Advertisement

ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಸಲ್ಲ

02:55 PM Feb 20, 2021 | Team Udayavani |

ಬ್ಯಾಡಗಿ: ಮುಖ್ಯ ರಸ್ತೆಯಲ್ಲಿನ ಜನರು ರಸ್ತೆ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪಟ್ಟಣದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಒಳಚರಂಡಿ ಮತ್ತು ನಿರಂತರ (24×7) ಕುಡಿಯುವ ನೀರಿನ ಕಾಮಗಾರಿಗೆ ಅಡ್ಡಿಯಾಗುತ್ತಿದೆ. ಇದರಿಂದ ಬಿಡುಗಡೆಯಾದ ಅನುದಾನ ಮರಳಿ ಹೋಗುವ ಭಯ ಅಧಿಕಾರಿಗಳನ್ನು ಕಾಡುತ್ತಿದೆ. ಇನ್ನಾದರೂ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸ್ಥಳೀಯ ನಿವಾಸಿಗಳಿಗೆ ಮನವಿ ಮಾಡಿದರು.

Advertisement

ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯರಸ್ತೆ ಅಗಲೀಕರಣ ವಿಳಂಬದಿಂದ ಅಲ್ಲಿನ ನಿವಾಸಿಗಳಿಗೆ ಹಾನಿ ಹೆಚ್ಚಾಗಲಿದೆ. ಕಳೆದೆರಡು ವರ್ಷಗಳಿಂದ ಮಳೆ ಹೆಚ್ಚಾಗಿದ್ದರಿಂದ ಮನೆಯಲ್ಲಿ ಬಳಸಿದ ನೀರು ಇಂಗು ಗುಂಡಿಗಳಲ್ಲಿ ತುಂಬಿಕೊಂಡಿದೆ. ಚರಂಡಿ ಸೌಲಭ್ಯವಿಲ್ಲದ ಕೆಲವರು ಇದರಿಂದ ತಪ್ಪಿಸಿಕೊಳ್ಳಲು ಬಳಕೆ ಮಾಡಿದ ನೀರನ್ನು ಮುಖ್ಯರಸ್ತೆಗೆ ಬಿಡುತ್ತಿದ್ದಾರೆ. ಇದರಿಂದ ವಾಹನ ಸಂಚರಿಸುವಾಗ ನೀರು ಸಿಡಿದು ಸಾಕಷ್ಟುತೊಂದರೆಯಗುತ್ತಿದೆ. ಕೂಡಲೇ ಯುಜಿಡಿ ಅಧಿಕಾರಿಗಳು ಮುಖ್ಯರಸ್ತೆಯಲ್ಲಿ ಕೆಲಸ ಆರಂಭಿಸುವಂತೆ ಸೂಚಿಸಿದರು.

ನನ್ನ ಅವಧಿಯಲ್ಲೇ ಅಗಲೀಕರಣ: ಯಾವುದೇ ಕಾರಣಕ್ಕೂ ಅಗಲೀಕರಣ ವಿಷಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನ ಅಧಿ ಕಾರವಧಿಯಲ್ಲೇ ಅದಕ್ಕೊಂದು ಹೊಸರೂಪ ಕೊಡುವವರೆಗೂ ಬಿಡುವುದಿಲ್ಲ. ಈಗಾಗಲೇ ಅಂತಿಮ ಹಂತಕ್ಕೆ ಬಂದಾಗಿದೆ. ಆದರೆ, ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದು, ಇದರಲ್ಲಿ ಮುಖ್ಯಮಂತ್ರಿಗಳ ಹೆಸರನ್ನು ತರುತ್ತಿರುವುದು ದುರದೃಷ್ಟಕರ. ಅವರ ಕೈಯಿಂದಲೇ ಉದ್ಘಾಟನೆ ಮಾಡಿಸುವುದಾಗಿ ತಿಳಿಸಿದರು.

ಅಕ್ರಮ ಸಕ್ರಮಕ್ಕೆ ನಿರ್ಧಾರ: ಪಟ್ಟಣದ ಬಸವೇಶ್ವರ ನಗರದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಾಸವಿದ್ದ ಜನರಿಗೆ ಮನೆಯ ಮಾಲೀಕತ್ವ ಸಿಗದಂತಾಗಿದೆ. ಪುರಸಭೆಯವರು ಸಹ ಅವರಿಗೆ ಖರೀದಿ ಕೊಡಲು ಅಥವಾ ಆಶ್ರಯ ಯೋಜನೆಯಡಿ ಹಂಚಿಕೆ ಮಾಡಲು ಸಾಧ್ಯವಿಲ್ಲ. ಇದೇ ರೀತಿ ಸುಭಾಸ್‌ ಪ್ಲಾಟ್‌, ಗಾಂಧಿ ನಗರ ಹಾಗೂ ಕದರಮಂಡಲಗಿ ರಸ್ತೆಗಳಲ್ಲಿ ಸಮಸ್ಯೆಗಳಿದ್ದು, ಅಕ್ರಮ ಸಕ್ರಮ ಅಳವಡಿಕೆಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಅನುಮತಿ ಕೇಳಿದ್ದಾಗಿ ಸಭೆಗೆ ತಿಳಿಸಿದರು.

