Advertisement

ಕಷ್ಟದಲ್ಲಿದ್ದಾಗ ನೋಟು ಮುದ್ರಿಸಬಹುದೇ?

01:15 PM Jun 09, 2021 | |

ಇಡೀ ದೇಶವೇ ಆರ್ಥಿಕ ಸಂಕಷ್ಟದಲ್ಲಿರುವಾಗ ಆರ್‌ಬಿಐ ಅಥವಾ ಕೇಂದ್ರ ಸರಕಾರ ಹೆಚ್ಚು ಹೆಚ್ಚಾಗಿ ನೋಟು ಮುದ್ರಿಸಿ ಚಲಾವಣೆಗೆ ಬಿಡಬಹುದೇ? ಇಂಥದ್ದೊಂದು ಪ್ರಶ್ನೆ ಜನರಲ್ಲಿ ಓಡಾಡುತ್ತಿದೆ. ಹೌದಲ್ಲ ಕಷ್ಟದಲ್ಲಿರುವಾಗ ಸರಕಾರ ಏಕೆ ಯೋಚನೆ ಮಾಡಬೇಕು, ನೋಟು ಮುದ್ರಿಸಬೇಕು, ಜನರಿಗೆ ಕೊಡಬೇಕು. ಆಗ ಎಲ್ಲರ ಕಷ್ಟ ತೀರುತ್ತದೆಯಲ್ಲ ಎಂಬ ಯೋಚನೆಗಳು ಜನರ ಮಧ್ಯೆಯೂ ಓಡಾಡುತ್ತಿವೆ. ಇಂಥದ್ದೇ ಪ್ರಶ್ನೆಯನ್ನು ಇತ್ತೀಚೆಗಷ್ಟೇ ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಹಾಗೂ ಫಿಕ್ಕಿಯ ಅಧ್ಯಕ್ಷ ಉದಯ್‌ ಕೋಟಕ್‌ ಅವರು ಈಗ ನೋಟು ಮುದ್ರಿಸದಿದ್ದರೆ ಮುಂದೆ ಯಾವಾಗ ಎಂಬ ಪ್ರಶ್ನೆಯನ್ನು ಕೇಂದ್ರ ಸರಕಾರಕ್ಕೆ ಕೇಳಿದ್ದರು. ಹಾಗಿದ್ದರೆ, ನೋಟು ಮುದ್ರಣವೆಂದರೆ ಅಷ್ಟು ಸುಲಭವೇ? ಅದರ ಸಾಧಕ-ಬಾಧಕಗಳನ್ನು ಇಲ್ಲಿ ನೋಡೋಣ…

Advertisement

ನೋಟು ಮುದ್ರಣ ಎಂದರೆ ಏನು?
ನೋಟು ಮುದ್ರಣವೆಂದರೆ, ಮೈಸೂರಿನಲ್ಲಿರುವ ಆರ್‌ ಬಿಐ ಪ್ರಸ್‌ಗೆ ಆರ್ಡರ್‌ ಕೊಟ್ಟು ಪ್ರಿಂಟ್‌ ಮಾಡಿಸಿಕೊಳ್ಳುವುದಲ್ಲ. ಸರಕಾರ ಸಾಲದ ದಾರಿಯಲ್ಲದೆ ತೆರಿಗೆ ಮತ್ತು ಸರಕಾರಿ ಸಂಸ್ಥೆಗಳನ್ನು ಆಧಾರವಾಗಿಸಿಕೊಂಡು ಹಣ ಪಡೆಯುವುದು. ಆರ್‌ಬಿಐ ಸರಕಾರದ ಬಾಂಡ್‌ಗಳನ್ನು ಖರೀದಿಸಿ ಹಣ ಸಂಗ್ರಹಿಸುತ್ತಿದೆ. ಇನ್ನೊಂದು ವ್ಯವಸ್ಥೆ ಎಂದರೆ ಸಾಲ ನೀಡುವ ಸಂಸ್ಥೆಗಳಿಂದ ಮತ್ತು ಕಾರ್ಪೋರೆಟ್‌ ಸಂಸ್ಥೆಗಳಿಂದ ಆರ್‌ಬಿಐ ಬಾಂಡ್‌ಗಳ ಖರೀದಿ.

