Advertisement

ಕೆಸರುಗದ್ದೆಯಾದ ನೃಪತುಂಗ ಬಡಾವಣೆ; ಮಾಜಿ ಸಿಎಂ ಕ್ಷೇತ್ರದ ಜನರ ಗೋಳು

04:56 PM Jul 13, 2022 | Team Udayavani |

ಹುಬ್ಬಳ್ಳಿ: ಇಂದೋ ನಾಳೆಯೋ ತಮ್ಮ ಬಡಾವಣೆಯಲ್ಲಿ ಡಾಂಬರ್‌ ರಸ್ತೆಗಳಾಗುತ್ತವೆ ಎನ್ನುವ ಭರವಸೆಯಲ್ಲಿ ಬದುಕುತ್ತಿರುವ ನಿವಾಸಿಗಳು ಇಂದಿಗೂ ಕೆಸರುಗದ್ದೆಯಂತಹ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ.

Advertisement

ಕಳೆದ 10-12 ವರ್ಷಗಳಿಂದ ರಸ್ತೆಯಿಲ್ಲದೆ ಬಡಾವಣೆ ನಿವಾಸಿಗಳು ಸ್ವಂತ ಖರ್ಚಿನಲ್ಲಿ ಮಣ್ಣು ಹಾಕಿಸಿಕೊಂಡು ಬದುಕುತ್ತಿದ್ದಾರೆ. ಮೇಲಾಗಿ ಇದು ಮಾಜಿ ಮುಖ್ಯಮಂತ್ರಿಗಳು ಪ್ರತಿನಿಧಿಸುವ ಕ್ಷೇತ್ರ ಎಂಬುದೇ ವಿಪರ್ಯಾಸ!

ಇದು ಡಾ| ಗಂಗೂಬಾಯಿ ಹಾನಗಲ್ಲ ಗುರುಕುಲ ಬಳಿಯಿರುವ 39ನೇ ವಾರ್ಡ್‌ನ ನೃಪತುಂಗ ನಗರದ ಚಿತ್ರಣ. ಮಳೆಗಾಲದಲ್ಲಿ ಕೆಸರುಗದ್ದೆಯಾಗುವ ಇಲ್ಲಿನ ರಸ್ತೆಗಳು ಬೇಸಿಗೆಯಲ್ಲಿ ತಗ್ಗು ದಿನ್ನೆಯ ರೂಪ ಪಡೆದುಕೊಳ್ಳುತ್ತವೆ. 100ಕ್ಕೂ ಹೆಚ್ಚು ಮನೆಗಳಿದ್ದು, ಕಳೆದ 10-12 ವರ್ಷಗಳಿಂದ ಇದೇ ರಸ್ತೆಗಳು ಇಲ್ಲಿನ ನಿವಾಸಿಗಳಿಗೆ ಅನಿವಾರ್ಯವಾಗಿದೆ. ಬಡಾವಣೆಯಲ್ಲಿರುವ ಎರಡು ಪ್ರಮುಖ ರಸ್ತೆ ಹಾಗೂ 6 ಒಳ ರಸ್ತೆಗಳ ಚಿತ್ರಣ ವಿಭಿನ್ನವಾಗಿಲ್ಲ. ಇದೀಗ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಅಕ್ಷರಶಃ ಕೆಸರುಗದ್ದೆಯಾಗಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಸುಸಜ್ಜಿತ ರಸ್ತೆಗಳನ್ನು ನಿರ್ಮಿಸುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ.

ಭರವಸೆ ಈಡೇರಿಲ್ಲ: ಮಾಜಿ ಸಿಎಂ ಜಗದೀಶ ಶೆಟ್ಟರ ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಬಡಾವಣೆಯಿದೆ. ಹಲವು ಬಾರಿ ರಸ್ತೆ ನಿರ್ಮಾಣದ ಕುರಿತು ಮನವಿಗಳನ್ನು ಸಲ್ಲಿಸಿದ್ದು, ಭರವಸೆಗಳು ಸಿಕ್ಕಿದ್ದಷ್ಟೆ. ಇಷ್ಟು ವರ್ಷಗಳಲ್ಲಿ ಕನಿಷ್ಟ ಎರಡು ಪ್ರಮುಖ ರಸ್ತೆಗಳಾದರೂ ನಿರ್ಮಾಣವಾಗಲಿಲ್ಲ ಎನ್ನುವ ಬೇಸರ ಹಾಗೂ ಅಸಮಾಧಾನವಿದೆ.

