Advertisement

ಬೆಳಕು ಬೀರುವ ಕಿಟಿಕಿಗಳಾಗಿ ಸದಾ ತೆರೆದಿರಲಿ

11:40 PM Jun 30, 2022 | Team Udayavani |

ಮಂಗಳೂರು ಸಮಾಚಾರ ಮೊದಲ ಸಂಚಿಕೆ 1843ರ ಜುಲೈ 1ರಂದು ಮಂಗಳೂರಿನಿಂದ ಪ್ರಕಟ ವಾಯಿತು. ಕನ್ನಡ ಪತ್ರಿಕಾ ರಂಗದ ಮೊದಲ ಆವೃತ್ತಿ ಹೊರಬಂದ ದಿನವನ್ನು ಸ್ಮರಿಸುವು ದಕ್ಕಾಗಿ ಜುಲೈ 1 ಅನ್ನು “ಪತ್ರಿಕಾ ದಿನ’ವಾಗಿ ಆಚರಿಸಲಾಗುತ್ತಿದೆ.

Advertisement

“ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಇಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾ ಚಾರ, ಮಾರ್ಗ ಮರ್ಯಾದೆಗಳನ್ನು ತಿಳಿಯದೆ ಕಿಟಕಿ ಗಳಿಲ್ಲದ ಬಿಡಾರದಲ್ಲಿ ಉಳಿಸಿಕೊಳ್ಳುವವರ ಹಾಗೆಯಿರುತ್ತಾ ಬಂದವರು. ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ಒಳಗೆ ಸ್ವಲ್ಪ ಬೆಳಕು ಬೀರುವ ಹಾಗೆಯೂ ನಾಲ್ಕು ದಿಕ್ಕಿಗೆ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷಕ್ಕೆ ಒಂದು ಬಾರಿ ಸಿದ್ಧ ಮಾಡಿ ಅದನ್ನು ಓದ ಬೇಕೆಂದಿರುವೆಲ್ಲರಿಗೆ ಕೊಟ್ಟರೆ ಕಿಟಿಕಿಗಳನ್ನು ನೋಡಿದ ಹಾಗಾಗಿರುವುದು’ ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಸಿ ಕೊಂಡಿರುವ ರೆವರೆಂಡ್‌ ಹರ್ಮನ್‌ ಫ್ರೆಡರಿಕ್‌ ಮೊಗ್ಲಿಂಗ್‌ ಕನ್ನಡ ಮೊದಲ ವಾರ್ತಾಪತ್ರಿಕೆ ಮಂಗಳೂರು ಸಮಾಚಾರದ ಮೊದಲ ಸಂಚಿಕೆಯ ಸಂದರ್ಭದಲ್ಲಿ ಪತ್ರಿಕೆಯ ಉದ್ದೇಶವನ್ನು ತೆರೆದಿರಿಸಿದ್ದು ಹೀಗೆ.

ಕನ್ನಡ ವಾರ್ತಾಪತ್ರಿಕೆ ಆರಂಭಗೊಂಡು 179 ವರ್ಷಗಳಾಗಿವೆ. ಪತ್ರಿಕೆಗಳ ವ್ಯಾಖ್ಯಾನ, ಸ್ವರೂಪ, ವಿನ್ಯಾಸ, ರೀತಿ ಸಿದ್ಧಾಂತಗಳಲ್ಲಿ ಸ್ಥಿತ್ಯಂತರವಾಗಿರ ಬಹುದು. ಪರ್ಯಾಯ ಮಾಧ್ಯಮಗಳು ಬಂದಿರ ಬಹುದು. ಆದರೆ ಜನರ ಧ್ವನಿಯಾಗಿ, ಸಮಾಜದ ಕೈಗನ್ನಡಿಯಾಗಿ ಕನ್ನಡ ಪತ್ರಿಕೆಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ನಾಗರಿಕ ಜಗತ್ತಿನಲ್ಲಿ ತಮ್ಮದೇ ಆದ ಸ್ಥಾನವನ್ನು ಉಳಿಸಿಕೊಂಡಿವೆ. ಹರ್ಮನ್‌ ಮೊಗ್ಲಿಂಗ್‌ ಅವರು ಹೇಳಿದಂತೆ ಹೊರಗಿನ ಆಗುಹೋಗುಗಳಿಗೆ ಕಿಟಿಕಿಗಳಾಗಿ ತನ್ನ ಪ್ರಾಮುಖ್ಯವನ್ನು ಉಳಿಸಿಕೊಂಡಿವೆ.

