Advertisement

ನಾನ್‌ ಸಿಆರ್‌ಝಡ್‌ ಮರಳುಗಾರಿಕೆ ಇನ್ನೂ 1 ತಿಂಗಳು ವಿಳಂಬ

10:13 AM Dec 01, 2018 | Team Udayavani |

ಮಂಗಳೂರು: ಟೆಂಡರ್‌ ಪ್ರಕ್ರಿಯೆಯಲ್ಲಿರುವ ನಾನ್‌ ಸಿಆರ್‌ಝಡ್‌ ವಲಯದಲ್ಲಿ ಪೂರ್ಣ ಪ್ರಮಾಣದಲ್ಲಿ ಮರಳುಗಾರಿಕೆ ಆರಂಭಗೊಳ್ಳಲು ಕನಿಷ್ಠ ಇನ್ನೂ ಒಂದು ತಿಂಗಳು ತಗಲುವ ಸಾಧ್ಯತೆಯಿದೆ. ಈಗಾಗಲೇ ಮರಳು ಸಮಸ್ಯೆಯಿಂದ ಕಂಗೆಟ್ಟಿರುವ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳ ಜನರ ಬವಣೆ ಮುಂದುವರಿಯಲಿದೆ. 

Advertisement

ಶರತ್ತುಗಳ ಕಗ್ಗಂಟಿನಿಂದಾಗಿ ಬಾಕಿ ಉಳಿದಿರುವ ನಾನ್‌ ಸಿಆರ್‌ಝಡ್‌ ವಲಯದ ನೇತ್ರಾವತಿ, ಕುಮಾರಧಾರ ಹಾಗೂ ಗುಂಡ್ಯ ನದಿ ಪಾತ್ರಗಳಲ್ಲಿನ 15 ಬ್ಲಾಕ್‌ಗಳಿಗೆ ನ.15ರಂದು ಟೆಂಡರ್‌ ಪ್ರಕಟನೆ ಹೊರಡಿಸಲಾಗಿತ್ತು. ಡಿ.14ರ ವರೆಗೆ ಟೆಂಡರ್‌ ಹಾಕಲು ಸಮಯಾವಕಾಶವಿದೆ. ಬಳಿಕ ಪರಿಶೀಲನೆ, ಸರ್ವಿಸ್‌ ಟೆಂಡರ್‌, ಫೈನಾನ್ಸಿಯಲ್‌ ಬಿಡ್ಡಿಂಗ್‌ ನಡೆದು ಅಂತಿಮಗೊಂಡು ಮರಳುಗಾರಿಕೆಗೆ ಅನುಮತಿ ಸಿಗಲು ಕನಿಷ್ಠ ಒಂದು ತಿಂಗಳು ಕಾಲಾವಕಾಶ ಬೇಕು. ಹೀಗಾಗಿ ಡಿಸೆಂಬರ್‌ ಅಂತ್ಯಕ್ಕೆ ಅಥವಾ ಜನವರಿ ಪ್ರಥಮ ವಾರದಲ್ಲಿ ನಾನ್‌ ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆ ಆರಂಭಗೊಳ್ಳುವ ನಿರೀಕ್ಷೆ ಇದೆ. 

ಐದು ತಿಂಗಳುಗಳಿಂದ ಮರಳು ಸಮಸ್ಯೆಯಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಬಾಧಿತವಾಗಿದ್ದು, ಇದನ್ನು ಅವಲಂಬಿಸಿಕೊಂಡಿರುವ ಇತರ ಕ್ಷೇತ್ರಗಳ ವ್ಯವಹಾರದಲ್ಲೂ ಹಿನ್ನಡೆಯಾಗಿದೆ. ನಾನ್‌ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಆರಂಭ ವಿಳಂಬವಾಗುತ್ತಿರುವುದು ಜನರನ್ನು ಇನ್ನಷ್ಟು ಸಂಕಷ್ಟದೆಡೆಗೆ ಕೊಂಡೊಯ್ಯುತ್ತಿದೆ. 

