Advertisement

ಸರಿದ ಪಂಚಾಯತ್‌ ರಾಜ್‌ ದಿನಾಚರಣೆ, ಸಡಿಲಗೊಂಡ ತಳಗಟ್ಟಿನ ಕಲ್ಲುಗಳು

01:02 AM Apr 30, 2019 | Sriram |

1993ರಲ್ಲಿ ದೇಶದೆಲ್ಲೆಡೆ ಪಂಚಾಯತ್‌ರಾಜ್‌ ವ್ಯವಸ್ಥೆ ಸಂವಿಧಾನಬದ್ಧವಾಗಿ ಅಸ್ತಿತ್ವಕ್ಕೆ ಬಂತು. ಪ್ರತಿ ವರ್ಷ ಏಪ್ರಿಲ್‌ 24ರಿಂದ ಪಂಚಾಯತ್‌ರಾಜ್‌ ಮಾಸಾಚರಣೆ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯನಂತರದ ಏಳೂವರೆ ದಶಕದಲ್ಲಿ ಪಂಚಾಯತ್‌ರಾಜ್‌ ತಿದ್ದುಪಡಿಯ ಬಗ್ಗೆ ಇರುವಷ್ಟು ನಿರೀಕ್ಷೆ ಬೇರಾವುದೇ ಕಾಯಿದೆಯಲ್ಲಿರಲಿಲ್ಲ. ಸಮಾಜದ ಮುಖ್ಯವಾಹಿನಿಗೆ ಬರಲು ಅಧಿಕಾರ ಮತ್ತು ಅವಕಾಶದ ಹಂಚಿಕೆಯಾಗಬೇಕೆಂಬ ಸಂವಿಧಾನದ ಆಶಯ ಎಲ್ಲಾದರೂ ಕಾರ್ಯರೂಪಕ್ಕೆ ಬರುವ ಒಂದೇ ಒಂದು ಅವಕಾಶವಿದ್ದರೇ, ಅದುವೇ ಭಾರತದ ಪಂಚಾಯತ್‌ರಾಜ್‌ ಕಾಯಿದೆಯ ಅಧಿಕಾರ ವಿಕೇಂದ್ರೀಕರಣವೆಂಬ ಕನಸಿನ ಕೂಸಿನ ಬೆಳವಣಿಗೆ ಮೇಲೆ ಎಂಬ ನುಡಿ ನಿತ್ಯಸತ್ಯವಾಗಬೇಕಿತ್ತು. ದುರದೃಷ್ಟಕ್ಕೆ ಸರ್ವಾಂಗ ಶಕ್ತಿಯುತವಾಗಿ ಬೆಳೆದು ನಿಂತು, ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಾಂತಿಯ ಕಹಳೆ ಊದಬೇಕಿದ್ದ ಈ ವ್ಯವಸ್ಥೆ ಹಲ್ಲಿಲ್ಲದ ಹಾವಿನಂತಾಗಿದೆ. ಅದಕ್ಕಿಂತ ನೋವಿನ ಸಂಗತಿಯೆಂದರೆ ಪಂಚಾಯತ್‌ರಾಜ್‌ ವ್ಯವಸ್ಥೆಯ ಅಡಿಪಾಯವೇ ಕುಸಿಯುತ್ತಾ ಒಂದೊಂದೇ ಕಲ್ಲುಗಳು ಜಾರುತ್ತಿವೆ.