ಕನ್ನಡ ಪತ್ರಿಕೋದ್ಯಮದ ಚರಿತ್ರೆ ಬಾಸೆಲ್‌ ಮಿಶನ್‌ ಸಂಸ್ಥೆಯಿಂದ ಆರಂಭಗೊಂಡಿತು. “ರೆವರೆಂಡ್‌ ಹರ್ಮನ್‌ ಮೊಗ್ಲಿಂಗ್‌’ ಸಂಪಾದಕತ್ವದಲ್ಲಿ ಮಂಗಳೂರಿನಲ್ಲಿ ಕನ್ನಡದ ಮೊತ್ತಮೊದಲ ವಾರ್ತಾ ಪತ್ರಿಕೆ “ಮಂಗಳೂರ ಸಮಾಚಾರ’ 1843ರ ಜುಲೈ 1ರಂದು ಜನ್ಮತಾಳಿತು. 4 ಪುಟಗಳ ಈ ಪತ್ರಿಕೆಯ ಬೆಲೆ ಅಂದಿನ ಒಂದಾಣೆ (ನಾಲ್ಕು ಪೈಸೆ). ಪತ್ರಿಕೆ ಸುಮಾರು 8 ತಿಂಗಳು ಮಂಗಳೂರಿ ನಿಂದ ಪ್ರಕಟಗೊಂಡಿತ್ತು. ಬಳಿಕ ಮೊಗ್ಲಿಂಗ್‌ ಅವರು ತನ್ನ ಕಾರ್ಯಸ್ಥಾನ ವನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿದರು. ಮಂಗಳೂರು ಸಮಾಚಾರ “ಕಂನಡ ಸಮಾಚಾರ’ ಎಂಬ ಹೆಸರಿನಲ್ಲಿ ಅಲ್ಲಿಂದ ಪ್ರಕಟ ಗೊಳ್ಳಲು ಆರಂಭವಾಯಿತು. ಮೊಗ್ಲಿಂಗ್‌ ಅವರ ಆಪ್ತನಾಗಿದ್ದ ಇನ್ನೊಬ್ಬ ಮಿಶ‌ನರಿ ರೀಡ್‌ ಎಂಬವರು ಪತ್ರಿಕೆಯ ಪ್ರಕಟನೆ ಜವಾಬ್ದಾರಿ ಹೊತ್ತುಕೊಂಡರು. ಆದರೆ ರೀಡ್‌ ಅವರ ಮರಣಾನಂತರ ಪತ್ರಿಕೆಯ ಪ್ರಸರಣಕ್ಕೆ ತೀವ್ರ ಹೊಡೆತ ಬಿತ್ತು. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಪತ್ರಿಕೆ ಅಲ್ಲಿ ಬಾಳಲಿಲ್ಲ.

ಪ್ರಯೋಗ ಭೂಮಿ
ಕರ್ನಾಟಕದ ಕರಾವಳಿ ಕನ್ನಡ ಪತ್ರಿಕೋದ್ಯಮಕ್ಕೆ ಮಹತ್ವದ ಕೊಡುಗೆ ನೀಡಿರುವ ಪ್ರಯೋಗ ಭೂಮಿ. ಸ್ವಾತಂತ್ರÂಪೂರ್ವ ಮತ್ತು ಸ್ವಾತಂತ್ರೊÂàತ್ತರವಾಗಿ ಪತ್ರಿಕಾ ರಂಗ ಇಲ್ಲಿ ಅನೇಕ ವಿಶಿಷ್ಟ ಪ್ರಯೋಗ, ಕೊಡುಗೆಗಳೊಂದಿಗೆ ಸಾಗುತ್ತಾ ಬಂದಿದೆ. ಅಂಕಿ ಅಂಶಗಳ ಪ್ರಕಾರ 1843ರಿಂದ 1947ರ ವರೆಗೆ ಸುಮಾರು 95 ಪತ್ರಿಕೆಗಳಿದ್ದವು. 1947ರಿಂದ
2015ರ ವರೆಗೆ ಸುಮಾರು 480 ಪತ್ರಿಕೆಗಳ ಉದಯವಾಯಿತು. ಇಂದು ಇದರಲ್ಲಿ ಕೆಲವೇ ಕೆಲವು ಪತ್ರಿಕೆಗಳು ಮಾತ್ರ ಉಳಿದುಕೊಂಡಿದೆ.

