Advertisement

ಹಳೇ ಹುಬ್ಬಳ್ಳಿ ಘಟನೆ; 12 ಪ್ರಕರಣ ದಾಖಲು

09:41 AM Apr 19, 2022 | Team Udayavani |

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿ ಪೊಲೀಸರು ಬಂಧಿಸಲ್ಪಟ್ಟವರ ಮೇಲೆ ಕೊಲೆಗೆ ಯತ್ನ, ದೊಂಬಿ, ಮಾರಕಾಸ್ತ್ರಗಳಿಂದ ಹಲ್ಲೆ, ಸಾರ್ವಜನಿಕ ಮತ್ತು ಸರಕಾರಿ ಆಸ್ತಿ-ಪಾಸ್ತಿಗೆ ಹಾನಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿ, ಅಕ್ರಮ ಕೂಟ ರಚನೆ ಸೇರಿದಂತೆ ಒಟ್ಟು 12 ಪ್ರಕರಣ ದಾಖಲಿಸಿದ್ದಾರೆ.

Advertisement

ಗಲಭೆಗೆ ಸಂಬಂಧಿಸಿ ಇದುವರೆಗೆ ಪ್ರತ್ಯೇಕವಾಗಿ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ. ಪೊಲೀಸರು ಬಂಧಿತರ ಮೇಲೆ ಕಲಂ 143, 147, 148, 323, 324, 333, 353, 504, 506, 427, 307 ಸಹ ಕಲಂ 149 ಐಪಿಸಿ ಹಾಗೂ ಕಲಂ 3(ಸಿ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಬಂಧಿತರಲ್ಲಿ ಬಹುತೇಕರು 18 ರಿಂದ 30 ವರ್ಷದೊಳಗಿನವರಾಗಿದ್ದಾರೆ.

ಇಂದು ಸಹ ಪಥಸಂಚಲನ: ಗಲಭೆಯಿಂದ ಸಾರ್ವಜನಿಕರಲ್ಲಿ ಉಂಟಾಗಿರುವ ಭಯದ ವಾತಾವರಣ ನಿವಾರಿಸಲು ಹಾಗೂ ಆತ್ಮಸ್ಥೈರ್ಯ ತುಂಬಲು ಪೊಲೀಸರು ಸೋಮವಾರ ಸಹ ಹಳೇಹುಬ್ಬಳ್ಳಿ ಮತ್ತು ಕಸಬಾಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪಥಸಂಚಲನ ನಡೆಸಿದರು.

ಎಡಿಜಿಪಿ ಭೇಟಿ: ಗಲಭೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ನಿಯೋಗವು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ನೇತೃತ್ವದಲ್ಲಿ ಸೋಮವಾರ ಎಡಿಜಿಪಿ ಪ್ರತಾಪ ರೆಡ್ಡಿ ಹಾಗೂ ಹು-ಧಾ ಪೊಲೀಸ್‌ ಆಯುಕ್ತ ಲಾಭೂ ರಾಮ ಅವರನ್ನು ನವನಗರದ ಆಯುಕ್ತರ ಕಚೇರಿಯಲ್ಲಿ ಭೇಟಿ ಮಾಡಿತು.

ಕಳೆದ 20 ವರ್ಷಗಳಿಂದ ಹುಬ್ಬಳ್ಳಿ ಬಹಳ ಶಾಂತವಾಗಿತ್ತು. ಗಲಭೆ ಮಾಡಿದಂತಹ ತಪ್ಪಿತಸ್ಥರನ್ನು ಬಂಧಿಸಿ, ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಪೋಸ್ಟ್‌ ಮಾಡಿದ ಹಾಗೂ ಗಲಭೆ ಹಿಂದೆ ಯಾರ ಕೈವಾಡವಿದೆ ಎಂಬುದರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಿ. ಪ್ರಕರಣದಲ್ಲಿ ಅಮಾಯಕರಿಗೆ ಕಿರುಕುಳ ಕೊಡಬೇಡಿ ಹಾಗೂ ಬಂಧಿಸಬೇಡಿ ಎಂದು ನಿಯೋಗವು ಉಭಯತರಲ್ಲಿ ಮನವಿ ಮಾಡಿತು.

