Advertisement

ಅಕ್ರಮ ಬಾಂಗ್ಲಾ ನುಸುಳುಕೋರರ ಬಗ್ಗೆ ಎಚ್ಚರಿಕೆ

06:00 AM Aug 30, 2018 | Team Udayavani |

ಬೆಂಗಳೂರು: ಕೇಂದ್ರ ಗುಪ್ತಚರ ಇಲಾಖೆ ಮುಖ್ಯಸ್ಥರಾದ ರಾಜೀವ್‌ ಜೈನ್‌ ಅವರು ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರನ್ನು ಬುಧವಾರ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

Advertisement

ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಬಾಂಗ್ಲಾ ಅಕ್ರಮ ನುಸುಳುಕೋರರು (ರೋಹಿಂಗ್ಯಾ ಸಮುದಾಯ) ನೆಲೆಸಿರುವ ಪ್ರದೇಶಗಳು, ಜನಸಂಖ್ಯೆ, ಅವರ ಜೀವನ ನಿರ್ವಹಣೆ, ಅಪರಾಧ ಚಟುವಟಿಕೆಗಳ ಭಾಗಿಯಾಗುತ್ತಿರುವ ಬಗ್ಗೆ ಅಗತ್ಯ ಮಾಹಿತಿ ಒದಗಿಸುವಂತೆ ಕೋರಿರುವ ಕೇಂದ್ರ ಗುಪ್ತಚರ ಇಲಾಖೆ, ಅಕ್ರಮ ನುಸುಳುಕೋರರ ಚಲನವಲನಗಳ ಮೇಲೆ ನಿಗಾ ಇರಿಸುವಂತೆಯೂ ಮುನ್ನೆಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಪ್ರಮುಖವಾಗಿ ಬಾಂಗ್ಲಾ ಅಕ್ರಮ ನುಸುಳುಕೋರರು ನೆಲೆಸಿರುವ ಪ್ರದೇಶಗಳು, ಅವರ ತೊಡಗಿಸಿಕೊಂಡಿರುವ ಚಟುವಟಿಕೆಗಳು, ಸರ್ಕಾರದಿಂದ ಪಡೆಯುತ್ತಿರುವ ಸೌಲಭ್ಯಗಳು, ಅವರ ಬಳಿಯಿರುವ ದಾಖಲೆ, ಆಧಾರಗಳ ಬಗ್ಗೆಯೂ ರಾಜೀವ್‌ ಜೈನ್‌ ಅವರು ಚರ್ಚೆ ನಡೆಸಿದರು. ಅಪರಾಧ ಕೃತ್ಯಗಳಲ್ಲಿ ತೊಡಗುವವರು ಹಾಗೂ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿರುವ ಬಗ್ಗೆ ಸುಳಿವು ಸಿಕ್ಕರೆ ತಕ್ಷಣ ಮಾಹಿತಿ ರವಾನಿಸಬೇಕು. ಅಗತ್ಯಬಿದ್ದರೆ ಮಾಹಿತಿ ವಿನಿಮಯಕ್ಕೂ ಸಹಕರಿಸಬೇಕು ಎಂದು ಅವರು ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬಾಂಗ್ಲಾದವರ ಪೂರ್ವಾಪರ ಸಂಗ್ರಹ
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ರಾಜೀವ್‌ ಜೈನ್‌ ಅವರು ದೇಶ ಸೇರಿದಂತೆ ರಾಜ್ಯದಲ್ಲೂ ಬಾಂಗ್ಲಾ ಅಕ್ರಮ ನುಸುಳುಕೋರರು ನೆಲೆಯೂರದಂತೆ ತಡೆಯಲು ಹಾಗೂ ಈಗಾಗಲೇ ನೆಲೆಸಿರುವ ಪೂರ್ವಪರ ಮಾಹಿತಿ ಸಂಗ್ರಹಿಸಿ ಅದರಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದು, ವ್ಯವಹರಿಸಲು ಸಹಕಾರ ನೀಡುವಂತೆಯೂ ಮನವಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಗರದ ಹೊರವಲಯಗಳು ಹಾಗೂ ರಾಜಧಾನಿಗೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶದಲ್ಲಿ ಗುಂಪು ಗುಂಪಾಗಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರು ಸಣ್ಣ ಪುಟ್ಟ ವ್ಯಾಪಾರ, ಚಿಂದಿ ಆಯುವುದು, ಕೂಲಿ ಕೆಲಸ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಸ್ಥಳೀಯರೊಂದಿಗೆ ವೈವಾಹಿಕ ಸಂಬಂಧವನ್ನೂ ಬೆಳೆಸಿ ಸ್ಥಳೀಯರಂತೆ ಜೀವನ ನಡೆಸಲಾರಂಭಿಸಿದ್ದಾರೆ.

