Advertisement

“ಅಮೃತಕಾಲ’ದಲ್ಲಿ ದೇಶ ವಿಶ್ವಗುರು : ಟ್ಯಾಪ್ಮಿ ಘಟಿಕೋತ್ಸವದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌

11:00 PM May 14, 2022 | Team Udayavani |

ಉಡುಪಿ : ಡಿಜಿಟಲ್‌ ತಂತ್ರಜ್ಞಾನ, ತಂತ್ರಜ್ಞಾನ ಆಧಾರಿತ ಆರ್ಥಿಕ ಮತ್ತು ಶಿಕ್ಷಣದ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ ಶತಮಾನೋತ್ಸವದ ಅವಧಿಯ ಈ “ಅಮೃತಕಾಲ’ದಲ್ಲಿ ದೇಶವನ್ನು ವಿಶ್ವಗುರುವಾಗಿಸಲು ಅಗತ್ಯ ಕಾರ್ಯಯೋಜನೆ ಆರಂಭವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಪಾದಿಸಿದರು.

Advertisement

ನಗರದ ಅಮ್ಮಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ಶನಿವಾರ ಜರಗಿದ ಮಣಿ ಪಾಲ ಮಾಹೆ ವಿ.ವಿ.ಯ ಅಂಗಸಂಸ್ಥೆ ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌(ಟ್ಯಾಪ್ಮಿ)ನ 36ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ವಿಶ್ವಗುರು ಬರೀ ಕನಸಲ್ಲ. ಪ್ರಧಾನಿ ಮೋದಿಯವರ ಮುಂದಾಳತ್ವದಲ್ಲಿ ಇದಕ್ಕೆ ಪೂರಕ ಕೆಲಸ ಈಗಾಗಲೇ ಆರಂಭವಾಗಿದ್ದು, ಪ್ರತಿಯೊಬ್ಬರ, ಪ್ರತೀ ಸಂಸ್ಥೆಯ ಸಹಕಾರ ಅಗತ್ಯ. ಆರ್ಥಿಕ, ಶಿಕ್ಷಣದ ಜತೆಗೆ ಭವಿಷ್ಯವನ್ನು ಬೆಸೆಯುವುದರೊಂದಿಗೆ ದೇಶವನ್ನು ವಿಶ್ವಗುರು ಮಾಡುವ ಕಾರ್ಯ ನಡೆಯಲಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಗುತ್ತಿದೆ. ತಂತ್ರಜ್ಞಾನ ಆಧಾರಿತ ಆರ್ಥಿಕತೆಗೆ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಡಿಜಿಟಲ್‌ ವಿ.ವಿ. ಸ್ಥಾಪನೆಯ ಘೋಷಣೆ ಮಾಡಿದ್ದೇವೆ. ತಂತ್ರಜ್ಞಾನ, ಡಿಜಿಟಲೀಕರಣ, ಆಪ್ಟಿಕಲ್‌ ಫೈಬರ್‌ ಮತ್ತು ಇಂಟರ್‌ನೆಟ್‌ ಸೌಲಭ್ಯದ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಫಿನ್‌ಟಚ್‌, ತಂತ್ರಜ್ಞಾನ ಆಧಾರಿತ ಆರ್ಥಿಕತೆಯ ವಿಚಾರವಾಗಿ ನವೋದ್ಯಮಗಳು ಸಾಕಷ್ಟು ಕೊಡುಗೆ ನೀಡುತ್ತಿವೆ ಎಂದರು.

75 ಡಿಜಿಟಲ್‌ ಬ್ಯಾಂಕಿಂಗ್‌ ಕೇಂದ್ರ
ಆರ್‌ಬಿಐ ಮೂಲಕ ಡಿಜಿಟಲ್‌ ಕರೆನ್ಸಿಯನ್ನು ಪರಿಚಯಿಸಲಿದ್ದೇವೆ. ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 75 ಡಿಜಿಟಲ್‌ ಬ್ಯಾಂಕಿಂಗ್‌ ಕೇಂದ್ರಗಳನ್ನು ತೆರೆಯಲಿದ್ದೇವೆ ಮತ್ತು ಬಲ್ಕ್ ವ್ಯವಹಾರಕ್ಕೂ ಅವಕಾಶ ಮಾಡಿಕೊಡಲಿದ್ದೇವೆ. ಡಿಜಿಟಲ್‌ ಕ್ಷೇತ್ರದಲ್ಲಿ ಆಗುವ ಬದಲಾವಣೆಯ ಲಾಭ ಎಲ್ಲರಿಗೂ ಸಿಗಲಿದೆ. ಡ್ರೋನ್‌ ವ್ಯವಸ್ಥೆ ಬಳಸಿ ಜಮೀನು ಸರ್ವೇ, ದಾಖಲೆಗಳನ್ನು ಆನ್‌ಲೈನ್‌ ಮೂಲಕ ಪಡೆಯಲು ಸಾಧ್ಯವಾಗುತ್ತಿದೆ. ಇದರಿಂದ ಹೆಚ್ಚಿನ ಭದ್ರತೆಯ ಜತೆಗೆ ಅನೇಕ ಸೌಲಭ್ಯ ಸಾಮಾನ್ಯ ಜನರಿಗೆ ಸಿಗಲಿದೆ ಎಂದರು.