Advertisement

ಆಶಯ ಮತ್ತು ಸವಾಲುಗಳು
ಮುದ್ರಣ ಮಾಧ್ಯಮ ಅದರಲ್ಲೂ ಕನ್ನಡ ಮಾಧ್ಯಮ 179 ವರ್ಷಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾ ಸ್ಥಿತ್ಯಂತರ ಕಂಡಿದೆ. ಆದರೆ ಇಲ್ಲಿ ಗಮನಿಸ ಬೇಕಾದ ಮುಖ್ಯ ಅಂಶವೆಂದರೆ ಯಾವುದೇ ಸ್ಥಿತ್ಯಂತರಗಳಾದರೂ ಹರ್ಮನ್‌ ಮೊಗ್ಲಿಂಗ್‌ ಅವರು ಮಂಗಳೂರು ಸಮಾಚಾರ ಆರಂಭದ ವೇಳೆ ವಾರ್ತಾಪತ್ರಿಕೆಗೆ ಹಾಕಿಕೊಟ್ಟಿರುವ ಮೂಲ ಸ್ವರೂಪ ನೆಲೆಗಟ್ಟಿನ ಮೇಲೆಯೇ ಇದು ಬೆಳೆದುಬಂದಿದೆ ಎಂಬುದನ್ನು ಗಮನಿಸಬೇಕಾಗಿದೆ. ವರ್ತಮಾನ, ಸರಕಾರಿ ನಿರೂಪಣೆ,/ಕಾನೂನು. (ಸರಕಾರಿ ಪ್ರಕಟನೆಗಳು) ಸುಬುದ್ಧಿ ಯನ್ನು ಕೊಡುವ ಸಾಮತಿಗಳು ( ವೈಚಾರಿಕ, ನೀತಿ ಬೋಧಕ ಲೇಖನಗಳು) ಕಥೆಗಳು, ಸರ್ವರಾಜ್ಯ ವರ್ತಮಾನಗಳು ( ದೇಶ, ವಿದೇಶಗಳ ಸುದ್ದಿಗಳು) ಮಂಗಳೂರು ಸಮಾಚಾರ ಪತ್ರಿಕೆಯ ಅಡಕಗಳಾಗಿದ್ದವು.

ಪತ್ರಿಕೆಗಳು ಓದುಗರನ್ನು ತಲುಪಬೇಕಾದರೆ ಅವರ ಧ್ವನಿಯಾಗಿ ಕಾರ್ಯ ನಿರ್ವಹಿಸಬೇಕು ಎಂಬ ಪರಿಕಲ್ಪನೆಯನ್ನು ಹೊಂದಿದ್ದ ಮೊಗ್ಲಿಂಗ್‌ ಅವರು ವಾಚಕರ ವಾಣಿಗೂ ಅದ್ಯತೆ ನೀಡಿದ್ದರು. ಅಧುನಿಕ ಕಾಲಘಟ್ಟದಲ್ಲಿ, ಪರಿವರ್ತನೆಯ ನಾಗಾಲೋಟದಲ್ಲಿ ಈ ಅಂಶಗಳ ಪ್ರಸ್ತುತಿ ಸ್ವರೂಪದಲ್ಲಿ, ಪರಿವರ್ತನೆಗಳಾಗಿವೆ. ಬದ ಲಾವಣೆಗಳನ್ನು ಕಂಡಿವೆ. ಆದರೆ ಆಶಯಗಳು ಹಾಗೆಯೇ ಉಳಿದುಕೊಂಡಿವೆ ಮತ್ತು ಇದುವೇ ಪತ್ರಿಕೆಯ ಜೀವಾಳವಾಗಿದೆ ಎಂಬುದು ವಾಸ್ತವಿಕತೆ.

ಹೈಪರ್‌ಲೋಕಲ್‌ ಪರಿಕಲ್ಪನೆ
ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣ, ಆನ್‌ಲೈನ್‌ ಮಾಧ್ಯಮಗಳ ಭರಾಟೆಯಲ್ಲಿ ಮುದ್ರಣ ಮಾಧ್ಯಮ ನಶಿಸುತ್ತಿದೆ ಎಂಬ ವಿಚಾರವಿದೆ. ಸಾಮಾಜಿಕ ತಾಣಗಳು ಕೂಡ ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಸುದ್ದಿಗಳು ಅತೀ ವೇಗವಾಗಿ ಪ್ರಸ್ತುತಿಯಾಗುತ್ತಿವೆ. ಸ್ಮಾರ್ಟ್‌ ಫೋನ್‌, ಇಂಟರ್ನೆಟ್‌ ಸಂಪರ್ಕದಲ್ಲಿ ಜಗತ್ತಿನ ಆಗು ಹೋಗುಗಳನ್ನು ಅಂಗೈಯಲ್ಲಿ ಹಿಡಿದುಕೊಂಡು ನೋಡಬಹುದು. ಆದರೆ ಸುದ್ದಿಯ ನಿಖರತೆ, ಸ್ಪಷ್ಟತೆ, ವಿಸ್ತೃತೆಯಿಂದಾಗಿ ಈ ಎಲ್ಲ ಸವಾಲುಗಳ ನಡುವೆಯೂ ಮುದ್ರಣ ಮಾಧ್ಯಮ ಜನರೊಂದಿಗೆ ನಿಕಟ ಸಂಬಂಧವನ್ನು ಇರಿಸಿಕೊಂಡಿದೆ.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮ ತನ್ನ ಪ್ರಸ್ತುತಿಯ ಮಗ್ಗುಲುಗಳನ್ನು ಒಂದಷ್ಟು ಬದಲಾಯಿಸಿಕೊಳ್ಳಲೇ ಬೇಕಾದ ಅನಿವಾರ್ಯ ಇದೆ. ಈ ಕಾರಣದಿಂದಲೇ ಸ್ಥಳೀಯ (ಲೋಕಲ್‌) ಮತ್ತು ತೀರಾ ಸ್ಥಳೀಯ (ಹೈಪರ್‌ಲೋಕಲ್‌) ಸುದ್ದಿಗಳು ಹಾಗೂ ವಿದ್ಯಮಾನಗಳಿಗೂ ಆದ್ಯತೆ ಸಿಗಲಾರಂಭಿಸಿದೆ. ಮುದ್ರಣ ಮಾಧ್ಯಮಗಳು ಆಧುನಿಕ ತಂತ್ರಜ್ಞಾನ ಮಾಧ್ಯಮಗಳ ನಡುವೆಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಮುನ್ನಡೆಯಲು ಈ ಪರಿಕಲ್ಪನೆ ಕಾರಣವಾಗಿದೆ.