Advertisement

ಇನ್ನೊಂದೆಡೆ ಕೆಲವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಅಪರಾಧ ಚಟುವಟಿಕೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ವಂಚನೆ, ಸುಲಿಗೆ, ಕಳವು ಸೇರಿದಂತೆ ಇತರೆ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಆಂತರಿಕ ಭದ್ರತೆ ಧಕ್ಕೆ ಉಂಟು ಮಾಡುವ ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಜ್ಜಾಗಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಪುಷ್ಠಿ ನೀಡುವಂತೆ ತಿಂಗಳಿನಿಂದೀಚೆಗೆ ಬೆಂಗಳೂರು ಹಾಗೂ ರಾಮನಗರದಲ್ಲಿ ಅಡಗಿಕೊಂಡಿದ್ದ ಇಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದು ಸಹ ಇಂತಹ ಮಾತುಗಳಿಗೆ ಪುಷ್ಠಿ ನೀಡುವಂತಿತ್ತು. ಕೇರಳದಲ್ಲೂ ಕೆಲವರನ್ನು ಭಯೋತ್ಪಾದನಾ ಚಟುವಟಿಕೆ ಆರೋಪದಲ್ಲಿ ಎನ್‌ಐಎ ತಂಡ ಬಂಧಿಸಿದ್ದು, ಅವರಿಗೂ ಕರ್ನಾಟಕ ಮತ್ತು ದೇಶದ ಇತರ ನಗರಗಳ ಸಂಪರ್ಕ ಇರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.ಒಟ್ಟಾರೆ ಕೇಂದ್ರ ಗುಪ್ತಚರ ಇಲಾಖೆಯ ಮುಖ್ಯಸ್ಥರೇ ಖುದ್ದಾಗಿ ರಾಜ್ಯಕ್ಕೆ ಆಗಮಿಸಿ ಗೃಹ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಜತೆಗೆ ರಾಜ್ಯ ಪೊಲೀಸರು ಇನ್ನಷ್ಟು ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಪರೋಕ್ಷ ಸಂದೇಶ ರವಾನಿಸಿದಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್‌ ರಾಜೀವ್‌ ಜೈನ್‌ ಅವರು ಸೌಜನ್ಯದ ಭೇಟಿ ಮಾಡಿದ್ದಾರೆ. ಯಾವುದೇ ಆಡಳಿತಾತ್ಮಕ ವಿಷಯ ಚರ್ಚಿಸಿಲ್ಲ ಎಂದು ಹೇಳಿದರು.

ರಾಜ್ಯದಿಂದ ಮಾಹಿತಿ ಕೋರಿಕೆ
ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚಿನ ಆರೋಪದಲ್ಲಿ ಮಾವೋವಾದಿ ಚಟುವಟಿಕೆ ನಡೆಸುತ್ತಿರುವವರು ಮತ್ತು ನಕ್ಸಲರ ಸಂಪರ್ಕದಲ್ಲಿರುವವರು ಎಂಬ ಆರೋಪದಲ್ಲಿ ಹೈದರಾಬಾದ್‌ನ ಕವಿ ವರವರರಾವ್‌ ಸೇರಿದಂತೆ ಹಲವರನ್ನು ದೇಶದ ಇತರೆಡೆಗಳಲ್ಲಿ ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಗೃಹ ಇಲಾಖೆಯಿಂದಲೂ ಮಾಹಿತಿ ಪಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜೀವ್‌ ಜೈನ್‌ ಅವರು ರಾಜ್ಯದ ಗುಪ್ತಚರ ಇಲಾಖೆ, ಆಂತರಿಕ ಭದ್ರತಾ ವಿಭಾಗ ಸೇರಿದಂತೆ ಇತರ ವಿಭಾಗಗಳ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next