Advertisement

ಶಿಕ್ಷಕರು ಸಮಸ್ಯೆಯಲ್ಲಿದ್ದರೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ : ಸಚಿವ ಸುರೇಶ್‌ ಕುಮಾರ್‌

10:55 AM Oct 05, 2019 | Sriram |

ಬೆಂಗಳೂರು: ಶಿಕ್ಷಕರ ಸಮಸ್ಯೆಗಳ ನಿವಾರಣೆಗಾಗಿ ಉಪವಾಸ, ಪ್ರತಿಭಟನೆ ಮಾಡುವಂಥ ಪರಿಸ್ಥಿತಿ ಎದುರಾದರೆ ಯಾವುದೇ ದೇಶ ಅಥವಾ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

Advertisement

ಶುಕ್ರವಾರ ಮಹಾರಾಣಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಹೊಸ ವೃಂದ ಮತ್ತು ವೃಂದಬಲ ನಿಗದಿ, ವೃಂದ ಮತ್ತು ನೇಮಕಾತಿ ನಿಯಮಗಳು-2017ರ ಸಾಧಕ-ಬಾಧಕಗಳು ವಿಷಯದ ಕುರಿತು ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರಗತಿಯಲ್ಲಿ ಶಿಕ್ಷಣ ಕ್ಷೇತ್ರ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಜತೆಗೆ ಸಾಕಷ್ಟು ಸವಾಲು ಮತ್ತು ಅವಕಾಶಗಳೂ ಶಿಕ್ಷಣ ಕ್ಷೇತ್ರದಲ್ಲಿವೆ ಎಂದರು.

ಎಲ್ಲ ಸವಾಲುಗಳು ಒಂದೊಂದಾಗಿ ಎದುರಾಗುತ್ತಿದ್ದು, ಅವುಗಳ ನಿವಾರಣೆಗೆ ಸಾಕಷ್ಟು ಸಲಹೆ, ಸೂಚನೆಗಳೂ ಸಹ ಸಿಗುತ್ತಿವೆ. ಇದರಿಂದ ಹೊಸ ಅನುಭವ ಸಿಗುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿನ ಸವಾಲುಗಳನ್ನ ಅವಕಾಶಗಳನ್ನಾಗಿ ಮಾಡಿಕೊಂಡು ಕಾರ್ಯ ನಿರ್ವಹಿಸುವ ಆತ್ಮವಿಶ್ವಾಸವಿದೆ ಎಂದವರು ಹೇಳಿದರು.

ಶೀಘ್ರವೇ ಸಭೆ
ಸರಕಾರಿ ಶಾಲಾ ಪದವೀಧರ ಶಿಕ್ಷಕರ ಬೇಡಿಕೆಗಳು ನ್ಯಾಯ ಸಮ್ಮತವಾಗಿವೆ. ಹೀಗಾಗಿ ಶಿಕ್ಷಕರ ಎಲ್ಲ ಸಮಸ್ಯೆಗಳ ನಿವಾರಣೆಗೆಗಾಗಿ ಅ. 14ರ ಅನಂತರ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಜತೆಗೆ ಮಕ್ಕಳು ಮತ್ತು ಶಿಕ್ಷಕರಿಗೆ ಪೂರಕವಾಗುವಂಥ ಉತ್ತಮ ನಿರ್ಧಾರ ಕೈಗೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಸ್‌.ವೈ. ಸೊರಟ್ಟಿ ಮಾತನಾಡಿ, ಸರಕಾರ 2017ರಲ್ಲಿ ಶಿಕ್ಷಕರಿಗೆ ಮಾರಕವಾಗುವಂಥ ಹೊಸ ವೃಂದ ಮತ್ತು ವೃಂದಬಲ ನಿಗದಿ ಹಾಗೂ ಸಿ ಮತ್ತು ಆರ್‌ ಕುರಿತು ಆದೇಶ ಹೊರಡಿಸಿದೆ. ಈ ಆದೇಶ ತಿದ್ದುಪಡಿ ಕುರಿತು ಈಗಾಗಲೇ ಶಿಕ್ಷಕರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಜತೆಗೆ ತರಗತಿ ಬಹಿಷ್ಕರಿಸಿ ಹೋರಾಟ ಮಾಡಲಾಗಿದೆ.

Advertisement

ಆದರೂ ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಹೀಗಾಗಿ ಪ್ರಸ್ತುತ ರಾಜ್ಯ ಸರಕಾರ ಈ ಆದೇಶಗಳಿಗೆ ತುರ್ತಾಗಿ ತಿದ್ದುಪಡಿ ಮಾಡಬೇಕು. ರಾಜ್ಯದ ಎಲ್ಲ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿ ಪ್ರಾರಂಭಿಸಬೇಕು. ರಾಜ್ಯದ ಒಟ್ಟು ಶಿಕ್ಷಕರಲ್ಲಿ 81 ಸಾವಿರಕ್ಕೂ ಅಧಿಕ ಪದವೀಧರ ಶಿಕ್ಷಕರಿದ್ದು, ಅವರನ್ನು ಸೇವಾ ಜೇಷ್ಠತೆ ಆಧರಿಸಿ 6-8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನಾಗಿ ಮರು ನೇಮಕ ಮಾಡಬೇಕು. ಗುಣಮಟ್ಟದ ಶಿಕ್ಷಣಕ್ಕಾಗಿ 6-8ನೇ ತರಗತಿಯ ಎಲ್ಲ 6 ವಿಷಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಬಸವರಾಜ್‌ ಹೊರಟ್ಟಿ ಮಾತನಾಡಿ, ಶಿಕ್ಷಕರು ಮಾನಸಿಕ ನೆಮ್ಮದಿಯಿಂದ ಪಾಠ ಬೋಧಿಸಬೇಕು. ಆದರೆ ರಾಜ್ಯದಲ್ಲಿ ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಹಂತದಲ್ಲಿ ನೇಮಕ ಮಾಡಲಾಗುತ್ತಿದೆ. ಇದರಿಂದ ಆ ಶಿಕ್ಷಕರು ನೆಮ್ಮದಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ಅರ್ಹತೆಗೆ ಅನುಗುಣವಾಗಿ ದೇಶದಲ್ಲಿ ಜಾರಿಯಲ್ಲಿರುವ ಮೂರು ವಿಧದ ಶಿಕ್ಷಣ ನಿಯಮಗಳ ಪ್ರಕಾರ ಶಿಕ್ಷಕರ ನೇಮಕಾತಿ, ಮುಂಭಡ್ತಿ ಪ್ರಕ್ರಿಯೆ ನಡೆಯಬೇಕು. ಸದ್ಯ ಶಿಕ್ಷಕರ ನೇಮಕಾತಿ, ಮುಂಭಡ್ತಿ ಪ್ರಕ್ರಿಯೆಗಳು ಕಾನೂನು ಬದ್ಧವಾಗಿಲ್ಲ. ಹೀಗಾಗಿ ಭಡ್ತಿ ನಿಡುವಾಗ ಶೇ. 75ರಷ್ಟು ಜನರಿಗೆ ಮುಂಭಡ್ತಿ ನೀಡಬೇಕು. ಜತೆಗೆ ಶೇ. 25ರಷ್ಟು ಜನರನ್ನ ನೇಮಕ ಮಾಡಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next