Advertisement

ಮತ್ತೆ ಮಳೆಯ ಮುನ್ಸೂಚನೆ: ಭಾರತಕ್ಕೆ ಸರಣಿ ಜಾರುವ ಆತಂಕ

11:32 PM Nov 29, 2022 | Team Udayavani |

ಕ್ರೈಸ್ಟ್‌ಚರ್ಚ್‌: ನ್ಯೂಜಿ ಲ್ಯಾಂಡ್‌ಗೆ ಬಂದಂದಿನಿಂದ ಟೀಮ್‌ ಇಂಡಿಯಾಕ್ಕೆ ಮಳೆಯದೇ ರಗಳೆ. ಬಹುತೇಕ ಪಂದ್ಯಗಳು ಮಳೆಯ ಹೊಡೆತಕ್ಕೆ ಸಿಲುಕಿವೆ. ಇದೀಗ ಕ್ರೈಸ್ಟ್‌ ಚರ್ಚ್‌ ಸರದಿ. ಇಲ್ಲಿ ಬುಧವಾರ ಅಂತಿಮ ಏಕದಿನ ಪಂದ್ಯ ನಡೆಯಲಿದೆ.

Advertisement

ಹವಾಮಾನ ಮುನ್ಸೂಚನೆಯಂತೆ ಈ ಪಂದ್ಯವೂ ಮಳೆಯ ಹೊಡೆತಕ್ಕೆ ಸಿಲುಕಲಿದೆ. ಸರಣಿಯನ್ನು ಸಮಬಲಕ್ಕೆ ತರಬೇಕಾದ ಒತ್ತಡದಲ್ಲಿರುವ ಭಾರತಕ್ಕೆ ಇದರಿಂದ ಹಿನ್ನಡೆಯಾಗುವ ಎಲ್ಲ ಸಾಧ್ಯತೆ ಇದೆ.

ಆಕ್ಲೆಂಡ್‌ನ‌ಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದ ಆತಿಥೇಯ ನ್ಯೂಜಿಲ್ಯಾಂಡ್‌ 1-0 ಮುನ್ನಡೆ ಸಾಧಿಸಿತು. ಬಳಿಕ ವೆಲ್ಲಿಂಗ್ಟನ್‌ ಮುಖಾಮುಖಿ ಕೇವಲ 12.5 ಓವರ್‌ಗಳಿಗೆ ಸೀಮಿತಗೊಂಡಿತು. ಹೀಗಾಗಿ ಕಿವೀಸ್‌ ಮುನ್ನಡೆ ಉಳಿಸಿ ಕೊಂಡಿತು.

ಸರಣಿಯನ್ನು ಸಮಬಲ ಗೊಳಿಸಬೇಕಾದರೆ ಭಾರತ ಬುಧವಾರ ಗೆಲ್ಲಲೇಬೇಕು. ಅಕಸ್ಮಾತ್‌ ಈ ಪಂದ್ಯವೂ ಮಳೆ ಪಾಲಾದರೆ ಶಿಖರ್‌ ಧವನ್‌ ಬಳಗ ಸರಣಿಯನ್ನು ಕಳೆದುಕೊಳ್ಳಲಿದೆ.

ಇದಕ್ಕೂ ಮುನ್ನ ಟಿ20 ಸರಣಿಯನ್ನು ಭಾರತ ಮಳೆಯಲ್ಲೇ ಗೆದ್ದಿತೆಂಬುದನ್ನು ಮರೆಯುವಂತಿಲ್ಲ. ಅಂತಿಮ ಪಂದ್ಯ ಟೈ ಆದ ಕಾರಣ ಸರಣಿ ಟೀಮ್‌ ಇಂಡಿಯಾ ಪಾಲಾಗಿತ್ತು. ಟಿ20ಯಲ್ಲಿ ಒಲಿದ ಅದೃಷ್ಟ ಏಕದಿನದಲ್ಲೂ ಒಲಿ ದೀತೇ? ಕುತೂಹಲ ಸಹಜ. ಇರಲಿ…