Advertisement

ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿಯೇ ಅತ್ಯಂತ ಗುಣಮಟ್ಟದ ಪಂಚಾಯತ್‌ರಾಜ್‌ ಕಾಯಿದೆ ಯಾವುದಾದರೂ ರಾಜ್ಯದಲ್ಲಿ ತಿದ್ದುಪಡಿಯಾಗಿ ಬಂದಿದ್ದರೆ ಅದು ಕರ್ನಾಟಕದ ಅಂದಿನ ಗ್ರಾಮೀಣಾಭಿವೃದ್ಧಿಮಂತ್ರಿ ಎಂ.ವೈ. ಘೋರ್ಪಡೆಯವರ ಮೂಲಕ. ಆದರಿಂದು, ಪ್ರತ್ಯಕ್ಷ ಅನುಷ್ಠಾನದಲ್ಲಿ ಕರ್ನಾಟಕದಲ್ಲಿ ಕಾಯಿದೆಯನ್ನು ಪೂರ್ಣಾನುಷ್ಠಾನ ಮಾಡುವ ತವಕದಲ್ಲಿÉ ಆಳುವ ಸರ್ಕಾರಗಳಿಲ್ಲ. ಕಾಯಿದೆ ಪ್ರತಿಯನ್ನು ಮುಖಕ್ಕೆ ಹಿಡಿದು, ಯಾಕೆ ಮಾಡಿಲ್ಲ? ಎಂದು ಕೇಳುವವರು ಕೂಡ ಹೇಳುವಷ್ಟು ಸಂಖ್ಯೆಯಲ್ಲಿಲ್ಲ. ರಾಜ್ಯದ ಮಟ್ಟಿಗೆ ಮಾತನಾಡುವುದಾದರೆ, ರಾಜ್ಯದ‌ ಮೇಲ್ಮನೆ ಮತ್ತು ಕೆಳಮನೆ ಶಾಸಕರ ಸಂಖ್ಯೆ 300 ಮೀರದು. ಆದರೆ 30 ಜಿಲ್ಲಾ ಪಂಚಾಯತ್‌ಗಳು, 176 ತಾಲೂಕು ಪಂಚಾಯತ್‌ಗಳು ಹಾಗೂ 6022 ಗ್ರಾಮಪಂಚಾಯತ್‌ಗಳಲ್ಲಿ ನೇರವಾಗಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಸಂಖ್ಯೆ ಒಂದು ಲಕ್ಷ ಮೀರುತ್ತದೆ. ಅಚ್ಚರಿಯೆಂದರೆ ಸಂವಿಧಾನ ತಿದ್ದುಪಡಿ ಯೂ ಸೇರಿದಂತೆ ಕಾಯಿದೆ ಕಾನೂನು ಎಲ್ಲಾ ಬೆಂಬಲಗಳಿದ್ದಾಗಿಯೂ, ಒಂದು ಲಕ್ಷ ಮಂದಿ ಪಂಚಾಯತ್‌ ಪ್ರತಿನಿಧಿಗಳ ಧ್ವನಿಗೆ ಸರಕಾರವೇ ಓಗೊಡುತ್ತಿಲ್ಲ. ಪ್ರತಿ ಪಂಚಾಯತ್‌ಗಳು ಸ್ವಂತ ಸರ್ಕಾರಗಳಂತೆ ಕರ್ತವ್ಯ ನಿರ್ವಹಿಸಬೇಕೆಂಬ ಶಾಸನದ ಆಶಯಕ್ಕೆ ಒತ್ತುಕೊಡುವ ಮಾತಿರಲಿ, ಪಂಚಾಯತ್‌ರಾಜ್‌ ವ್ಯವಸ್ಥೆಯನ್ನೇ ಉಸಿರುಗಟ್ಟಿಸುವ ವಾತಾವರಣವನ್ನು ಬಹುತೇಕ ಸರಕಾರಗಳು ಮಾಡಿವೆ.

ಸಂವಿಧಾನದ 73ನೇ ಕಲಂ ತಿದ್ದುಪಡಿಯಾದ ಇಪ್ಪತ್ತೇಳು ವರ್ಷಗಳ ನಂತರ, ಕಳೆದ ಸರಕಾರದ ಅವಧಿಯಲ್ಲಿ ಗ್ರಾಮಸಭೆಗಳನ್ನು ಸಬಲೀಕರಣ ಮಾಡಬೇಕೆಂಬ ಸಲಹೆಗೆ ಒತ್ತುಕೊಡಬೇಕೆಂಬ ದೃಷ್ಟಿಯಿಂದ ವಾರ್ಡ್‌ ಮತ್ತು ಗ್ರಾಮಸಭೆಗಳನ್ನು ನಡೆಸಲು ಪಂಚಾಯತ್‌ ಸದಸ್ಯರಿಗೆ ಜವಾಬ್ದಾರಿಯನ್ನು ಕೊಡುವ ಸಲುವಾಗಿ, ವಾರ್ಡ್‌ ಮತ್ತು ಗ್ರಾಮ ಸಭೆ ನಡೆಸಲಾಗದ ಸದಸ್ಯರನ್ನು ಕಣ್ಗಾವಲು ಮಾಡಿ, ಸಭೆ ನಡೆಸಲು ವಿಫ‌ಲನಾಗುವ ಸದಸ್ಯನ ಸದಸ್ಯತ್ವವನ್ನು ರದ್ದು ಪಡಿಸುವ ಕಾಯಿದೆಯನ್ನು ಅಂದಿನ ಗ್ರಾಮೀಣಾಭಿವೃದ್ಧಿ ಮಂತ್ರಿ ಹೆಚ್‌.ಕೆ.ಪಾಟೀಲ್‌ ಮಂಡಿಸಿದ್ದರು.

