Advertisement

ದೈಹಿಕ ಶಿಕ್ಷಣ ಪಾಠಕ್ಕುಂಟು-ಲೆಕ್ಕಕ್ಕಿಲ್ಲ

12:24 PM Jul 20, 2019 | Suhan S |

ಕುಷ್ಟಗಿ: ಸಮಗ್ರ ಶಿಕ್ಷಣ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಕೊರತೆ ಮುಂದುವರಿದಿದೆ. ಕಳೆದ 16 ವರ್ಷಗಳಿಂದ ದೈಹಿಕ ಶಿಕ್ಷಕರ ಹೊಸ ನೇಮಕಾತಿಯೇ ಇಲ್ಲ. ಪ್ರಸಕ್ತ ಸಾಲಿನ ಕ್ರೀಡಾಕೂಟದ ಆಟೋಟಕ್ಕೆ ಎರವಲು ಶಿಕ್ಷಕರನ್ನು ಅವಲಂಬಿಸುವಂತಾಗಿದೆ.

Advertisement

ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಿಕ್ಷಕರ ಮೂಲ ಸೌಲಭ್ಯಗಳ ಕೊರತೆ ನೀಗಿಸುವ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದ್ದು, ತಾಲೂಕಿನಲ್ಲಿ ದೈಹಿಕ ಶಿಕ್ಷಣ ನಾಮಕೇವಾಸ್ತೆ ಎನ್ನುವಂತಾಗಿದೆ.

ತಾಲೂಕಿನಲ್ಲಿ 36 ಸರ್ಕಾರಿ ಪೌಢಶಾಲೆ, ಹಿರಿಯ-ಕಿರಿಯ ಹಾಗೂ ಟಿಜಿಟಿ ಸೇರಿದಂತೆ ಒಟ್ಟು 182 ಪ್ರಾಥಮಿಕ ಶಾಲೆಗಳಿವೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರ 3 ಸ್ಥಾನ ಖಾಲಿ ಇದ್ದರೆ, ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾದ 64 ದೈಹಿಕ ಶಿಕ್ಷಕರ ಪೈಕಿ ಕೇವಲ 38 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಡಾ. ಎಲ್.ಆರ್‌. ವೈದ್ಯನಾಥ ವರದಿ ಪ್ರಕಾರ 6ರಿಂದ 10ನೇ ತರಗತಿವರೆಗೆ ದೈಹಿಕ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಬೋಧಿಸಬೇಕು ಮತ್ತು ಪ್ರತಿಯೊಂದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರು ಇರಲೇಬೇಕೆಂಬ ನಿಯಮವಿದೆ. 6ರಿಂದ 10ನೇ ತರಗತಿವರೆಗೆ ದೈಹಿಕ ಶಿಕ್ಷಣ ಪಠ್ಯಕ್ರಮ ಇದೆ. ಆದರೆ ದೈಹಿಕ ಶಿಕ್ಷಕರ ಕೊರತೆಯೇ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ.

ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪಾಠ ಭೋಧನೆ ಬಹುತೇಕ ಶಾಲೆಗಳಲ್ಲಿ ಇತರೆ ಸಹ ಶಿಕ್ಷಕರು ನಡೆಸುವಂತೆ ಸೂಚಿಸಲಾಗಿದೆ. ಇದರಿಂದ ಮಕ್ಕಳಿಗೆ ಪರಿಣಾಮಕಾರಿಯಾಗಿ ದೈಹಿಕ ಶಿಕ್ಷಣ ಬೋಧನೆಯಾಗುತ್ತಿಲ್ಲ ಎಂಬ ಕೊರಗು ಕೇಳಿ ಬಂದಿದೆ.

Advertisement

ಹೊಸ ನೇಮಕ ಮರೀಚಿಕೆ: ಕಳೆದ 16 ವರ್ಷಗಳ ಹಿಂದೆ ದೈಹಿಕ ಶಿಕ್ಷಕರನ್ನು ನೇಮಿಸಿಕೊಂಡಿದ್ದು, ಬಿಟ್ಟರೆ ಇಲ್ಲಿಯವರೆಗೂ ದೈಹಿಕ ಶಿಕ್ಷಕರ ಹೊಸ ನೇಮಕಾತಿ ಇಲ್ಲ. ನಂತರ ಹೊಸದಾಗಿ ಒಬ್ಬ ದೈಹಿಕ ಶಿಕ್ಷಕರನ್ನು ನೇಮಿಸಿದ ಉದಾಹರಣೆ ಇಲ್ಲ. ಶಾಲೆಗಳು ಹಾಗೂ ಮಕ್ಕಳ ಸಂಖ್ಯೆಯ ಅನುಪಾತದಲ್ಲಿ ಹುದ್ದೆ ಮಂಜೂರು ಮಾಡಲಾಗುತ್ತಿದೆ. ಆದರೆ ಹೊಸ ಹುದ್ದೆಗಳ ಮಂಜೂರಾತಿಗೆ ಅನುಸರಿಸುವ ಮಾನದಂಡ ಮೂರು ದಶಕಗಳಿಗಿಂತ ಹಳೆಯದು. ಶಾಲೆ ಮತ್ತು ಮಕ್ಕಳ ಸಂಖ್ಯೆಯಲ್ಲಿ ಅಗಾಧ ರೀತಿಯಲ್ಲಿ ಹೆಚ್ಚಳ ಕಂಡಿದ್ದರೂ, ಅದಕ್ಕೆ ತಕ್ಕಂತೆ ದೈಹಿಕ ಶಿಕ್ಷಕರನ್ನು ಮಂಜೂರು ಮಾಡುವಲ್ಲಿ ಮಾತ್ರ ಸರ್ಕಾರ ಮುತುವರ್ಜಿ ತೋರಿಸಿಲ್ಲ. ಅಷ್ಟೇ ಅಲ್ಲ ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಂಡಿಲ್ಲ.

ಮೈದಾನ ಕೊರತೆ: ಬಹುತೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೂಲ ಸೌಲಭ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ. ಪ್ರತಿ ಶಾಲೆಗಳಿಗೆ ದೈಹಿಕ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಕ್ರೀಡಾ ಸಾಮಗ್ರಿಗಳು ಮತ್ತು ಬೋಧನಾ ಉಪಕರಣಗಳು ಪೂರೈಸುವಂತಿದ್ದರೂ ಗಮನ ಹರಿಸಿಲ್ಲ. ಬಹಳಷ್ಟು ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸುವುದಕ್ಕೂ ಜಾಗ ಇಲ್ಲ. ಇನ್ನೂ ಆಟದ ಮೈದಾನವಂತೂ ಕನಸಿನ ಮಾತಾಗಿದೆ. ಜಾಗ ಇರುವ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲ. ಮೈದಾನ ಅಭಿವೃದ್ಧಿಗೊಂಡಿಲ್ಲ ಎನ್ನುವ ಸಾರ್ವಜನಿಕರ ದೂರುಗಳಿಗೆ ಸ್ಪಂದನೆ ಇಲ್ಲದಂತಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲಾ ಮೈದಾನಗಳ ಅಭಿವೃದ್ಧಿಗೆ ಸಾಕಷ್ಟು ಹಣ ಇದ್ದಾಗ್ಯೂ ಸಮರ್ಪಕ ರೀತಿಯಲ್ಲಿ ಬಳಸಿಕೊಂಡಿಲ್ಲ ಎನ್ನುವ ಅಸಮಾಧಾನ ಕೂಗು ಜನರಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next