Advertisement

ಸೀಮರ್‌ಗಳಿಗೆ ನೆರವು?
ಪಂದ್ಯ ಯಾವುದೇ ಅಡಚಣೆ ಇಲ್ಲದೆ ಸಾಗಿದರೆ ಟೀಮ್‌ ಇಂಡಿಯಾ ಇದರ ಲಾಭವನ್ನು ಎತ್ತಬೇಕಿದೆ. “ಪಿಕ್ಚರ್‌ ಸ್ಕ್ವೇರ್‌’ ಮಾದರಿಯಲ್ಲಿರುವ “ಹ್ಯಾಗ್ಲಿ ಓವಲ್‌’ ಟ್ರ್ಯಾಕ್‌ ಸೀಮರ್‌ಗಳಿಗೆ ಹೆಚ್ಚು ಅನುಕೂಲವಾಗಿ ಪರಿಣಮಿಸುವುದು ವಾಡಿಕೆ. ಇಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಬುಧವಾರವೂ ಪಿಚ್‌ ಬದಲಾಗುವ ಸಾಧ್ಯತೆ ಕಡಿಮೆ. ಕಳೆದ ಕೆಲವು ವರ್ಷಗಳ ಏಕದಿನ ಪಂದ್ಯಗಳನ್ನು ಅವಲೋಕಿಸಿದಂತೆ, ಇಲ್ಲಿನ ಸರಾಸರಿ ರನ್‌ 230. ಮೊದಲು ಬ್ಯಾಟಿಂಗ್‌ ನಡೆಸಿದ ತಂಡ ಈ ಗಡಿಯನ್ನು ದಾಟಿ ಮುನ್ನಡೆದರೆ ಮೇಲುಗೈ ಸಾಧಿಸಬಹುದು ಎಂಬುದೊಂದು ಲೆಕ್ಕಾಚಾರ.

ಭಾರತದ ಸಮಸ್ಯೆ ಇರುವುದು ಮೊದಲ ಪವರ್‌ ಪ್ಲೇಯಲ್ಲಿ (ಮೊದಲ 10 ಓವರ್‌). ಇಲ್ಲಿ ನಿರೀಕ್ಷಿಸಿದಷ್ಟು ರನ್‌ ಬರುತ್ತಿಲ್ಲ. ಆದರೂ ಒಟ್ಟಾರೆಯಾಗಿ ಭಾರತದ ಬ್ಯಾಟಿಂಗ್‌ ಎರಡೂ ಪಂದ್ಯಗಳಲ್ಲಿ ಚೇತೋಹಾರಿಯಾಗಿಯೇ ಇದ್ದುದನ್ನು ಗಮನಿಸಬಹುದು. ಮೊದಲ ಪಂದ್ಯದಲ್ಲಿ ಮುನ್ನೂರರ ಗಡಿ ದಾಟಿತು. ಶಿಖರ್‌ ಧವನ್‌, ಶುಭಮನ್‌ ಗಿಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಅರ್ಧ ಶತಕ ಬಾರಿಸಿ ಮಿಂಚಿದ್ದರು. ಆದರೆ ಬ್ಯಾಟಿಂಗ್‌ ಟ್ರ್ಯಾಕ್‌ನಲ್ಲಿ ನಮ್ಮ ಬೌಲರ್‌ಗಳ ಆಟ ನಡೆಯಲಿಲ್ಲ.