ಚರ್ಚೆಗಳೇನೆಯಿದ್ದರೂ, ಗ್ರಾಮಸಭೆ ಸಬಲೀಕರಣವಾಗಬೇಕೆಂಬ ಮಂತ್ರಿ ಪಾಟೀಲರ ಸದಾಶಯವನ್ನು ಪ್ರಶ್ನಿಸುವಂತಿರಲಿಲ್ಲ. ಆದರೇ ಶೇ.50 ಮಹಿಳೆಯರು, ಶೇ.25 ಪರಿಶಿಷ್ಟ ಜಾತಿ ಪಂಗಡದವರು, ಅಂಗವಿಕಲರು, ಅನಕ್ಷರಸ್ಥರು ಗಣನೀಯ ಮಂದಿ ಇರುವಾಗ ಈ ಕಾನೂನು ರಾಜಕೀಯ ಕಾರಣಗಳಿಗೆ ದುರುಪಯೋಗವಾಗುವ ಸಾಧ್ಯತೆಯಿದೆ, ಎಂದು ನಾನು ಸದನದಲ್ಲಿ ವಾದ ಮಂಡಿಸಿದ್ದೆ. ಆ ಸಮಯದಲ್ಲಿ ಮಧ್ಯಪ್ರವೇಶಿದ ಹಿರಿಯ ಸಂಸದೀಯಪಟು ಎಂ.ಸಿ.ನಾಣಯ್ಯನವರು, ಸಭಾಪತಿಯವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಚರ್ಚಿಸಿ ಎಂದು ಸಲಹೆ ನೀಡಿದ್ದರು. ನಂತರ ಡಿ.ಹೆಚ್‌.ಶಂಕರಮೂರ್ತಿಯವರ ನೇತೃತ್ವದಲ್ಲಿ ನಡೆದ ಸಭೆಯ ಚರ್ಚೆಯ ಫ‌ಲಿತಾಂಶವೇ, ರಮೇಶಕುಮಾರ್‌ ವರದಿ ರಚನೆಗೆ ಕಾರಣವಾಯಿತು. ಯಾರೇನೆ ಹೇಳಲಿ, ರಾಜ್ಯ ರಾಜಕಾರಣದಲ್ಲಿ ಸಾಮಾಜಿಕ ವ್ಯವಸ್ಥೆಗಳ ಬೇರುಮಟ್ಟದ ಅನುಭವ ಹೊಂದಿರುವ ರಮೇಶಕುಮಾರ್‌, ಒಂದೆರಡು ವರ್ಷಗಳ ಕಾಲ ಬಡಿದಾಡಿ, ಗ್ರಾಮ ಗ್ರಾಮಗಳನ್ನು ಸುತ್ತಿ 172 ಪುಟಗಳ ವರದಿ ರಚಿಸಿ, ಸರ್ಕಾರದ ಕೈಗಿಟ್ಟಿದ್ದರು. ಗ್ರಾಮ ಪಂಚಾಯತ್‌ ಅಧ್ಯಕ್ಷ ಜನರಿಂದ ನೇರ ಆಯ್ಕೆಯಾಗಬೇಕೆ/ಈಗಿರುವ ವ್ಯವಸ್ಥೆಗಳಂತೆ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಂದ ಆಯ್ಕೆಯಾಗಬೇಕೆ? ಎಂಬ ಚರ್ಚೆ ರಮೇಶ್‌ಕುಮಾರ್‌ ಸಮಿತಿಯಲ್ಲಿ ವಾರಗಟ್ಟಲೇ ನಡೆದಿತ್ತು. ಹೀಗೆ ವರದಿಯಲ್ಲಿರುವ ಅನೇಕ ಅಂಶಗಳು ಅನುಷ್ಠಾನಗೊಂಡಿದ್ದರೆ, ಪಂಚಾಯತ್‌ರಾಜ್‌ ಮಟ್ಟಿಗಾದರೂ ಕರ್ನಾಟಕದ ಚುನಾವಣಾ ರಾಜಕಾರಣದ ಅಂಗಳ, ಹಣಬಲದ ಹೆಂಟೆಯ ಹಿಕ್ಕೆಗಳಿಂದ ಸಾಕಷ್ಟು ಮುಕ್ತವಾಗುತ್ತಿತ್ತು.

ಅಭ್ಯರ್ಥಿ ಚುನಾವಣ ವೆಚ್ಚವನ್ನು ಸರಕಾರವೇ ಭರಿಸಲು ಯೋಜನೆ: ರಮೇಶ್‌ಕುಮಾರ್‌ ನೂತನ ಪಂಚಾಯತ್‌ರಾಜ್‌ ಕಾಯಿದೆಯ ಮೂಲ ಶಿಫಾರಸ್ಸಿನಲ್ಲಿ ಈಗಿರುವ ವಿಕೇಂದ್ರಿಕರಣ ವ್ಯವಸ್ಥೆಯೆಂದರೇ ಕೇವಲ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳನ್ನು ವಿತರಣ ಮಧ್ಯವರ್ತಿಯಾಗಿ ಕೆಲಸ ಮಾಡುತ್ತ ದೆಯೇ ಹೊರತು ವಿಷಯಕ್ಕೆ ಬದ್ಧತೆ ಹೊಂದಿಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಯಾರು ಅಧಿಕಾರದಲ್ಲಿರಬೇಕು ಎಂದು ತೀರ್ಮಾನಿಸುವುದರೊಂದಿಗೆ ಚುನಾಯಿತರಾದವರು ಅಧಿಕಾರವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ತೀರ್ಮಾನಿ ಸಬೇಕಾಗಿದೆ ಎಂದು ವಿವರಿಸಿ, ಪಂಚಾಯತ್‌ ಚುನಾವಣಾ ವೆಚ್ಚ, ಪ್ರಚಾರದ ಪೂರ್ಣ ಖರ್ಚನ್ನೂ ಸರಕಾರವೇ ಭರಿಸಲು ಶಿಫಾರಸ್ಸು ಮಾಡಿದ್ದರು. ಹಣಬಲದ ಚುನಾವಣೆ ನಿಯಂತ್ರಿಸಲು ರಾಜ್ಯ ಚುನಾವಣ ಆಯೋಗಕ್ಕೆ ಕಾಯಿದೆಯ ಮೂಲಕ ಹೆಚ್ಚಿನ ಅಧಿಕಾರ ನೀಡಿ, ಸರಕಾರವೇ ಅಭ್ಯರ್ಥಿಗಳ ಚುನಾವಣ ವೆಚ್ಚ ಭರಿಸಲು ನಿರ್ಧರಿಸುವಂತೆ ಹಾಗೂ ಆಯೋಗವೇ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿ, ಅಭ್ಯರ್ಥಿಗಳು ಅಲ್ಲೇ ಬಂದು ಮತದಾರರಿಗೆ ತಮ್ಮ ಭಾವನೆ ಕೋರಿಕೆಗಳನ್ನು ತಿಳಿಸಲು ಅವಕಾಶ ಮಾಡುವಂತ ಅದ್ಭುತ ಯೋಜನೆ ರೂಪಿಸಿದ್ದರು. ಗ್ರಾಮಪಂಚಾಯತ್‌ನ ವಾರ್ಡ್‌ಗಳಲ್ಲಿ ಈಗಿರುವಂತೆ ಎರಡರಿಂದ ನಾಲ್ಕು ಜನ ಸದಸ್ಯರ ಬದಲು ಏಕ ವ್ಯಕ್ತಿ ಕ್ಷೇತ್ರವಾಗಿ ಬದಲಾಯಿಸಲು ಪ್ರಸ್ತಾವನೆ ಮಾಡಲಾಗಿತ್ತು. ಇದರಿಂದ ತನ್ನ ಕ್ಷೇತ್ರದ ಅಭಿವೃದ್ಧಿಯಲ್ಲಿ ಸ್ಪಷ್ಟ ಜವಾಬ್ದಾರಿ ಸದಸ್ಯನಾಗಿ ನಿರ್ವಹಿಸಲು ಅನುಕೂಲವಾಗಲಿ ಎಂಬುದು ವರದಿ ರಚನೆಗಾರರ ಭಾವನೆಯಾಗಿತ್ತು. ದುರಾದೃಷ್ಟಕ್ಕೆ ಕಾಯಿದೆಯ ಮುಖ್ಯ ಭಾಗವಾಗಿ ಕ್ರಾಂತಿಕಾರಿ ಬದಲಾವಣೆಯಾಗಬೇಕಾಗಿದ್ದ ಶಿಫಾರಸ್ಸು ಗ್ರಾಮ ಸ್ವರಾಜ್‌ ಕಾಯಿದೆಯಲ್ಲಿ ಹೊರಗುಳಿಸುವುದರ ಮೂಲಕ ಸರಕಾರ ಏನು ಸಾಧಿಸಿತೆಂಬುದೇ ಅರ್ಥವಾಗುತ್ತಿಲ್ಲ. ಒಟ್ಟಾರೆ ರಮೇಶ್‌ಕುಮಾರ್‌ ಸಮಿತಿಯ ಶ್ರಮವೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯಿತು. ತಮಾಷೆಯೆಂದರೆ, ಪಂಚಾಯತ್‌ರಾಜ್‌ ಸದಸ್ಯರ ಸದಸ್ಯತ್ವ ಅನೂರ್ಜಿತಗೊಳಿಸುವ ಕಾಯಿದೆಯೊಂದನ್ನು ಸರ್ಕಾರ ವಾಪಸು ಪಡೆದಿದ್ದು ಬಿಟ್ಟರೇ, ರಮೇಶಕುಮಾರ್‌ ವರದಿ ಮೂಲಕ ಬಂದ ಕರ್ನಾಟಕ ಗ್ರಾಮಸ್ವರಾಜ್‌ ಪಂಚಾಯತ್‌ರಾಜ್‌ ನೂತನ ತಿದ್ದುಪಡಿ ಕಾಯಿದೆ ಸುದ್ದಿಗಷ್ಟೇ ಸೀಮಿತವಾಯಿತು. ಹೊಸ ಕಾಯಿದೆ ಬಂದಾಗ ಭಾವುಕರಾಗಿದ್ದ ರಮೇಶ್‌ಕುಮಾರ್‌, ಕಾಯಿದೆ ಅನುಷ್ಟಾನದಲ್ಲಿ ಅಸಹಕಾರವನ್ನು ಗಮನಿಸಿ ಮೌನದ ಮುನಿಸನ್ನು ಅನುಭವಿಸಿದರು ಎಂಬ ಸತ್ಯಯಾರೇ ನಿರಾಕರಿಸಿದರೂ ಸ್ಪೀಕರ್‌ ಅಂತರಂಗ ಅರಿತವರು ಅಲ್ಲವೆನ್ನಲು ಸಾಧ್ಯವಿಲ್ಲ.

