ಚಾಮರಾಜನಗರ: ತಾಲೂಕಿನ ಬ್ಯಾಡಮೂಡ್ಲು ತವರು ಮನೆಗೆ ಬಂದಿದ್ದ ಮಂಡ್ಯ ಮೂಲದ 29 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದು, ಕೋವಿಡ್ ನಿಂದಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದರು. ಭಾನುವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ಉಸಿರಾಟದ ತೊಂದರೆಯಿದ್ದು ಈ ಮಹಿಳೆ ಚಿಕಿತ್ಸೆಗೆ ಬಂದಿದ್ದರು.
ಉಸಿರಾಟದ ತೀವ್ರ ತೊಂದರೆ (ಎಸ್ಎಆರ್ಐ) ಲಕ್ಷಣ ಕಂಡು ಬಂದ ಕಾರಣ ಖಾಸಗಿ ಆಸ್ಪತ್ರೆ ವೈದ್ಯರು ಕೋವಿಡ್ ಆಸ್ಪತ್ರೆಗೆ ಮಹಿಳೆಯನ್ನು ಕಳುಹಿಸಿದ್ದರು. ಮಹಿಳೆಗೆ ಉಸಿರಾಟದ ತೊಂದರೆಯಿದ್ದ ಕಾರಣ ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನಾಲ್ಕು ತಿಂಗಳ ಹಿಂದೆ ಈ ಮಹಿಳೆಗೆ ಎದೆನೋವು ಮತ್ತು ಉಸಿರಾಟ ತೊಂದರೆ ಕಾಣಿಸಿಕೊಂಡು ಚಿಕಿತ್ಸೆ ಪಡೆದಿದ್ದರು. ಮೊನ್ನೆ ಇದೇ ರೋಗಲಕ್ಷಣ ಕಾಣಿಸಿಕೊಂಡಿದೆ. ಹೃದಯ ನಾಳಗಳಲ್ಲಿ ಅಡಚಣೆ ಉಂಟಾದಾಗಲೂ ಈ ರೀತಿ ಆಗುತ್ತದೆ ಎಂದು ಡಾ.ರಮೇಶ್ ತಿಳಿಸಿದರು. ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಜೀವ್, ಜಿಲ್ಲಾ ಶಸOಉಚಿಕಿತ್ಸಕ ಡಾ.ಕೃಷ್ಣಪ್ರಸಾದ್, ಕಣ್ಗಾವಲು ಅಧಿಕಾರಿ ಡಾ. ನಾಗರಾಜ್ ಇದ್ದರು.
ನಿರ್ಬಂಧಿತ ವಲಯ: ಎಲ್ಲರ ಗಂಟಲ ದ್ರವ ಪರೀಕ್ಷೆ: ಗುಂಡ್ಲುಪೇಟೆ ಹೌಸಿಂಗ್ ಬೋರ್ಡ್ ಕಾಲೋನಿಯ ಸೋಂಕಿತನ ಪ್ರಾಥಮಿಕ ಸಂಪರ್ಕಿತರು 13 ಮಂದಿ, ದ್ವಿತೀಯ ಸಂಪರ್ಕಿತರು 35 ಮಂದಿ, ಕಂಟೈನ್ಮೆಂಟ್ ವಲಯದ 172 ಮಂದಿ, ಬಫರ್ ಜೋನ್ನಲ್ಲಿ 318 ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರವಿ ತಿಳಿಸಿದರು.
ಜಿಲ್ಲೆಯಲ್ಲಿ ಎಲ್ಲ 60 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಗಂಟಲು ದ್ರವ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲೂ ಕೋವಿಡ್ ಚಿಕಿತ್ಸೆ ಪಡೆಯಲು ಅವಕಾಶ ನೀಡಿದೆ. ನಗರದ ಜೆಎಸ್ಎಸ್, ಬಸವರಾಜೇಂದ್ರ, ಆರ್.ಕೆ. ಆಸ್ಪತ್ರೆ, ಕೊಳ್ಳೇಗಾಲ ತಾಲೂಕಿನ ಹೋಲಿಕ್ರಾಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದರು.