Advertisement
ಸುಬ್ರಹ್ಮಣ್ಯ ಧಾರೇಶ್ವರ ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ. ಬದುಕಿನ ಬಹುಭಾಗವನ್ನು ತಿರುಗಾಟದಲ್ಲಿಯೇ ಕಳೆದವರು. ಕಾಳಿಂಗ ನಾವಡರಿಂದ ಪ್ರೇರಿತರಾಗಿ ಭಾಗವತಿಕೆಯ ಕಡೆಗೆ ಮನಮಾಡಿದ ಧಾರೇಶ್ವರರು ಗುರುಗಳಾಗಿ ಗೌರವಿಸಿದ್ದು ನಾರ್ಣಪ್ಪ ಉಪ್ಪೂರರನ್ನು. ಮಹಾನ್ ಮದ್ದಲೆಗಾರ ದುರ್ಗಪ್ಪ ಗುಡಿಗಾರರ ತುಂಬು ಪ್ರೋತ್ಸಾಹ ಇವರ ಯಶಸ್ಸಿನಲ್ಲಿ ಪ್ರಧಾನ ಪಾತ್ರವಹಿಸಿತ್ತು.
ಪಾರ್ತಿಸುಬ್ಬನ ಊರಿನಿಂದ ಯಕ್ಷಗಾನ ಕ್ಷೇತ್ರಕ್ಕೆ ಕೊಡಲ್ಪಟ್ಟ ಪ್ರತಿಭಾವಂತ ಕಲಾವಿದ ಕುಂಬ್ಳೆ ಶ್ರೀಧರ ರಾವ್. 68ರ ಹರಯದಲ್ಲಿಯೂ ಬತ್ತದ ಉತ್ಸಾಹ. ಕುಂಬ್ಳೆ ಚಂದು ಮತ್ತು ಕುಂಬ್ಳೆ ಕಮಲಾಕ್ಷರಲ್ಲಿ ನಾಟ್ಯ ಕಲಿತು ಮೊದಲಿಗೆ ಸೇರಿದ್ದು ಇರಾ ಮೇಳಕ್ಕೆ ನಂತರ ಕೂಡ್ಲು, ಮೂಲ್ಕಿ ಕರ್ನಾಟಕ ಮೇಳಗಳಲ್ಲಿ ದುಡಿದು ಧರ್ಮಸ್ಥಳಕ್ಕೆ ಪಾದಾರ್ಪಣೆ.
ಸ್ತ್ರೀ ವೇಷದಲ್ಲಿ ಮಿಂಚಿದ ಶ್ರೀಧರ ರಾಯರಿಗೆ ಕೃತಕ ಸ್ವರದ ವ್ಯಾಮೋಹವಿಲ್ಲ. ಪಾತ್ರಕ್ಕೆ ಒಪ್ಪುವ ಮುಖ, ಲಾಲಿತ್ಯಪೂರ್ಣ ಆಂಗಿಕಾಭಿನಯ, ಪ್ರಬುದ್ಧ ಮಾತುಗಾರಿಕೆ, ಚುರುಕಿನ ನಾಟ್ಯ, ಪ್ರಸಂಗಕ್ಕೆ ಪೂರಕವಾಗುವ ಪರಿಪಕ್ವತೆ ಇವುಗಳಿಂದಾಗಿ ರಾಯರು ಗೆದ್ದಿದ್ದಾರೆ. ಶೇಣಿಯವರಿಂದ ಮಾತುಗಾರಿಕೆಗೆ ಪ್ರೇರಣೆ ದೊರಕಿದ್ದು ಎನ್ನುವ ಇವರು ಪ್ರಸಂಗಕ್ಕೆ ಬೇಕಾದಷ್ಟು ಮಾತನಾಡುತ್ತಾರೆ. ಪ್ರಕೃತ ವಯೋ ಸಹಜ ಮಿತಿಗಳಿಂದ ಪುರುಷ ಪಾತ್ರ ನಿರ್ವಹಿಸುವ ಇವರಿಗೆ ಅನೇಕ ಸನ್ಮಾನಗಳು ದೊರೆತಿವೆ. ಇದೀಗ ಹಿರಿಯ ಕಲಾವಿದ ಕರುವೋಳು ದೇರಣ್ಣ ಶೆಟ್ಟಿ ಅವರ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿಯೂ ಸೇರ್ಪಡೆಯಾಗುತ್ತದೆ.