ಬಡಾವಣೆ ಆರಂಭವಾದ ನಂತರದಲ್ಲಿ ಒಂದಿಷ್ಟು ಕಡಿ, ಮಣ್ಣು ಹಾಕಿ ರಸ್ತೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ರಸ್ತೆ ನಿರ್ಮಾಣದ ಭರವಸೆಯಲ್ಲಿ ದಿನ ಕಳೆಯುತ್ತಿದ್ದಾರೆ. ಇತ್ತೀಚೆಗೆ ಪಕ್ಕದ ಕಾಲೋನಿಯಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲು ಬಂದ ಸಂದರ್ಭದಲ್ಲೂ ಶೆಟ್ಟರ ಅವರು ಭರವಸೆ ನೀಡಿದ್ದರು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

Advertisement

ಜಲಮಂಡಳಿ ಅಗೆತ: ಆರೇಳು ವರ್ಷಗಳ ಹಿಂದೆ ಅಂದಿನ ಪಾಲಿಕೆ ಸದಸ್ಯೆ ರತ್ನಾ ಪಾಟೀಲ ಅವಧಿಯಲ್ಲಿ ರಸ್ತೆಗಳು ಒಂದಿಷ್ಟು ಖಡಿ ಹಾಗೂ ಮಣ್ಣು ಕಂಡಿದ್ದವು. ಆದರೆ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ ನಿಮಿತ್ತ ಅಗೆದ ರಸ್ತೆ ಐದಾರು ವರ್ಷ ಕಳೆದರೂ ದುರಸ್ತಿಯಾಗಿಲ್ಲ. ಈ ಕುರಿತು ಸ್ಥಳೀಯರು ಸಂಬಂಧಿಸಿದ ಇಲಾಖೆ ಪ್ರಶ್ನಿಸಿದರೆ ರಸ್ತೆ ದುರಸ್ತಿಗೆ ತಗಲುವ ವೆಚ್ಚವನ್ನು ಪಾಲಿಕೆಗೆ ಭರಿಸಲಾಗಿದೆ. ಅವರು ರಸ್ತೆ ನಿರ್ಮಿಸಲಿದ್ದಾರೆ ಎನ್ನುವ ಸಬೂಬು ದೊರೆಯುತ್ತಿದ್ದು, ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಹೀಗಾಗಿ ರಸ್ತೆಗೆ ಡಾಂಬರ್‌  ಅಥವಾ ಜಲ್ಲಿ ಕಲ್ಲು ಕೂಡ ಕಾಣುತ್ತಿಲ್ಲ. ಶಾಸಕರಿಗೆ, ಅಧಿಕಾರಿಗಳಿಗೆ ಬೇಡಿಕೆಯ ಮನವಿಗಳನ್ನು ಸಲ್ಲಿಸಿ ಜನ ರೋಸಿ ಹೋಗಿದ್ದಾರೆ. ನೃಪತುಂಗ ಬಡಾವಣೆ ನಗರದ ಹೊರಗಿರುವ ಕಾರಣಕ್ಕೆ ಇದನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಭಾವನೆ ಸ್ಥಳೀಯರಲ್ಲಿ ಮೂಡಿದೆ.

