Advertisement

8ರಿಂದ ಸೂರ್ಯ ನಗರಿಯಲ್ಲಿ ನುಡಿ ಜಾತ್ರೆ

10:43 AM Dec 01, 2018 | |

ಕಲಬುರಗಿ: ಸೂರ್ಯ ನಗರಿಯ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಡಿ.8 ಮತ್ತು 9ರಂದು ನಡೆಯಲಿದ್ದು, ಈ ಬಾರಿಯ ನುಡಿ ಜಾತ್ರೆ ಹೊಸದೊಂದು ಗರಿಮೆಯೊಂದಿಗೆ ನಡೆಯುತ್ತಿದೆ. ರಾಜ್ಯದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗಳ ಇತಿಹಾಸದಲ್ಲೇ 17 ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದ ಏಕೈಕ ಜಿಲ್ಲೆ ಎನ್ನುವ ಹೆಮ್ಮೆಯಿಂದ ಕನ್ನಡದ ತೇರು ಎಳೆಯಲು ಕಲಬುರಗಿ ಸಜ್ಜಾಗಿದೆ.

Advertisement

ನಗರದ ಕನ್ನಡ ಭವನದಲ್ಲಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಇಲ್ಲಿನ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ 17ನೇ ಸಮ್ಮೇಳನ ಎರಡು ದಿನಗಳ ಕಾಲ ಹಿರಿಯ ಸಾಹಿತಿ, ಕನ್ನಡ ಪ್ರಾಧ್ಯಾಪಕಿ ಡಾ| ನಾಗಾಬಾಯಿ ಬುಳ್ಳಾ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಇದುವರೆಗೂ ರಾಜ್ಯದ ಯಾವುದೇ ಜಿಲ್ಲಾ ಕನ್ನಡ ಪರಿಷತ್‌ಗಳು 17 ಸಮ್ಮೇಳನಗಳನ್ನು ನಡೆಸಿದ ಉದಾಹರಣೆಗಳು ಇಲ್ಲ. ಮೈಸೂರು ಮತ್ತಿತರ ಜಿಲ್ಲೆಗಳ 15 ಸಮ್ಮೇಳನಗಳನ್ನು ಮಾತ್ರ ಮಾಡಿವೆ. ಆದರೆ, ಸುವರ್ಣ ಮಹೋತ್ಸವದ ಆಚರಣೆಯಲ್ಲಿ ಕಲಬುರಗಿ 17ನೇ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದ ಏಕೈಕ ಜಿಲ್ಲೆಯಾಗಿದೆ ಎಂದರು.

ಡಿ.8ರಂದು ಬೆಳಗ್ಗೆ 11 ಗಂಟೆಗೆ ಸಮ್ಮೇಳನಕ್ಕೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಉದ್ಘಾಟಿಸುವರು. ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ಸ್ಮರಣ ಸಂಚಿಕೆ, ಚಿಗುರೆಲೆ ಕವನ ಸಂಕಲನ ಬಿಡುಗಡೆ ಮತ್ತು ಮಳಿಗೆಗಳ ಉದ್ಘಾಟನೆ ನೆರವೇರಿಸುವರು. ಶಾಸಕರಾದ ದತ್ತಾತ್ರೇಯ ಪಾಟೀಲ
ರೇವೂರ, ಖನೀಜ್‌ ಫಾತಿಮಾ, ಡಾ| ಉಮೇಶ ಜಾಧವ, ಎಂ.ವೈ. ಪಾಟೀಲ, ಸುಭಾಷ ಗುತ್ತೇದಾರ, ಡಾ| ಅಜಯ್‌
ಸಿಂಗ್‌, ಬಸವರಾಜ ಮತ್ತಿಮಡು, ರಾಜಕುಮಾರ ಪಾಟೀಲ ತೇಲ್ಕೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ| ವೀರಣ್ಣಾ ದಂಡೆ ಹಾಜರಿರುವರು ಎಂದು ವಿವರಿಸಿದರು.