ಕಾನೂನು ಪ್ರಕ್ರಿಯೆ ಹೇಗೆ?
1956ರಲ್ಲಿ ಜಾರಿಗೆ ತಂದ ನಿಯಮ, ಮಿನಿಮಮ್‌ ರಿಸರ್ವ್‌ ಸಿಸ್ಟಮ್‌ (ಕನಿಷ್ಠ ಮೀಸಲು ಪದ್ಧತಿ) ಪ್ರಕಾರ ಆರ್‌ಬಿಐ 200 ಕೋಟಿ ರೂ. ಮೌಲ್ಯದ ಸೊತ್ತು ಭದ್ರತೆಯಾಗಿ ಇರಿಸಬೇಕು. ಈ ಪೈಕಿ 115 ಕೋಟಿ ರೂ. ಮೊತ್ತ ಚಿನ್ನವೇ ಆಗಿರಬೇಕು. ಉಳಿದ 85 ಕೋಟಿ ರೂ. ವಿದೇಶಿ ಕರೆನ್ಸಿ ಮೂಲಕ ಇರಬೇಕು. ದೇಶದ ಅರ್ಥ ವ್ಯವಸ್ಥೆ ಮೇಲೆ ಮತ್ತು ರೂಪಾಯಿ ಮೇಲೆ ಇತರೆ‌ ದೇಶಗಳ ಸರಕಾರಗಳಿಗೆ ವಿಶ್ವಾಸ ವೃದ್ಧಿಯಾಗುವಂತೆ ಮಾಡುವುದು ಈ ಠೇವಣಿಯ ಉದ್ದೇಶ. ಜತೆಗೆ ಸಕ್ರಿಯವಾಗಿ ಕರೆನ್ಸಿ ಪೂರೈಕೆಗೆ ನೆರವಾಗುತ್ತದೆ.

ನಿರ್ಧಾರ ಮಾಡುವವರು ಯಾರು?
ಫಿಕ್ಕಿ, ಅಸೋಚಾಮ್‌ನ ತಜ್ಞರು ಸರಕಾರಕ್ಕೆ ಸಂಕಷ್ಟದ ಸಂದರ್ಭದಲ್ಲಿ ನೋಟು ಮುದ್ರಣ ಸೇರಿದಂತೆ ಹಲವು ಆಯ್ಕೆಗಳನ್ನು ನೀಡುತ್ತಾರೆ. ಕೇಂದ್ರ ವಿತ್ತ ಸಚಿವಾಲಯದ ಅಧಿಕಾರಿಗಳು ಅದರ ಸಾಧಕ-ಬಾಧಕಗಳನ್ನು ಚರ್ಚಿಸಿ ವರದಿ ಸಿದ್ಧಪಡಿಸುತ್ತಾರೆ. ಅದನ್ನು ಮುಖ್ಯ ಆರ್ಥಿಕ ಸಲಹೆಗಾರ ಮತ್ತು ವಿತ್ತ ಸಚಿವಾಲಯ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತದೆ.

