Advertisement

ನಾಡಕಚೇರಿಯಲ್ಲಿ ಕಡತಗಳಿಗೆ ರಕ್ಷಣೆ ಇಲ್ಲ!

10:17 AM Aug 11, 2018 | Team Udayavani |

ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಪಂಜ ಹೋಬಳಿ ಕೇಂದ್ರದಲ್ಲಿ ಹಾಳು ಕೊಂಪೆಯಂತಿರುವ ನಾಡಕಚೇರಿಯಲ್ಲಿ ಸಾರ್ವಜನಿಕ ಕಡತಗಳಿಗೆ ರಕ್ಷಣೆಯೇ ಇಲ್ಲವಾಗಿದೆ. ಕಟ್ಟಡ, ಛಾವಣಿ ಧರಾಶಾಯಿಯಾಗುವ ಸ್ಥಿತಿಯಲ್ಲಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ನೀರು ಕಟ್ಟದ ಒಳಗೆ ನಿಲ್ಲುತ್ತಿದೆ. ಇದರಿಂದಾಗಿ ಕಚೇರಿಯಲ್ಲಿರುವ ಸಾರ್ವಜನಿಕ ದಾಖಲೆ ಪತ್ರಗಳು ಮಳೆಗೆ ಒದ್ದೆಯಾಗಿ ನಾಶವಾಗುವ ಆತಂಕವಿದೆ.

Advertisement

ನಿರೀಕ್ಷಣಾ ಮಂದಿರದ ಕಟ್ಟಡ ಹೋಬಳಿ ನಾಡಕಚೇರಿಯಾಗಿ ಪರಿವರ್ತನೆಗೊಂಡಿದೆ. ಸುಮಾರು 50 ವರ್ಷಗಳಿಂದ ಈ ಕೇಂದ್ರ ನಾಡಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಟ್ಟಡ ಶಿಥಿಲಗೊಂಡು ಸೋರುತ್ತಿದೆ. ದುರಸ್ತಿ ಕಾರ್ಯ ಕೆಲ ವರ್ಷಗಳಿಂದ ನಡೆದೇ ಇಲ್ಲ. ಭೂತ ಬಂಗಲೆಯಂತಿರುವ ಕಟ್ಟಡ ಕುಸಿದು ಬೀಳುವ ಹಂತ ತಲುಪಿದೆ. ಕಟ್ಟಡದ ಹಿಂದಿನ ಬಾಗಿಲು ಮುರಿದು ಹೋಗಿದ್ದು, ಕಳ್ಳರಿಗೆ ಅನುಕೂಲವಾದಂತಿದೆ.

ಸ್ವಂತ ಕಟ್ಟಡವೇ ಇಲ್ಲ
ನಾಡಕಚೇರಿಗೆ ಸ್ವಂತ ಕಟ್ಟಡವಿಲ್ಲ. ಮೂಲ ಸೌಕರ್ಯವೂ ಇಲ್ಲ. ಹೋಬಳಿ ಕೇಂದ್ರಕ್ಕೆ ಒಳಪಟ್ಟ ಹತ್ತು ಗ್ರಾ.ಪಂ. ಸಹಿತ 19 ಕಂದಾಯ ಗ್ರಾಮಗಳು ಸೇರಿವೆ. ಕಚೇರಿಯಲ್ಲಿ ನಿತ್ಯವೂ ಇಂಟರ್ನೆಟ್‌ ಕೈಕೊಡುತ್ತದೆ. ವಿದ್ಯುತ್‌ ಸಮಸ್ಯೆಯಿದೆ. ಜನರೇ ಟರ್‌ ವ್ಯವಸ್ಥೆಯಿಲ್ಲ. ಸಿಬಂದಿ ಕೊರತೆಯೂ ಇಲ್ಲಿದೆ. ಸ್ಥಳಿಯಾಡಳಿತ ಶೌಚಾಲಯ ವ್ಯವಸ್ಥೆಗೊಳಿಸಿದ್ದರೂ, ಇಲ್ಲಿ ನೀರು ಸರಬರಾಜು ಸರಿಯಾಗಿಲ್ಲ. ಒಳ ಹೋದಾಗ ವಾಕರಿಕೆ ಬರುವಂತಿದೆ. ಸಾರ್ವಜನಿಕರು ಕುಡಿಯಲು ನೀರು ಹಾಗೂ ಶೌಚಾಲಯಕ್ಕೆ ಮೂರ್‍ನಾಲ್ಕು ಕಿ.ಮೀ. ದೂರ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸುಬ್ರಹ್ಮಣ್ಯವೋ? ಪಂಜವೋ?
ಕಡಬ ತಾಲೂಕಾಗಿ ಆ. 15ಕ್ಕೆ ಕಾರ್ಯಾರಂಭ ಮಾಡಲಿದೆ. ಸುಬ್ರಹ್ಮಣ್ಯ ಕೇಂದ್ರವನ್ನು ಹೋಬಳಿ ಕೇಂದ್ರವನ್ನಾಗಿಸುವುದು ಪ್ರಸ್ತಾವನೆಯಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವೂ ಕಡಬ ತಾಲೂಕಿನಲ್ಲಿ ಗುರುತಿಸಿಕೊಳ್ಳಲಿದೆ. ಸುಳ್ಯದಲ್ಲಿ ಇರುವ ಹತ್ತು ಗ್ರಾ.ಪಂ.ನ ಗ್ರಾಮಗಳಿಗೆ ಪಂಜ ಈಗ ಹೋಬಳಿ ಕೇಂದ್ರವಾಗಿದೆ. ಕಡಬ ಸಮೀಪಕ್ಕೆ ಇರುವ ಐವತ್ತೂಕ್ಲು ಮತ್ತು ಕೂತುRಂಜ ಗ್ರಾಮಗಳನ್ನು ಕಡಬಕ್ಕೆ ಸೇರಿಸಬೇಕು. ಪಂಜ ಹೋಬಳಿ ಕೇಂದ್ರವಾಗಿ ಉಳಿಸಿಕೊಳ್ಳಬೇಕು ಎನ್ನುವ ಕಾನೂನು ಹೋರಾಟಗಳನ್ನು ಪಂಜ ಭಾಗದವರು ಆರಂಭಿಸಿದ್ದಾರೆ. ಇದಕ್ಕೆ ಮಾನ್ಯತೆ ಸಿಗುವ ಸಾಧ್ಯತೆಗಳು ಕಡಿಮೆ. 

