Advertisement

ಗತವನ್ನಷ್ಟೇ ಅಲ್ಲ , ವರ್ತಮಾನವನ್ನಷ್ಟೇ ಅಲ್ಲ, ಕತೆಗಳು ಭವಿಷ್ಯವನ್ನೂ ನುಡಿಯುತ್ತವೆ!

10:19 AM Feb 24, 2020 | mahesh |

ಚೀನಾದಲ್ಲಿನ ವೈರಸ್‌ ಅಧ್ವಾನ ಪ್ರಕೃತಿಯ ಕೊಡುಗೆಯೆ, ಮನುಷ್ಯ ಕೃತವೆ- ಎಂಬ ಚರ್ಚೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಇಂಥಾದ್ದೊಂದು ದುರಂತ ಸಂಭವಿಸಲಿದೆ ಎಂದು ಕೆಲವು ಕತೆಗಾರರು ಮೊದಲೇ ಊಹಿಸಿದ್ದರು! ದಶಕಗಳ ಹಿಂದೆಯೇ ಪ್ರಕಟವಾದ ಕೆಲವು ಕಾದಂಬರಿ, ಸಿನೆಮಾಗಳಲ್ಲಿರುವ ಭಾಗಗಳಲ್ಲಿ ಇಂಥ ದುರಂತ ಭವಿಷ್ಯದ ಮುಂಗಾಣ್ಕೆಯಿರುವುದು ಸೋಜಿಗದ ಸಂಗತಿ.

Advertisement

ಚೀನಾದಲ್ಲಿ ಕರೊನಾ ವೈರಾಣುವಿನ ಬಾಧೆೆ ಮತ್ತು ಅವಾಂತರ ಪ್ರಾರಂಭವಾದಂದಿನಿಂದ ನನಗೆ ಹಲವು ಓದುಗರು ಕರೆಮಾಡಿ ಆಶ್ಚರ್ಯ ತೋಡಿಕೊಂಡಿದ್ದಾರೆ, “ಸರ್‌, ನಿಮ್ಮ ಮೂಕಧಾತು ಕಾದಂಬರಿಯಲ್ಲಿ ಚೀನಾದ ಆಡಳಿತ ವ್ಯವಸ್ಥೆ ಹಾಕಿಕೊಂಡ ರಹಸ್ಯ ಯೋಜನೆಗೂ ಈಗಿನ ಕರೊನಾ ವೈರಸ್‌ನ ಸೋರಿಕೆಯ ಸುದ್ದಿಗೂ ಅದೆಷ್ಟು ಹೋಲಿಕೆ ಇದೆಯಲ್ಲ!’ ಅಥವಾ “ನಿಮ್ಮ ಮೂಕಧಾತು ಕಾದಂಬರಿಯ ವಿವರಗಳು ಚೀನಾದ ಆಡಳಿತ ವ್ಯವಸ್ಥೆಯ ರಹಸ್ಯ ಕಾರ್ಯಾಚರಣೆಯ ಬಗ್ಗೆ ಭವಿಷ್ಯ ನುಡಿದಂತಿದೆ’ …ಹೀಗೆ.

ಇದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ ಎಂದು ನನ್ನ ಭಾವನೆ. ಕಾರಣ, ವೈಜ್ಞಾನಿಕ ಕಾದಂಬರಿಗಳು ಮುಂದಾಗಬಹುದಾದ ಅವಾಂತರಗಳ ಅಥವಾ ಅವಿಷ್ಕಾರಗಳ ಬಗ್ಗೆ ಭವಿಷ್ಯ ನುಡಿದಂತೆ ರಚಿತಗೊಂಡಿರುವುದಕ್ಕೆ ಅನೇಕ ಉದಾಹರಣೆಗಳಿವೆ ! ಅವುಗಳ ಬಗ್ಗೆ ಚರ್ಚಿಸುವ ಮುನ್ನ, ಮೂಕಧಾತು ಕಾದಂಬರಿಯಲ್ಲಿ ನಾನು ಕಟ್ಟಿಕೊಟ್ಟಿರುವ ಕಥಾಹಂದರ ಹಾಗೂ ಚೀನಾದ ಇಂದಿನ ಆಗುಹೋಗುಗಳ ಬಗ್ಗೆ ಒಂದೆರಡು ಮಾತು- ಜಗತ್ತಿನ ಎಲ್ಲ ಜೀವಿಗಳಲ್ಲೂ ಹುದುಗಿ ಕುಳಿತಿರುವ ಸ್ವಾರ್ಥವೇ ನನ್ನ ಮೂಕಧಾತು ಕಾದಂಬರಿಯ ಮೂಲ ವಸ್ತು. ಆ ಸ್ವಾರ್ಥ ಇಲ್ಲವಾದಲ್ಲಿ ಇಡೀ ಜೀವಜಗತ್ತೇ ಉಳಿದು ವಿಕಾಸಗೊಳ್ಳುತ್ತಿರಲಿಲ್ಲ ಎನ್ನಬಹುದು. ಆ ಸ್ವಾರ್ಥ ಗುಣವೇ ನಮ್ಮಲ್ಲಿ “ಈಸಬೇಕು, ಬದುಕಿನ ಎಲ್ಲ ಅಡೆತಡೆಗಳನ್ನೂ ಗೆಲ್ಲಬೇಕು, ಗೆದ್ದು ಪುನರಾಭಿವೃದ್ದಿ ಮಾಡಲೇಬೇಕು, ಆನಂತರವೇ ಈ ಜೀವದಿಂದ ಮುಕ್ತಿ ಹೊಂದಬೇಕು’ ಎಂಬ ಅದೃಶ್ಯ ತುಡಿತವನ್ನು ಹುಟ್ಟುಹಾಕಿರುವುದು. ಒಂದು ರೀತಿಯಲ್ಲಿ ಜೀವಜಗತ್ತಿನ ಪುಳಕವಿರುವುದೇ ಈ ಸ್ವಾರ್ಥಗುಣದ ಪರಿಣಾಮವಾಗಿ. ಅದಿಲ್ಲದಿದ್ದಲ್ಲಿ ಪ್ರೇಮವಿಲ್ಲ, ಕಾಮವಿಲ್ಲ, ಮಕ್ಕಳನ್ನು ಸಾಕಬೇಕೆನ್ನುವ ತುಡಿತವೂ ಇರುವುದಿಲ್ಲ.

ಆ ಸ್ವಾರ್ಥವಿಲ್ಲದಿದ್ದಲ್ಲಿ ಯಾವ ಜೀವಿಯೂ ತನ್ನ ಸಂತತಿಯನ್ನು ಸಾಕಿ ಬೆಳೆಸುವ ಗೋಜಿಗೆ ಹೋಗುತ್ತಿರಲಿಲ್ಲ. ಇದು ಎಲ್ಲ ಜೀವಿಗಳ ಸತ್ಯ. ಆದರೆ, ಮಾನವರಲ್ಲಂತೂ ಈ ಸ್ವಾರ್ಥವು ಅತಿರೇಕಕ್ಕೆ ಹೋಗಿದೆ. ನಮ್ಮ ಆವಶ್ಯಕತೆಗೂ ಮೀರಿ ಸಂಪತ್ತನ್ನು ಶೇಖರಿಸುವ ಆಮಿಷಕ್ಕೆ ಬಲಿಯಾಗಿ, ಅದಕ್ಕಾಗಿ ಹಲವು ರೀತಿಯ ದುರ್ಗುಣಗಳನ್ನೂ, ಅಪರಾಧ ಗುಣಗಳನ್ನೂ ಬೆಳೆಸಿಕೊಂಡಿದ್ದೇವೆ. ವಿಚಿತ್ರವೆಂದರೆ ಈ ಸ್ವಾರ್ಥಗುಣ ನಮ್ಮಲ್ಲಿ ನೆಲೆಗೊಳ್ಳಲು ಸಾಧ್ಯವಾಗಿರುವುದು ಪ್ರತಿ ಜೀವಕೋಶದಲ್ಲೂ ಅಡಗಿ ಕುಳಿತಿರುವ ವಿಶಿಷ್ಟ ಧಾತುಗಳಿಂದ ! ಮೂಕವಾಗಿ ನಮ್ಮೊಳಗೇ ಕುಳಿತು, ನಮ್ಮೆಲ್ಲ ಆಸೆ, ಆಮಿಷಗಳಿಗೆ ಕಾರಣವಾಗಿ ನಮ್ಮ ನಡೆ-ನುಡಿಗಳನ್ನು ರೂಪಿಸುತ್ತಿರುವ ಈ ಸ್ವಾರ್ಥಧಾತುಗಳನ್ನು ನಿಜಕ್ಕೂ ಮೂಕವಾಗಿಸಿದರೆ? ಅಥವಾ ಅವನ್ನು ನಿಷ್ಕ್ರಿಯಗೊಳಿಸಿದರೆ? ಆಗ ಎಲ್ಲ ಮಾನವರೂ ಸ್ವಾರ್ಥವನ್ನು ತೊರೆದು ಆಸ್ತಿ ಮಾಡುವ ಗೋಜಿಗೆ ಹೋಗದೆ ನಿರ್ವಾಣ ಹೊಂದಿದವರಂತೆ ಪ್ರಾಣಿಗಳಾಗುತ್ತಾರೆ.

