Advertisement

ಶಿರ್ಲಾಲು : 13ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನ ಪತ್ತೆ

01:30 AM Dec 05, 2018 | Karthik A |

ಕಾಪು: ಉಡುಪಿ ಜಿಲ್ಲೆ ಮತ್ತು ಕಾರ್ಕಳ ತಾಲೂಕಿನ ಶಿರ್ಲಾಲು – ಹಾಡಿಯಂಗಡಿ ವ್ಯಾಪ್ತಿಯ ಬ್ರಂದಬೆಟ್ಟು ಹೊಸಮನೆ ರತ್ನವರ್ಮ ಜೈನ್‌ ಅವರ ತೋಟದಲ್ಲಿ ಬ್ರಹ್ಮಾವರ ಕ್ರಾಸ್‌ಲ್ಯಾಂಡ್‌ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕ ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಹಾಗೂ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಮುಖ್ಯ ಸಂಶೋಧಕ ಸುಭಾಸ್‌ ನಾಯಕ್‌ ಬಂಟಕಲ್ಲು ಅವರು 13ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನವನ್ನು ಪತ್ತೆ ಮಾಡಿದ್ದಾರೆ.

Advertisement

ಶಿಲಾ ಶಾಸನವು 82 ಸೆಂ.ಮೀ ಅಗಲ, 66 ಸೆಂ.ಮೀ ಎತ್ತರ ಹಾಗೂ 15 ಸೆಂ.ಮೀ ದಪ್ಪವನ್ನು ಹೊಂದಿದ್ದು, ಗ್ರಾನೈಟ್‌ ಶಿಲೆಯಿಂದ ಮಾಡಲ್ಪಟ್ಟಿದೆ. 12 ಸಾಲುಗಳನ್ನು ಹೊಂದಿರುವ ಈ ಶಿಲಾ ಶಾಸನದಲ್ಲಿ ಅಕ್ಷರಗಳು ಅಲ್ಲಲ್ಲಿ ತೃಟಿತವಾಗಿರುವುದು ಕಂಡು ಬರುತ್ತದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಿಲಾ ಶಾಸನದ ಮೇಲ್ಭಾಗದಲ್ಲಿ ಸೂರ್ಯ – ಚಂದ್ರ ಹಾಗೂ ಬಲ ಭಾಗದಿಂದ ಖಡ್ಗ, ದೀಪ, ಶಿವಲಿಂಗ ಮತ್ತು ನಂದಿಯನ್ನು ಕೆತ್ತನೆ ಮಾಡಲಾಗಿದೆ. ನಂತರದಲ್ಲಿ ಶಾಸನದ ಪಾಠವನ್ನು ಕಾಣಬಹುದು. ಸ್ವಸ್ತಿ ಶ್ರೀ ಎಂಬ ವಾಕ್ಯದೊಂದಿಗೆ ಪ್ರಾರಂಭವಾಗುವ ಈ ಶಾಸನದಲ್ಲಿ ಶಕವರುಷ 1211, ವಿರೋಧಿ ಸಂವತ್ಸರದ ಉಲ್ಲೇಖವನ್ನು ಕಾಣಬಹುದು. (ಕ್ರಿಸ್ತ ಶಕೆಗೆ ಪರಿವರ್ತಿಸಿದಾಗ 1289ಕ್ಕೆ ಸರಿ ಹೊಂದುತ್ತದೆ) ಹಾಗೆಯೇ ಅರಿರಾಯ ಗಂಡರ ದಾವಣಿ ಕಾಳಲದೇವಿ ಮತ್ತು ಪಾಂಡ್ಯ ಅರಸ ಎಂಬ ಉಲ್ಲೇಖವು ಕಂಡುಬರುತ್ತದೆ.

ಈ ಶಿಲಾ ಶಾಸನವು ದಾನ ಶಾಸನವಾಗಿದ್ದು, ಭೂಮಿಯನ್ನು ದಾನ ನೀಡಿದ್ದರ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಶಾಸನದ ಅಂತ್ಯದಲ್ಲಿ ಶಾಪಾಶಯ ವಾಕ್ಯವನ್ನು ಹೇಳಲಾಗಿದೆ. ಈ ನಿಟ್ಟಿನಲ್ಲಿ ಈ ಶಿಲಾ ಶಾಸನವು ಕಳಸ – ಕಾರ್ಕಳ ರಾಜ್ಯವನ್ನಾಳಿದ ರಾಣಿ ಕಾಳಲದೇವಿಯ ಕಾಲಕ್ಕೆ ಸೇರಿದ್ದು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿರುತ್ತಾರೆ. ಕ್ಷೇತ್ರ ಕಾರ್ಯಕ್ಕೆ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಎಸ್‌.ಎ. ಕೃಷ್ಣಯ್ಯ, ಸ್ಥಳೀಯ ನಿವಾಸಿ ಹರೀಶ್‌ ಆಚಾರ್ಯ ಪಡಿಬೆಟ್ಟು, ಶಿರ್ಲಾಲು ಗ್ರಾ.ಪಂ. ಮಾಜಿ ಸದಸ್ಯ ವಿಠಲ ಆಚಾರ್ಯ ಹಾಗೂ ಎಂ.ಪಿ.ಎಂ.ಸಿ ಕಾರ್ಕಳ ಕಾಲೇಜಿನ ವಿದ್ಯಾರ್ಥಿ ಸಿದ್ಧಾರ್ಥ್ ಜೈನ್‌ ಸಹಕಾರ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next