ಈ ನಡುವೆ ಸುಬ್ರಹ್ಮಣ್ಯ ಭಾಗದ ಜನತೆ ಈ ಕುರಿತು ಯಾವುದೇ ಉತ್ಸಾಹ ತೋರದೆ ಇರುವುದು ಸುಬ್ರಹ್ಮಣ್ಯ ಹೋಬಳಿ ಕೇಂದ್ರವಾಗುವುದಕ್ಕೆ ಹಿನ್ನಡೆಯಾಗುತ್ತಿದೆ. ಪಂಜದ ಹೋಬಳಿ ಕೇಂದ್ರ ವ್ಯಾಪ್ತಿಯ ಸುಬ್ರಹ್ಮಣ್ಯ, ಐನಕಿದು, ಯೇನೆಕಲ್ಲು, ಬಳ್ಪ, ಕೇನ್ಯ, ಎಡಮಂಗಲ, ಎಣ್ಮೂರು, ಪಂಬೆತ್ತಾಡಿ ಈ ಏಳು ಗ್ರಾಮಗಳು ಕಡಬ ತಾ|ಗೆ ಸೇರಲಿವೆ. ಇನ್ನುಳಿದಂತೆ ಐವತ್ತೂಕ್ಲು ಮತ್ತು ಕೂತ್ಕುಂಜ ಸೇರ್ಪಡೆ ಕುರಿತ ಒತ್ತಾಯಗಳು ಇವೆ. 

Advertisement

ಅನುಮೋದನೆ ಸಿಕ್ಕಿಲ್ಲ  
ಸ್ವಂತ ಕಟ್ಟಡ ನಿರ್ಮಾಣದ ಕುರಿತು ಗ್ರಾಮಸಭೆಗಳಲ್ಲಿ ಸಾರ್ವಜನಿಕ ರಿಂದ ಒತ್ತಾಯ ಕೇಳಿ ಬಂದಿತ್ತು. ಆನಂತರ ನಿರ್ಣಯ ಕೂಡ ಕೈಗೊಳ್ಳಲಾಗಿತ್ತು. ಬಳಿಕ ಇಪ್ಪತ್ತು ಸೆಂಟ್ಸ್‌ ಜಾಗದಲ್ಲಿ ಕಂದಾಯ ನಿರೀಕ್ಷಕರ ಕಚೇರಿ, ಗ್ರಾಮಲೆಕ್ಕಿಗರ ಕಚೇರಿ, ವಸತಿಗೃಹ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಅಂದಾಜು ಪಟ್ಟಿ ಸಿದ್ಧಪಡಿಸಿದ್ದರು. ಅದರ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಇದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ

ತಾತ್ಕಾಲಿಕ ಸ್ಥಳಾಂತರ
ಪಂಜ ಹೋಬಳಿ ಕೇಂದ್ರದ ನಾಡಕಚೇರಿ ಶಿಥಿಲಗೊಂಡು ಸೋರುತ್ತಿರುವುದು ಗಮನಕ್ಕೆ ಬಂದಿದೆ. ತಾತ್ಕಾಲಿಕವಾಗಿ ಕಚೇರಿಯನ್ನು ಸ್ಥಳಾಂತರಿಸುವ ಚಿಂತನೆಯಲ್ಲಿದ್ದೇವೆ. ಈ ಕುರಿತು ಪರಿಶೀಲಿಸುತ್ತೇವೆ. ಅಲ್ಲಿನ ಗ್ರಾ.ಪಂ ಆಡಳಿತ ಮಂಡಳಿ ಜತೆ ಸಂವಹನ ನಡೆಸಿ ಪಂಚಾಯತ್‌ನ ಸ್ಥಳವಕಾಶವಿರುವ ಕಟ್ಟಡಕ್ಕೆ ಸ್ಥಳಾಂತರಿಸಿ ಸದ್ಯ ಅಲ್ಲಿ ಕಚೇರಿ ತೆರೆದು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಜರುಗಿಸುತ್ತೇವೆ.
– ಕುಂಞಮ್ಮ ತಹಶೀಲ್ದಾರ್‌

ಅನುಮೋದನೆಗೆ ಹೋಗಿದೆ
ಕಂದಾಯ ನಿರೀಕ್ಷಕರ ಮತ್ತು ಗ್ರಾಮ ಲೆಕ್ಕಿಗರ ಕಚೇರಿ ಹಾಗೂ ವಸತಿಗೃಹ ಕಟ್ಟಡಗಳ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ಧಗೊಂಡು ಸರಕಾರದ ಅನುಮೋದನೆಗೆ ಹೋಗಿದೆ.
– ದೀಪಕ್‌
ಕಂದಾಯ ಅಧಿಕಾರಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next