Advertisement

ಇದನ್ನೂ ಓದಿ : ಭಾರೀ ಗಾತ್ರದ ಸ್ಪರ್ಮ್ ವೇಲ್‌ ಸಾವು ! ಇದರ ಹೊಟ್ಟೆಯಲ್ಲಿತ್ತು ಚಿತ್ರ ವಿಚಿತ್ರ ವಸ್ತುಗಳು

ಗಿಫ್ಟ್ ಸಿಟಿ – ಹೂಡಿಕೆ
ಹೂಡಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಗುಜರಾತ್‌ನಲ್ಲಿ ಗಿಫ್ಟ್ ಸಿಟಿ ನಿರ್ಮಾಣ ಮಾಡುತ್ತಿದ್ದೇವೆ. ಶಿಕ್ಷಣ ಸಂಸ್ಥೆಗಳ ಸಹಿತ ಯಾರು ಬೇಕಾದರೂ ಇಲ್ಲಿ ಹೂಡಿಕೆ ಮಾಡಬಹುದು. ಡಿಜಿಟಲ್‌ ಅಥವಾ ಭೌತಿಕ ವ್ಯವಸ್ಥೆಯಡಿ ತೊಡಗಿಸಿಕೊಳ್ಳಬಹುದು. ಶಿಕ್ಷಣ ಸಂಸ್ಥೆಗಳು ಯುಜಿಸಿ ಅಥವಾ ಎಐಸಿಟಿಇ ಅನುಮತಿಯಿಲ್ಲದೆ ಗಿಫ್ಟ್ಸಿಟಿಯಲ್ಲಿ ಸೇವೆ ಸಲ್ಲಿಸಬಹುದು. ಗುಣಮಟ್ಟದ ಶಿಕ್ಷಕರಿಗೂ ಹೆಚ್ಚಿನ ಅವಕಾಶಗಳು ಇಲ್ಲಿವೆ ಎಂದರು.

ಆರ್ಥಿಕ ಅಂತರ ನಿವಾರಣೆ: ಮೈಕ್ರೋ ಇಕಾನಮಿ
ವಿದ್ಯಾವಂತರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೌಶಲ ಪಡೆದವರು ದೇಶದ ಸೂಕ್ಷ್ಮ ಆರ್ಥಿಕತೆ (ಮೈಕ್ರೊ ಇಕಾನಮಿ)ಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಪದವಿ ಪಡೆದು ಔದ್ಯೋಗಿಕ ರಂಗ ಪ್ರವೇಶ ಮಾಡುವವರಲ್ಲಿ ಕೌಶಲ ಇರುತ್ತದೆ. ಸೇರಿದ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಉತ್ತಮ ಸೇವೆ ಸಲ್ಲಿಸಿದರೆ ಸಾಲದು, ಸಮಾಜಕ್ಕೆ ಉಪಯೋಗವಾಗುವಂತೆ ಕಾರ್ಯನಿರ್ವಹಿಸಬೇಕು. ಆರ್ಥಿಕ ವ್ಯವಸ್ಥೆಯಲ್ಲಿ ನಿರ್ಮಾಣವಾಗಿರುವ ಅಂತರ ನಿವಾರಿಸುವ ನಿಟ್ಟಿನಲ್ಲಿ ಕೌಶಲ ಪಡೆದವರು ಮೈಕ್ರೊ ಇಕಾನಮಿಗೆ ಹೆಚ್ಚು ಕೊಡುಗೆ ನೀಡುವಂತಾಗಬೇಕು. ಔದ್ಯೋಗಿಕ ರಂಗ ಪ್ರವೇಶ ಮಾಡುತ್ತಿರುವ ನಿಮಗೆ (ಪದವೀಧರ ಅಭ್ಯರ್ಥಿಗಳು) ಟಿ.ಎ. ಪೈ ಅವರ ಸಾಮಾಜಿಕ ಕಳಕಳಿ ಆದರ್ಶವಾಗಬೇಕು ಎಂದು ಸಲಹೆ ನೀಡಿದರು.

ಟ್ಯಾಪ್ಮಿ ಗವರ್ನಿಂಗ್‌ ಕೌನ್ಸಿಲ್‌ ಮೆಂಬರ್‌ ಮತ್ತು ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು ಘಟಿಕೋತ್ಸವವನ್ನು ಘೋ ಷಿ ಸಿ ದರು. ಟೆನೋವಿಯಾ ಸಂಸ್ಥೆಯ ಸಹ ಸಂಸ್ಥಾಪಕಿ ಸೋನು ಸೋಮಪಾಲನ್‌ ಮುಖ್ಯ ಅತಿಥಿಯಾಗಿದ್ದರು.