Advertisement

ಇದೀಗ ಪ್ರಶ್ನೆ ಅದಲ್ಲ. ಸಂವಿಧಾನದ 73ನೇ ತಿದ್ದುಪಡಿಯ ಆಶಯಕ್ಕನುಗುಣವಾಗಿ 3 ಹಂತದ ಪಂಚಾಯತ್‌ರಾಜ್‌ ಸಂಸ್ಥೆಗಳನ್ನು ಬಲಪಡಿಸುವ ಉದ್ದೇಶದಿಂದ, ತ್ರಿಸ್ತರದ ಅಧಿಕಾರದ ಹಂಚಿಕೆ ಪ್ರಸ್ತಾವನೆ ಕರ್ನಾಟಕದ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲೇ ಉಳಿದುಬಿಟ್ಟಿದೆ. ಪಂಚಾಯತ್‌ರಾಜ್‌ ಸಂಸ್ಥೆಗಳ, ಒಂದು ಲಕ್ಷಕ್ಕೂ ಮೀರಿದ ಜನ ಪ್ರತಿನಿಧಿಗಳ ಆಸೆ-ಆಶಯಗಳೆಲ್ಲ ವಿಧಾನಸೌಧದ 3ನೇ ಮಹಡಿಗೆ ಕೇಳುತ್ತಲೆ ಇಲ್ಲ/ ಕೇಳಿಸಿದ್ದರೂ ಜಾಣಕಿವುಡು.

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಅಂದು ಸಾಕಾರಗೊಳಿಸುವ ನಜಿØàರ್‌ಸಾಬ್‌ರವರ ಇಚ್ಛಾಶಕ್ತಿ, ಇಂದಿನ ಶಕ್ತಿಸೌಧದಲ್ಲಿನ ಮಂತ್ರಿ-ಅಧಿಕಾರಿಗಳಲ್ಲಿ ಕಾಣುತ್ತಿಲ್ಲ. ಆಡಳಿತ ಡೆಲ್ಲಿಯಿಂದಲ್ಲ-ಹಳ್ಳಿಯಿಂದಲೇ, ಎಂಬ ಹೆಗಡೆಯವರ ಘೋಷಣೆಯು ಕಾರ್ಯಾನುಷ್ಠಾನ ಇದೇ ನೆಲದಲ್ಲಿ ಮಂಡಲ ಪಂಚಾಯತ್‌-ಜಿಲ್ಲಾ ಪರಿಷತ್‌ಮಟ್ಟದಲ್ಲಿ ನಡೆದದ್ದು ಕಣ್ಣೆದುರೇ ತೋರುವಾಗ, ಕನಿಷ್ಠ ಗ್ರಾಮ ಸಭೆ, ಪಂಚಾಯ್ತಿ ಸಭೆಗಳ ಯಾ ತಾಲೂಕು-ಜಿಲ್ಲಾ ಪಂಚಾಯತ್‌ ಸಭೆಗಳ ನಿರ್ಣಯದ ವಿಷಯಗಳನ್ನು ಪರಿಶೀಲಿಸುವ ಸಾಮರ್ಥ್ಯವನ್ನು ಶಕ್ತಿಕೇಂದ್ರ ಹೊಂದಿಲ್ಲ ಎನ್ನುವುದೇ ಆಡಳಿತಕ್ಕೊಂದು ಅಪಚಾರ. ಗ್ರಾಮಮಟ್ಟದ ಆಡಳಿತ ವ್ಯವಸ್ಥೆಗಳಿಗೆ ಹೆಚ್ಚಿನ ಅಧಿಕಾರ, ಆರ್ಥಿಕ ಶಕ್ತಿ ನೀಡುವುದು, ಪ್ರತಿ ಗ್ರಾಮ ಪಂಚಾಯತಿಗಳು ಸ್ವಾವಲಂಬಿ-ಸ್ವಾಭಿಮಾನದ ಆಡಳಿತ ಕೊಡುವಂತೆ ಯೋಜನೆ ರೂಪಿಸುವುದು, ಆಡಳಿತ ವಿಕೇಂದ್ರಿಕರಣದ ರೀತಿ-ನೀತಿಯ ಜವಾಬ್ದಾರಿ, ತ್ಯಾಜ್ಯಮುಕ್ತ-ವ್ಯಾಜ್ಯ ಮುಕ್ತ- ಋಣಮುಕ್ತ ಸಮಾಜ ನಿರ್ಮಿಸಬೇಕಾದ ಪಂಚಾಯತ್‌ರಾಜ್‌, ತನ್ನದೆ ಆಡಳಿತಾತ್ಮಕ ಸಮಸ್ಯೆಗಳಿಂದ ತಾನೇ ಬಂಧನದಲ್ಲಿರುವುದು ಸಂವಿಧಾನದ ಆಶಯಗಳಿಗೊಂದು ಅಪವಾದ.

