Advertisement

ಹಳೆಯ ಶೈಲಿಯ ಹೊಸ ಸಿನಿಮಾ

06:00 AM Sep 28, 2018 | Team Udayavani |

ತೆಲುಗು ಚಿತ್ರರಂಗದ ಹಲವು ನಿರ್ದೇಶಕ, ನಿರ್ಮಾಪಕರು ಈಗಾಗಲೇ ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ. ಮಾಡುತ್ತಲೂ ಇದ್ದಾರೆ. ಆ ಸಾಲಿಗೆ ಈಗ “ಸ್ನೇಹವೇ ಪ್ರೀತಿ’ ಎಂಬ ಚಿತ್ರವೂ ಸೇರಿದೆ. ಇದು ಸಂಪೂರ್ಣ ತೆಲುಗು ಮಂದಿ ಸೇರಿ ಮಾಡಿದ ಕನ್ನಡ ಚಿತ್ರ. ಹಾಗಂತ, ಕನ್ನಡ ಭಾಷೆಯಲ್ಲಿ ಮಾತ್ರವಲ್ಲ, ತೆಲುಗು ಭಾಷೆಯಲ್ಲೂ ಈ ಚಿತ್ರ ತಯಾರಾಗಿದೆ. ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಚಿತ್ರತಂಡ ಆಯೋಜಿಸಿದ್ದ ಆಡಿಯೋ ಸಿಡಿ ಬಿಡುಗಡೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಹಾಗು ಪದಾಧಿಕಾರಿಗಳು ಸಾಕ್ಷಿಯಾದರು. ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌ ಕೂಡ ಹೊಸ ಚಿತ್ರತಂಡಕ್ಕೆ ಸಾಥ್‌ ನೀಡಿದ್ದು ವಿಶೇಷ.

Advertisement

ಜಿಎಲ್‌ಬಿ ಶ್ರೀನಿವಾಸ್‌ ಚಿತ್ರದ ನಿರ್ದೇಶಕರು. ಕಥೆಯ ಕುರಿತು ಹೇಳಿಕೊಳ್ಳುವ ಅವರು, “ಇದೊಂದು ವಾಸ್ತವ ಅಂಶಗಳ ಮೇಲೆ ಹೆಣೆದ ಕಥೆ. ಈಗಿನ ಕಾಲದಲ್ಲಿ ಒಂದು ಹುಡುಗ, ಹುಡುಗಿ ಜೊತೆಯಾಗಿ ಹೋಗುತ್ತಿದ್ದರೆ, ಎಲ್ಲೋ ನಿಂತು ಮಾತಾಡಿದರೆ, ಬಹುತೇಕರು ಅವರನ್ನು ಪ್ರೇಮಿಗಳೆಂದೇ ಭಾವಿಸುತ್ತಾರೆ. ಈಗಾಗಲೇ ಆ ಕುರಿತ ಅನೇಕ ಚಿತ್ರಗಳೂ ಬಂದಿವೆ. ಆದರೆ, “ಸ್ನೇಹವೇ ಪ್ರೀತಿ’ ಚಿತ್ರದಲ್ಲಿ ಅದರ ಎಳೆ ಇಲ್ಲಿದ್ದರೂ, ಬೇರೆ ರೀತಿ ನಿರೂಪಿಸುವುದರ ಜೊತೆಗೆ ಒಂದು ಅರ್ಥಪೂರ್ಣ ಸಂದೇಶದೊಂದಿಗೆ ಚಿತ್ರ ಮಾಡಲಾಗಿದೆ. ಕಾಲೇಜಿನ ಹುಡುಗ, ಹುಡುಗಿ ಇಬ್ಬರೂ ಆತ್ಮೀಯ ಗೆಳೆಯರು. ಆ ಪೈಕಿ ಹುಡುಗ ಒಬ್ಟಾಕೆಯನ್ನು ಪ್ರೀತಿಸಲು ಶುರುಮಾಡುತ್ತಾನೆ. ಆ ವಿಷಯ ತಿಳಿದ ಗೆಳತಿ, ಅವರಿಬ್ಬರನ್ನು ಒಂದು ಮಾಡಲು ಏನೆಲ್ಲಾ ಮಾಡುತ್ತಾಳೆ ಎಂಬುದು ಕಥೆ’ ಎನ್ನುತ್ತಾರೆ ನಿರ್ದೇಶಕ ಜಿಎಲ್‌ಬಿ ಶ್ರೀನಿವಾಸ್‌.

ಈ ಚಿತ್ರಕ್ಕೆ ಸೂರಜ್‌ಗೌಡ ನಾಯಕರಾದರೆ, ಮುಂಬೈ ಮೂಲದ ಸೋನಿಯಾ ಹಾಗೂ ಫ‌ರಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸೂರಜ್‌ ಗೌಡ ಅವರಿಗಿಲ್ಲಿ ಹೊಸ ಬಗೆಯ ಪಾತ್ರ ಸಿಕ್ಕಿದೆಯಂತೆ. “ಈಗಿನ ಟ್ರೆಂಡ್‌ಗೆ ತಕ್ಕ ಕಥೆ ಇದಾಗಿದ್ದು, ಯೂಥ್‌ಗೆ ಇಷ್ಟವಾಗುವ ಚಿತ್ರವಿದು’ ಎಂಬುದು ಸೂರಜ್‌ಗೌಡ ಮಾತು.

ಅನಂತಪುರದ ಎಂ.ಅನಂತ್‌ರಾಮುಡು ಅವರು ಎಂಬ ರಮೇಶ್‌ ನಾಯುಡು ಜೊತೆ ಸೇರಿ ಎರಡು ಭಾಷೆಯಲ್ಲೂ ಈ ಚಿತ್ರ ನಿರ್ಮಿಸಿದ್ದಾರೆ. ಚಿತ್ರಕ್ಕೆ ಘಟಿಕಾಚಲಂ ಕಥೆ ಬರೆದು ಸಂಗೀತ ನೀಡಿದ್ದಾರೆ. ಚಂದ್ರು ಆರು ಚಿತ್ರದ ಗೀತೆ ರಚಿಸಿದ್ದಾರೆ. ಮಾರ್ತಾಂಡ್‌ ಸಂಕಲನ ಮಾಡಿದರೆ, ಶಶಿಕಿರಣ ಸಂಭಾಷಣೆ ಬರೆದಿದ್ದಾರೆ. ಥ್ರಿಲ್ಲರ್‌ ಮಂಜು ಅವರ ಸಾಹಸವಿದೆ. ಮದನ್‌-ಹರಿಣಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಹೈದರಾಬಾದ್‌ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಅಂದು ಮಂಡಳಿಯ ಭಾ.ಮ.ಹರೀಶ್‌, ಗೀತಸಾಹಿತಿ ನಾಗೇಂದ್ರಪ್ರಸಾದ್‌, ಕೆ.ಕಲ್ಯಾಣ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next