Advertisement

ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡುವ ಅಗತ್ಯವಿಲ್ಲ: ದಿನೇಶ್‌ ಗುಂಡೂರಾವ್‌

12:30 AM Jan 06, 2019 | |

ಬೆಂಗಳೂರು : ವಿಧಾನಸೌಧದ ಆವರಣದಲ್ಲಿ ಸಿಕ್ಕಿರುವ 25.76 ಲಕ್ಷ ರೂ.ಗಳಿಗೆ ಸಂಬಂಧಿಸಿದಂತೆ ಸಚಿವ ಸಿ.ಪುಟ್ಟರಗಶೆಟ್ಟಿ ರಾಜೀನಾಮೆ ನೀಡುವ ಅಗತ್ಯವಿಲ್ಲ ಹಾಗೂ ಪ್ರಕರಣ ಸಮಗ್ರ ತನಿಖೆ ನಡೆಯಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸಚಿವ ಪುಟ್ಟರಂಗಶೆಟ್ಟಿಯವರ ಕಚೇರಿ ಸಿಬ್ಬಂದಿ ಮೇಲೆ ಬಂದಿರುವ ಆರೋಪಕ್ಕೆ ಸಚಿವರ ರಾಜೀನಾಮೆ ಕೇಳುವುದು ಸರಿಯಲ್ಲ. ಪ್ರಕರಣದ ಸಮಗ್ರ ತನಿಖೆ ನಡೆಯಲಿ. ಕಾಂಗ್ರೆಸ್‌ ಶಾಸಕರ ಅಥವಾ ಸಚಿವರ ಮೇಲೆ ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಹಾಗಂತ ಯಾವುದೇ ತನಿಖೆ ನಡೆಯದೇ ಸಚಿವರ ರಾಜೀನಾಮೆ ಕೇಳುವುದು ಎಷ್ಟು ಸರಿ?. ಈ ಹಿಂದೆ ಸಚಿವ ಕೆ.ಜೆ.ಜಾರ್ಜ್‌ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದರು. ಅವರು ರಾಜೀನಾಮೆ ನೀಡುವ ಅಗತ್ಯವೇ ಇರಲಿಲ್ಲ. ರಾಜಕೀಯ ಒತ್ತಡಕ್ಕೆ ರಾಜೀನಾಮೆ ನೀಡಬೇಕಾಯಿತು. ಆರೋಪ ಸುಳ್ಳು ಎಂಬುದು ಸಾಬೀತು ಮಾಡಿ, ಮತ್ತೆ ಸಚಿವರಾಗಿದ್ದಾರೆ. ಹೀಗಾಗಿ ಪುಟ್ಟರಂಗಶೆಟ್ಟಿಯವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.

ಎಫ್ಐಆರ್‌ ಹಾಗೂ ದೂರುಗಳು ದಾಖಲಾಗುತ್ತಿರುತ್ತದೆ ಎಲ್ಲದಕ್ಕೂ ರಾಜೀನಾಮೆ ನೀಡುತ್ತಾ ಹೋದರೆ ಮಂತ್ರಿ ಮಂಡಲವೇ ಇರುವುದಿಲ್ಲ. ವಂಚನೆ, ಮೋಸ, ಲಂಚ ಪ್ರಕರಣ ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದು ಸರಿ ಎಂದು ತಿಳಿಸಿದರು.

ಜೆಡಿಎಸ್‌ ಒತ್ತಡ ಸಂಭವ
ಸಚಿವರೊಬ್ಬರ ಕಚೇರಿ ಸಹಾಯಕನ ಬಳಿ ಹಣ ಸಿಕ್ಕ ಪ್ರಕರಣ ಸಮ್ಮಿಶ್ರ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿರುವುದರಿಂದ ತನಿಖೆಯಲ್ಲಿ ಸಚಿವರು ತಪ್ಪಾಗಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಜೆಡಿಎಸ್‌ ವತಿಯಿಂದ ಕಾಂಗ್ರೆಸ್‌ ಮೇಲೆ ಒತ್ತಡ ತರುವ ಸಾಧ್ಯತೆಯಿದೆ. ಮಾಜಿ ಸಚಿವ ಬಸವರಾಜ ಹೊರಟ್ಟಿ ಸಹ, ತಕ್ಷಣವೇ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಲಿ, ತನಿಖೆಯಲ್ಲಿ ತಪ್ಪಿಲ್ಲ ಎಂಬುದು ಸಾಬೀತಾದರೆ ಮತ್ತೆ ಸಂಪುಟಕ್ಕೆ ಬರಲಿ ಎಂದು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next