ಇಲ್ಲವಾದರೆ, ಕಾಯಿದೆ ಬಂದು ಕಾಲು ಶತಮಾನ ಸಂದರೂ, ಕಾಯಿದೆಯ ಒಂದು ಭಾಗವಾಗಿರುವ 3-ಎಫ್(ಫ‌ಂಕ್ಷನ್‌- ಫ‌ಂಕ್ಷನರಿ-ಫ‌ಂಡ್‌)ಗಳ ವರ್ಗಾವಣೆಗೆ ಇಂದಿಗೂ ಮೀನ-ಮೇಷ ಎಣಿಸುತ್ತಿರುವುದು ಯಾಕೆ? ದೇಶದ ಪಂಚಾಯತ್‌ರಾಜ್‌ ವ್ಯವಸ್ಥೆ ಯಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬ ಹೆಗ್ಗಳಿಕೆಯ ನಡುವೆಯೂ ಮಹತ್ವ ಕಾಂಕ್ಷೆಯ ಬಾಪೂಜಿ ಸೇವಾ ಕೇಂದ್ರಗಳು ಸ್ತಬ್ಧವಾಗಿ ಮಲಗಿರು ವುದೇಕೆ? ಪಂಚತಂತ್ರ, ಗಾಂಧಿಸಾಕ್ಷಿ ಕಾಯಕ, ಇ-ಸ್ವತ್ತು ಯೋಜನೆಗಳು ಜನೋಪಯೋಗಿಯಾಗುವ ಬದಲು ಪ್ರಜಾಕ್ರೋಶಕ್ಕೆ ತುತ್ತಾಗಲು ಕಾರಣವೇನು? ಈಗಲೂ ಕೇಂದ್ರದ 14ನೇ ಹಣಕಾಸು ಯೋಜನೆ ಅನುದಾನ ವಿದ್ಯುತ್‌ ಬಿಲ್ಲಿಗೆ ಕಡಿತ ಮಾಡಿದರೆ, ಪಂಚಾಯತಿಗಳ ಅಭಿವೃದ್ಧಿ ವ್ಯವಸ್ಥೆಯೇನು? ಎಂಬೆಲ್ಲಾ ಪಂಚಾಯಿತಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡಲಾಗದ ಸ್ಥಿತಿ ನಿರ್ಮಾಣವಾಗಿರುವುದೇ ಪಂಚಾಯಿತಿ ಆಡಳಿತ ಕುಂಠಿತವಾಗಿರುವುದಕ್ಕೆ ಕಾರಣ. ಗ್ರಾಮಾ ಡಳಿತದ ಸಬಲೀಕರಣಕ್ಕೆ ಸುದೀರ್ಘ‌ ಅನುಭವ, ದೂರದೃಷ್ಟಿ, ದಕ್ಷತೆ ಮತ್ತು ಬದ್ಧತೆಗಳು ಅವಶ್ಯವೇ ಹೊರತು, ಕೇವಲ ಪ್ರಚಾರಗಳಲ್ಲಿ ಫ‌ಲಿತಾಂಶ ಪಡೆಯಲು ಸಾಧ್ಯವಿಲ್ಲ.ಕೆಲವು ಜಿಲ್ಲೆಗಳಲ್ಲಂತೂ ಗ್ರಾಮಪಂಚಾಯತ್‌ನ ಅಧ್ಯಕ್ಷ-ಉಪಾಧ್ಯಕ್ಷರು, ಬೇರೆ ಯಾವುದೊ ಇಲಾಖೆಯಿಂದ ಬಂದು ಗ್ರಾಮೀಣಾಭಿವೃದ್ಧಿಯ ಗಂಧ-ಗಾಳಿ ತಿಳಿಯದೆ ಆಡಳಿತ ನಡೆಸುವ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾಪಂಚಾಯತ್‌ ಅಧಿಕಾರಿಗಳ ಮುಂದೆ ಅಸಹಾಯಕರಾಗಿ ನಿಲ್ಲುವ ಪರಿಸ್ಥಿತಿಯಿದೆ. ಯಾಕೆಂದರೆ ಅನುಭವಿ ಅಧ್ಯಕ್ಷರ ಮಾತುಗಳು ಅನ್ಯಇಲಾಖೆಯಿಂದ ಬಂದ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಉದ್ಯೋಗ ಖಾತ್ರಿಯಲ್ಲಿ ದಿನಕ್ಕೊಂದು ಗೊಂದಲ ನಿರ್ಮಿಸಿ, ಅಭಿವೃದ್ಧಿಗಾಗಿ ನರೇಗಾ ಅನುಷ್ಟಾನ ಮಾಡ ಹೊರಟ ಪಂಚಾಯಿತಿ ಸದಸ್ಯರೇ, ಅಧಿಕಾರಿಗಳ ಅಸಹಕಾರದ ನಿರ್ಧಾರಕ್ಕೆ ಚಡಪಡಿಸುವಂತಾಗಿದೆ.