ಎಲ್ಲ ಸವಾಲುಗಳ ಮಧ್ಯೆಯೂ ಪತ್ರಿಕಾ ರಂಗದ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ಮೌಲ್ಯಗಳು ವಾಣಿಜ್ಯೀಕರಣಗೊಳ್ಳದಂತೆ ಎಚ್ಚರ ವಹಿಸಿ ಸಮತೋಲನ ಕಾಯ್ದುಕೊಂಡು ಸಾಗಬೇಕಾಗಿದೆ.

ಹರ್ಮನ್‌ ಫ್ರೆಡರಿಕ್‌ ಮೊಗ್ಲಿಂಗ್‌
ರೆವರೆಂಡ್‌ ಹರ್ಮನ್‌ ಫ್ರೆಡರಿಕ್‌ ಮೊಗ್ಲಿಂಗ್‌ “ಕನ್ನಡ ಪತ್ರಿಕಾ ರಂಗದ ಪಿತಾಮಹ’ ಜರ್ಮನಿಯ ಬ್ರಾಕಸ್‌ಹೀಮ್‌ ಗ್ರಾಮದಲ್ಲಿ 1811ರಲ್ಲಿ ಜನಿಸಿದರು. 1834ರಲ್ಲಿ ತನ್ನ ವ್ಯಾಸಂಗವನ್ನು ಮುಗಿಸಿ ಧರ್ಮ ಪ್ರಚಾರಕರಾಗಿ ಸೇವೆಯನ್ನು ಪ್ರಾರಂಭಿಸಿ 1836ರಲ್ಲಿ ಮಂಗಳೂರಿಗೆ ಆಗಮಿಸಿ ಕನ್ನಡ ಕಲಿತರು. ಕನ್ನಡಕ್ಕಾಗಿ ಸಲ್ಲಿಸಿದ ಮಹತ್ತರ ಕಾರ್ಯಕ್ಕಾಗಿ 1858ರಲ್ಲಿ “ಗೌರವ ಡಾಕ್ಟರೆಟ್‌’ ಪ್ರಶಸ್ತಿಯೂ ಇವರಿಗೆ ಒಲಿಯಿತು. ಕನ್ನಡ ಪರ ಸೇವೆಗಾಗಿ ದೊರೆತ ಮೊತ್ತ ಮೊದಲ ಡಾಕ್ಟರೆಟ್‌ ಪದವಿ ಇದಾಗಿದೆ. ಮೊಗ್ಲಿಂಗ್‌ ಲೇಖಕ, ಸಾಹಿತಿ, ಇತಿಹಾಸಕಾರ, ತರ್ಜುಮೆ ದಾರರಾಗಿಯೂ ಗುರು ತಿಸಿಕೊಂಡಿದ್ದಾರೆ. 1881ರಲ್ಲಿ 70ನೇ ವರ್ಷದಲ್ಲಿ ಕೊನೆ ಯುಸಿರೆಳೆದರು. ಇವರ‌ ಸಮಾಧಿ ಜರ್ಮನಿಯ ಲ್ಲಿದ್ದು, ಪುತ್ಥಳಿಯೊಂದು ಮಂಗಳೂರಿನ ಬಲ್ಮಠದ ಬಾಸೆಲ್‌ ಮಿಶನ್‌ ಸಂಸ್ಥೆಯ ಆವರಣದಲ್ಲಿದೆ.

– ಕೇಶವ ಕುಂದರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next