ಟ್ಯಾಪ್ಮಿ ನಿರ್ದೇಶಕ ಪ್ರೊ| ಮಧು ವೀರರಾಘವನ್‌ ಸ್ವಾಗತಿಸಿ, ಟ್ಯಾಪ್ಮಿಯ ಕಾರ್ಯಸಾಧನೆಯನ್ನು ವಿವರಿಸಿದರು. ಪ್ರೊ| ಹ್ಯಾಪಿ ಪೌಲ್‌ ವಂದಿಸಿದರು. ಪ್ರೊ| ಜೀವನ್‌ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ : ತ್ರಿಪುರಾ ನೂತನ ಸಿಎಂ ಆಗಿ ಮಾಣಿಕ್‌ ಸಾಹಾ ಆಯ್ಕೆ : ಯಾರಿವರು ಮಾಣಿಕ್‌ ಸಾಹಾ?

ಉನ್ನತ ಶಿಕ್ಷಣದ ಹಬ್‌: ನಿರ್ಮಲಾ ಮೆಚ್ಚುಗೆ
ಉಡುಪಿ, ಮಣಿಪಾಲ ಸಹಿತ ಈ ಪ್ರದೇಶವನ್ನು ಉನ್ನತ ಶಿಕ್ಷಣದ ಹಬ್‌ ಆಗಿ ರೂಪಿಸುವಲ್ಲಿ ಪೈ ಕುಟುಂಬದ ಕೊಡುಗೆ ಮಹತ್ವದ್ದಾಗಿದೆ. ಬ್ರಿಟಿಷ್‌ ಆಳ್ವಿಕೆಯ ಸಂದರ್ಭದಲ್ಲಿ ಕರಾವಳಿ ಭಾಗದವರು ಉನ್ನತ ಶಿಕ್ಷಣ ಸಂಸ್ಥೆಗಳ ಕೊರತೆ ಎದುರಿಸುತ್ತಿದ್ದರು. ಉನ್ನತ ಶಿಕ್ಷಣಕ್ಕೆ ಮದ್ರಾಸ್‌, ಮುಂಬಯಿ ಅಥವಾ ಬೆಂಗಳೂರಿಗೆ ಹೋಗಬೇಕಿತ್ತು. ಇದನ್ನು ಅರಿತ ಟಿ.ಎಂ.ಎ. ಪೈ ಸಹಿತವಾಗಿ ಇಡೀ ಕುಟುಂಬವು ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಒಂದೊಂದೇ ಸಂಸ್ಥೆಗಳನ್ನು ಆರಂಭಿಸಿತು. ಈಗ ಭಾರತದ ಸಹಿತ ವಿದೇಶ ಕೂಡ ಮಣಿಪಾಲವನ್ನು ಹುಬ್ಬೇರಿಸಿ ನೋಡುವಂತಹ ರೀತಿಯಲ್ಲಿ ಶೈಕ್ಷಣಿಕ ಹಬ್‌ ಆಗಿ ರೂಪುಗೊಂಡಿದೆ. ಟಿ.ಎ. ಪೈ ಅವರು ಸದಾ ಸಮಾಜದ ಏಳ್ಗೆಯ ಬಗ್ಗೆಯೇ ಯೋಚಿಸುತ್ತಿದ್ದರು ಮತ್ತು ಯಾವ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂಬುದನ್ನೇ ಆಲೋಚಿಸುತ್ತಿದ್ದರು. ಹೀಗಾಗಿಯೇ ಈ ಪ್ರದೇಶ ಹೆಚ್ಚಿನ ಹಣಕಾಸು ಸಂಸ್ಥೆಗಳನ್ನು(ಬ್ಯಾಂಕ್‌) ಪಡೆಯಲು ಸಾಧ್ಯವಾಗಿದೆ. ಹಣಕಾಸಿನ ನಿರ್ವಹಣೆ, ಆರ್ಥಿಕ ನಿರ್ವಹಣೆ, ಜವಾಬ್ದಾರಿಯ ನಿರ್ವಹಣೆ ಹೇಗಿರಬೇಕು ಎಂಬ ಮೇಲ್ಪಂಕ್ತಿಯನ್ನು ಅವರು ಶಿಕ್ಷಣ ಸಂಸ್ಥೆಯ ಮೂಲಕ ಹಾಕಿಕೊಟ್ಟಿದ್ದಾರೆ ಎಂದು ನಿರ್ಮಲಾ ಸೀತಾ ರಾ ಮನ್‌ ಬಣ್ಣಿ ಸಿ ದರು. ಶ್ಯಾಮ ಪ್ರಸಾದ್‌ ಮುಖರ್ಜಿ, ಟಿ.ಎ. ಪೈ ಅವರು ಕೇಂದ್ರ ಸಚಿವರಾಗಿ ನಡೆಸಿದ ಕಾರ್ಯವನ್ನು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next