ಪ್ರತಿ ವರ್ಷದ ಫೆಬ್ರವರಿ-ಮಾರ್ಚ್‌ ತಿಂಗಳಲ್ಲಿ ಅನುಮೋದನೆಗೊಳ್ಳಬೇಕಾದ ಬಜೆಟ್‌ಗಳು 6 ತಿಂಗಳು ಸಂದರೂ ಅನುಮೋದನೆ ಆಗದೆ ಕ್ರಿಯಾ ಯೋಜನೆ ಮಾಡಲಾಗುತ್ತಿಲ್ಲ ಎನ್ನುವ ಪಂಚಾಯತ್‌ ಪ್ರತಿನಿಧಿಗಳಿಗೆ ಉತ್ತರಿಸಬೇಕಾದ ಮೇಲಾಧಿಕಾರಿಗಳಿಗೆ ಪಂಚಾಯತ್‌ರಾಜ್‌ ಕಲ್ಪನೆ ಇಲ್ಲದಿದ್ದರೆ ಅದೆಂತಹ ನಿರ್ವಹಣೆ ಸಾಧ್ಯ? ಪಂಚಾಯತ್‌ರಾಜ್‌ ಕಾಯಿದೆ (ಪ್ರಕರಣ 58ರಡಿ)ಅನುಸೂಚಿ- 1ರಂತೆ ಗಣಿ ಭೂವಿಜ್ಞಾನವು ಸೇರಿದಂತೆ, ಅಬಕಾರಿ ಇಲಾಖೆಯ ಬಾರ್‌ ಎಂಡ್‌ ರೆಸ್ಟೊರೆಂಟ್‌ಗಳಿಗೆ ಕಡ್ಡಾಯವಾಗಿ ಪಂಚಾಯತ್‌ಗಳ ಪರವಾನಗಿ ಪಡೆಯತಕ್ಕದ್ದು ಎಂದು ದಾಖಲಿಸಿದ್ದರೂ, ಅಬಕಾರಿ ಇಲಾಖೆ ಗ್ರಾಮ ಪಂಚಾಯತ್‌ಗಳಿಗೂ ತಮಗೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದೆ. ಜನ ಅಕ್ರಮ ಮದ‌Âದಂಗಡಿಗಳನ್ನು ವಿರೋಧಿಸುತ್ತಾರೆ. ಅಧ್ಯಕ್ಷ, ಜನಪ್ರತಿನಿಧಿಗಳು ಮಾಡುವ ಪಂಚಾಯಿತಿ ನಿರ್ಣಯಕ್ಕೆ ಮಾತ್ರ ಅಬಕಾರಿ ಇಲಾಖೆ ಕ್ಯಾರೇ ಎನ್ನುತ್ತಿಲ್ಲ! ಯಾವ ಅಬಕಾರಿ ಇಲಾಖೆ ಅಧಿಕಾರಿಗಳು ಪಂಚಾಯತ್‌ ಅಧ್ಯಕ್ಷರೆದುರು ನಿಂತು ಗ್ರಾಮ ಸರಕಾರ ಒಪ್ಪಿದರೆ ಮಾತ್ರ ನಿಮ್ಮಲ್ಲಿ ಬಾರ್‌ ತೆರೆಯುತ್ತೇವೆ ಎನ್ನಬೇಕಿತ್ತೂ, ಬದಲಾಗಿ ಪಂಚಾಯಿತಿ ಅಧ್ಯಕ್ಷರೇ ಅಬಕಾರಿ ಕಛೇರಿಗೆ ಹೋಗಿ ನಮ್ಮಲ್ಲಿ ಬಾರ್‌ ಎಂಡ್‌ ರೆಸ್ಟೊರೆಂಟ್‌ ಬೇಡ ಎಂದು ಗೋಗರಿಯಬೇಕಿದೆ. ನೋಡಿದಿರಾ ಕಾನೂನು ಕತ್ತೆಯಾದ ಪರಿ..!!

