Advertisement

ಕಲಿಕೆ ಚೇತರಿಸಿಕೊಳ್ಳಲು ಬೇಕು ಕಲಿಕೆ ಹಾಳೆ

01:57 AM Jun 18, 2022 | Team Udayavani |

ಉಡುಪಿ: ಕೊರೊನಾದಿಂದ 2019- 20ರಿಂದೀಚೆಗೆ ಮೂರು ಶೈಕ್ಷಣಿಕ ವರ್ಷಗಳಲ್ಲಿ ಸರಿಯಾಗಿ ಭೌತಿಕ ತರಗತಿ ನಡೆಯದೇ ಇರುವುದರಿಂದ ರಾಜ್ಯ ಸರಕಾರವು ಮಕ್ಕಳಲ್ಲಿನ ಕಲಿಕೆ ಅಂತರ ಸರಿದೂಗಿಸಲು “ಕಲಿಕೆ ಚೇತರಿಕೆ’ ಎಂಬ ಹೊಸ ಕಾರ್ಯಕ್ರಮವನ್ನು ಸಿದ್ಧಪಡಿಸಿ, ಶಾಲೆಗಳಿಗೆ ಮಾರ್ಗಸೂಚಿ ನೀಡಿದೆ. ಆದರೆ ಕಲಿಕೆ ಚೇತರಿಕೆಯನ್ನು ಸಮರ್ಪಕವಾಗಿ ಬೋಧಿಸಲು ಕಲಿಕೆ ಹಾಳೆ ಸಹಿತ ವಿವಿಧ ಪರಿಕರಗಳನ್ನು ಇನ್ನೂ ಒದಗಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

Advertisement

2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭವಾಗಿದೆ. ಪಠ್ಯಪುಸ್ತಕ ಪರಿಷ್ಕರಣೆ ಗೊಂದಲದಿಂದ ಪಠ್ಯಪುಸ್ತಕವೂ ಶಾಲೆಗಳಿಗೆ ಸರಬರಾಜು ಆಗಿಲ್ಲ. ಕಲಿಕೆ ಚೇತರಿಕೆಯಡಿ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮರು ಹೊಂದಿಸಿರುವ ಚಟುವಟಿಕೆಗಳನ್ನು ಶಾಲೆಗಳಲ್ಲಿ ಕಲಿಸಿ ಕೊಡಲಾಗುತ್ತಿದೆ. ಆದರೆ ಅದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು, ಪುನರ್‌ ಮನನ ಮಾಡಲು ಕಲಿಕೆ ಹಾಳೆ,ಕಲಿಕಾ ಫ‌ಲಕ ಯಾವುದೂ ಇಲ್ಲ. ಕಲಿಕೆ ಚೇತರಿಕೆಯಲ್ಲಿ ಕಲಿಕೆ ಹಾಳೆಯೇ ಪ್ರಮುಖ ವಾಗಿರುತ್ತದೆ. ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಚಟುವಟಿಕೆಯ ಗುತ್ಛವೇ ಆ ಹಾಳೆಯಲ್ಲಿರುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಾಳೆಯನ್ನೇ ನೀಡದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಕಲಿಯಲು ಸಾಧ್ಯವಾಗುತ್ತಿಲ್ಲ.

14 ಚಟುವಟಿಕೆ
ಕಲಿಕೆ ಚೇತರಿಕೆಯ ಭಾಗವಾಗಿ ಮಳೆಬಿಲ್ಲು 14 ದಿನಗಳ ವಿಶೇಷ ಚಟುವಟಿಕೆಗಳನ್ನು ಪಟ್ಟಿಮಾಡಿ ಶಾಲೆಗೆ ನೀಡಲಾಗಿದೆ. ಆಟದ ಹಬ್ಬ, ಆಟಿಕೆ ತಯಾರಿಕೆ, ಎರಡು ದಿನ ನಾಟಕದ ಹಬ್ಬ, ಚಿತ್ರಚಿತ್ತಾರ ಕಲಾಹಬ್ಬ, ಚಿತ್ರ ಜಗತ್ತು, ಕಥೆಗಳ ಹಬ್ಬ, ಕವಿತೆ ಕಟ್ಟೋಣ ಹಾಡು ಹಾಡೋಣ, ಪರಿಸರ ಹಬ್ಬ, ಗಣಿತ ಗಮ್ಮತ್ತು, ಇತಿಹಾಸದ ಹಬ್ಬ ನಾವಿನ್ನೂ ಮರೆತಿಲ್ಲ, ಅಡುಗೆ ಮನೆಯಲ್ಲಿ ವಿಜ್ಞಾನ, ಗೊಂಚಲು ಸಾಂಸ್ಕೃತಿಕ ಸಂಭ್ರಮ ಹಾಗೂ ಶಾಲೆ ಸಿಂಗಾರ ಹೀಗೆ 14 ವಿಶೇಷ ಚಟುವಟಿಕೆ ನಡೆಸಲು ಸೂಚಿಸಲಾಗಿದೆ. ಇದಕ್ಕೂ ಬೇಕಾದ ಯಾವ ಪರಿಕರವನ್ನು ಈಬಾರಿ ನೀಡಿಲ್ಲ.