ಮೂರನೇ ಬಾರಿ ಟೆಂಡರ್‌
ನಾನ್‌ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಈಗ ಮೂರನೇ ಬಾರಿ ಟೆಂಡರ್‌ ಕರೆಯಲಾಗಿದೆ. ಈ ಹಿಂದೆ ಎರಡು ಬಾರಿ ಕರೆದಿದ್ದ ಟೆಂಡರ್‌ಗಳಲ್ಲಿ ನಿಯಮಗಳ ಕಗ್ಗಂಟಿನಿಂದಾಗಿ ಕೇವಲ ಎರಡು ಮಂದಿಗೆ ಟೆಂಡರ್‌ ಮಂಜೂರು ಆಗಿತ್ತು. ಪ್ರಸ್ತುತ ನಿಯಮಗಳನ್ನು ಸ್ವಲ್ಪ ಸಡಿಲಗೊಳಿಸಿರುವುದರಿಂದ ಈ ಬಾರಿ ಹೆಚ್ಚು ಮಂದಿ ಟೆಂಡರ್‌ನಲ್ಲಿ ಭಾಗವಹಿಸಿ ಎಲ್ಲ ಬ್ಲಾಕ್‌ಗಳು ಹಂಚಿಕೆಯಾಗಿ ಮರಳು ತೆಗೆಯುವ ಕಾರ್ಯ ಆರಂಭಗೊಳ್ಳಬಹುದು ಎಂಬ ನಿರೀಕ್ಷೆಯನ್ನು ಜಿಲ್ಲಾಡಳಿತ ಇರಿಸಿಕೊಂಡಿದೆ. ಈ ಬಾರಿಯೂ ಟೆಂಡರ್‌ಗೆ ಹೆಚ್ಚಿನ ಯಶಸ್ಸು ಲಭಿಸದಿದ್ದರೆ ಮರಳು ಗಾರಿಕೆ ಮತ್ತೆ ಕಗ್ಗಂಟಾಗುವ ಸಾಧ್ಯತೆಗಳಿವೆ. 

ಸಿಆರ್‌ಝಡ್‌ ವಲಯದಿಂದಲೂ ಪ್ರಯೋಜನವಿಲ್ಲ 
ನಾನ್‌ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಆರಂಭವಾಗುವ ವರೆಗೆ ಈ ವ್ಯಾಪ್ತಿಯ ಜನರು ಸಿಆರ್‌ಝಡ್‌ ವಲಯದ ಮರಳನ್ನೇ ಆಶ್ರಯಿಸಬೇಕಾಗಿದೆ. ನಾನ್‌ಸಿಆರ್‌ಝಡ್‌ನ‌ ಎರಡು ಕಡೆ ಮರಳುಗಾರಿಕೆ ಆರಂಭವಾಗಿದ್ದರೂ ಇದು ಬೇಡಿಕೆಯ ಶೇ. 10ನ್ನು ಕೂಡ ಪೂರೈಸಲು ಸಾಲದು.

Advertisement

ಇನ್ನೂ ಸಹಜ ಸ್ಥಿತಿಗೆ ಬಾರದ ಮರಳು ಪೂರೈಕೆ
ಸಿಆರ್‌ಝಡ್‌ ವಲಯದಲ್ಲಿ ಅನುಮತಿ ನೀಡಿರುವ 76 ಮಂದಿಯಲ್ಲಿ ಈವರೆಗೆ 31 ಮಂದಿ ಮಾತ್ರ ಪರವಾನಿಗೆ ಪಡೆದಿದ್ದಾರೆ. 22,500 ಮೆ.ಟನ್‌ ಮರಳು ಎತ್ತಲು ಪರವಾನಿಗೆ ವಿತರಿಸ ಲಾಗಿದ್ದು, ಅದರಲ್ಲಿ ನ.30ರ ವರೆಗೆ 11,304 ಮೆ. ಟನ್‌ ಮರಳು ಸಾಗಣೆಯಾಗಿದೆ. ಸಿಆರ್‌ಝಡ್‌ ವಲಯದಲ್ಲಿ ಮರಳು ತೆಗೆಯುವ ಕಾರ್ಯ ಆರಂಭಗೊಂಡಿದ್ದರೂ ಮರಳು ಪಡೆಯಲು ಸಾಧ್ಯವಾಗುತ್ತಿಲ್ಲ. ಬೇಡಿಕೆ ಸಲ್ಲಿಸಿದರೆ ಗುತ್ತಿಗೆದಾರ ರಿಂದ ಸ್ಪಂದನೆ ದೊರಕುತ್ತಿಲ್ಲ. ಕಾರಣ ಕೇಳಿದರೆ ಮರಳುಗಾರಿಕೆ ಇನ್ನೂ ಪೂರ್ಣ ಪ್ರಮಾಣ ದಲ್ಲಿ ಆರಂಭಗೊಂಡಿಲ್ಲ, ಬೇಡಿಕೆ ಭಾರೀ ಪ್ರಮಾಣದಲ್ಲಿದ್ದು, ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಉತ್ತರ ದೊರಕುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ.

