Advertisement

ಸಿದ್ದರಾಮಯ್ಯ ಸೋತರೂ ಆಶ್ಚರ್ಯವಿಲ್ಲ : ಬಿಎಸ್‌ವೈ

01:07 AM May 05, 2023 | Team Udayavani |

ಬೆಂಗಳೂರು: ನಾನು ಮತ್ತು ಬಿ.ಎಲ್‌. ಸಂತೋಷ್‌ ಒಂದೇ ತಾಯಿಯ ಮಕ್ಕಳಂತಿದ್ದೇವೆ. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬುದೇ ಎಲ್ಲರ ಉದ್ದೇಶ. ಹಳೆ ಮೈಸೂರು ಭಾಗದಲ್ಲಿ ಯಾರೂ ನಿರೀಕ್ಷಿಸದಷ್ಟು ಪ್ರಮಾಣದಲ್ಲಿ ಬಿಜೆಪಿ ಬಲ ವೃದ್ಧಿಸಿಕೊಂಡಿದೆ. ವರುಣಾದಲ್ಲಿ ಸಿದ್ದರಾಮಯ್ಯ ಸೋತರೂ ಆಶ್ಚರ್ಯ ವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ “ಉದಯವಾಣಿ”ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು, ಅದರ ಪೂರ್ಣಪಾಠ ಹೀಗಿದೆ.

Advertisement

l ಬಿಜೆಪಿಯಲ್ಲಿ ಯಡಿಯೂರಪ್ಪ ಬಣ, ಬಿ.ಎಲ್‌. ಸಂತೋಷ್‌ ಬಣ ಎಂಬುದು ಇದೆಯೇ? ಈ ಬಾರಿ ಯಾವ ಬಣದ ಕೈ ಮೇಲಾಗಿದೆ?
ನಮ್ಮಲ್ಲಿ ಯಾವುದೇ ಬಣ ಇಲ್ಲಪ್ಪ. ಪಕ್ಷದಲ್ಲಿ ನಾವೆಲ್ಲರೂ ಒಂದೇ. ಎಲ್ಲರಿಗೂ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶ ಮಾತ್ರ ಇರುವಂಥದ್ದು. ನನ್ನ ಮತ್ತು ಸಂತೋಷ್‌ ನಡುವೆ ಯಾವುದೇ ಭೇದಭಾವ ಇಲ್ಲ. ನಾವು ಸಹೋದರರಂತಿದ್ದು, ಯಾವುದೇ ಭಿನ್ನತೆ ಇಲ್ಲ.

l ರಾಜ್ಯದಲ್ಲಿ ಧರ್ಮಾಧಾರಿತ ರಾಜಕಾರಣ ಹೆಚ್ಚುತ್ತಿರುವ ಬಗ್ಗೆ ಏನು ಹೇಳುತ್ತೀರಿ?
ರಾಜ್ಯದಲ್ಲಿ ಅಂಥ ವಾತಾವರಣ ಇದೆ ಎಂದು ನನಗನಿಸುತ್ತಿಲ್ಲ. ನಾನು ಜಾತಿ ಹಾಗೂ ಧರ್ಮದ ಆಧಾರದಲ್ಲಿ ಎಂದೂ ರಾಜಕಾರಣ ಮಾಡಿದವನಲ್ಲ. ಹಿಂದೂ-ಮುಸ್ಲಿಂ ಎಂಬ ಭೇದವನ್ನು ನಾನು ಒಪ್ಪುವುದೇ ಇಲ್ಲ.

ಟಿಕೆಟ್‌ ಹಂಚಿಕೆ ಗೊಂದಲದ ಬಳಿಕವೂ ನಿಮ್ಮ ಪಕ್ಷ ಗೆಲುವಿನ ಗುರಿ ಮುಟ್ಟುತ್ತದೆಯೇ?
ಖಂಡಿತವಾಗಿ ನಾವು ಪೂರ್ಣ ಬಹು ಮತ ದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ನಾನು 70ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು, ಎಲ್ಲ ಕಡೆಯೂ ಉತ್ತಮ ವಾತಾವರಣ ಇದೆ. ನನ್ನ ಇಷ್ಟು ವರ್ಷಗಳ ರಾಜಕೀಯ ಅನುಭವದಿಂದ ಹೇಳುತ್ತೀದ್ದೇನೆ. ವರುಣಾದಲ್ಲಿ ವಿ. ಸೋಮಣ್ಣ ಸ್ಪರ್ಧೆ ಯಿಂದ ಈ ಭಾಗದಲ್ಲಿ ತುರುಸಿನ ವಾತಾ ವರಣ ಸೃಷ್ಟಿಯಾಗಿದೆ. ವರುಣಾದಲ್ಲಿ ಸಿದ್ದ ರಾಮಯ್ಯ ಸೋತರೂ ಆಶ್ಚರ್ಯವಿಲ್ಲ. ಕನಕಪುರ ದಲ್ಲಿ ಅಶೋಕ ಪ್ರಬಲ ಸ್ಪರ್ಧೆ ಒಡ್ಡುತ್ತಾರೆ.

l ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂಬ ಮಾತಿತ್ತು. ಈಗ ನೀವು ರಾಜಕೀಯ ನಿವೃತ್ತಿ ಘೋಷಿಸಿದ್ದೀರಿ. ಆ ಹೋರಾಟ, ಆ ಸುತ್ತಾಟ, ಪ್ರತಿಭಟನೆಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದನಿಸುತ್ತಿಲ್ಲವೇ?
ಯಡಿಯೂರಪ್ಪ ನಿವೃತ್ತಿ ತೆಗೆದುಕೊಂಡಿರುವುದು ಚುನಾವಣ ರಾಜಕಾರಣಕ್ಕೆ ಮಾತ್ರವೇ ಹೊರತು ಸಕ್ರಿಯ ರಾಜಕಾರಣಕ್ಕಲ್ಲ. ನಾನು ಬದು ಕಿರುವವರೆಗೂ ಜನರ ಮಧ್ಯೆಯೇ ಇರುತ್ತೇನೆ. ಹೋರಾಟ, ಸುತ್ತಾಟ, ಜನಪರ ಧ್ವನಿಯೇ ನಾನು ಸದಾ ಚಟುವಟಿಕೆಯಿಂದ ಇರುವಂತೆ ಮಾಡು ತ್ತದೆ. ಜನಪರ ಚಟುವಟಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ನನ್ನ ನಿರ್ಧಾರದ ಬಗ್ಗೆ ಖಂಡಿತ ಬೇಸರ ಅಥವಾ ವಿಷಾದವಿಲ್ಲ. ಪಂಚಾಯತ್‌ ಸದಸ್ಯನೂ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೆ ಮುಂದೆ ನೋಡುವ ಕಾಲದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸಣ್ಣ ಸಂಗತಿಯಲ್ಲ. ಅಧಿಕಾರ ತ್ಯಾಗ ನನ್ನ ಸ್ವಂತ ನಿರ್ಧಾರ. ಇದರಲ್ಲಿ ಯಾರ ಒತ್ತಡವೂ ಇಲ್ಲ. ಮುಂದೆಯೂ ರಾಜ್ಯದಲ್ಲಿ 25ಕ್ಕಿಂತ ಹೆಚ್ಚು ಲೋಕ ಸಭಾ ಸ್ಥಾನಗಳಲ್ಲಿ ಗೆದ್ದು ಮೋದಿ ಯವರ ಕೈ ಬಲಪಡಿಸಬೇಕೆಂಬುದು ನನ್ನ ಗುರಿ.

Advertisement

l ಟಿಕೆಟ್‌ ಹಂಚಿಕೆ ಬಳಿಕ ಭಾರೀ ಪ್ರಮಾಣದಲ್ಲಿ ಅತೃಪ್ತಿ ಹೊಗೆಯಾಡುತ್ತಿಲ್ಲವೇ?
ಯಾವ ಅತೃಪ್ತಿಯೂ ಇಲ್ಲ. ಪ್ರತಿ ಕ್ಷೇತ್ರ ದಲ್ಲೂ 3-4 ಮಂದಿ ಆಕಾಂಕ್ಷಿಗಳಿದ್ದರು. ಹೀಗಾಗಿ ಪೈಪೋಟಿ ಇತ್ತು. ಸರ್ವೆ ಆಧಾರ ದಲ್ಲಿ ಟಿಕೆಟ್‌ ನೀಡಿದ್ದೇವೆ. ಶೇ.90ರಷ್ಟು ಕ್ಷೇತ್ರ ಗಳಲ್ಲಿ ಅತೃಪ್ತಿ ಇಲ್ಲ. ಕೆಲವೆಡೆ ಇದ್ದದ್ದು ಈಗ ಸರಿ ಹೋಗಿದೆ.

l ಈ ಬೆಳವಣಿಗೆಯಿಂದ ಲಿಂಗಾಯತ‌ ಮತ ಬ್ಯಾಂಕ್‌ಗೆ ಹಾನಿಯಾಗಿಲ್ಲವೇ?
ಖಂಡಿತ ಇಲ್ಲ. ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ. ನನ್ನ ವಿಚಾರದಲ್ಲೂ ನಾನು ಸಮುದಾಯಕ್ಕೆ ಹಾಗೂ ಮಠಾಧೀಶರಿಗೆ ಸ್ಪಷ್ಟಪಡಿಸಿದ್ದೇನೆ. ಶೇ.85ರಷ್ಟು ಲಿಂಗಾಯತ ಮತದಾರರಿಗೆ ಈ ಅಂಶವನ್ನು ಮನದಟ್ಟು ಮಾಡಿದ್ದೇನೆ.