Advertisement

ನಿಯೋಗದವರ ಮನವಿಗೆ ಸ್ಪಂದಿಸಿದ ಅವರು, ವರದಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆಂದು ಎಂಎಲ್‌ಸಿ ಸಲೀಂ ಅಹ್ಮದ ತಿಳಿಸಿದರು. ನಿಯೋಗದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ, ದೀಪಕ ಚಿಂಚೋರಿ, ಧಾರವಾಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಲ್ತಾಫ ಹಳ್ಳೂರ, ಅಂಜುಮನ್‌ ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫ ಕಿತ್ತೂರ, ನಾಗರಾಜ ಗೌರಿ, ನಾಗರಾಜ ಹೆಗ್ಗಣ್ಣನವರ ಮೊದಲಾದವರಿದ್ದರು.

ಜಾಮೀನು ಕೋರಿ ಅರ್ಜಿ: ವಿವಾದಾತ್ಮಕ ಪೋಸ್ಟ್‌ ಹಾಕಿ ಬಂಧಿತನಾದ ವಿದ್ಯಾರ್ಥಿ ಯಾವುದೇ ಅಪರಾಧ ಮಾಡಿಲ್ಲ. ಪೊಲೀಸರು ಆತನ ಮೇಲೆ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಿದ್ದಾರೆ. ಆತ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಸದ್ಯ ಪರೀಕ್ಷೆ ಇದೆ. ಆತನ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ. ಆದ್ದರಿಂದ ಅವನಿಗೆ ಜಾಮೀನು ಮಂಜೂರು ಮಾಡಬೇಕೆಂದು ಕೋರಿ ವಿಶ್ವ ಹಿಂದೂ ಪರಿಷದ್‌ ಪರವಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ವಿದ್ಯಾರ್ಥಿ ಪರವಾಗಿ ಸಂಜು ಬಡಸ್ಕರ, ಆರ್‌.ಜಿ. ಮಟ್ಟಿ, ಶಿವಾನಂದ ವಡ್ಡಟ್ಟಿ ವಕಾಲತ್ತು ವಹಿಸಿದ್ದಾರೆ.

ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಬಳಕೆಗೆ ಒತ್ತಾಯ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ದೇಶ ವಿರೋಧಿ ಮತ್ತು ಕೋಕಾ ಕಾನೂನು ಜಾರಿಗೊಳಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಸರಕಾರವನ್ನು ಒತ್ತಾಯಿಸಿದೆ. ಶನಿವಾರ ರಾತ್ರಿ ಏಕಾಏಕಿ ಸಾವಿರಾರು ಜನರು ಜಮಾಯಿಸಿ ಗಲಭೆ ಎಬ್ಬಿಸಿದ್ದು, ಪೊಲೀಸ್‌ ಠಾಣೆ, ಆಸ್ಪತ್ರೆ, ದೇವಸ್ಥಾನಗಳಿಗೆ ಕಲ್ಲು ತೂರಾಟ ಮಾಡಿ ದಾಂಧಲೆ ಮಾಡಿದ್ದು ನೋಡಿದರೆ, ಕಳೆದ ವರ್ಷ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿ ಗಲಭೆಗಳು ನೆನಪಿಸುವಂತೆ ಮಾಡಿವೆ.

