ಲಕ್ನೋ(ಉತ್ತರಪ್ರದೇಶ):ರಾಮಜನ್ಮಭೂಮಿ-ಬಾಬ್ರಿ ಮಸೀದಿ ಸ್ಥಳ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಯೋಧ್ಯಾ ಜಿಲ್ಲೆಯ ಜನರು ವಾಟ್ಸಪ್, ಟ್ವೀಟರ್, ಟೆಲಿಗ್ರಾಮ್ ಹಾಗೂ ಇನ್ಸ್ ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ತೆರನಾದ ಮಾನಹಾನಿಕಾರಕ ವಿಷಯಗಳನ್ನು ಹಂಚಿಕೊಳ್ಳದಂತೆ ನಿರ್ಬಂಧ ವಿಧಿಸಲು ಉತ್ತರಪ್ರದೇಶ ಸರ್ಕಾರ ನಾಲ್ಕುಪುಟಗಳ ನಿರ್ದೇಶನವನ್ನು ಜಾರಿಗೊಳಿಸಿದೆ ಎಂದು ವರದಿ ತಿಳಿಸಿದೆ.
ಸುಮಾರು ಎರಡು ತಿಂಗಳ ಕಾಲ ಈ ನಿರ್ಬಂಧ ಅಯೋಧ್ಯೆಯಲ್ಲಿ ಮುಂದುವರಿಯಲಿದ್ದು, ಈ ಸಮಯದಲ್ಲಿ ವಿದ್ಯುನ್ಮಾನ ಮಾಧ್ಯಮ(ಟಿವಿ)ಗಳಲ್ಲಿ ನಡೆಯಲಿರುವ ಯಾವುದೇ ಚರ್ಚೆಯಲ್ಲಿಯನ್ನೂ ನಡೆಸದಂತೆ ನಿರ್ಬಂಧ ಹೇರಿದೆ.
ಅಯೋಧ್ಯಾ ಜಿಲ್ಲಾಧಿಕಾರಿ ಅನೂಜ್ ಕುಮಾರ್ ಝಾ ಅಕ್ಟೋಬರ್ 31ರಂದು ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ, ಈ ಆದೇಶ ಡಿಸೆಂಬರ್ 31ರವರೆಗೆ ಅಪರಾಧ ದಂಡ ಸಂಹಿತೆ ಸೆಕ್ಷನ್ 144ರ ಪ್ರಕಾರ ಜಾರಿಯಲ್ಲಿರುತ್ತದೆ. ಆದೇಶವನ್ನು ಉಲ್ಲಂಘಿಸುವವರ ಮೇಲೆ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದೆ.
ಯಾವುದೇ ಪ್ರತಿಷ್ಠಿತ ವ್ಯಕ್ತಿಗಳ, ದೇವರು, ವಿಗ್ರಹಗಳ ವಿರುದ್ಧದ ಯಾವುದೇ ಅವಹೇಳನಕಾರಿ ಪೋಸ್ಟ್ ಗೆ ಅವಕಾಶ ಇಲ್ಲ. ಜಿಲ್ಲೆಯಲ್ಲಿ ಯಾವುದೇ ಅನುಮತಿ ಇಲ್ಲದೆ ದೇವರು, ವಿಗ್ರಹವನ್ನು ಸ್ಥಾಪಿಸಲು ಅವಕಾಶ ಇಲ್ಲ ಎಂದು ಆದೇಶದಲ್ಲಿ ವಿವರಿಸಿದೆ.
ಅಯೋಧ್ಯಾದಲ್ಲಿನ ನಿಷೇಧದ ಹೈಲೈಟ್ಸ್:
*ತೀರ್ಪಿನ ದಿನ ಯಾವುದೇ ಮೆರವಣಿಗೆಗೆ ಅವಕಾಶ ಇಲ್ಲ.
*ಅನುಮತಿ ಇಲ್ಲದೆ ಚರ್ಚೆ ನಡೆಸಲು ಯಾವುದೇ ವಿದ್ಯುನ್ಮಾನ ಮಾಧ್ಯಮಕ್ಕೆ ಅವಕಾಶ ಇಲ್ಲ.
*ಸಾರ್ವಜನಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ
*ಯಾವುದೇ ರೀತಿಯಲ್ಲಿ ನಗರದಲ್ಲಿ ಮಾರಕಾಯುಧ ತೆಗೆದುಕೊಂಡು ಹೋಗುವಂತಿಲ್ಲ.
*ವಾಟ್ಸಪ್, ಫೇಸ್ ಬುಕ್, ಇನ್ಸ್ ಸ್ಟಾಗ್ರಾಮ್, ಟ್ವೀಟರ್ ನಲ್ಲಿ ಯಾವುದೇ ಪ್ರತಿಷ್ಠಿತ ವ್ಯಕ್ತಿಗಳ, ದೇವರು ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕುವಂತಿಲ್ಲ.