Advertisement

ಆ್ಯಂಬಿಡೆಂಟ್‌, ಐಎಂಎ ವಂಚನೆ: ಸರ್ಕಾರಕ್ಕೆ ನೋಟಿಸ್‌

06:36 AM Jan 24, 2019 | Team Udayavani |

ಬೆಂಗಳೂರು: ಆ್ಯಂಬಿಡೆಂಟ್‌, ಐಎಂಎ ಗ್ರೂಪ್‌ ಆಫ್ ಕಂಪನೀಸ್‌ ಸೇರಿದಂತೆ ರಾಜ್ಯದ 12 ಖಾಸಗಿ ಹೂಡಿಕೆ ಕಂಪನಿಗಳು ಹೂಡಿಕೆದಾರರಿಂದ ಸಾವಿರಾರು ಕೋಟಿ ರೂ. ವಸೂಲಿ ಮಾಡಿ ವಂಚಿಸಿವೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಬುಧವಾರ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌, ಈ ಬಗ್ಗೆ 10 ದಿನಗಳಲ್ಲಿ  ಸಮಗ್ರ ಮಾಹಿತಿ ಒದಗಿಸುವಂತೆ ನಿರ್ದೇಶನ ನೀಡಿದೆ.

Advertisement

ಈ ಕುರಿತು ಬೆಂಗಳೂರಿನ ಇಮ್ರಾನ್‌ ಪಾಷಾ ಹಾಗೂ ನಾಜಿಯಾ ಬಾನು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್‌. ದಿನೇಶ್‌ ಕುಮಾರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ಆದೇಶಿಸಿತು.

ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿರುವ 12 ಖಾಸಗಿ ಹೂಡಿಕೆ ಕಂಪನಿಗಳ ವಿರುದ್ಧ ರಾಜ್ಯದ ವಿವಿಧ ಕಡೆ ಈವರೆಗೆ ಎಷ್ಟು ಪೊಲೀಸ್‌ ದೂರುಗಳು ಬಂದಿವೆ. ಅದರಲ್ಲಿ ಎಷ್ಟು ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ಎಷ್ಟು ಪ್ರಕರಣಗಳಲ್ಲಿ ತನಿಖೆ ನಡೆಸಿ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ.

ಈ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಒಟ್ಟು ಮೊತ್ತ ಎಷ್ಟು ಮತ್ತು ಎಷ್ಟು ಮಂದಿ ಹೂಡಿಕೆ ಮಾಡಿದ್ದಾರೆ ಎಂಬ ಬಗ್ಗೆ 10 ದಿನಗಳಲ್ಲಿ ಸಮಗ್ರವಾದ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಮಂಡಿಸುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next