ಗಂಗಾವತಿ: ನಗರದ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಬೇರೂನಿ ಆಬಾದಿ ಮಸೀದಿಯ ವಾಣಿಜ್ಯ ಮಳಿಗೆಗಳ ನಿರ್ಮಾಣ ಆರ್ ಸಿಸಿ ಕಾರ್ಯಕ್ಕೆ ಮಾದಿಗ ಸಮಾಜದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ನಗರಸಭೆಗೆ ಮನವಿ ಕೊಟ್ಟ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯದಂತೆ ಪೊಲೀಸರು ತಡೆ ಮಾಡಿದ್ದರಿಂದ ಕಾಮಗಾರಿ ಸ್ಥಳದಲ್ಲಿ ಗುರುವಾರ ಬೆಳ್ಳಿಗ್ಗೆ ಉದ್ವಿಗ್ನ ವಾತಾವರಣ ಸೃಷ್ಟಿಯಾದ ಘಟನೆ ನಡೆಯಿತು.
ಇಲ್ಲಿನ ಜಾಗದ ಕುರಿತು ವ್ಯಾಜ್ಯವಿದ್ದು ಮಸೀದಿಯವರು ವಾಣಿಜ್ಯ ಮಳಿಗೆ ನಿರ್ಮಾಣ ಮಾಡುವುದಕ್ಕೆ ತಮ್ಮ ಆಕ್ಷೇಪವಿದೆ ಎಂದು ಮಾದಿಗ ಸಮಾಜದ ಹುಸೇನಪ್ಪಸ್ವಾಮಿ ಹಾಗೂ ಸಂಗಮೇಶ ಅಯೋಧ್ಯೆ ನಗರಸಭೆಗೆ ಆಕ್ಷೇಪ ಸಲ್ಲಿಸಿದ್ದಾರೆ. ಈ ಮಧ್ಯೆ ಈಗಾಗಲೇ ವಿವಾದ ಬಗೆಗೆ ಜಾಗವನ್ನು ಮಸೀದಿ ಹಾಗೂ ಮಾದಿಗ ಸಮಾಜಕ್ಕೆ ದಿವಂಗತ ಎಂ.ಎಸ್.ಅನ್ಸಾರಿ ಮಾಜಿ ಸಂಸದ ಎಚ್.ಜಿ.ರಾಮುಲು ಹಾಗೂ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ನ್ಯಾಯ ಪಂಚಾಯಿತಿ ಮಾಡಿದ್ದಾರೆ. ಈಗ ನಗರಸಭೆ ರಾಜ್ಯ ವಕ್ಫ್ ಕಮೀಟಿಯಿಂದ ಪರವಾನಿಗೆ ಪಡೆದು ನ್ಯಾಯಯುತವಾಗಿ ಮಸೀದಿ ಮಳಿಗೆ ನಿರ್ಮಿಸಲಾಗುತ್ತಿದೆ ಎಂದು ನಗರಸಭೆ ಸದಸ್ಯ ಹಾಗು ಮಸೀದಿ ಕಮೀಟಿ ಅಧ್ಯಕ್ಷ ಶಾಮೀದ್ ಮನಿಯಾರ್ ನೇತೃತ್ವದಲ್ಲಿ ನಗರಸಭೆಗೆ ಮನವಿ ಮಾಡಲಾಗಿತ್ತು.
ಗುರುವಾರ ಬೆಳ್ಳಿಗ್ಗೆ ಆರ್ ಸಿಸಿ ಕಾರ್ಯ ಆರಂಭವಾಗುತ್ತಿದ್ದಂತೆ ಪೊಲೀಸ್, ಕಂದಾಯ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೋವಿಡ್ ಲಾಕ್ ಡೌನ್ ಇರುವುದರಿಂದ ಆರ್ ಸಿಸಿ ಹಾಕಲು ಹೆಚ್ಚು ಜನ ಕೂಲಿಕಾರರು ಸೇರುವುದರಿಂದ ಕಾಮಗಾರಿ ಸ್ಥಗಿತ ಮಾಡಬೇಕು. ನಗರಸಭೆಗೆ ಕೆಲವರು ಸಲ್ಲಿಸಿರುವ ಆಕ್ಷೇಪ ಬಗೆಹರಿದ ನಂತರ ಮಳಿಗೆಗಳ ನಿರ್ಮಾಣ ಕಾರ್ಯ ಆರಂಭಿಸಲು ಅವಕಾಶವಿದೆ. ಸದ್ಯ ಕಾಮಗಾರಿ ಸ್ಥಗಿತಗೊಳಿಸುತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಾಮೀದ್ ಮನಿಯಾರ್ ಹಾಗೂ ಸೈಯದ್ ಅಲಿ ಪತ್ರಕರ್ತರ ಜತೆ ಮಾತನಾಡಿ ಕಾನೂನು ಪ್ರಕಾರ ಮಳಿಗೆಗಳ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಎರಡು ದಶಕಗಳ ಹಿಂದೆ ಬಗೆಹರಿದ ಸಮಸ್ಯೆಯನ್ನು ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಎಲ್ಲ ಕಡೆ ಕಾಮಗಾರಿಗಳು ನಡೆಯುತ್ತಿವೆ ಶಾಸಕರು ಮಸೀದಿ ಮಳಿಗೆ ನಿರ್ಮಾಣ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಖಂಡನೀಯವಾಗಿದೆ. ಎಲ್ಲ ದಾಖಲೆಗಳಿದ್ದು ಕಾನೂನು ಹೋರಾಟ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಾಗ್ವಾದ ಜರುಗಿತು. ಸ್ಥಳಕ್ಕೆ ತಹಸೀಲ್ದಾರ್ ಯು.ನಾಗರಾಜ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಪೌರಾಯುಕ್ತ ಅರವಿಂದ ಜಮಖಂಡಿ, ಪಿಐ ವೆಂಕಟಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.