Advertisement

ಕೊಟ್ಟೂರು ತೇರು ಉರುಳಿ ಒಂಬತ್ತು ಜನರಿಗೆ ಗಾಯ

10:38 AM Feb 22, 2017 | Harsha Rao |

ಕೊಟ್ಟೂರು / ಕೂಡ್ಲಿಗಿ: ಕೊಟ್ಟೂರಿನ ಐತಿಹಾಸಿಕ  ಶ್ರೀ ಗುರುಬಸವೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತಿದ್ದ ವೇಳೆ ತೇರು ಉರುಳಿ ಬಿದ್ದು 9 ಜನರು ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

Advertisement

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಜೆ 5.12ಕ್ಕೆ ರಥೋತ್ಸವ ಆರಂಭವಾಗಿತ್ತು. ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಸುಮಾರು 300 ಅಡಿ ದೂರಕ್ಕೆ ಸಂಚರಿಸಿ ಮತ್ತೂಂದು ತುದಿಯಲ್ಲಿನ ಬಸವಣ್ಣನ ದೇವಸ್ಥಾನದ ಪಾದಗಟ್ಟೆಗೆ ತೆರಳಿ ಮರಳುವಾಗ ರಥಬೀದಿಯಲ್ಲಿ ಸಂಜೆ 6.52ರ ಸುಮಾರಿಗೆ ರಥದ ಗಾಲಿಗಳ ಅಚ್ಚು ಮುರಿದು ಉರುಳಿ ಬಿದ್ದಿದೆ.  

ಬಿದ್ದಿರುವ ರಥವನ್ನು ಎತ್ತಲು ಕ್ರೇನ್‌ ತರಿಸಲಾ ಗಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಘಟನಾ ಸ್ಥಳದ ಸಮೀಪಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ರಥದ ಅಡಿ ಸಿಲುಕಿದ್ದ ಹತ್ತಾರು ಜನರನ್ನು ಪೊಲೀಸರು, ಗೃಹರಕ್ಷಕ ದಳದವರು ಮತ್ತು ಸ್ಥಳೀಯರು ಸುರಕ್ಷಿತವಾಗಿ ಹೊರತೆಗೆಯಲು ಶ್ರಮಿಸಿದರು.

ತೇರು ಎಳೆಯುವ ದಾರಿಯಲ್ಲಿ ಪ್ರತಿ ವರ್ಷ ದಂತೆ ಈ ವರ್ಷವೂ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಸಂಭಾವ್ಯ ದೊಡ್ಡ ಅನಾಹುತ ತಪ್ಪಿದೆ. 

ರಾಜ್ಯದ ಅತಿ ಎತ್ತರದ ರಥ
ಸುಮಾರು 110 ವರ್ಷಗಳಷ್ಟು ಹಳೆಯದಾದ ಈ ತೇರು ಬಹಳ ಸುಂದರವಾಗಿದೆ. ತೇರುಗಡ್ಡೆಯನ್ನು ಹೊರಹಾಕಿದ ಬಳಿಕ ಕೂಡ್ಲಿಗಿ ವಠಾರದ ಸುಮಾರು 50ಕ್ಕೂ ಹೆಚ್ಚು ಆಯಾಗಾರರು 20 ದಿನ ಹಗಲಿರುಳು ಶ್ರಮಿಸಿ ಪ್ರತಿವರ್ಷವೂ ರಥ ಕಟ್ಟಿ ಪೂರ್ಣಗೊಳಿಸುತ್ತಾರೆ. ಸುಮಾರು 25 ಅಡಿ ಎತ್ತರವಿರುವ ತೇರುಗಡ್ಡೆ ತೇಗದ ಮರದಿಂದ ನಿರ್ಮಿತವಾಗಿದೆ. ತಾಳೆಯ ಮರಗಳಿಂದ ಎಂಟು ಅಡಿ ಎತ್ತರದ ದಿನ್ನಿಗಳನ್ನು ತಯಾರಿಸಿ, ರಥದ ಮೇಲೆ ನಾಲ್ಕು ಅಂಕಣಗಳನ್ನು ನಿರ್ಮಿಸುತ್ತಾರೆ. 15 ಅಡಿ ಎತ್ತರದ ಜಲ್ಲಿಯ ಮೇಲೆ ಐದು ಅಡಿ ಎತ್ತರವಿರುವ ಕಳಸಾರೋಹಣ ಮಾಡುತ್ತಾರೆ.