ಸರಕಾರ ಹಾಗೂ ಸಾರ್ವಜನಿಕರ ಆಸ್ತಿ ನಷ್ಟ ಉಂಟು ಮಾಡಿ ಸರಕಾರಕ್ಕೆ ಸವಾಲು ಹಾಕುವ ಯತ್ನಗಳು ನಡೆಯುತ್ತಿವೆ. ದೇಶದ ಆಂತರಿಕ ಸುರಕ್ಷತೆಗೆ ಧಕ್ಕೆ ತರುವ ಷಡ್ಯಂತ್ರ ಇದಾಗಿದೆ. ಎಸ್‌ಡಿಪಿಐ, ಪಿಎಫ್‌ಐ, ಎಐಎಂಐಎಂ ಮತ್ತು ಸಿಎಫ್‌ಐನಂತಹ ಸಂಘಟನೆಗಳ ಮೂಲಕ ಪ್ರಚೋದನೆ ನೀಡಿ, ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಯತ್ನಗಳು ನಡೆಯುತ್ತಿವೆ. ಇವೆಲ್ಲವುಗಳನ್ನು ಸಹಿಸಿಕೊಂಡು ಸರಕಾರ ಸುಮ್ಮನೆ ಕೂರುವುದು ಸರಿಯಲ್ಲ. ಉತ್ತರ ಪ್ರದೇಶ ಸರಕಾರ ಮಾದರಿಯಲ್ಲಿ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಳೇ ಹುಬ್ಬಳ್ಳಿ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ದೇಶ ವಿರೋಧಿ, ಕೋಕಾ ಕಾಯ್ದೆ ಬಳಸುವ ಮೂಲಕ ಇಂತಹ ಕೃತ್ಯಗಳಿಗೆ ಶಾಶ್ವತ ತಡೆಗೆ ಕ್ರಮ ಕೈಗೊಳ್ಳಬೇಕೆಂದು ವೇದಿಕೆ ಉತ್ತರ ಪ್ರಾಂತ ಅಧ್ಯಕ್ಷ ರಾಮಚಂದ್ರ ಮಟ್ಟಿ, ಸಂಚಾಲಕ ಸು.ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.

ಮೌಲ್ವಿ-ದಲಿತ ಮುಖಂಡನ ಭಾಷಣ ವೈರಲ್‌:

ಗಲಭೆ ದಿನ ಮೌಲ್ವಿಯೊಬ್ಬರು ಹಾಗೂ ದಲಿತ ಮುಖಂಡನೊಬ್ಬ ಪೊಲೀಸ್‌ ಠಾಣೆ ಎದುರು ಜಮಾಯಿಸಿದ್ದವರನ್ನು ಉದ್ದೇಶಿಸಿ ಉದ್ರೇಕಕಾರಿ ಭಾಷಣ ಮಾಡಿದ ವಿಡಿಯೋ ವೈರಲ್‌ ಆಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.

ತಲೆನೋವಾದ ಪತ್ತೆ ಕಾರ್ಯ:

ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದ್ದ ಕಿಡಿಗೇಡಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ತಲೆನೋವಾಗಿದೆ. ಪೊಲೀಸರು ಸಿಸಿಟಿವಿ ಫೂಟೇಜ್‌ಗಳ ಸಹಾಯದಿಂದ ಗಲಭೆಕೋರರನ್ನು ಬಂಧಿಸಲು ಯೋಜಿಸಿದ್ದರು. ಆದರೆ ಹಳೇ ಹುಬ್ಬಳ್ಳಿ ಸುತ್ತಮುತ್ತ ಅಳವಡಿಸಲಾಗಿದ್ದ 48 ಕ್ಯಾಮರಾಗಳ ಪೈಕಿ 21 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಏಳು ನಾಪತ್ತೆ ಆಗಿವೆ. 20 ನಿಷ್ಕ್ರಿಯವಾಗಿವೆ ಎಂದು ಖಾಸಗಿ ಸಂಸ್ಥೆಯೊಂದು ನಡೆಸಿದ ಸರ್ವೇಯಲ್ಲಿ ಕಂಡುಬಂದಿದೆ.