ಚೀನಾ ದೇಶದ ಆಡಳಿತ ವ್ಯವಸ್ಥೆಯ ಉನ್ನತ ಮಟ್ಟದಲ್ಲಿರುವ ಕೆಲವು ಅಧಿಕಾರಿಗಳು ಅಂಥ ರಹಸ್ಯ ಯೋಜನೆಯೊಂದನ್ನು ಕೈಗೆತ್ತಿಕೊಳ್ಳುತ್ತಾರೆ! ಆನುವಂಶಿಕವಾಗಿ ಬದಲಾಯಿಸಿದ ವೈರಾಣುಗಳನ್ನು ಅಗಾಧವಾಗಿ ಉತ್ಪತ್ತಿ ಮಾಡಿ, ಅವನ್ನು ನಭೋಮಂಡಲದಲ್ಲಿ ಸುರಿದು, ಪ್ರಪಂಚದಾದ್ಯಂತ ಸಿಂಪಡಿಸುವುದರಿಂದ ಅವು ಇಡೀ ಮಾನವಕುಲದಲ್ಲಿ ಸೋಂಕು ರೋಗದಂತೆ ಹರಡಿಸಿ, ಅವರಲ್ಲಿನ ಸ್ವಾರ್ಥ ಧಾತುಗಳನ್ನು ನಿಷ್ಕ್ರಿಯಗೊಳಿಸುವಂತಹ ಯೋಜನೆಯನ್ನು ರೂಪಿಸಿರುತ್ತಾರೆ. ಅದರಿಂದಾಗಿ ಇಡೀ ಮಾನವಕುಲ (ಮತ್ತು ಅವರ ಸಂತತಿ) ನಿಸ್ವಾರ್ಥಿಗಳಾಗಿ, ಯಾವುದೇ ಆಸೆ-ಆಕಾಂಕ್ಷೆಗಳಿಲ್ಲದ ಪ್ರಾಣಿಗಳಂತೆ ಪರಿವರ್ತನೆಗೊಳ್ಳುತ್ತಾರೆ. ಈ ಸೋಂಕಿನಿಂದ ತಪ್ಪಿಸಿಕೊಂಡ ಚೀನಾದ ಆಡಳಿತ ವರ್ಗದ ಕೆಲವರು ಮಾತ್ರವೇ ಆರೋಗ್ಯವಂತರಾಗಿ ಉಳಿದುಕೊಂಡು, ಇಡೀ ಪ್ರಪಂಚಕ್ಕೆ ಚಕ್ರವರ್ತಿಗಳಾಗಿ ಮೆರೆಯುವ ಆಸೆ ಅವರ¨ªಾಗಿರುತ್ತದೆ. ಮೂಕಧಾತುವಿನಲ್ಲಿ ಸೂಚಿತಗೊಂಡಿರುವ ವೈರಾಣುಗಳಿಗೂ ಕರೋನ ವೈರಸ್‌ಗೂ ಇರುವ ಗುಣಗಳ ಹೋಲಿಕೆಯಿಂದಾಗಿ ಹಾಗೂ ಚೀನಾದ ಆಡಳಿತ ವ್ಯವಸ್ಥೆ ಕರೋನಾ ವೈರಸ್‌ ಬಗ್ಗೆ ಕಾಪಾಡಿಕೊಳ್ಳುತ್ತಿರುವ ರಹಸ್ಯ ಮಾಹಿತಿಯಿಂದಾಗಿ, ಹಲವಾರು ಓದುಗರಿಗೆ ಆ ಕಾದಂಬರಿಯಲ್ಲಿನ ವಿವರಗಳು ಅಚ್ಚರಿಯಾಗಿ ಕಂಡಿರಲು ಸಾಧ್ಯ.