ನಮ್ಮ ಪಂಚಾಯತ್‌ಗಳಿಗೆ ಶಾಸನಬದ್ಧ, ಕಾಯಿದೆಬದ್ಧ ಅಧಿಕಾರ ನಡೆಸಲು ಅವಕಾಶ ಕೊಡಿ ಎಂಬ ಬೇಡಿಕೆ ಮುಂದಿಟ್ಟು ಕಳೆದ ಸರಕಾರದ ಅವಧಿಯಲ್ಲಿ ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆಯಿರುವ ಗಾಂಧಿ ಪ್ರತಿಮೆ ಎದುರು ನಾವೆಲ್ಲಾ ಮೇಲ್ಮನೆಯ ಶಾಸಕರು ಧರಣಿ ನಡೆಸಿದೆವು. ಪಕ್ಷಭೇದ ಮರೆತು ಇಂದಿನ ಸಭಾಪತಿ ಶ್ರೀ ಪ್ರತಾಪಚಂದ್ರ ಶೆಟ್ಟಿಯವರು ಹಾಗೂ ಶಾಸಕ ಕೆ.ಸಿ.ಕೊಂಡಯ್ಯ ರಂತಹ ಹಿರಿಯರು ನಮ್ಮೊಂದಿಗಿದ್ದರು. ವಿಚಾರ ಪ್ರಸ್ತಾಪವಾದಾಗ ಸರಕಾರ ಸದನದಲ್ಲಿ ಉಗುಳು ನುಂಗಿಕೊಂಡು, ಮುಖತಿರುವಿ ಕುಳಿತುಬಿಟ್ಟಿತು. ಸರಕಾರದ ಮೋಸದ ಹಿಂದೆ ಕೆಲವು ಅಸಹಾಯಕತೆ ಮತ್ತು ಅನಿವಾರ್ಯತೆಗಳಿರುವುದು ನಮಗೆಲ್ಲಾ ಅರ್ಥವಾಗಿತ್ತು.

ಗ್ರಾಮ ಸ್ವರಾಜ್‌ ಕಾಯಿದೆ ಬಂದು 3 ವರ್ಷಗಳಾದರೂ ಒಮ್ಮೆ ಬಿಟ್ಟರೆ ಮತ್ತೆಂದೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಸಭೆಯನ್ನೆ ಸರಕಾರ ಕರೆದಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಈ ಸಮಿತಿಯ ಅಧ್ಯಕ್ಷ. ಕನಿಷ್ಠ ಆರು ತಿಂಗಳಿಗೊಮ್ಮೆ ಸಭೆ ಕರೆದು ಸಮಸ್ಯೆ ಚರ್ಚಿಸಬೇಕಿತ್ತು ರಾಜ್ಯ ಬಜೆಟ್‌ನ ಶೇ.30ರಷ್ಟು ತ್ರಿಸ್ತರದ ಪಂಚಾಯತ್‌ಗಳಿಗೆ ಹಂಚಿಕೆಯಾಗಬೇಕು, ಅದರಲ್ಲಿ ಶೇ.50ರಷ್ಟು ಮುಕ್ತ ನಿಧಿಯಾಗಬೇಕೆಂಬ ಶಿಫಾರಸ್ಸಿನ ಬಗ್ಗೆ ಸರಕಾರದ ನಿಲುವೇನೆಂದೇ ಅರ್ಥವಾಗುತ್ತಿಲ್ಲ.

ಒಟ್ಟಾರೆ ರಾಷ್ಟ್ರೀಯ ಪಂಚಾಯತ್‌ರಾಜ್‌ ಮಾಸಾಚರಣೆಯ ದಿನಗಳಲ್ಲಿ ಗ್ರಾಮ ರಾಜ್ಯದ ಕಲ್ಪನೆಗೊಂದು ಸ್ಪಷ್ಟ ಮಾರ್ಗಸೂಚಿ ಇರಬೇಕಾಗಿದ್ದು, ಈ ಮಧ್ಯೆ ಗ್ರಾಮೀಣಾಭಿವೃದ್ಧಿ ಮಂತ್ರಿ ಕೃಷ್ಣ ಭೈರೆಗೌಡರು ಸ್ಥಳೀಯಾಡಳಿತ ಸಂಸ್ಥೆಗಳಿಂದ ಆಯ್ಕೆಯಾದ ಮೇಲ್ಮನೆ ಶಾಸಕರುಗಳನ್ನೆಲ್ಲ ಕರೆದು ಹತ್ತಾರು ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದ್ದಾರೆ. ಪಂಚಾಯತ್‌ರಾಜ್‌ ವ್ಯವಸ್ಥೆಗಳನ್ನು ಸಬಲ ಗೊಳಿಸಲು ಸರಕಾರದೃಢ ನಿರ್ಧಾರದತ್ತ ದಿಟ್ಟ ಹೆಜ್ಜೆ ಇಡಬೇಕು. ಪ್ರಜಾ ಪ್ರಭುತ್ವ ಯಶಸ್ವಿಯಾಗಬೇಕಾದರೆ ಸರಕಾರದ ನಿಲುವಿನ ಮೇಲೆ ಆಸಕ್ತರು ನಿರಂತರ ಕಣ್ಗಾವಲು ಮಾಡುತ್ತಿರಬೇಕು. ಇದೇ ಪಂಚಾಯತ್‌ರಾಜ್‌.

-ಕೋಟ ಶ್ರೀನಿವಾಸ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next