ಶಾಲೆಯಲ್ಲಿ ಜೆರಾಕ್ಸ್‌
ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಕಲಿಕೆ ಚೇತರಿಕೆಯ ಬೋಧನೆಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ)ಯ ವೆಬ್‌ಸೈಟ್‌ನಲ್ಲಿ ಪಿಡಿಎಫ್ಗಳಲ್ಲಿ ನೀಡಲಾಗಿರುವ ಕಲಿಕೆ ಹಾಳೆಗಳನ್ನು ಮಕ್ಕಳಿಗೆ ಜೆರಾಕ್ಸ್‌ ಮಾಡಿ ಕೊಡುತ್ತಿದ್ದಾರೆ. ಅಷ್ಟು ಜೆರಾಕ್ಸ್‌ ಮಾಡುವುದು ಕಷ್ಟವಾಗುತ್ತಿದೆ. ಒಂದೊಂದು ವಿಷಯದ ಕಲಿಕೆ ಹಾಳೆಗಳು ಸರಿಸುಮಾರು 125ರಿಂದ 150 ಪುಟಗಳಿವೆ. ಅದನ್ನು ಎಲ್ಲರಿಗೂ ಜೆರಾಕ್ಸ್‌ ಮಾಡಿಕೊಡುವುದು ಕಷ್ಟ. ಒಬ್ಬರಿಗೆ ಕೊಟ್ಟು, ಇನ್ನೊಬ್ಬರಿಗೆ ಕೊಡದೇ ಇದ್ದರೂ ಕಷ್ಟ. ಹೀಗಾಗಿ ಇಡೀ ಶಿಕ್ಷಕರ ವರ್ಗ ಕಲಿಕೆ ಚೇತರಿಕೆ ಬೋಧನೆಯ ವಿಷಯವಾಗಿ ಉಭಯ ಸಂಕಟ ಎದುರಿಸುತ್ತಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಇನ್ನೊಂದು ತಿಂಗಳು ಕಾಯಬೇಕು
ಕಲಿಕೆ ಹಾಳೆಗಳ ಮುದ್ರಣವಾಗುತ್ತಿದೆ. ಜುಲೈ ಎರಡನೇ ವಾರದವರೆಗೂ ಕಾಯಲೇ ಬೇಕಾಗುತ್ತದೆ. ಅಲ್ಲಿಯವರೆಗೂ ಜೆರಾಕ್ಸ್‌ ಅಥವಾ ಬೇರೆ ಯಾವುದಾದರು ವ್ಯವಸ್ಥೆಯ ಮೂಲಕ ಕಲಿಕೆ ಚೇತರಿಕೆ ಮುಂದುವರಿಸಲು ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ. ಹೀಗಾಗಿ ಶಾಲೆಯಲ್ಲಿರುವ ಅನುದಾನವನ್ನೇ ಬಳಸಿಕೊಂಡು ಕಲಿ ಕೆ ಹಾಳೆಗಳ ಜೆರಾಕ್ಸ್‌ ಕೂಡ ತೆಗೆಯಲಾಗುತ್ತದೆ. ಇನ್ನು ಕೆಲವು ಶಿಕ್ಷಕರು ಮಕ್ಕಳ ಪಾಲಕ, ಪೋಷಕರ ಮೊಬೈಲ್‌ಗೆ ಕಲಿಕೆ ಹಾಳೆಯ ಲಿಂಕ್‌ ಕಳುಹಿಸಿಕೊಡುತ್ತಿದ್ದಾರೆ.

Advertisement

ಇಲಾಖೆಯಿಂದ ಕಲಿಕೆ ಹಾಳೆ ಬರುವವರೆಗೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಜುಲೈಯಲ್ಲಿ ಕಲಿಕೆ ಹಾಳೆಗಳು ಶಾಲೆಗೆ ಬರಲಿದೆ. ಕಲಿಕೆ ನಿರಂತರವಾಗಿ ನಡೆಯುತ್ತಿದೆ.
– ಗೋವಿಂದ ಮಡಿವಾಳ,
ಡಿಡಿಪಿಐ ಉಡುಪಿ

ಕಲಿಕಾ ಚೇತರಿಕೆ ಕಾರ್ಯಕ್ರಮವು ಇನ್ನಷ್ಟೇ ಆರಂಭವಾಗಬೇಕಿದೆ. ಈಗ ಪೂರ್ವಸಿದ್ಧತೆ ನಡೆಯುತ್ತಿದೆ. ಇದಕ್ಕೆ ಬೇಕಾದ ಕಲಿಕಾಹಾಳೆ ಮತ್ತಿತರ ಪೂರಕವಾದ ಸಾಮಗ್ರಿಗಳನ್ನು ಒದಗಿಸುವುದಕ್ಕಾಗಿ ಶಾಲಾ ಅನುದಾನವನ್ನು ಬಳಸಬಹುದು.
 - ಸುಧಾಕರ್‌, ಡಿಡಿಪಿಐ, ದ.ಕ.

 

Advertisement

Udayavani is now on Telegram. Click here to join our channel and stay updated with the latest news.

Next