Advertisement

ಆದರೆ, ಈ ಹೋಲಿಕೆಗಳಿಗೆ ಆಶ್ಚರ್ಯ ಪಡಬೇಕಿಲ್ಲ. ಕಾರಣ, ವೈಜ್ಞಾನಿಕ ಕಥಾನಕಗಳ ಹಾದಿಯೇ ಹಾಗೆ !

ಭವಿಷ್ಯ ನುಡಿದ ಕಥೆಗಾರರು
ಮಾರ್ಕ್‌ ಟ್ವನ್‌, ತನ್ನ ಸಣ್ಣ ಕಥೆಯೊಂದರಲ್ಲಿ (From London Times of 1904) ಈಗಿನ ಇಂಟರ್ನೆಟ್‌ ಅಷ್ಟೆ ಅಲ್ಲದೆ googleನಂತಹ ಅವಿಷ್ಕಾರವನ್ನೂ 19ನೆಯ ಶತಮಾನದ ಮೊದಲ ದಶಕದಲ್ಲಿಯೇ ಸೂಚಿಸಿದ್ದ! ಆ ಕತೆಯಲ್ಲಿ ಮಾರ್ಕ್‌ ಟ್ವೇನ್‌ ಹೀಗೆ ಬರೆದಿದ್ದಾನೆ-
The improved ‘limitless & distance’ telephone was presently introduced, and the daily doings of the globe made visible to everybody, and audibly discussable too, by witnesses separated by any number of leagues. ಅಂದರೆ, ಅಂತರ್ಜಾಲ ಬರುವುದಕ್ಕೂ ಮುನ್ನ ಸುಮಾರು 70 ವರ್ಷಗಳ ಹಿಂದೆಯೇ ಆತ ಅದರ ಭವಿಷ್ಯ ನುಡಿದಿದ್ದ. 1899ರಲ್ಲಿಯೇ H. G. Wells, ತನ್ನ When the Sleeper Awakes ಕತೆಯಲ್ಲಿ ಈಗಿನ ಮೊಬೈಲ್‌ ಆಡಿಯೋ- ವೀಡಿಯೋ ಸಾಧನಗಳ ಸಾಧ್ಯತೆಯ ಬಗ್ಗೆ ಬರೆದಿದ್ದ. ಹಾಗೆಯೇ ಆರ್ಥರ್‌ ಕ್ಲಾರ್ಕ್‌ ತನ್ನ ಕಥೆಗಳಲ್ಲಿ ಭೂ-ಕೇಂದ್ರಿತ ಅಥವಾ Geo-synchronous ಉಪಗ್ರಹಗಳ ಬಗ್ಗೆ ವಿವರಿಸಿದ್ದರೆ, ಜೂಲ್ಸ… ವರ್ನೆ, ತನ್ನ 20,000 Leagues under the sea ನಲ್ಲಿ ಸಬ್‌ ಮರೀನ್‌ ಬಗ್ಗೆ ಅರ್ಧ ಶತಕದ ಹಿಂದೆಯೇ ಸವಿವರಗಳನ್ನು ನೀಡಿದ್ದ. ಇಂಥ ಹತ್ತಾರು ಉದಾಹರಣೆಗಳನ್ನು ವೈಜ್ಞಾನಿಕ ಕತೆ ಕಾದಂಬರಿಗಳಲ್ಲಿ ಕಾಣಬಹುದು.