ಖಾಸಗಿ ಸಂಸ್ಥೆಯ ಏಜೆನ್ಸಿಯು ಸಿಸಿ ಕ್ಯಾಮರಾ ನಿರ್ವಹಣೆ ಹೊಣೆ ಹೊತ್ತಿದೆ. ಆದರೆ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಂಸ್ಥೆಯ ಬೇಜವಾಬ್ದಾರಿಯಿಂದಾಗಿ ಪೊಲೀಸರು ಈಗ ಪೇಚಿಗೆ ಸಿಲುಕಿದ್ದಾರೆ. ಗಲಭೆಕೋರರ ಸಾಕ್ಷ್ಯಾಧಾರಗಳ ಸಂಗ್ರಹಣೆಗೆ ಪರದಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಗಲಭೆಕೋರರೇ ವಿದ್ಯುತ್‌ ಕಡಿತಗೊಳಿಸಿದ್ದು:

ಗಲಭೆಕೋರರೇ ಇಂಡಿ ಪಂಪ್‌ ವೃತ್ತದ ಟ್ರಾನ್ಸ್‌ಫಾರ್ಮರ್‌ಗೆ ಕಲ್ಲು ಎಸೆದು ವಿದ್ಯುತ್‌ ಕಡಿತಗೊಳಿಸಿದ್ದಾರೆ. ನಂತರ ಪೊಲೀಸರು ಹೆಸ್ಕಾಂದವರಿಗೆ ಕರೆಮಾಡಿ ದುರಸ್ತಿಗೊಳಿಸಿ ವಿದ್ಯುತ್‌ ದೀಪಗಳನ್ನು ಹಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತರೆಲ್ಲರೂ 14 ದಿನ ನ್ಯಾಯಾಂಗ ವಶಕ್ಕೆ:

ಗಲಭೆಯಲ್ಲಿ ಇದುವರೆಗೆ ಬಂಧಿತರಾದವರ ಸಂಖ್ಯೆ 103ಕ್ಕೆ ಏರಿದೆ. ಗಲಭೆಗೆ ಸಂಬಂಧಿಸಿ ಪೊಲೀಸರು ರವಿವಾರ 88 ಜನರನ್ನು ಬಂಧಿಸಿದ್ದರು. ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಸೋಮವಾರ ಮತ್ತೆ 15 ಜನರನ್ನು ಬಂಧಿಸಿ, ರಾತ್ರಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಆ ಮೂಲಕ ಇದುವರೆಗೆ ಬಂಧಿತರಾದವರ ಸಂಖ್ಯೆ 103ಕ್ಕೆ ಏರಿದ್ದು, ಅವರೆಲ್ಲರನ್ನು ಏ. 30ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಗಲಭೆಯಿಂದ ಹೊರಗಿನ ಜನ ಭಯಭೀತರಾಗಿ ನಗರಕ್ಕೆ ಬರುವುದೇ ಕಡಿಮೆಯಾಗಿದೆ. ವ್ಯಾಪಾರ ಕುಸಿದಿದೆ. ನಾವು ವ್ಯಾಪಾರ ಮಾಡಿಕೊಂಡೇ ಜೀವನ ಸಾಗಿಸಬೇಕು. ಯಾರು ಗಲಾಟೆ ಮಾಡಿದರು ಎನ್ನುವುದೇ ಗೊತ್ತಾಗುತ್ತಿಲ್ಲ. ಫತೇಶಾ ವಲಿ ದರ್ಗಾಕ್ಕೆ ನಮಾಜಿಗೆ ಬರುವವರು ಕಡಿಮೆ ಆಗಿದ್ದಾರೆ. ಮೊದಲು 200-300 ಮಂದಿ ಬರುತ್ತಿದ್ದರು. ಈಗ 100 ಜನರೂ ಸೇರುತ್ತಿಲ್ಲ. ಸುತ್ತಲಿನ ಸಣ್ಣಪುಟ್ಟ ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಗಿದೆ. ಅಂಗಡಿ ಮುಂದೆ ಯಾರಾದರೂ ವಾಹನ ಸವಾರರು ಬಿದ್ದರೆ ನಾವು ಜಾತಿ ನೋಡಲ್ಲ. ಹೋಗಿ ಕಾಪಾಡುತ್ತೇವೆ. ಯಾರೇ ಆದರೂ ಇಂತಹ ಕೆಲಸ ಮಾಡಬಾರದು. ನಾವೆಲ್ಲ ಸಹಬಾಳ್ವೆ ನಡೆಸಬೇಕು. -ಹಸನಸಾಬ್‌ ರೋಣ, ಸೈಕಲ್‌ ಅಂಗಡಿ ಮಾಲೀಕ