ಜನರಿಗೆ ಹಂಚಿಕೆ ಹೇಗೆ?
ಜನರಿಗೆ ನೋಟುಗಳನ್ನು ನೀಡಬೇಕು ಎಂಬ ಸಲಹೆ ಕೇಳಿಬರುತ್ತಿದೆ. ಒಂದಷ್ಟು ಕೋಟಿ ರೂ.ಗಳನ್ನು ಕೇಂದ್ರ ಸ್ಥಾನವೊಂದರಲ್ಲಿ ಕುಳಿತು ಜನರಿಗೆ ವಿತರಿಸುವುದಲ್ಲ. ನೋಟು ಮುದ್ರಿಸಿದ ಬಳಿಕ ಅದು ಆರ್‌ಬಿಐಗೇ ಹೋಗುತ್ತದೆ. ಬ್ಯಾಂಕ್‌ಗಳು ತಮ್ಮ ದಿನವಹಿ ವಹಿವಾಟಿಗೆ ಅಗತ್ಯವಾಗಿರುವ ಮೊತ್ತದ ಜತೆಗೆ ಸರಕಾರಿ ಯೋಜನೆಗಳ ಫ‌ಲಾನುಭವಿಗಳಿಗೆ ನೀಡುವ ಸಹಾಯಧನದ ಲೆಕ್ಕಾಚಾರ ಸೇರಿ ಆರ್‌ಬಿಐಗೆ ಇಂತಿಷ್ಟು ಮೊತ್ತ ವಹಿವಾಟಿಗೆ ಅಗತ್ಯವಾಗಿದೆ ಎಂದು ಕೋರಿಕೆ ಸಲ್ಲಿಸಬೇಕಾಗುತ್ತದೆ. ಅದರ ಆಧಾರದ ಮೇಲೆ ಬ್ಯಾಂಕ್‌ಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಉದಾಹರಣೆಗೆ ಹೇಳುವುದಿದ್ದರೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚು ಮೊತ್ತವನ್ನು ಮೀಸಲಾಗಿ ಇರಿಸುವುದು. ಮೂಲಸೌಕರ್ಯಗಳ ನಿರ್ಮಾಣ, ವಿವಿಧ ಕಲ್ಯಾಣ ಯೋಜನೆಗಳ ಫ‌ಲಾನುಭವಿಗಳಿಗೆ ಅವರ ಬ್ಯಾಂಕ್‌ ಖಾತೆಗಳಿಗೆ ನಿಗದಿತ ಮೊತ್ತ ವರ್ಗಾವಣೆ ಮಾಡಲಾಗುತ್ತದೆ.

Advertisement

ಹೆಲಿಕಾಪ್ಟರ್‌ ಮೂಲಕ ದುಡ್ಡು ವಿತರಿಸಲಾಗುತ್ತದೆಯೇ?
ಇದೊಂದು ಕಲ್ಪನೆ ಮಾತ್ರ. ಹಿನ್ನಡೆಗೆ ಒಳಗಾಗಿರುವ ಅರ್ಥ ವ್ಯವಸ್ಥೆಯನ್ನು ಯಥಾಸ್ಥಿತಿಗೆ ತರಲು ಜಾರಿಗೆ ತರುವ ಆರ್ಥಿಕ ಪ್ರೋತ್ಸಾಹ ಯೋಜನೆಗಳು, ನೋಟು ಮುದ್ರಿಸಿ ಅದನ್ನು ವಿವಿಧ ಯೋಜನೆಗಳ ಮೂಲಕ ವಿತರಿಸುವುದಕ್ಕೆ “ಹೆಲಿಕಾಪ್ಟರ್‌ ಮನಿ’ ಎನ್ನುತ್ತಾರೆ. ಅರ್ಥಶಾಸ್ತ್ರಕ್ಕಾಗಿ 1976ರಲ್ಲಿ ನೊಬೆಲ್‌ ಪ್ರಶಸ್ತಿ ಗಳಿಸಿದ್ದ ಅಮೆರಿಕದ ಮಿಲ್ಟನ್‌ ಫ್ರಿಡ್‌ಮ್ಯಾನ್‌ ಈ ಒಂದು ಕಲ್ಪನೆಯನ್ನು ಪ್ರಸ್ತಾವಿಸಿದ್ದರು. ಹೆಲಿಕಾಪ್ಟರ್‌ ಮೂಲಕ ಹಣ ಸುರಿಯುವಂತೆ ಸಂಕಷ್ಟಕ್ಕೆ ಒಳಗಾಗಿರುವ ಅರ್ಥವ್ಯವಸ್ಥೆಯ ಚೇತರಿಕೆಗೆ ಆರ್‌ಬಿಐ ಬೃಹತ್‌ ವಿತ್ತೀಯ ನೆರವು ನೀಡುವುದಕ್ಕೆ ಈ ಹೆಸರು ನೀಡಲಾಗಿದೆ. ಫ‌ಲಾನುಭವಿಗಳಿಗೆ ಸರಕಾರದ ಯೋಜನೆಗಳ ಮೂಲಕ ಸಹಾಯಧನವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಕೂಡ ವರ್ಗಾಯಿಸಬಹುದಾಗಿದೆ.

