Advertisement

ಬೆಂಬಲಿಗರ ಜತೆ ಎನ್‌ವೈಜಿ-ಸೌಭಾಗ್ಯ ಗಹನ ಚರ್ಚೆ

01:34 PM Apr 17, 2018 | Team Udayavani |

ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹನುಮಲಿ ಷಣ್ಮುಖಪ್ಪ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಡಾ| ಬಿ. ಯೋಗೇಶ್‌ ಬಾಬು ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಿರುವುದು ಈ ಕ್ಷೇತ್ರಗಳ ಪ್ರಬಲ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿಸಿದೆ.

Advertisement

ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಮತ್ತು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಎನ್‌. ವೈ. ಗೋಪಾಲಕೃಷ್ಣ ಪಕ್ಷದ ಹೈಕಮಾಂಡ್‌ ನಿರ್ಧಾರದಿಂದ ಬೇಸರಗೊಂಡಿದ್ದಾರೆ. ಇವರಿಬ್ಬರನ್ನು ಸೆಳೆಯಲು ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಪ್ರಯತ್ನ ನಡೆಸಿವೆ ಎನ್ನಲಾಗುತ್ತಿದೆ.

 ಎನ್‌.ವೈ. ಗೋಪಾಲಕೃಷ್ಣ ಅವರು ಸೋಮವಾರ ಬೆಂಗಳೂರಿನ ತಮ್ಮ ಮನೆಯಲ್ಲಿ ಆಪ್ತರೊಂದಿಗೆ ಸಮಾಲೋಚನೆ ನಡೆಸಿದರು. ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ಸಲಹೆ ಪಡೆದುಕೊಂಡರು ಎಂದು ಹೇಳಲಾಗುತ್ತಿದೆ. 

ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಪಡೆಯಲು ಬೆಂಗಳೂರಿನಲ್ಲಿ ವಾಸ್ತವ್ಯ ಮಾಡಿದ್ದ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಸೋಮವಾರ ಮಧ್ಯಾಹ್ನ 12:30ರ ಸುಮಾರಿಗೆ ಚಿತ್ರದುರ್ಗಕ್ಕೆ ಆಗಮಿಸಿ ತಮ್ಮ ಮನೆಯಲ್ಲಿ ಹಲವು ಸುತ್ತಿನ ಸಭೆ ನಡೆಸಿದರು. ಈ ಸಭೆಯಲ್ಲಿ ಸೇರಿದ್ದ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಮತ್ತು ಸೌಭಾಗ್ಯ ಬೆಂಬಲಿಗರು ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಗುಡುಗಿದರು.

ಹನುಮಲಿ ಯಾರೆಂಬುದೇ ಗೊತ್ತಿಲ್ಲ: ಕಾಂಗ್ರೆಸ್‌ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಯಾರು ಎಂಬುದೇ ಬಹುತೇಕ ಜನರಿಗೆ ಗೊತ್ತಿಲ್ಲ. ಇವರ ಮುಖವನ್ನು ಎಷ್ಟು ಜನ ಕಾರ್ಯಕರ್ತರು ನೋಡಿದ್ದಾರೆ, ಎದುರಿಗೆ ಬಂದರೂ ಯಾವೊಬ್ಬ ಕಾರ್ಯಕರ್ತರನ್ನೂ  ಗುರುತಿಸುವುದಿಲ್ಲ. ಕಾರ್ಯಕರ್ತರು ಅವರನ್ನೇ ದೃಷ್ಟಿಸಿ ನೋಡಿ ಮಾತನಾಡುತ್ತಿದ್ದರೆ ಷಣ್ಮುಖಪ್ಪ ಮತ್ತೂಂದು ಕಡೆ ನೋಡುತ್ತ
ಬೇರೊಬ್ಬರೊಂದಿಗೆ ಮಾತನಾಡುತ್ತಿರುತ್ತಾರೆ. 

Advertisement

ಇಂತಹ ವ್ಯಕ್ತಿಗಳಿಂದ ಕಾಂಗ್ರೆಸ್‌ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ. ಅವರಲ್ಲಿ ಹಣ ಇದೆ ಎನ್ನುವ ಕಾರಣಕ್ಕೆ ಟಿಕೆಟ್‌ ನೀಡಲಾಗಿದೆ. ಹಣವೊಂದೇ ಮಾನದಂಡವಲ್ಲ. ಹಾಗಾದರೆ ಅವರ ಹಣ ಹೇಗೆ ಗೆಲ್ಲಿಸುತ್ತದೆ ಎನ್ನುವುದನ್ನು ನಾವೂ ನೋಡುತ್ತೇವೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸೌಭಾಗ್ಯ ಮತ್ತು ಎಸ್‌.ಕೆ. ಬಸವರಾಜನ್‌ ಮಾಡಿರುವ ತಪ್ಪಾದರೂ ಏನು ಎಂಬುದನ್ನು ಕಾಂಗ್ರೆಸ್‌ ನಾಯಕರೇ ಹೇಳಬೇಕು.

ಜಿಪಂ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್‌ ಪಡೆದು ಸ್ಪರ್ಧಿಸಿ ನಿಮ್ಮ ಶಕ್ತಿ ಪ್ರದರ್ಶಿಸಬೇಕು. ಇದು ನಿಮ್ಮ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವುದೇ ಸೂಕ್ತ ಎಂದು ಸಲಹೆ ನೀಡಿದರು.

