Advertisement

ಆಡಳಿತ ಪಕ್ಷದಲ್ಲಿ ನಿಲ್ಲದ ಪದಾಧಿಕಾರಿ ತಿಕ್ಕಾಟ

05:40 PM Mar 24, 2019 | |

ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಪ್ರಮುಖ ಪಾಲುದಾರ ಪಕ್ಷ ಜೆಡಿಎಸ್‌ನಲ್ಲಿ ಭಿನ್ನಮತ ಮತ್ತೆ ಬಹಿರಂಗಗೊಂಡಿದೆ. ಪಕ್ಷದ ರಾಜ್ಯಾಧ್ಯಕ್ಷರ ಆದೇಶವನ್ನೂ ಮೀರಿಸಿ, ರಾಷ್ಟ್ರೀಯ ಅಧ್ಯಕ್ಷರ ಆದೇಶ ಮಾಡಿಸಿಕೊಂಡು ಬರುವ ಪ್ರಭುತ್ವದ ಪದಾಧಿಕಾರಿಗಳು ಪಕ್ಷದಲ್ಲಿದ್ದು, ಇದು ಕಾರ್ಯಕರ್ತರಲ್ಲಿ ತೀವ್ರ ಗೊಂದಲ ಮೂಡಿಸಿದೆ.

Advertisement

ಹೌದು, 10 ವರ್ಷಗಳ ಬಳಿಕ ಸ್ವಂತ ಬಲ ಇಲ್ಲದಿದ್ದರೂ ಪಾಲುದಾರ ಪಕ್ಷವಾಗಿ ಆಡಳಿತಕ್ಕೆ ಬಂದಿರುವ ಜೆಡಿಎಸ್‌ನ ಜಿಲ್ಲಾ ಪದಾಧಿಕಾರಿಗಳಲ್ಲೇ ತಿಕ್ಕಾಟ ಮುಂದುವರಿದಿದೆ. ಜಿಲ್ಲಾ ವಕ್ತಾರರ ಬದಲಾವಣೆ ವಿಷಯದಲ್ಲಿ ಆರಂಭಗೊಂಡ ಈ ಭಿನ್ನಮತ, ಇಡೀ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ನಿರುತ್ಸಾಹ ಮಾಡುವ ಪ್ರಕ್ರಿಯೆಗಳು ನಡೆದಿವೆ ಎಂಬ ಆಕ್ರೋಶ ಕಾರ್ಯಕರ್ತರಲ್ಲಿ ಮೂಡಿದೆ.

ದೇವೇಗೌಡ-ವಿಶ್ವನಾಥ ಪ್ರತ್ಯೇಕ ಆದೇಶ: ಜೆಡಿಎಸ್‌ ಜಿಲ್ಲಾ ವಕ್ತಾರ ರಮೇಶ ಬದ್ನೂರ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಜತೆಗೆ, ಜಿಲ್ಲಾ ವಕ್ತಾರ ಹುದ್ದೆಯಿಂದ ವಜಾಗೊಳಿಸಿರುವ ಪ್ರಕರಣ, ಇದೀಗ ದೇವೇಗೌಡರ ಅಂಗಳಕ್ಕೂ ತಲುಪಿದ್ದು, ಪಕ್ಷದ ಜಿಲ್ಲಾ ಅಧ್ಯಕ್ಷರನ್ನೇ ಬದಿಗಿಡುವ ಪ್ರಯತ್ನಗಳೂ ನಡೆದಿವೆ ಎಂಬ ಮಾತು ಜೆಡಿಎಸ್‌ ಪಕ್ಷದಲ್ಲಿ ಕೇಳಿ ಬರುತ್ತಿವೆ.

ಪಕ್ಷದ ಆಂತರಿಕ ವಿಷಯಗಳ ಬಹಿರಂಗ, ಜಿಲ್ಲಾ ಅಧ್ಯಕ್ಷರ ವಿರುದ್ಧ ಅಪಪ್ರಚಾರದ ಆರೋಪದ ಮೇಲೆ ಪಕ್ಷದ ಜಿಲ್ಲಾ ವಕ್ತಾರರಾಗಿದ್ದ ರಮೇಶ ಬದ್ನೂರ ಅವರನ್ನು ಹುದ್ದೆಯಿಂದ ವಜಾಗೊಳಿಸುವ ಜತೆಗೆ ಪಕ್ಷದಿಂದಲೇ ಉಚ್ಛಾಟನೆ ಮಾಡಲಾಗಿತ್ತು. ಜಿಲ್ಲಾ ಅಧ್ಯಕ್ಷರ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ಬದ್ನೂರ, ಜೆಡಿಎಸ್‌ ಪಕ್ಷದಲ್ಲಿ ಕಳೆದ ಹಲವು ತಿಂಗಳಿಂದ ನಡೆದ ಎಲ್ಲ ವಿದ್ಯಮಾನಗಳನ್ನು ಮಾಧ್ಯಮಗಳ ಮೂಲಕ ಬಹಿರಂಗಗೊಳಿಸಿದ್ದರು. ಜತೆಗೆ ಸ್ವತಃ ಪಕ್ಷದ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ ಅವರ ಬಳಿಗೆ ಹೋಗಿ, ತಮ್ಮ ಉಚ್ಛಾಟನೆ ಮತ್ತು ವಕ್ತಾರ ಹುದ್ದೆಯಿಂದ ವಾಜಗೊಳಿಸಿದ್ದ ಆದೇಶ ರದ್ದುಪಡಿಸಿ, ಜಿಲ್ಲಾ ವಕ್ತಾರ ಹುದ್ದೆಯಲ್ಲಿ ಮುಂದುವರಿಯುವ ಆದೇಶವನ್ನು ರಾಜ್ಯಾಧ್ಯಕ್ಷರಿಂದ ಮಾಡಿಸಿಕೊಂಡು ಬಂದಿದ್ದರು. ಇದೀಗ, ಬದ್ನೂರ ಅವರನ್ನು ಮುಂದುವರಿಸುವ ಆದೇಶ ಹೊರಡಿಸಿದ್ದ ವಿಶ್ವನಾಥ ಅವರ ಆದೇಶಕ್ಕೂ ಒಂದು ದಿನದ ಮುಂಚಿನ ದಿನಾಂಕ ನಮೂದಿಸಿ, ರಾಷ್ಟ್ರೀಯ ಅಧ್ಯಕ್ಷರು ಮತ್ತೊಂದು ಆದೇಶ ಹೊರಡಿಸಿದ್ದಾರೆ. ಬದೂ°ರ ಅವರನ್ನು ವಕ್ತಾರ ಹುದ್ದೆಯಿಂದ ತೆಗೆದು, ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಮುಂದುವರಿಯಬೇಕು. ವಕ್ತಾರರ ಹುದ್ದೆಗೆ ಮುಧೋಳದ ಪರಾಜಿತ ಅಭ್ಯರ್ಥಿ ಶಂಕರ ನಾಯಕ ಅವರನ್ನು ನೇಮಕ, ದೇವೇಗೌಡರು ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ.

ಕೇವಲ ಒಂದು ವಾರದಲ್ಲಿ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯ ಕಾರ್ಯಾಧ್ಯಕ್ಷರು ಪ್ರತ್ಯೇಕ ಆದೇಶಗಳನ್ನು ಹೊರಡಿಸಿ, ಜಿಲ್ಲಾ ಮಟ್ಟದಲ್ಲಿದ್ದ ಭಿನ್ನಮತ ಮತ್ತು ಗೊಂದಲವನ್ನು ಮತ್ತಷ್ಟು ಜಟಿಲಗೊಳಿಸಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ ಎಂಬ ಮಾತು ಕೇಳಿ ಬರುತ್ತಿದೆ.

Advertisement

ಕಾಣದ ಒಗ್ಗಟ್ಟು: ಜಿಲ್ಲೆಯ ಮಟ್ಟಿಗೆ ಜೆಡಿಎಸ್‌ ಅಷ್ಟೊಂದು ಪ್ರಬಲವಾಗಿಲ್ಲ. ಆದರೆ, ಕಳೆದ ವಿಧಾನಸಭೆ ಚುನಾವಣೆ ವೇಳೆ, ತೇರದಾಳ, ಬಾದಾಮಿ, ಹುನಗುಂದ ಕ್ಷೇತ್ರದಲ್ಲಿ ಐದಂಕಿಯ ಮತಗಳನ್ನು ಪಕ್ಷದ ಅಭ್ಯರ್ಥಿಗಳು ಪಡೆದಿದ್ದರು. ಗುತ್ತಿಗೆದಾರರೂ ಆಗಿರುವ ಖ್ಯಾತ ಉದ್ಯಮಿ ಎಸ್‌.ಆರ್‌. ನವಲಿಹಿರೇಮಠ ಅವರನ್ನು (ಹುನಗುಂದ ಅಭ್ಯರ್ಥಿಯಾಗಿದ್ದರು) ಪಕ್ಷದ ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಿದ ಬಳಿಕ ಪಕ್ಷಕ್ಕೆ ಬಲ ಬರಲಿದೆ ಎಂಬ ವಿಶ್ವಾಸ ಕಾರ್ಯಕರ್ತರಲ್ಲಿತ್ತು. ಆದರೆ, ಪಕ್ಷದ ಜಿಲ್ಲಾ ಕಚೇರಿ ನವೀಕರಣಕ್ಕೆ ಸಂಘಟನೆ ಸೀಮಿತವಾಯಿತು ಎಂಬ ಅಸಮಾಧಾನ ಕೆಲವರಲ್ಲಿದೆ.