ದ್ವಿತೀಯ ಪಂದ್ಯದ 12.5 ಓವರ್‌ಗಳಲ್ಲಿ ಒಂದು ವಿಕೆಟಿಗೆ 89 ರನ್‌ ಪೇರಿಸಿತು. ಗಿಲ್‌ ಮತ್ತು ಸೂರ್ಯಕುಮಾರ್‌ ಪ್ರಚಂಡ ಬೀಸುಗೆಗೆ ತೊಡಗಿದಾಗಲೇ ಮಳೆ ಸುರಿದಿತ್ತು. ಆದರೆ ಕ್ರೈಸ್ಟ್‌ಚರ್ಚ್‌ ಪಿಚ್‌ ಬೌಲರ್‌ಗಳಿಗೆ ಸಹಕರಿಸುವ ಸಾಧ್ಯತೆ ಇರುವುದರಿಂದ ಭಾರತ ಹೆಚ್ಚು ಎಚ್ಚರಿಕೆಯಿಂದ ಬ್ಯಾಟ್‌ ಬೀಸಬೇಕಿದೆ. ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿ ಒನ್‌ಡೇ ಸ್ಪೆಷಲಿಸ್ಟ್‌ ಗಳೇ ಗೋಚರಿಸುತ್ತಾರೆ. ಗಿಲ್‌, ಅಯ್ಯರ್‌, ಸೂರ್ಯಕುಮಾರ್‌, ಪಂತ್‌, ಹೂಡಾ, ಸಂಜು ಸ್ಯಾಮ್ಸನ್‌… ಎಲ್ಲರೂ ಬಿಗ್‌ ಹಿಟ್ಟರ್‌ಗಳೇ. ಇವರಲ್ಲಿ ತುಸು ಮಂಕಾಗಿರುವುದು ಪಂತ್‌ ಮಾತ್ರ.

ನಡೆದೀತೇ ಬೌಲಿಂಗ್‌ ಮ್ಯಾಜಿಕ್‌?
ಉಳಿದಂತೆ ಭಾರತ ತಂಡ ಸುಧಾ ರಣೆ ಕಾಣಬೇಕಾದದ್ದು ಬೌಲಿಂಗ್‌ ವಿಭಾಗದಲ್ಲಿ. ನ್ಯೂಜಿಲ್ಯಾಂಡ್‌ನ‌ ಬಲಿಷ್ಠ ಬ್ಯಾಟಿಂಗ್‌ ಸರದಿಗೆ ಬ್ರೇಕ್‌ ಹಾಕುವಷ್ಟು ಸಾಮರ್ಥ್ಯ ನಮ್ಮಲ್ಲಿಲ್ಲ. ಮೊದಲ ಪಂದ್ಯದಲ್ಲಿ ಕೇನ್‌ ವಿಲಿಯಮ್ಸನ್‌-ಟಾಮ್‌ ಲ್ಯಾಥಂ ಜೋಡಿಯನ್ನು ಮುರಿಯಲಾಗದೆ, ಈ ಜೋಡಿಗೆ ದ್ವಿಶತಕದ ಜತೆಯಾಟ ದಾಖಲಿಸಲು ಬಿಟ್ಟಿದ್ದು ಇದಕ್ಕೊಂದು ನಿದರ್ಶನ. ಆದರೆ ಕ್ರೈಸ್ಟ್‌ಚರ್ಚ್‌ನ ಬೌಲಿಂಗ್‌ ಪಿಚ್‌ ಅರ್ಷದೀಪ್‌, ದೀಪಕ್‌ ಚಹರ್‌, ಉಮ್ರಾನ್‌ ಮಲಿಕ್‌, ಶಾರ್ದೂಲ್ ಠಾಕೂರ್ ಅವರಿಗೆ ಹೆಚ್ಚಿನ ನೆರವು ನೀಡೀತೆಂಬುದೊಂದು ಲೆಕ್ಕಾಚಾರ.

ಆಗ ನ್ಯೂಜಿಲ್ಯಾಂಡ್‌ನ‌ ಟಿಮ್‌ ಸೌಥಿ, ಮ್ಯಾಟ್‌ ಹೆನ್ರಿ, ಲಾಕೀ ಫ‌ರ್ಗ್ಯುಸನ್‌ ಕೂಡ ಘಾತಕವಾಗಿ ಪರಿಣಮಿಸುವುದು ಖಂಡಿತ. ಹೀಗಾಗಿ ಇಲ್ಲಿ ಭಾರತದ ಬ್ಯಾಟರ್‌ಗಳಿಗೆ ಅಗ್ನಿಪರೀಕ್ಷೆ ಎದುರಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next