ಕಾಲುವೆ-ರಸ್ತೆ ಎರಡನ್ನೂ ಮಾಡಿ: ಸದಸ್ಯ ಬಸವರಾಜ ಛತ್ರದ ಮಾತನಾಡಿ, ವೀರಶೈವ ಮುಕ್ತಿಧಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಎರಡೂ ಕಡೆಗಳಲ್ಲಿ ಕಾಲವೆಗಳನ್ನು ನಿರ್ಮಿಸಿಯೇ ಸಿಸಿ ರಸ್ತೆ ಮಾಡಬೇಕು. ಮಾರುಕಟ್ಟೆ ಎಪಿಎಂಸಿ ಪ್ರಾಂಗಣ ಸಂಪೂರ್ಣ ಕಾಂಕ್ರೀಟೀಕರಣವಾಗಿದ್ದು, ಸುಮಾರು 70 ಎಕರೆಯಲ್ಲಿ ನೀರು ಮುಕ್ತಿಧಾಮದ ರಸ್ತೆಗೆ ಹರಿದು ಬರುತ್ತದೆ. ಹೀಗಾಗಿ, ಕೇವಲ ರಸ್ತೆ ಮಾಡುವುದರಿಂದ ಅದೂ ಸಹ ಕಿತ್ತುಹೋಗುವ ಸಾಧ್ಯತೆಗಳು ಹೆಚ್ಚು ಎಂದರು.

Advertisement

ಹೈಮಾಸ್ಕ್ ದೀಪ ಅಳವಡಿಸಿ: ಸದಸ್ಯ ಈರಣ್ಣ ಬಣಕಾರ ಮಾತನಾಡಿ, ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಹೆಸ್ಕಾಂ ನೆರವಿನಿಂದ ಉಚಿತವಾಗಿ ವಿದ್ಯುತ್‌ ಕಂಬಗಳನ್ನು ಅಳವಡಿಸಿದ್ದು, ಅವುಗಳಿಗೆ ಪುರಸಭೆ ವತಿಯಿಂದ ಹೈಮಾಸ್ಕ್ ಬಲ್ಬ್ಗಳನ್ನು ಅಳವಡಿಸುವಂತೆ ಆಗ್ರಹಿಸಿದರು. ಇದಕ್ಕೆ ಸಭೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು. ಬಸ್‌ ನಿಲ್ದಾಣ ನಿರ್ಮಿಸಿ: ಸದಸ್ಯೆ ಗಾಯತ್ರಿ ರಾಯ್ಕರ್‌ ಮಾತನಾಡಿ, ನೆಹರು ನಗರದಲ್ಲಿ ಸಾರ್ವಜನಿಕರು ಬಸ್‌ ನಿಲ್ದಾಣವಿಲ್ಲದೇ ರಸ್ತೆ ಬದಿಯಲ್ಲಿ ನಿಂತುಸಾರಿಗೆ ಬಸ್‌ ಹತ್ತಬೇಕಾಗಿದೆ. ಕೂಡಲೇ ಪುರಸಭೆ ವತಿಯಿಂದ ನೆಹರು ನಗರದಲ್ಲಿ ಮೋಟೆಬೆನ್ನೂರ ರಸ್ತೆಗೆ ಹೊಂದಿಕೊಂಡು ಬಸ್‌ ಶೆಲ್ಟರ್‌ ನಿರ್ಮಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾ ಧಿಕಾರಿ ವಿ.ಎಂ.ಪೂಜಾರ, ಪುರಸಭೆ ಅನುದಾನದಲ್ಲಿ ಬೇಡ. ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರ ಅನುದಾನದಲ್ಲಿ ಬಸ್‌ ಶೆಲ್ಟರ್‌ ನಿರ್ಮಿಸೋಣ ಎಂದರು.

ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಮಂಜಣ್ಣ ಬಾರ್ಕಿ, ಜಮೀಲಾ ಹೆರRಲ್‌, ಸುಭಾಸ್‌ ಮಾಳಗಿ, ಸರೋಜಾ ಉಳ್ಳಾಗಡ್ಡಿ, ಮೆಹಬೂಬ್‌ ಅಗಸನಹಳ್ಳಿ, ಹನುಮಂತ ಮ್ಯಾಗೇರಿ,ಚಂದ್ರಣ್ಣ ಶೆಟ್ಟರ, ಮಂಗಳ ಗೆಜ್ಜೆಳ್ಳಿ, ಕಮಲವ್ವ ಕುರಕುಂದಿ, ಮಹ್ಮದ್‌ ರಫೀಕ್‌ ಮುದಗಲ್‌, ರೇಷ್ಮಾಬಾನು ಶೇಖ್‌, ಸಂಜೀವ ಮಡಿವಾಳರ, ಗಣೇಶ ಅಚಲಕರ, ಗಿರಿಜಾ ಪಟ್ಟಣಶೆಟ್ಟಿ, ಪ್ರೇಮಾ ಬೆನ್ನೂರ, ಹನುಮಂತ ಕೋಡಿಹಳ್ಳಿ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

‌ರಸ್ತೆ ಪಕ್ಕದಲ್ಲಿರುವ ಇಸ್ಲಾಂಪುರಗಲ್ಲಿ ಹಾಗೂ ಶಿವಪುರ ಬಡಾವಣೆ ಅಂಗನವಾಡಿ ಕಟ್ಟಡಗಳಿಗೆ ಸಂಪೂರ್ಣ ಕಾಂಪೌಂಡ್‌ಗಳನ್ನು ನಿರ್ಮಿಸಿ ಅಲ್ಲಿನ ಮಕ್ಕಳನ್ನು ಅಪಾಯದಿಂದ ಪಾರು ಮಾಡಿ. ಇಲ್ಲದಿದ್ದರೆ, ಅನಾಹುತ ತಪ್ಪಿದ್ದಲ್ಲ.  –ಶಂಕರ ಕುಸಗೂರ, ಪುರಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next