Advertisement

New Year: ಹೊಸ ಚೌಕುಳಿಯೊಳಗೆ ಹಳೆಯ ನೋವು..

12:59 PM Dec 31, 2023 | Team Udayavani |

ಹರುಷಗಳು ಜಾರುತ್ತವೆ. ಕಾಲದ ಚಕ್ರಕ್ಕೆ ಬ್ರೇಕುಗಳಿಲ್ಲ. ಯಾವ ಎಂಜಿನ್ನನ್ನು ಬಂದ್‌ ಮಾಡಿದರೂ ಅದು ನಿಲ್ಲುವುದಿಲ್ಲ. ನೆನ್ನೆ, ಮೊನ್ನೆಯಷ್ಟೇ ತಂದಂತಿದ್ದ ಹೊಚ್ಚ ಹೊಸ ಕ್ಯಾಲೆಂಡರ್‌ ನಾಳೆಯ ಹೊತ್ತಿಗೆಲ್ಲಾ ಹಳತಾಗುತ್ತದೆ. ಮುನ್ನೂರ ಅರವತೈದು ದಿನಗಳ ಕಾಲ ನಾವು ಬದುಕಿದ ಒಂದೊಂದು ನಿಮಿಷವೂ ಬಸ್ಸಿನ ಕಿಟಕಿಯಾಚೆ ಹಿಂದಕ್ಕೋಡಿದ ಮರ ಗಿಡಗಳಂತೆ ಹಿಂದಿನ ಅನಂತದಲ್ಲಿ ಮರೆಯಾಗುತ್ತವೆ. ಆದರೆ ಕೆಲವು ಘಟನೆಗಳು ಮಾತ್ರ ಅದು ಹೇಗೋ ಬದಲಾದ ಕ್ಯಾಲೆಂಡರಿನ ಹೊಚ್ಚ ಹೊಸ ನಾಳೆಗಳೊಳಕ್ಕೂ ಹರಿದುಬಂದು ಬಿಡುತ್ತವೆ.

Advertisement

ಆ ದಿನ ಉಳಿದ ದಿನಗಳಂತೆಯೇ ಆರಂಭವಾಯಿತು. ಆದರೆ ಎಂದಿನಂತೆ ಮುಗಿಯಲಿಲ್ಲ. ಆ ಪುಟ್ಟ ಮನೆಯ ಪುಟ್ಟ ಕೋಣೆಯಲ್ಲಿ ಬೆಂಕಿ ಧಗಧಗ ಉರಿಯುತ್ತಿತ್ತು. ನಾವೆಲ್ಲ ನೋಡುತ್ತಾ ನಿಂತಿದ್ದೆವು. ಮಂದಿ ನೀರೆರೆಚುತ್ತಿದ್ದರು. ಅರ್ಧ ಸುಟ್ಟ ನನ್ನ ಗೆಳೆಯ ಹೊರಗಡೆ ಜಗುಲಿಯಲ್ಲಿ ನರಳುತ್ತಾ ಮಲಗಿದ್ದ. ತಡೆಯಲಾರದ ಉರಿಗೆ ಹೊದ್ದುಕೊಳ್ಳಲು ಒಂದು ಪಂಚೆಯನ್ನು ಬೇಡುತ್ತಾ ನರಳುತ್ತಿದ್ದ. ಕೋಣೆಯೊಳಗಣ ಬೆಂಕಿ ಕಿಟಕಿಯ ಸಮೀಪ ಸಹ ಹೋಗಗೊಡದೆ ಧಗಧಗಿಸುತ್ತಿತ್ತು. ಹೊತ್ತಿದ ಬೆಂಕಿಗಳೆಲ್ಲ ಆರಲೇಬೇಕು. ಈ ಜ್ವಾಲೆಯೂ ನಂದಿತು ನಿಜ, ಆದರೆ ಆರುವ ಮುನ್ನ ನಾಲ್ಕು ಜೀವಗಳನ್ನು ಇನ್ನೆಂದೂ ಉಸಿರಾಡಲಾರದಂತೆ ಬೂದಿಮಾಡಿ ಹೋಯಿತು. ಕೆಲವೇ ಗಂಟೆಗಳ ಕೆಳಗೆ, ಹಿಂದಿನ ದಿನ ಸಂಜೆ ಹಾದಿಯಲ್ಲಿ ಸಿಕ್ಕು “ನಮ್ಮನೆಗೆ ಬಾರೋ’ ಎಂದಿದ್ದ ಪುಟ್ಟ ತಮ್ಮನಂಥಾ ಗೆಳೆಯ ಹಾಗೂ ಅವನ ಇಡೀ ಕುಟುಂಬ ಇದ್ದಿಲಲ್ಲಿ ಕೆತ್ತಿದ ಭಗ್ನ ವಿಗ್ರಹಗಳಂತೆ ನಿಶ್ಚಲವಾಗಿ ಮಲಗಿದ್ದರು. ಜನರೆಲ್ಲ ಎರಚಿದ ನೀರಿಗೆ ಶವಗಳ ಮೇಲಿನ ಜ್ವಾಲೆಯನ್ನು ನಿಲ್ಲಿಸಲು ಸಾಧ್ಯವಾಯಿತೇ ಹೊರತು ತೆರಳಿದ ಜೀವಗಳ ಮರಳಿಸಲು ಆಗಲೇಇಲ್ಲ.

ದಿನಗಳು ಕಳೆದಿವೆ. ವಾರಗಳುರುಳಿವೆ. ತಿಂಗಳುಗಳು ಕಳೆದು ವರುಷವೇ ಬದಲಾಗಿದೆ. ಆದರೆ ಆ ದೌರ್ಭಾಗ್ಯದ ಮನೆಯ ಸುತ್ತ ಮಾತ್ರ ಕಾಲ ಸ್ತಂಭಿಸಿದೆ. ಆ ಹತಭಾಗ್ಯ ಜೀವಗಳ ನರಳಾಟ ಇನ್ನಾದರೂ ಅಲ್ಲಿ ಉಳಿದೇ ಹೋಗಿದೆ. ಇಂಥಾ ಇನ್ನೆಷ್ಟು ಹೊಸ ವರ್ಷಗಳು ಕಳೆದರೂ ಆ ಯಾತನೆಗೆ, ಆ ಆರ್ತನಾದಕ್ಕೆ ಮುಕ್ತಿಯಿಲ್ಲ. ಹೊಸ ವರ್ಷದ ಹೊಸ ಚೌಕಳಿಗಳೆಲ್ಲದರೊಳಗೆ ಹರಿಯಲು ಆ ಹಳೆಯ ವೇದನೆ ಪ್ರವಾಹವಾಗಿ ಕಾಯುತ್ತಿದೆ.

-ವಿನಾಯಕ ಅರಳಸುರಳಿ, ತೀರ್ಥಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next