Advertisement

ಊರು ಸೇರಿದ ನಿಪ್ಪಾಣಿ ಕನ್ನಡಿಗ ಪ್ರಯಾಣಿಕರು

08:51 AM May 22, 2020 | mahesh |

ಉಡುಪಿ / ಮಂಗಳೂರು: ನಿಪ್ಪಾಣಿಯಲ್ಲಿ ಸಿಲುಕಿದ್ದ ಸುಮಾರು 31 ಕನ್ನಡಿಗ ಪ್ರಯಾಣಿಕರು ಕೊನೆಗೂ ತಮ್ಮ ತಮ್ಮ ಊರು ಸೇರಿದ್ದು, ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ. ಮುಂಬಯಿಯಿಂದ ಬಸ್ಸಿನಲ್ಲಿ ಹೊರಟ 31 ಪ್ರಯಾಣಿಕರು ಮುಂಬಯಿ ಪಾಸನ್ನು ಮಾತ್ರ ಪಡೆದಿದ್ದರು. 4,500 ರೂ. ಪಡೆದು ಬಸ್ಸಿನ ಏಜೆನ್ಸಿಯವರು ಅವರಿಗೆ ಬಸ್‌ ಟಿಕೆಟನ್ನು ಮಾಡಿಕೊಟ್ಟಿದ್ದರು. ಕರ್ನಾಟಕದ “ಇ ಪಾಸ್‌’ ಮೂಲಕ ನಿಮ್ಮ ಮೊಬೈಲ್‌ಗ‌ಳಿಗೆ ಬರುತ್ತದೆ ಎಂದು ಭರವಸೆ ಕೊಟ್ಟು ಸಾಗಹಾಕಿದ್ದರು. ಆದರೆ ಕರ್ನಾಟಕದ ಗಡಿ ತಲುಪಿದರೂ ಪಾಸ್‌ ಬರದೇ ಇದ್ದಾಗ ಪ್ರಯಾಣಿಕರು ಕಂಗಾಲಾದರು. ಮುಂಬಯಿಯ ಕೋವಿಡ್ ಬಾಧೆಯಿಂದ ಕರ್ನಾಟಕ ನಲುಗಿ ಹೋಗಿರುವ ಕಾರಣ ಮುಂಬಯಿಗರ ಒಳಪ್ರವೇಶ ಅಸಾಧ್ಯವಾಗಿತ್ತು.

Advertisement

ಮಹಿಳೆಯರು, ವೃದ್ಧರು, ಗರ್ಭಿಣಿಯರು, ಮಕ್ಕಳು ನಾಲ್ಕು ದಿನಗಳಿಂದ ಅನ್ನಾಹಾರದ ಕೊರತೆ ಅನುಭವಿಸುತ್ತ ಬಸ್ಸಿನೊಳಗೇ ದಿಕ್ಕೆಟ್ಟು ಕುಳಿತಿದ್ದರು. ಈ ಬಗ್ಗೆ ಪ್ರಯಾಣಿಕರು ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ವಿಚಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ಬಂದಿದ್ದು, ಅವರ ಆಗ್ರಹದ ಮೇರೆಗೆ ಮಾನವೀಯ ನೆಲೆಯಲ್ಲಿ ರಾಜ್ಯ ಸರಕಾರವು ಅವರಿಗೆ ಗಡಿಯ ಬಾಗಿಲನ್ನು ತೆರೆಯಿತು.

ಮಾನವೀಯತೆ ಮೆರೆದವರು
ಪ್ರಮುಖರಾದ ಮಹಮ್ಮದ್‌ ಮತೀನ್‌, ಸುರೇಶ ಶೆಟ್ಟಿ ಯೆಯ್ನಾಡಿ, ದಿನೇಶ ಕಾಪು ಅವರು ಸುಮಾರು 10,000 ರೂ. ಖರ್ಚು ಮಾಡಿ ನಿಪ್ಪಾಣಿಯಲ್ಲಿ ಸಂತ್ರಸ್ತರಾದ ಕನ್ನಡಿಗರನ್ನು ಉಡುಪಿಗೆ ತಲುಪಿಸುವ ವ್ಯವಸ್ಥೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next