ಸದ್ಯ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯ ಪರವಾಗಿ ಪ್ರಬಲ ಪೈಪೋಟಿ ನೀಡುವ ಹೊಣೆ ಎರಡೂ ಪಕ್ಷಗಳಲ್ಲಿದೆ. ಆದರೆ, ಪಕ್ಷಕ್ಕೆ ಅಷ್ಟೊಂದು ಬಲ ಇಲ್ಲದಿದ್ದರೂ, ಪದಾಧಿಕಾರಿಗಳಲ್ಲೇ ತೀವ್ರ ಗೊಂದಲ, ಭಿನ್ನಮತ, ತಮಗೆ ಬೇಕಾದಂತೆ, ರಾಜ್ಯ ಅಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರಿಂದ ಆದೇಶ ಮಾಡಿಸಿಕೊಂಡು ಬರುವ ಪ್ರವೃತ್ತಿಯಿಂದ ಪಕ್ಷಕ್ಕೆ ಮುಜುಗರವಾಗುತ್ತಿರುವುದು ದಿಟ ಎಂಬ ಮಾತು
ಜೆಡಿಎಸ್‌ನಲ್ಲಿ ಕೇಳಿ ಬರುತ್ತಿದೆ.

ದಾರಿ ತಪ್ಪಿಸುವ ಪ್ರಕಟಣೆ
ಜೆಡಿಎಸ್‌ನಿಂದ ಈಚಿನ ದಿನಗಳಲ್ಲಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡುತ್ತಿದ್ದು, ಕಾರ್ಯಕರ್ತರಷ್ಟೇ ಅಲ್ಲದೇ ಮಾಧ್ಯಮಗಳ ದಾರಿ ತಪ್ಪಿಸುವ ಪರಂಪರೆ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ರಾಷ್ಟ್ರ-ಅಂತಾರಾಷ್ಟ್ರೀಯ ದಿನಾಚರಣೆಗಳು, ಮಹಾನ್‌ ನಾಯಕರ ಜಯಂತಿಗಳನ್ನು ಜೆಡಿಎಸ್‌ ಪಕ್ಷದಲ್ಲಿ ಆಚರಿಸಿದ್ದ ಹೇಳಿಕೆ ಬಿಡುಗಡೆ ಮಾಡುತ್ತಿದ್ದು, ಆ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರುವವರು ಭಾಷಣ ಮಾಡಿದರು ಎಂಬ ಪ್ರಕಟಣೆ ಹೊರಡಿಸಲಾಗುತ್ತಿದೆ. ಜೆಡಿಎಸ್‌ನ ಈ ಪ್ರಕಟಣೆಯನ್ನೇ ವಿಶ್ವಾಸಾರ್ಹದಿಂದ ಪ್ರಕಟಿಸಿದ ಮರುದಿನ, ಕಾರ್ಯಕ್ರಮಕ್ಕೆ ಬಾರದವರ ಹೆಸರೂ ಹಾಕಿದ್ದೀರಿ ಎಂಬ ದೂಷಣೆ ಸ್ವತಃ ಜೆಡಿಎಸ್‌ನವರು ಮಾಡುತ್ತಿದ್ದಾರೆ. ಇದು ಜೆಡಿಎಸ್‌ನ ಸುದ್ದಿಗಳನ್ನು ಸಂಶಯದಿಂದ ನೋಡುವಂತೆ ಮಾಡುತ್ತಿದೆ ಎನ್ನಲಾಗಿದೆ.

ನಾಯಕ: ಜಿಲ್ಲಾ ವಕ್ತಾರ
ಬಾಗಲಕೋಟೆ:
ಜೆಡಿಎಸ್‌ ಜಿಲ್ಲಾ ವಕ್ತಾರ ಹುದ್ದೆಯಿಂದ ರಮೇಶ ಬದ್ನೂರ ಅವರನ್ನು ವಜಾಗೊಳಿಸಿ, ಆ ಸ್ಥಾನಕ್ಕೆ ಮುಧೋಳದ ಶಂಕರ ನಾಯಕ ಅವರನ್ನು ನೇಮಕ ಮಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಆದೇಶ ಹೊರಡಿಸಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಎಸ್‌. ಆರ್‌. ನವಲಿಹಿರೇಮಠ ತಿಳಿಸಿದ್ದಾರೆ. ರಮೇಶ ಬದ್ನೂರ ಅವರು, ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ, ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸತಕ್ಕದ್ದು. ಅಲ್ಲದೇ ಗುಡುಸಾಬ ಇಬ್ರಾಹಿಂಸಾಬ ಹೊನವಾಡ (ಹ್ಯಾಳಕರ) ಅವರನ್ನು ಪಕ್ಷದ ಜಮಖಂಡಿ ತಾಲೂಕು ಘಟಕದ ನೂತನ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಆ ಸ್ಥಾನಕ್ಕೆ ಚನ್ನಬಸಪ್ಪ ಪರಪ್ಪ ಕತಾಟೆ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ನವಲಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next