ದಿಡ್ಡಿ ಹನುಮಂತ ದೇವಸ್ಥಾನಕ್ಕೆ ಹೊಂದಿಕೊಂಡು ಮಸೀದಿ ಇದೆ. ನಮ್ಮ ಸುತ್ತಲೂ ಮುಸಲ್ಮಾನರೆ ಇದ್ದಾರೆ. ಸಹಬಾಳ್ವೆ ನಡೆಸುತ್ತಿದ್ದೇವೆ. 70 ವರ್ಷದಲ್ಲಿ ಯಾವಾಗಲೂ ಹೀಗಾಗಿಲ್ಲ. ಸಿಸಿಟಿವಿ ಕ್ಯಾಮೆರಾ ಫೂಟೇಜ್‌ಗಳನ್ನು ಪೊಲೀಸರಿಗೆ ಕೊಟ್ಟಿದ್ದೇವೆ. ಈ ಘಟನೆಯಿಂದ ಜನರಲ್ಲಿ ಭಯ ಆವರಿಸಿದೆ. – ಬಿ.ಎಸ್‌. ಸವಣೂರು,ದಿಡ್ಡಿ ಹನುಮಾನ ದೇವಸ್ಥಾನ ಕಮಿಟಿ ಅಧ್ಯಕ್ಷ

ದಾಂಧಲೆ ಎಬ್ಬಿಸಿ ಬರುತ್ತಿದ್ದರು. ಪೊಲೀಸರು ಬೆನ್ನು ಹತ್ತುತ್ತಿದ್ದಂತೆ ಚಿಕ್ಕ ಪುಟ್ಟ ಕಾಲೋನಿಗಳಿಗೆ ಓಡಿ ಹೋಗುತ್ತಿದ್ದರು. ಈಗ ಬಹುತೇಕ ಎಲ್ಲಾ ಅಂಗಡಿಗಳು ತೆರೆದಿವೆ. ಸುತ್ತಲೂ ಕೂಡ ಗಲಭೆಗೆ ಕಾರಣರಾದವರು ಇದ್ದಾರೆ.  -ರಾಕೇಶ ಪವಾರ್‌, ಪಾನ್‌ ಅಂಗಡಿ

ದಿನಕ್ಕೆ ಐದು ಬಾರಿ ನಮಾಜು ಮಾಡಬೇಕು. ಈ ಮಧ್ಯೆ ನಮ್ಮ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕು. ಕೆಲಸ, ಜವಾಬ್ದಾರಿ ಇಲ್ಲದವರು ಮಾತ್ರ ಇಂತಹ ಗಲಭೆ ಕೆಲಸ ಮಾಡುತ್ತಾರೆ.  –ಫೈರೋಜಖಾನ್‌ ಧಾರವಾಡ, ಹಳೇ ಹುಬ್ಬಳ್ಳಿ ನಿವಾಸಿ

ನಗರದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಗಲಭೆಯಲ್ಲಿ ಪಾಲ್ಗೊಂಡಿದ್ದ 103 ಜನರನ್ನು ಇದುವರೆಗೆ ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸಿಸಿಟಿವಿ ಫೂಟೇಜ್‌ ಪರಿಶೀಲಿಸಲಾಗುತ್ತಿದೆ. –ಲಾಭೂ ರಾಮ, ಹು-ಧಾ ಪೊಲೀಸ್‌ ಆಯುಕ

Advertisement

Udayavani is now on Telegram. Click here to join our channel and stay updated with the latest news.

Next