l ನನ್ನ ಬಗ್ಗೆ ಆಕ್ಷೇಪಿಸುವ ಯಡಿಯೂರಪ್ಪ ಕೆಜೆಪಿ ಕಟ್ಟಲಿಲ್ಲವೇ ಎಂಬುದು ಶೆಟ್ಟರ್‌ ಪ್ರಶ್ನೆ?
ನಾನು ಕೆಜೆಪಿ ಕಟ್ಟಿದ್ದು ಅಕ್ಷಮ್ಯ ಅಪರಾಧ, ತಪ್ಪು. ನಾನೇ ಸ್ವತಃ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಆದರೆ ನಾನು ಕಾಂಗ್ರೆಸ್‌ ಸೇರಿರಲಿಲ್ಲ.

l ಬಜರಂಗದಳ ನಿಷೇಧ ಬಗ್ಗೆ ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ?
ಇದು ಕಾಂಗ್ರೆಸಿಗರ ಮೂರ್ಖತನ.

l ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿಎಂ ಯಾರು ಎಂಬ ಚರ್ಚೆ ನಡೆಯುತ್ತಿದೆ. ನಿಮ್ಮಲ್ಲಿ ಯಾರು? ಬೊಮ್ಮಾಯಿ ಮುಂದುವರಿಯುತ್ತಾರಾ?
ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂಬುದು ತಿರುಕನ ಕನಸು. ಹೀಗಾಗಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅವರು ಚರ್ಚಿಸುವುದು ಬೇಡ. ಬಿಜೆಪಿ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿಯ ಬೇಕೆಂದು ಬಸವರಾಜ ಬೊಮ್ಮಾಯಿ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರ ಪೈಕಿ ಕೆಲವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ವಿಚಾರ ನಿರ್ಧಾರವಾಗುತ್ತದೆ.

l ನಿಮ್ಮ ಉತ್ತರಾಧಿಕಾರಿಯಾಗಿ ವಿಜಯೇಂದ್ರ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಏನು ಸಲಹೆ ಕೊಡುತ್ತೀರಿ?
ನನ್ನಂತೆ ಹಗಲು ರಾತ್ರಿ ಕೆಲಸ ಮಾಡು. ಪಕ್ಷಕ್ಕಾಗಿ ರಾಜ್ಯ ಸುತ್ತು. ಜನರನ್ನು ಪ್ರೀತಿಸು ಎನ್ನುವುದಷ್ಟೇ ನನ್ನ ಸಲಹೆ. ಸುಮಾರು 50 ಸಾವಿರ ಮತಗಳ ಅಂತರದಿಂದ ವಿಜಯೇಂದ್ರ ಗೆಲ್ಲುವ ವಿಶ್ವಾಸವಿದೆ.

l  ಎಲ್ಲ ಸರಿ ಹೋಗಿದ್ದರೆ ಶೆಟ್ಟರ್‌ ಹಾಗೂ ಸವದಿ ಪಕ್ಷ ಬಿಡುತ್ತಿದ್ದರೇ ?
ಶೆಟ್ಟರ್‌ ಕಾಂಗ್ರೆಸ್‌ ಸೇರಿ ತಪ್ಪು ಮಾಡಿದರು. ಅವರು ಆತುರ ಪಟ್ಟರು. ಪಕ್ಷದ ವರಿಷ್ಠರಿಗೆ ಜಗದೀಶ್‌ ಶೆಟ್ಟರ್‌ರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಉದ್ದೇಶವಿತ್ತು. ನಿಮ್ಮನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತೇವೆ. ನಿಮ್ಮ ಪತ್ನಿಗೆ ಟಿಕೆಟ್‌ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಶೆಟ್ಟರ್‌ ಹಠದಿಂದ ಪಕ್ಷ ಬಿಟ್ಟಿದ್ದಾರೆ. ಈ ತಪ್ಪಿಗೆ ಅವರು ಪಶ್ಚಾತ್ತಾಪ ಅನುಭವಿಸಬೇಕಾಗುತ್ತದೆ. ಲಕ್ಷ್ಮಣ ಸವದಿಗೆ ಪಕ್ಷ ಏನು ಅನ್ಯಾಯ ಮಾಡಿತ್ತು? ಸೋತವರನ್ನು ತಂದು ಡಿಸಿಎಂ ಸ್ಥಾನ ನೀಡಿದೆವು. ಅವರ ವಿಧಾನ ಪರಿಷತ್‌ ಸದಸ್ಯತ್ವ ಇನ್ನೂ ಐದು ವರ್ಷವಿತ್ತು. ಆದರೂ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಅವರು ಮೊದಲೇ ಕಾಂಗ್ರೆಸ್‌ ಸೇರಲು ಒಪ್ಪಂದ ಮಾಡಿಕೊಂಡಿದ್ದರು ಎಂಬ ಮಾತು ಈಗ ಕೇಳಿ ಬರುತ್ತಿದೆ.

~ ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next