Advertisement

ಸಾಲ ತುಂಬಿದರೂ ನೋಟಿಸ್‌

04:14 PM Jan 22, 2020 | Team Udayavani |

ಗೋಕಾಕ: ಟ್ರ್ಯಾಕ್ಟರ್‌ ಮೇಲೆ ಪಡೆದಿದ್ದ ಸಾಲ ಪಾವತಿಯಾಗಿದ್ದರೂ ಸಾಲ ಬಾಕಿ ಇದೆ ಎಂದು ನೋಟಿಸ್‌ ನೀಡಿದ ಬ್ಯಾಂಕಿನ ಕ್ರಮ ಖಂಡಿಸಿ ರೈತ ಸಂಘದವರು ಬ್ಯಾಂಕಿನ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಸಿಂಡಿಕೇಟ್‌ ಬ್ಯಾಂಕಿನ ಮುಂದೆ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಬ್ಯಾಂಕಿನ ವಿರುದ್ಧ ಘೋಷಣೆ ಕೂಗಿ, ಬ್ಯಾಂಕ್‌ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಶಿ ಗದಾಡಿ ಮಾತನಾಡಿ, ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಹೇಶ ಹೊರಟ್ಟಿ ಎಂಬ ರೈತ 2005ರಲ್ಲಿ ಟ್ರ್ಯಾಕ್ಟರ್‌ ಮೇಲೆ ಸಾಲ ಪಡೆದು ಮರಳಿ ಸಾಲ ಪಾವತಿ ವಿಳಂಬವಾಗಿದ್ದರಿಂದ ಬ್ಯಾಂಕಿನವರು ಟ್ರ್ಯಾಕ್ಟರ್‌ ಹಾಗೂ ಟ್ರೇಲರ್‌ ಜಪ್ತಿ ಮಾಡಿ 2008ರಲ್ಲಿ ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಿ ಸಾಲ ಪಾವತಿಸಿಕೊಂಡು ಬಾಕಿ ಹಣವನ್ನು ರೈತನ ಖಾತೆಗೆ ಜಮೆ ಮಾಡಿದ್ದಾರೆ. ಆದರೆ ಕಳೆದ ಡಿ. 19ರಂದು ರೈತನಿಗೆ ಬಾಕಿ ಸಾಲವಿದ್ದು, ಬೃಹತ್‌ ಸಿಂಡ್‌ ಅದಾಲತ್‌ (ರಿಕವರಿ ಕ್ಯಾಂಪ್‌)ನಲ್ಲಿ ಒಂದೇ ಕಂತಿನ ರಿಯಾಯತಿಯಲ್ಲಿ ತುಂಬಲು ಅನುಕೂಲವಿದೆ ಎಂದು ಬ್ಯಾಂಕಿನವರು ರೈತನಿಗೆ ನೋಟಿಸ್‌ ನೀಡಿದ್ದು ಖಂಡನೀಯವಾಗಿದೆ ಎಂದರು.

ರೈತ ಮಹೇಶ ಹೊರಟ್ಟಿ ಮಾತನಾಡಿ, ಬ್ಯಾಂಕಿನಲ್ಲಿ 4.90 ಲಕ್ಷ ರೂ. ಟ್ರ್ಯಾಕ್ಟರ್‌ ಮೇಲೆ ಸಾಲ ಪಡೆದಿದ್ದೆ, ಬ್ಯಾಂಕಿನವರು ಟ್ರ್ಯಾಕ್ಟರ್‌ ಜತೆ ಟ್ರೇಲರ್‌ ಕೂಡಾ ಜಪ್ತಿ ಮಾಡಿ, 2008ರಲ್ಲಿ ಬಹಿರಂಗ ಹರಾಜಿನಲ್ಲಿ ಟ್ರ್ಯಾಕ್ಟರ್‌ ಮತ್ತು ಟ್ರೇಲರ್‌ ಮಾರಾಟ ಮಾಡಿ ಸಾಲ ತುಂಬಿಕೊಂಡು ಉಳಿದ ಹಣವನ್ನು ನಮ್ಮ ಖಾತೆಗೆ ಜಮಾ ಮಾಡಿದ್ದರು. ಈಗ ನನ್ನ ಹೆಸರಿನಲ್ಲಿ ಸಾಲವಿದೆ ಎಂದು ನೋಟಿಸ್‌ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ಮುಖಂಡರಾದಮಹಾದೇವ ಗೋಡೇರ, ಶಂಕರ ಮದಿಹಳ್ಳಿ, ಪ್ರಕಾಶ ಹಾಲನ್ನವರ, ಶಿವು ಪಾಟೀಲ, ಮುತ್ತೆಪ್ಪ ಮದಿಹಳ್ಳಿ, ಹೊಳೆಪ್ಪ ಉದ್ಯಾಗೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next