಮುಗಿಸಬಹುದಿತ್ತು.

Advertisement

ಇನ್ನು “ರೇಸ್‌’ ಚಿತ್ರದಲ್ಲಿ ತೆರೆಮೇಲೆ ಬಹುತೇಕ ಹೊಸ ಪ್ರತಿಭೆಗಳೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ದಿವಾಕರ್‌, ಸಂತೋಷ್‌, ರಕ್ಷಾ ಶಣೈ ಹೀಗೆ ಬಹುತೇಕ ಕಲಾವಿದರು ಅಭಿನಯದಲ್ಲಿ ಇನ್ನೂ ಸಾಕಷ್ಟು ಪಳಗಬೇಕಿದೆ. ಉಳಿದಂತೆ ಇತರರು ಅಭಿನಯಿಸಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿನಿರ್ದೇಶಕರು ಹೇಳಿದ ಕೆಲಸವನ್ನು ಕ್ಯಾಮರಾ ಮುಂದೆ ಕಷ್ಟಪಟ್ಟು ನಿರ್ವಹಿಸಿದ್ದಾರೆ ಎನ್ನಬಹುದು.

ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ನಿಭಾಯಿಸಲು ಹೆಣಗಾಡಿರುವುದು ಪ್ರತಿದೃಶ್ಯದಲ್ಲೂ ಕಾಣುತ್ತದೆ. ಇನ್ನು ಚಿತ್ರದ ಛಾಯಾಗ್ರಹಣ ಒಂದಷ್ಟು ಗಮನ ಸೆಳೆಯುತ್ತದೆ. ಅದನ್ನು ಹೊರತುಪಡಿಸಿದರೆ, ಸಂಕಲನ ಚಿತ್ರಕ್ಕೆ ಪೂರಕವಾಗುವುದಕ್ಕಿಂತ ಮಾರಕವಾಗಿರುವುದೇ ಹೆಚ್ಚು. ರಾಜ್‌ ಕಿರಣ್‌ ಸಂಗೀತ ಸಂಯೋಜನೆಯ ಹಾಡುಗಳಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ, ಹೆಚ್ಚು ಹೊತ್ತು ಕಿವಿಯಲ್ಲಿ ಉಳಿಯುವುದಿಲ್ಲ. ಹಿನ್ನೆಲೆ ಸಂಗೀತ, ಧ್ವನಿಗ್ರಹಣ ಬಗ್ಗೆ ನಿರ್ದೇಶಕರು ಹೆಚ್ಚು ಗಮನ ಕೊಟ್ಟಂತೆ ಇಲ್ಲ.

ಚಿತ್ರ: ರೇಸ್‌
ನಿರ್ಮಾಣ: ಎಸ್‌.ವಿ.ಆರ್‌ ಪ್ರೊಡಕ್ಷನ್ಸ್‌
ನಿರ್ದೇಶನ: ಹೇಮಂತ್‌ ಕೃಷ್ಣ
ತಾರಾಗಣ: ದಿವಾಕರ್‌, ಸಂತೋಷ್‌, ನಕುಲ್‌ ಗೋವಿಂದ್‌, ರಕ್ಷಾ ಶೆಣೈ, ಶ್ರುತಿ ಮತ್ತಿತರರು

* ಜಿ.ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next