ಕಟ್ಟಡ ಕಾರ್ಮಿಕರು, ಲಾರಿಗಳಿಗೆ ಕೆಲಸವಿಲ್ಲ !
ಸುಳ್ಯ
 : ಪುತ್ತೂರು, ಸುಳ್ಯ ತಾಲೂಕಿನಲ್ಲಿ ಮೂರು ನದಿಗಳಿವೆ. ಹಲವು ತೋಡು, ಹೊಳೆಗಳಿವೆ. ಮರಳಿಗೆ ಬರವಿಲ್ಲ. ಆದರೆ ಮರಳು ತೆಗೆಯಲಾಗದು. ಇದರಿಂದ 6,500 ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲ. ಮಕ್ಕಳ ಶಿಕ್ಷಣ, ಮದುವೆಗೂ ಅಡ್ಡಿಯಾಗಿದೆ. 150ಕ್ಕೂ ಅಧಿಕ ಲಾರಿಗಳಿಗೆ ಓಡಾಟವಿಲ್ಲ. ಸಾವಿರಕ್ಕೂ ಅಧಿಕ ಚಾಲಕ, ನಿರ್ವಾಹಕರಿಗೆ ಆದಾಯ ಇಲ್ಲ. ಪೆಟ್ರೋಲ್‌ ಬಂಕ್‌ಗಳಲ್ಲೂ ಆದಾಯ ಕ್ಷೀಣಿಸಿದೆ.

ಈಗ 350 ರೂ.
ಒಪ್ಪೊತ್ತಿನ ಊಟಕ್ಕೂ ಪರದಾಟ. ಕಾರ್ಮಿಕರು ತೋಟ ಹಾಗೂ ಇತರ ದಿನಗೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಸಾರಣೆ ಹಾಗೂ ಕಲ್ಲು ಕಟ್ಟುವುದರಲ್ಲಿ 800ರಿಂದ 1,200 ರೂ. ಸಂಪಾದಿಸುತ್ತಿದ್ದವರು ಈಗ 350 ರೂ.ಗೆ ಕೆಲಸ ಮಾಡುತ್ತಿದ್ದಾರೆ. ಇಷ್ಟಾದರೂ ನಿತ್ಯ ಕೆಲಸ ಸಿಗುತ್ತಿಲ್ಲ.

ಪುತ್ತೂರು, ಸುಳ್ಯದಲ್ಲಿ 436 ಟಿಪ್ಪರ್‌, 2,080 ಸಣ್ಣ ಲಾರಿ ಹಾಗೂ ಇತರ ವಾಹನಗಳಿವೆ. ಈ ಪೈಕಿ ಶೇ. 85ರಷ್ಟು ಮರಳು ಸಾಗಾಟವನ್ನೇ ಅವಲಂಬಿಸಿವೆ. ಸಾಲ ಕಟ್ಟದ ಕಾರಣಕ್ಕೆ ಹಣಕಾಸು ಸಂಸ್ಥೆಗಳು ನೋಟಿಸ್‌ ನೀಡುತ್ತಿವೆ. ಆಸ್ತಿ, ಚಿನ್ನ ಅಡವಿಟ್ಟು ಟಿಪ್ಪರ್‌, ಲಾರಿ ಖರೀದಿಸಿದವರಿಗೂ ಚಿಂತೆಯಾಗಿದೆ.

ಕೆಂಪು ಕಲ್ಲಿಗಿಲ್ಲ ಡಿಮ್ಯಾಂಡ್‌
ಕೆಂಪು ಕಲ್ಲಿನ ಗಣಿಗಾರಿಕೆಗೂ ಹಿನ್ನಡೆಯಾಗಿದೆ. ಕೋರೆಯಿಂದ ನಿತ್ಯ 2,000ಕ್ಕೂ ಅಧಿಕ ಕಲ್ಲುಗಳು ಮಾರಾಟ ಆಗುತ್ತಿದ್ದವು. ಈಗ ಅರ್ಧಕ್ಕಿಳಿದಿದೆ. ಪ್ರತಿ ಕೋರೆಯಲ್ಲಿ 10 ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ನಿತ್ಯದ ವ್ಯವಹಾರದಲ್ಲಿ 25 ಸಾವಿರ ರೂ. ನಷ್ಟವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next