ಸೌಭಾಗ್ಯ ಬಸವರಾಜನ್‌ಗೆ ಟಿಕೆಟ್‌ ನೀಡದಿದ್ದರೆ ಅವರ ಪತಿ ಎಸ್‌. ಕೆ. ಬಸವರಾಜನ್‌ಗಾದರೂ ಟಿಕೆಟ್‌ ನೀಡಬಹುದಿತ್ತಲ್ಲ, ಗುಪ್ತಚರ ಇಲಾಖೆ ಸೇರಿದಂತೆ ಎಲ್ಲ ಸಮೀಕ್ಷೆಗಳು ಈ ಕುಟುಂಬಕ್ಕೆ ಟಿಕೆಟ್‌ ನೀಡಿದರೆ ಅನುಕೂಲವಾಗಲಿದೆ ಎನ್ನುವ ವರದಿ ನೀಡಿದ್ದವು. ಆದರೆ ಕಾಂಗ್ರೆಸ್‌ ಪಕ್ಷ ಸೋಲಲಿ ಎನ್ನುವ ಕಾರಣಕ್ಕೆ ಅಪರಿಚಿತ ವ್ಯಕ್ತಿಗೆ ಟಿಕೆಟ್‌ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರ ಮಾತುಗಳನ್ನು ಆಲಿಸಿದ ಸೌಭಾಗ್ಯ ಬಸವರಾಜನ್‌ ಮಾತನಾಡಿ, ದುಡುಕಿನ ನಿರ್ಧಾರ ಕೈಗೊಳ್ಳುವುದು ಬೇಡ. ಈಗ ಅಭ್ಯರ್ಥಿ ಹೆಸರಷ್ಟೇ ಘೋಷಣೆಯಾಗಿದೆ. ಪಕ್ಷ ತಮಗೆ “ಬಿ’ ಫಾರಂ ನೀಡುವ ವಿಶ್ವಾಸವಿದೆ. ಕಾದು ನೋಡೋಣ, ಅಲ್ಲಿಯ ತನಕ ತಾಳ್ಮೆ ವಹಿಸುವುದು ಮೇಲು. ಯಾವುದೇ ಕಾರಣಕ್ಕೂ ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದರು ಎಂದು ತಿಳಿದು ಬಂದಿದೆ.

ಸೌಭಾಗ್ಯ ಬಸವರಾಜನ್‌ ಬೆಂಬಲಿಗರಾದ ಜಿಪಂ ಸದಸ್ಯ ನರಸಿಂಹರಾಜು, ನಿಶಾನಿ ಜಯಣ್ಣ, ತಿಮ್ಮಣ್ಣ, ರವಿಕುಮಾರ್‌, ಮಾಲತೇಶ್‌, ಗುರುಮೂರ್ತಿ, ಎಣ್ಣೆಗೆರೆ ಪ್ರಕಾಶ್‌, ಸಿದ್ದಪ್ಪ, ರಾಜಣ್ಣ, ಚಂದ್ರಣ್ಣ, ಬಸಣ್ಣ, ಅಣ್ಣಪ್ಪ, ಶ್ರೀನಿವಾಸ್‌, ಹಲವು ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಅನ್ಯಾಯ ಸಹಿಸಲಾಗದು ಸೌಭಾಗ್ಯ ಬಸವರಾಜನ್‌ ಅವರಿಗೆ ಟಿಕೆಟ್‌ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ಕ್ಷೇತ್ರದ ಜನತೆ ಇದ್ದರು. ಆದರೆ ನಿಮ್ಮನ್ನು ಕಡೆಗಣಿಸಿ ಕ್ಷೇತ್ರಕ್ಕೆ ಪರಿಚಯವೇ ಇಲ್ಲದ ಷಣ್ಮುಖಪ್ಪ ಅವರಿಗೆ ಟಿಕೆಟ್‌ ನೀಡಿ ಅನ್ಯಾಯ ಮಾಡಲಾಗಿದೆ. ಇಂತಹ ಅನ್ಯಾಯ ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಬಹುತೇಕ ಕಾರ್ಯಕರ್ತರು ಕೆಂಡಾ ಮಂಡಲರಾದರು. ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇವೆ. ಕಾಂಗ್ರೆಸ್‌ ಪಕ್ಷದ ಸಹವಾಸವೇ ಬೇಡ. ತಾವು ಯಾವುದಾದರೊಂದು ಪಕ್ಷದಿಂದ ಅಥವಾ ಪಕ್ಷೇತರರಾಗಿ ಸ್ಪರ್ಧಿಸಿಗೆದ್ದು ಕಾಂಗ್ರೆಸ್ಸಿಗೆ ಪಾಠ ಕಲಿಸಬೇಕು. ನಿಮ್ಮ ಅಭಿಪ್ರಾಯವನ್ನು ಈಗಲೇ ತಿಳಿಸಬೇಕೆಂದು ಸೌಭಾಗ್ಯ ಬೆಂಬಲಿಗರು ಪಟ್ಟು ಹಿಡಿದರು ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next