Advertisement

ಇವೆಲ್ಲವೂ ಸೇರಿ 60ಕ್ಕೂ ಹೆಚ್ಚು ಅಡಿ ಎತ್ತರವಾಗುವ ಈ ತೇರು ರಾಜ್ಯದಲ್ಲೇ ದೊಡ್ಡದೆಂಬ ಖ್ಯಾತಿಯನ್ನೂ ಹೊಂದಿದೆ. ರಥ ಎಳೆಯಲು ಪ್ರತಿ ವರ್ಷವೂ ಹೊರ ರಾಜ್ಯದಿಂದ ಮಿಣಿ (ಹಗ್ಗ) ತರಿಸುತ್ತಾರೆ. ಈ ತೇರಿಗೆ ಆರು ಗಾಲಿಗಳಿವೆ. ಅವುಗಳನ್ನು ಆರು ವರ್ಷಗಳಿಗೊಮ್ಮೆ ಬದಲಿಸಲಾಗುತ್ತದೆ. ಈ ಸಲವೂ ದುರಸ್ತಿ ಮಾಡಿಸಲಾಗಿತ್ತು.ರಥೋತ್ಸವಕ್ಕೆ ಮೊದಲು ಪರಿಶೀಲನೆಯನ್ನೂ ಮಾಡಲಾಗಿತ್ತು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಗಾಯಗೊಂಡವರ ವಿವರ ಇಂತಿದೆ:
ಗುರುಬಸವವಾಜ (45), ಚೇತನ್‌ (21), ಮರಿಯಾಬಿ (65), ದೇವರಾಜ (25), ಚಂದ್ರಶೇಖರ ಗೌಡ (61), ಕರಿಬಸಪ್ಪ (18), ರಾಘವೇಂದ್ರ (19), ಸಿದ್ದನಗೌಡ (71), ಬಸವರಾಜ (33), ಜತ್ತೂರಯ್ಯ (60), ಕೊಟ್ಟೂರಸ್ವಾಮಿ (45), ಗುರುಸಿದ್ದಯ್ಯ (60), ಗುಜ್ಜಪ್ಪ (18), ಅಂಬಿಕಾ (19), ಅಜ್ಜಯ್ಯ (19).

ಅಂಬಿಕಾ ಹಾಗೂ ಗುರುಬಸವರಾಜ್‌ ತಲೆಗೆ ಪೆಟ್ಟು ಬಿದ್ದಿದ್ದು, ಚಿಂತಾಜನಕ ಸ್ಥಿತಿಯಲ್ಲಿ ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಐವರನ್ನು ದಾವಣಗೆರೆಗೆ ದಾಖಲಿಸಲಾಗಿದೆ. ಮರಿಯಾಬಿ ಅವರನ್ನು ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ. ಸಂಸದ ಬಿ. ಶ್ರೀರಾಮುಲು, ಶಾಸಕರಾದ ಭೀಮಾನಾಯ್ಕ, ಬಿ.ಎಂ. ನಾಗರಾಜ್‌ ಮೊದಲಾದ ರಾಜಕೀಯ ಮುಖಂಡರೂ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಡಿಎಚ್‌ಒ, ತಾಲೂಕು ವೈದ್ಯಾಧಿಕಾರಿಗಳು ಹಾಗೂ ಇತರ ವೈದ್ಯರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳ ಉಪಚಾರದಲ್ಲಿ ಸ್ವಯಂಪ್ರೇರಿತರಾಗಿ ತೊಡಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next