ದೇಶದಲ್ಲಿ ಇಂಥ ಪ್ರಯತ್ನ ನಡೆದಿತ್ತೇ?
1980ರಿಂದ 1990ರ ದಶಕದ ಆರಂಭದವರೆಗೆ ಆರ್‌ಬಿಐ ಸರಕಾರಕ್ಕೆ ಸಾಲ ನೀಡುತ್ತಿತ್ತು (ಡೆಟ್‌ ಮಾನಿಟೈಸೇಶನ್‌ ). ಸರಕಾರದ ವಿತ್ತೀಯ ಕೊರತೆಯನ್ನು ತಾತ್ಕಾಲಿಕ ವಿತ್ತೀಯ ನೆರವು (ಆ್ಯಡ್‌ಹಾಕ್‌ ಟ್ರೆಶರಿ) ಮೂಲಕವೇ ನಿಭಾಯಿಸಲಾಗುತ್ತಿತ್ತು. ಅಂದರೆ ಬಹಳ ಸುಲಭದಲ್ಲಿ ಅರ್ಥವಾಗುವಂತೆ ಹೇಳುವುದಾದರೆ ಸರಕಾರದ ಪರವಾಗಿ ನಿಗದಿತ ಇಲಾಖೆ, ಸಂಸ್ಥೆಗೆ ಹಣಪಾವತಿ ಮಾಡುವುದಿದ್ದರೆ ಆರ್‌ಬಿಐ ಮೂಲ ಕವೇ ಮಾಡಲಾಗುತ್ತಿತ್ತು. 1994ರಲ್ಲಿ ಭಾರತ ಸರಕಾರ, ಆರ್‌ಬಿಐ ನಡುವೆ ನಡೆದ ಒಪ್ಪಂದದ ಪ್ರಕಾರ 1997ರ ಬಳಿಕ ಸರಕಾರದ ಪಾವತಿ ಗಳನ್ನು ಇಂಥ ವ್ಯವಸ್ಥೆ ತಡೆಯಲು ತೀರ್ಮಾನಿಸಲಾಯಿತು. ಆದರೆ ಇದೇ ವ್ಯವಸ್ಥೆ ಮತ್ತೂಂದು ರೀತಿಯಲ್ಲಿ ಮುಂದುವರಿಯಿತು. ಆರ್‌ಬಿಐ ಹೆಚ್ಚು ಆದ್ಯತೆಯಲ್ಲದ ವಲಯಗಳ ಮೇಲಿನ ಸಾಲ ಹರಾಜು ಹಾಕುವ ಮಾರ್ಗವನ್ನು ಅಂಗೀ ಕರಿಸಿತು. ಇಂಥ ವಿತ್ತೀಯ ಅಶಿಸ್ತು ತಡೆಯುವ ನಿಟ್ಟಿನಲ್ಲಿ ಮತ್ತು ಸರಕಾರದ ಆದಾಯ ಮತ್ತು ಖರ್ಚಿನ ನಡುವಿನ ಕೊರತೆ ತಪ್ಪಿಸುವ ನಿಟ್ಟಿನಲ್ಲಿ 2003ನೇ ಇಸವಿಯಲ್ಲಿ ವಿತ್ತೀಯ ಹೊಣೆಗಾರಿಕೆ ಮತ್ತು ಮುಂಗಡ ಪತ್ರ ನಿರ್ವಹಣ ಕಾಯ್ದೆ (ಎಫ್ಆರ್‌ಬಿಎಂ ಕಾಯ್ದೆ) ಜಾರಿಗೆ ತರಲಾಯಿತು. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ದೇಶ ಹೆಚ್ಚು ಸದೃಢವಾಗಲು ಮತ್ತು ಆರ್‌ಬಿಐಗೆ ಹಣದುಬ್ಬರ ನಿಯಂತ್ರಿಸಲು ಕ್ರಮ ಕೈಗೊಳ್ಳಲು ಈ ಕಾಯ್ದೆಯ ಅಡಿಯಲ್ಲಿ ಹೆಚ್ಚಿನ ಅಧಿಕಾರ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next