ವಿಚಿತ್ರವೆಂದರೆ, 38 ವರ್ಷಗಳ ಹಿಂದೆಯೇ (1981 ರಲ್ಲಿ), ಡೀನ್‌ ಕೂಂಟ್ಜ್ ಎಂಬಾತ ತನ್ನ The Eyes of Darkness ಎಂಬ ಕಾದಂಬರಿಯಲ್ಲಿ ವುಹಾನ್‌-400 ಎಂಬ ವೈರಾಣುವಿನ ಬಗ್ಗೆ ಬರೆದಿದ್ದ ಎಂಬ ವಿಷಯ ಇಂದು ಎಲ್ಲರನ್ನೂ ಚಕಿತಗೊಳಿಸಿದೆ. ಮಾನವನು ಭವಿಷ್ಯವನ್ನು ರೂಪಿಸಬಲ್ಲ ಕಾರಣ ಅವನು ಭವಿಷ್ಯವನ್ನು ಕಾಣಲೂ ಬಲ್ಲ ಎಂಬುದಕ್ಕೆ ಇದು ಪುರಾವೆಯೆ?

ಕೆ.ಎನ್‌. ಗಣೇಶಯ್ಯ

1981ರಲ್ಲಿ ಪ್ರಕಟವಾದ ಆಂಗ್ಲ ಕಾದಂಬರಿ The Eyes of Darkness ನಲ್ಲಿ ವುಹಾನ್‌-400 ಎಂಬ ವೈರಾಣುವಿನ ಉಲ್ಲೇಖವಿದೆ. ಕ್ರಿಸ್ಟಿನಾ ಈವನ್ಸ್‌ ಎಂಬ ಮಹಿಳೆ ತನ್ನ ಮಗ ಡ್ಯಾನಿ ಯನ್ನು ಚಾರಣಕ್ಕೆ ಕಳಿಸಿದಾಗ ಆತನ ಎಲ್ಲಾ ಸಹಚರರು ಸಂಶಯಾಸ್ಪದ ರೀತಿಯಲ್ಲಿ ಸಾಯುತ್ತಾರೆ. ಈ ರಹಸ್ಯದ ಬೆನ್ನು ಹತ್ತಿದ ಕ್ರಿಸ್ಟಿನಾ ಮತ್ತು ಆಕೆಯ ಸ್ನೇಹಿತ ಎಲಿಯಟ್‌ ಸ್ಟೈಕರ್‌ ಮಾರಣಾಂತಿಕ ವೈರಸ್‌ ಕುರಿತ ಸೂಕ್ಷ್ಮವಿಚಾರಗಳನ್ನು ಪತ್ತೆ ಹಚ್ಚುತ್ತ ಹೋಗುತ್ತಾರೆ. ವುಹಾನ್‌-400 ವೈರಾಣುವನ್ನು ವುಹಾನ್‌ RDNA ಪ್ರಯೋಗಾಲಯದಲ್ಲಿ ಒಂದು ಜೈವಿಕ ಅಸ್ತ್ರವಾಗಿ ಅಭಿವೃದ್ಧಿ ಪಡಿಸಲಾಯಿತು. ಈ ಮಾನವ ನಿರ್ಮಿತ ಜೀವಾಣು ಮನುಷ್ಯರಿಂದ ಮನುಷ್ಯರಿಗೆ ತ್ವರಿತವಾಗಿ ಹರಡುತ್ತದೆ. ಮಾನವ ದೇಹದ ಹೊರಗೆ ಇದು ಬದುಕುವುದಿಲ್ಲ. ಸುತ್ತಮುತ್ತಲಿನ ಪರಿಸರಕ್ಕೂ ಹಾನಿ ಮಾಡುವುದಿಲ್ಲ. ಯಾವುದೇ ಯುದ್ಧದ ಆವಶ್ಯಕತೆ ಇಲ್ಲದೇ ಚೀನಾ ತನ್ನ ಶತ್ರು ದೇಶವನ್ನು ಈ ವೈರಸ್‌ ಬಳಸಿ ಬಗ್ಗು ಬಡಿಯಬಹುದು. ಇದರ ಸಂಪೂರ್ಣ ಮಾಹಿತಿ ಹೊಂದಿದ್ದ ಲಿ ಚೆನ್‌ ಎಂಬ ವಿಜ್ಞಾನಿ ಎಲ್ಲ ವಿವರಗಳೊಂದಿಗೆ ಅಮೆರಿಕಕ್ಕೆ ಪಲಾಯನ ಮಾಡಿದ್ದ-ಎಂಬ ಉಲ್ಲೇಖವಿದೆ.