Related Articles
ಬಣ್ಣದ ಬದುಕಿನಲ್ಲಿ 42 ಸಂವತ್ಸರ ಸವೆಸಿದ ಬೆಳ್ಳಾರೆ ಮಂಜುನಾಥ ಭಟ್ಟರಿಗೆ ಈಗ 58 ವರ್ಷ. ವೈದಿಕ ಮನೆತನದಲ್ಲಿ ಹುಟ್ಟಿ ಬೆಳೆದ ಇವರಿಗೆ ಕಲಾವಾಸನೆ ಸಹಜವಾಗಿ ದೊರಕಿತ್ತು. ಚೆಂಡೆ ಮದ್ದಳೆ ವಾದನ ಭಟ್ಟರಲ್ಲಿಯೂ ಆಸಕ್ತಿ ಬೆಳೆಯಲು ಕಾರಣವಾಯಿತು. ಧರ್ಮಸ್ಥಳದ ತರಬೇತಿ ಕೇಂದ್ರದಲ್ಲಿ ಸೇರಿ, ಪಡ್ರೆ ಚಂದು ಗುರುಗಳಾಗಿದ್ದಾಗ ಧಾರಾಳ ಕಲಿತರು. ಕೂಡ್ಲು ಮೇಳದಲ್ಲಿ ಗೆಜ್ಜೆ ಕಟ್ಟಿದರೂ ದೀರ್ಘಕಾಲದ ತಿರುಗಾಟ ಕಟೀಲು ಮೇಳದಲ್ಲಿ. ಬಾಲಗೋಪಾಲ ವೇಷದಿಂದ ತೊಡಗಿ ಕಂಸನ ವರೆಗೆ, ಎಲ್ಲಾ ರೀತಿಯ ವೇಷಗಳನ್ನು ಮಾಡಿದ ಅನುಭವಿ. ಎದುರು ವೇಷದಲ್ಲಿ ಮೆರೆಯುವ ಭಟ್ಟರು ಚೌಕಿಯಲ್ಲಿ ಸಹನಾ ಮೂರ್ತಿ. ಸಹಕಲಾವಿದರಿಗೆ ಸಹಕಾರಿಯಾಗಿದ್ದು ರಂಗನಡೆಯನ್ನು ಚೆನ್ನಾಗಿ ಬಲ್ಲ ಪ್ರಬುದ್ಧ ಕಲಾವಿದ. ಆರಕ್ಕೇರದೆ ಮೂರಕ್ಕೆ ಇಳಿಯದೆ ರಂಗಸ್ಥಳ ತುಂಬಬಲ್ಲ ವ್ಯಕ್ತಿತ್ವ. ದುಂಡಗಿನ ಮುಖ, ಆಯದ ಆಳಂಗ, ತೂಕದ ಮಾತು ಬೆಳ್ಳಾರೆಯವರ ಸಂಪತ್ತು. ಅನೇಕ ಕಡೆ ನಾಟ್ಯ ತರಬೇತಿ ತರಗತಿಗಳನ್ನು ನಡೆಸಿದ ಅನುಭವಿ. ತೃಪ್ತ ಸಂಸಾರಿ ಹಾಗೂ ಸಂತೃಪ್ತ ಕಲಾವಿದ ಮಂಜುನಾಥ ಭಟ್ಟರನ್ನು ಹಲವರು ಸನ್ಮಾನಿಸಿದ್ದಾರೆ. ಇದೀಗ ಹಿರಿಯ ಚೇತನ ಕುರಿಯ ವಿಠಲ ಶಾಸ್ತ್ರಿಗಳ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿ ಕಳಶ ಪ್ರಾಯವಾಗಿ ಸಲ್ಲುತ್ತದೆ.
Advertisement
ಉದಯಶಂಕರ್ ನೀರ್ಪಾಜೆ