Advertisement

ವಸತಿ ಶಾಲೆಗಳಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಸೂಚನೆ: ಕಾರಜೋಳ

08:43 PM Dec 28, 2022 | Team Udayavani |

ಸುವರ್ಣ ವಿಧಾನಸೌಧ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್‌ ಹಾಗೂ ವಸತಿ ಶಾಲೆಗಳಲ್ಲಿನ ವಿದ್ಯುತ್‌ ತಂತಿ ಸೇರಿ ಉಳಿದ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

Advertisement

ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಹದೇವನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 7 ವರ್ಷದ ಬಾಲಕ ಅದೇ ಶಾಲೆಯ ಕುಡಿಯುವ ನೀರಿಕ ಘಟಕದ ವಿದ್ಯುತ್‌ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅನಾಹುತವಾಗಿದೆ. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ಯತೀಂದ್ರ ಅವರು ಪ್ರಸ್ತಾಪಿಸಿದ ವಿಷಯ ಸರ್ಕಾರಕ್ಕೆ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಮೃತ ಬಾಲಕನ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಕೊಡಲಾಗುವುದು. ಅಲ್ಲದೇ ಇಡೀ ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಹಾಸ್ಟೆಲ್‌ ಹಾಗೂ ವಸತಿ ಶಾಲೆಗಳಲ್ಲಿನ ವಿದ್ಯುತ್‌ ವ್ಯವಸ್ಥೆ ಸೇರಿೆ ಉಳಿದ ದುರಸ್ತಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಬಿಪಿಎಲ್‌ ಕಾರ್ಡ್‌ ಮಾನದಂಡ ಸರಳೀಕರಣ
-4 ಚಕ್ರದ ವಾಹನ ಬಳಸುವ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳ ಹಿತೃದೃಷ್ಟಿಯಿಂದ ಕ್ರಮ
ಸುವರ್ಣ ವಿಧಾನಸೌಧ: ನಾಲ್ಕು ಚಕ್ರದ ವಾಹನ ಬಳಸುವ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳ ಹಿತೃದೃಷ್ಟಿಯಿಂದ ಬಿಪಿಎಲ್‌ ಕಾರ್ಡ್‌ ವಿತರಿಸುವ ಮಾನದಂಡಗಳನ್ನು ಸರಳೀಕರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿ, ನಾಲ್ಕು ಚಕ್ರದ ವಾಹನ ಬಳಸುವವರಿಗೆ ಬಿಪಿಎಲ್‌ ಕಾರ್ಡ್‌ ನೀಡಲು ಆವಕಾಶವಿಲ್ಲ ಎಂದು ಮಾನದಂಡಗಳ ನೆಪ ಹೇಳಲಾಗುತ್ತಿದೆ. ಬಾಡಿಗೆ ಮನೆಯಲ್ಲಿ ವಾಸ ಮಾಡುವ ಬಡವರು, ನಾಲ್ಕು ಚಕ್ರದ ಬಂಡಿಯಲ್ಲಿ ತರಕಾರಿ ಮಾರುವವರ ಬಿಪಿಎಲ್‌ ಕಾರ್ಡ್‌ ರದ್ದುಪಡಿಸಲಾಗಿದೆ. ನಾಲ್ಕು ಚಕ್ರದ ವಾಹನ ಹೊಂದಿದ ಬೀದಿ ಬದಿ ವ್ಯಾಪಾರಿಗಳನ್ನು ಶ್ರೀಮಂತರು ಎಂದು ತಿಳಿದರೆ ಹೇಗೆ? 30 ಸಾವಿರ ಕೊಟ್ಟರೆ ಕಾರ್‌ ಸಿಗುವ ಈಗಿನ ಕಾಲದಲ್ಲಿ ಬಡವರು ಕಾರ್‌ನಲ್ಲಿ ಕೂರುವುದು ಬೇಡ ಎಂದರೆ ಏನರ್ಥ? ಆದ್ದರಿಂದ ಈ ಮಾನದಂಡಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ಒಳ್ಳೆಯ ಉದ್ದೇಶಗಳಿಂದಲೇ ಮಾನದಂಡಗಳನ್ನು ಮಾಡಲಾಗಿರುತ್ತದೆ. ಈ ಹಿಂದೆ ದ್ವಿಚಕ್ರ ವಾಹನ ಇದ್ದವರಿಗೂ ಬಿಪಿಎಲ್‌ ಕಾರ್ಡ್‌ ಇಲ್ಲ ಎಂಬ ನಿಯಮವಿತ್ತು. ಆದರೆ, ಬೀದಿ ಬದಿ ವ್ಯಾಪಾರ ಮಾಡುವ, ನಾಲ್ಕು ಚಕ್ರದ ವಾಹನ ಇಟ್ಟುಕೊಂಡು ವ್ಯಾಪಾರ ಮಾಡುವವರಿಗೆ ಸಂಬಂಧಿಸಿದಂತೆ ಮಾನದಂಡಗಳ ನಿರ್ಬಂಧಗಳನ್ನು ಸಡಿಲಿಸಿ ರದ್ದುಪಡಿಸಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಮತ್ತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವೈಜ್ಞಾನಿಕ ರೀತಿಯಲ್ಲಿ ರಸ್ತೆ ಉಬ್ಬು ನಿರ್ಮಿಸಿ
ಸುವರ್ಣ ವಿಧಾನಸೌಧ: ರಸ್ತೆ ಉಬ್ಬು (ಹಂಪ್ಸ್‌)ಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ ವಿಷಯ ಪ್ರಸ್ತಾಪಿಸಿ ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ಅಪಘಾತಗಳು ಸಂಭವಿಸಿ ಆನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ವಿಷಯ ಅನೇಕ ಬಾರಿ ಸದನದಲ್ಲಿ ಪ್ರಸ್ತಾಪವಾಗಿದೆ. ಆದರೆ, ಪರಿಹಾರ ಸಿಕ್ಕಿಲ್ಲ. ಸರ್ಕಾರ ನಿಯಮಗಳನ್ನು ಪಾಲಿಸಿ ರಸ್ತೆ ಉಬ್ಬುಗಳನ್ನು ವೈಜ್ಞಾನಿಕವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮಧ್ಯಪ್ರವೇಶಿಸಿದ ಸ್ಪೀಕರ್‌ ಕಾಗೇರಿ, ಸಾಕಷ್ಟು ಬಾರಿ ಈ ವಿಷಯ ಚರ್ಚೆ ಆಗಿದೆ. ಹತಾಶೆ ಅನ್ನುವ ಮಟ್ಟಕ್ಕೆ ಇದು ಹೋಗಿದೆ. ಅಧಿಕಾರಿಗಳಿಗೆ ಸೂಚನೆ ಕೊಡಲಾಗುವುದು ಎಂದು ಸರ್ಕಾರ ಹೇಳುತ್ತದೆ. ಆದರೆ, ಆಧಿಕಾರಿಗಳು ಆ ಸೂಚನೆಗಳನ್ನು ಕೇಳಲ್ಲ ಎಂದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವಶ್ಯಕತೆ ಇರುವ ಕಡೆ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಹಲವು ಶಾಸಕರು ಧ್ವನಿಗೂಡಿಸಿದರು.