ಸ್ವಂತ ಹಣದಲ್ಲಿ ಮಣ್ಣು
ಭರವಸೆಗಳಿಂದ ಭ್ರಮನಿರಸನಗೊಂಡ ಸ್ಥಳೀಯರು ಆಗಾಗ ಹಣ ಸಂಗ್ರಹಿಸಿ ರಸ್ತೆಗೆ ಮಣ್ಣು ಹಾಕಿಸಿ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ಅಕ್ಷರಶಃ ಕೆಸರುಗದ್ದೆಯಾಗಿ ನಿರ್ಮಾಣವಾಗುತ್ತಿದ್ದು, ಶಾಲಾ ವಾಹನ ಸ್ಥಗಿತಗೊಂಡಿತ್ತು. ಸಣ್ಣ ಪುಟ್ಟ ಮಕ್ಕಳು ನಿರ್ಭಿಡೆಯಿಂದ ರಸ್ತೆಯಲ್ಲಿ ನಡೆದಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಸಕರು, ಹಿಂದಿನ ಹಾಗೂ ಇಂದಿನ ಪಾಲಿಕೆ ಸದಸ್ಯರು ಬೇರೆ ಬಡಾವಣೆಯಲ್ಲಿರುವ ಕಾರಣ ಇಲ್ಲಿನ ಸಮಸ್ಯೆ ಅವರಿಗೆ ಅರ್ಥವಾಗುತ್ತಿಲ್ಲ. ಆರಿಸಿ ಕಳುಹಿಸಿದ ಜನಪ್ರನಿಧಿಗಳು ಒಮ್ಮೆಯಾದರೂ ನಮ್ಮ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಅರಿಯಲಿ. ಅಂದಾಗ ಇಲ್ಲಿನ ಜನರು ಅನುಭವಿಸುತ್ತಿರುವ
ಸಂಕಷ್ಟ ಅವರ ಗಮನಕ್ಕೆ ಬರಲಿದೆ.
ಅಶೋಕ ನಿಕ್ಕಂ,
ನೃಪತುಂಗ ಬಡಾವಣೆ ನಿವಾಸಿ

ಪಕ್ಷದ ಇಬ್ಬರು ನಾಯಕರ ಶ್ರಮದಿಂದ ನೃಪತುಂಗ ನಗರದ ರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡಿದ್ದಾರೆ. ರಸ್ತೆಗಾಗಿಯೇ ಒಂದು ಕೋಟಿ ರೂ. ಬೇಡಿಕೆ ಸಲ್ಲಿಸಿದ್ದೆವು. 75 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದಾರೆ. ಮಳೆಗಾಲದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ವಾರ್ಡ್‌ ನಿಧಿಯಲ್ಲಿ ತಾತ್ಕಾಲಿಕವಾಗಿ ಈ ರಸ್ತೆ ಸರಿಪಡಿಸಲು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಶೀಘ್ರದಲ್ಲಿ ರಸ್ತೆ ಸಮಸ್ಯೆ ಬಗೆಹರಿಸಲಾಗುವುದು.
ಸೀಮಾ ಮೊಗಲಿಶೆಟ್ಟರ, ಪಾಲಿಕೆ ಸದಸ್ಯೆ

ಹು-ಧಾ ಹೆಸರಿಗಷ್ಟೇ ಸ್ಮಾರ್ಟ್‌ಸಿಟಿ ಆಗುತ್ತಿದೆ. ನಗರದ ಪ್ರಮುಖ ರಸ್ತೆಗಳು ಕಾಂಕ್ರಿಟ್‌, ಡಾಂಬರ್‌ ಆದರೆ ಅಭಿವೃದ್ಧಿಯಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರಕಾರ ಇರುವಾಗ ಸಣ್ಣ ಕೆಲಸ ದೊಡ್ಡದಲ್ಲ. ನಾನು ಅಧಿಕಾರದಲ್ಲಿದ್ದಾಗ ಮೆಟಲಿಂಗ್‌ ರಸ್ತೆ ಮಾಡಿಸಿದ್ದು ಬಿಟ್ಟರೆ ಡಾಂಬರ್‌ ಕಂಡಿಲ್ಲ. ಯಾವ ಸೌಲಭ್ಯಗಳು ಇಲ್ಲದ ಪ್ರದೇಶಕ್ಕೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡಿದ್ದೇವೆ. ಇಂದಿನ ಸರಕಾರ ಈ ಪ್ರದೇಶವನ್ನು ಸಂಪೂರ್ಣ ನಿರ್ಲಕ್ಷಿಸಿದೆ.
ಎಂ.ಎಸ್‌. ಪಾಟೀಲ,
ಪಾಲಿಕೆ ಮಾಜಿ ಸದಸ್ಯ

*ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next