ಜೈವಿಕ ಯುದ್ಧದಿಂದ ಇಡೀ ವಿಶ್ವವನ್ನೇ ಬಗ್ಗು ಬಡಿಯಬಹುದು ಮತ್ತು ಭೀಕರ ಪರಿಣಾಮದ ಹೊರತಾಗಿಯೂ ಇಂತಹ ಅಸ್ತ್ರವನ್ನು ಗುಟ್ಟಾಗಿ ಹೊಂದಲು ಹಲವು ದೇಶಗಳು ಉತ್ಸುಕವಾಗಿವೆ ಎಂಬುದು ಈ ಕಾದಂಬರಿಯ ಸಾರ. ಡೀನ್‌ ಕೂಂಟ್ಜ… ಎಂಬ ವ್ಯಕ್ತಿ ಬರೆದ ಈ ಕಾದಂಬರಿಯ ಕಾಲ್ಪನಿಕ ಕಥೆ ಇಂದಿನ ಕೊರೊನಾ ವೈರಸ್‌ ಪರಿಸ್ಥಿತಿಯೊಂದಿಗೆ ಹಲವು ಸಾಮ್ಯಗಳನ್ನು ಹೊಂದಿದ್ದು ಎಲ್ಲರೂ ದಿಢೀರಾಗಿ 40 ವರ್ಷ ಹಳೆಯ ಕಾದಂಬರಿಯ ಬಗ್ಗೆ ಮಾತನಾಡುವಂತೆ ಮಾಡಿದೆ.

2011ರಲ್ಲಿ ಬಿಡುಗಡೆಯಾದ ಸಿನೆಮಾ Contagion ಸಹ ಕೊರೊನಾದಂತಹ ವೈರಾಣು ವಿಶ್ವವನ್ನೇ ಹೈರಾಣುಗೊಳಿಸುವ ಕತೆ ಹೇಳುತ್ತದೆ. ಹಾಂಗ್‌ಕಾಂಗ್‌ನಿಂದ ವಾಪಸು ಅಮೆರಿಕಕ್ಕೆ ಬರುವ ಬೆತ್‌ ಎಂ. ಹೊಫ್ ಎಂಬ ಮಹಿಳೆ ಜ್ವರ ಮಾದರಿಯ ಖಾಯಿಲೆ ಬಂದು ಸಾಯುತ್ತಾಳೆ. ಆಕೆಯ ಮಗ, ಆಕೆಯ ಸಂಪರ್ಕಕ್ಕೆ ಬಂದ ಅನೇಕರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪುತ್ತಾರೆ. ಅಧಿಕಾರಿಗಳಿಗೆ ಇದರ ಮಾಹಿತಿ ದೊರೆತು ಅವರು ಏನಾದರೂ ಕ್ರಮ ಕೈಗೊಳ್ಳುವ ಮೊದಲೇ ಜಗತ್ತಿನಾದ್ಯಂತ ಮಿಲಿಯಗಟ್ಟಲೆ ಜನರಿಗೆ ಸೋಂಕು ತಗುಲಿ ಹಾಹಾಕಾರ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಏನೇನು ಆಗುತ್ತದೆ, ಕೊನೆಗೆ ಹೇಗೆ ನಿಯಂತ್ರಣ ಸಾಧಿಸಲಾಯಿತು ಎಂದು ಸಿನೆಮಾದಲ್ಲಿ ತೋರಿಸಲಾಗಿದೆ.

ಶ್ರೀನಿಧಿ ಹಂದೆ

Advertisement

Udayavani is now on Telegram. Click here to join our channel and stay updated with the latest news.

Next