Advertisement

ಫೇಸ್‌ಬುಕ್‌ ಪ್ರಿಯಕರನಿಗಾಗಿ ಗಂಡನನ್ನೇ ಕೊಲೆ ಮಾಡಿಸಿದ ನವವಿವಾಹಿತೆ!

11:52 AM May 09, 2018 | |

ವಿಜಯವಾಡ: ಆಂಧ್ರದಲ್ಲಿ ನಡೆದ ಅತ್ಯಂತ ಕಳವಳಕಾರಿ ಘಟನೆಯೊಂದರಲ್ಲಿ ನವವಿವಾಹಿತೆಯೊಬ್ಬಳು ಪ್ರಿಯಕರನೊಂದಿಗೆ ಸಂಚು ಹೂಡಿ  ಪತಿಯನ್ನೇ ಬರ್ಬರವಾಗಿ ಹತ್ಯೆಗೈದಿದ್ದಾಳೆ.

Advertisement

ವಾಜಿಯಾನಗರಂನಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿ ಮಹಿಳೆ ಮತ್ತು ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಸರಸ್ವತಿ ಎಂಬ ಯುವತಿ ಪದವಿ ವ್ಯಾಸಂಗ ಮಾಡುತ್ತಿದ್ದ ವೇಳೆ ಶಿವ ಎಂಬ ಯುವಕನೊಂದಿಗೆ ಫೇಸ್‌ಬುಕ್‌ನಲ್ಲಿ ಪರಿಚಿತಳಾಗಿದ್ದು, ಆ ಬಳಿಕ ಅದು ಗಾಢ ಪ್ರೇಮಕ್ಕೆ ತಿರುಗಿದೆ. 

ಈ ನಡುವೆ ಸರಸ್ವತಿಗೆ ಹತ್ತಿರದ ಸಂಬಂಧಿಯಾಗಿರುವ ಶಂಕರ್‌ ರಾವ್‌ ಎನ್ನುವ ಇಂಜಿನಿಯರ್‌ರೊಂದಿಗೆ ವಿವಾಹವಾಗಿದೆ. ಮದುವೆ ಸರಸ್ವತಿ ಇಷ್ಟಕ್ಕೆ ವಿರುದ್ಧವಾಗಿ ಒತ್ತಾಯಪೂರ್ವಕವಾಗಿ ನಡೆದಿದೆಯೋ ಎನ್ನುವುದು ತಿಳಿದು ಬಂದಿಲ್ಲ. 

ಮದುವೆಯಾದ ಬಳಿಕವೂ ಶಿವನೊಂದಿಗೆ ಸಂಪರ್ಕದಲ್ಲಿದ್ದ ಸರಸ್ವತಿ ಪತಿಯನ್ನು ಕೊಲೆಗೈಯಲು ಸಂಚು ರೂಪಿಸಿ ಅದಕ್ಕೆ ಸ್ಥಳ ಮತ್ತು ಸಮಯವನ್ನೂ ನಿಗದಿ ಮಾಡಿದ್ದಾಳೆ. 

Advertisement

ಮದುವೆಯಾಗಿ 10 ದಿನಗಳಲ್ಲಿ ಬೈಕ್‌ನಲ್ಲಿ ಪತಿಯೊಂದಿಗೆ ಶಾಪಿಂಗ್‌ಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ನಿರ್ಜನ ಪ್ರದೇಶದಲ್ಲಿ  ಮೂತ್ರ ವಿಸರ್ಜನೆಗೆಂದು ಬೈಕ್‌ ನಿಲ್ಲಿಸುವಂತೆ ಹೇಳಿ ದ್ದಾಳೆ. ಸ್ಥಳದಲ್ಲಿದ್ದ ಪೊದೆಗಳ ಮರೆಯಲ್ಲಿ ಅಡಗಿದ್ದಾಳೆ. ಈ ವೇಳೆ ಆಟೋರಿಕ್ಷಾದಲ್ಲಿ ಬಂದ ದುಷ್ಕರ್ಮಿಗಳು ಕಬ್ಬಿಣದ ರಾಡ್‌ನಿಂದ ಶಂಕರ್‌ರಾವ್‌ ಅವರನ್ನು ಇರಿದು ಬರ್ಬರವಾಗಿ ಹತ್ಯೆಗೈದಿದ್ದಾರೆ. 

ನಾಟಕ ಆಡಿದ ಸರಸ್ವತಿ ತನ್ನ ಆಭರಣಗಳನ್ನು ಕಳಚಿಟ್ಟು,ಯಾರೋ ದುಷ್ಕರ್ಮಿಗಳು ನನ್ನ ಪತಿಯನ್ನು ಹತ್ಯೆಗೈದು ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ಬೊಬ್ಬಿಟ್ಟಿದ್ದಾಳೆ. 

ಪೊಲೀಸರು ಪ್ರಕರಣದಲ್ಲಿ ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next