ಶಾಸಕರ ಸಹಕಾರ ಬೇಕು: ರಾಜ್ಯದ 29 ಸಾವಿರ ಹಳ್ಳಿಗಳಲ್ಲೂ ಈ ಸಮಸ್ಯೆ ಇದೆ. ರಸ್ತೆ ನಿರ್ಮಾಣ ಕಾಮಗಾರಿಗಳು ನಡೆಯುವಾಗ ಸ್ಥಳೀಯರು ಆಧಿಕಾರಿಗಳು ಮತ್ತು ಕಾರ್ಮಿಕರ ಮೇಲೆ ಒತ್ತಡ ತಂದು ಅಥವಾ ಬೆದರಿಸಿ ತಮಗೆ ಬೇಕಾದ ರೀತಿಯಲ್ಲಿ ರಸ್ತೆ ಉಬ್ಬುಗಳನ್ನು ಹಾಕಿಸುತ್ತಾರೆ. ಅನೇಕ ಕಡೆ ಶಾಸಕರೇ ಒತ್ತಡ ಹಾಕುತ್ತಾರೆ. ಆದ್ದರಿಂದ ರಸ್ತೆಯಲ್ಲಿ ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಇದರಲ್ಲಿ ಎಲ್ಲಾ ಶಾಸಕರ ಸಹಕಾರ ಬೇಕೆಂದು ಕಾರಜೋಳ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next