ಸರ್ವಾಧ್ಯಕ್ಷರ ಮೆರವಣಿಗೆ: ಡಿ.8 ರಂದು ಬೆಳಗ್ಗೆ 9 ಗಂಟೆಗೆ ನಗರದ ನೆಹರೂ ಗಂಜ್‌ನ ನಗರೇಶ್ವರ ಬಾಲ ಭವನದಿಂದ ಬಾಪುಗೌಡ ದರ್ಶನಾಪುರ ರಂಗಮಂದಿರದ ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಅಧಕ್ಷೆ ಸುವರ್ಣಾ ಮಲಾಜಿ ಮೆರವಣೆಗೆಗೆ ಚಾಲನೆ ನೀಡುವರು. ಮಹಾನಗರ ಪಾಲಿಕೆ ಮೇಯರ್‌ ಮಲ್ಲಮ್ಮ ವಳಕೇರಿ ಅತಿಥಿಗಳಾಗಿ ಆಗಮಿಸುವರು. ಮೆರವಣಿಗೆಯಲ್ಲಿ 15ಕ್ಕೂ ಹೆಚ್ಚು ವಿವಿಧ ವೈವಿಧ್ಯಮಯ ಕಲಾ ತಂಡಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕನ್ನಡ ಪರ ಸಂಘಟನೆಗಳು, ಜಿಲ್ಲೆಯ ಗಣ್ಯರು, ಸಾಹಿತಿಗಳು ಪಾಲ್ಗೊಳ್ಳುವರು.

ಇದಕ್ಕೂ ಮುನ್ನ ಬೆಳಗ್ಗೆ 8:30ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಪರಿಷತ್‌ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ನೆರವೇರಿಸುವರು. 

Advertisement

 ವಿವಿಧ ಗೋಷ್ಠಿಗಳು: ಎರಡು ದಿನಗಳ ಅಕ್ಷರ ಜಾತ್ರೆಯಲ್ಲಿ ವಿಚಾರಗೋಷ್ಠಿ ಮತ್ತು ಕವಿ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕನ್ನಡ ಸಾಹಿತ್ಯಕ್ಕೆ ಸತ್ವ ತುಂಬಿದ ನೆಲೆಗಳು, ಜಿಲ್ಲೆಯ ಹೆಜ್ಜೆ ಗುರುತು, ಭಾಷಾಂತರ-ವಿಮರ್ಶೆ ಮತ್ತು ಸೌಲಭ್ಯ-ಸದುಪಯೋಗ-ಪ್ರಯತ್ನಶೀಲತೆ ವಿಷಯ ಕುರಿತು ನಾಲ್ಕು ಗೋಷ್ಠಿಗಳು ನಡೆಯಲಿವೆ ಎಂದರು. 

ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ, ಎರಡು ಕವಿಗೋಷ್ಠಿಗಳು, ಒಂದು ಬಹಿರಂಗ ಅಧಿವೇಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಮಾರೋಪ: ಡಿ.9ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಹೆಸರಾಂತ ಕವಿ ಜರಗನಹಳ್ಳಿ ಶಿವಶಂಕರ ಸಮಾರೋಪ ಭಾಷಣ ಮಾಡುವರು. ವಿಧಾನ ಪರಿಷತ್‌ ಸದಸ್ಯರಾದ ಕೆ.ಬಿ. ಶರಣಪ್ಪ, ಇಕ್ಬಾಲ ಅಹ್ಮದ್‌ ಸರಡಗಿ, ಶರಣಪ್ಪ ಮಟ್ಟೂರ, ಬಿ.ಜಿ. ಪಾಟೀಲ, ಡಾ| ಚಂದ್ರಶೇಖರ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು. 

5,000 ಜನ ಪಾಲ್ಗೊಳ್ಳುವ ನಿರೀಕ್ಷೆ: ಎರಡು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಈಗಾಗಲೇ 1,000 ಪ್ರತಿನಿಧಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನು 300 ಜನರು ಡಿ.2ರೊಳಗೆ ಹೆಸರು ನೋಂದಾಯಿಸಿಕೊಳ್ಳುವ ಅವಕಾಶ ಇದ್ದು, ಒಟ್ಟಾರೆ ಐದು ಸಾವಿರ ಜನ ಕನ್ನಡಾಭಿಮಾನಿಗಳು ಸಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ| ವಿಜಯಕುಮಾರ ಪರುತೆ, ಗೌರವ ಕೋಶಾಧ್ಯಕ್ಷ ದೌಲತ್‌ರಾಯ ಮಾಲಿಪಾಟೀಲ, ಸಿ.ಎಸ್‌. ಮಾಲಿ ಪಾಟೀಲ, ರಘೋಜಿ ಅಂಕಲಕರ್‌, ಎಸ್‌.ಕೆ. ಹತ್ತಿ, ಸೂರ್ಯಕಾಂತ ಪಾಟೀಲ ಮುಂತಾದವರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next