Advertisement

ಸೋಲಿಗರಿಗೆ ಹೊಸ ಬದುಕು ಕೊಟ್ಟ ಲಂಟಾನ!

07:29 PM Dec 21, 2020 | Suhan S |

ಕಾಡುಗಳಲ್ಲಿ ಪೊದೆಗಳ ರೂಪದಲ್ಲಿಕಾಣಿಸಿಕೊಳ್ಳುವ ಲಂಟಾನವನ್ನು ಈವರೆಗೂ ನಿರುಪಯೋಗಿ ಎಂದೇ ಭಾವಿಸಲಾಗಿತ್ತು. ಆದರೆ ಈಗ, ಅದೇ ಲಂಟಾನದ ಕಡ್ಡಿಗಳಿಂದ ಸೋಫಾಸೆಟ್‌, ಮಂಚ, ಸೇರಿದಂತೆ ಹಲಬಗೆಯ ಪೀಠೊಪಕರಣಗಳು ತಯಾರಾಗುತ್ತಿವೆ.

Advertisement

ಇದರಿಂದಾಗಿ ಕಾಡಂಚಿನಲ್ಲಿರುವ ಜನರಿಗೆ ಹೊಸದೊಂದು ಉಪ ಕಸುಬು ಆರಂಭಿಸಲು ಸಾಧ್ಯವಾಗಿದೆ. ಅರಣ್ಯ ಪ್ರದೇಶಗಳಲ್ಲಿ ಆಳೆತ್ತರಕ್ಕೆ ಬೆಳೆಯುವ ಲಂಟಾನ, ಸಸ್ಯರಾಶಿ ಬೆಳೆಯಲಿಕ್ಕೂ ಅವಕಾಶ ಕೊಡುವುದಿಲ್ಲ. ಲಂಟಾನ ಗಿಡಗಳ ಮಧ್ಯೆ ಮುಕ್ತವಾಗಿ ಓಡಾಡಲು ಪ್ರಾಣಿಗಳಿಗೂ ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಲಂಟಾನಕ್ಕೆ ಒಂದುಕಿಡಿ ಬೆಂಕಿ ಬಿದ್ದರೂ ಕ್ಷಣಾರ್ಧದಲ್ಲಿ ಇಡೀ ಅರಣ್ಯವನ್ನು ವ್ಯಾಪಿಸುತ್ತದೆ. ಹೀಗೆ ಪ್ರಾಣಿ, ಸಸ್ಯ ಮತ್ತು ಅರಣ್ಯಕ್ಕೆ “ಕಂಟಕ’ವಾಗಿರುವ ಲಂಟಾನ,ಕಾಡಂಚಿನಲ್ಲಿರುವ ಜನರಿಗೆ ನಾಲ್ಕುಕಾಸು ಸಂಪಾದನೆಯ ಹೊಸ ಸಾಧ್ಯತೆಯಾಗಿ ಕಾಣತೊಡಗಿದೆ.

ಇದೇ ಲಂಟಾನದಿಂದಲೇ ಚಾಮರಾಜನಗರ ಜಿಲ್ಲೆಯ ಬಿ.ಆರ್‌.ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತ ವಾಸಿಸುವಕೆಲ ಸೋಲಿಗರು ಪೀಠೊಪಕರಣ ತಯಾರಿಸುವ ಮೂಲಕ ಬದುಕುಕಂಡುಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಇವರಿಗೆ ಬೆನ್ನೆಲುಬಾಗಿ ನಿಂತು ಸಹಕಾರ ನೀಡುತ್ತಿದ್ದಾರೆ.

ಅರಣ್ಯಕ್ಕೆ ಸವಾಲಾಗಿ ಪರಿಣಮಿಸಿರುವ ಲಂಟಾನವನ್ನು ಕೀಳಲು ಅರಣ್ಯಾಧಿಕಾರಿಗಳು ಸೋಲಿಗರಿಗೆ ತಿಳಿಸುತ್ತಿದ್ದಂತೆ,ನಾಲ್ಕೈದು ಮಂದಿ ಲಂಟಾನಾದ ಕಡ್ಡಿಗಳನ್ನು ಕಡಿದು ಪೋಡಿಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಈ ಲಂಟಾನದ ಕಡ್ಡಿಗಳಿಂದಲೇ ಸೋಫಾ ಸೆಟ್‌, ಮಂಚ, ಬುಕ್‌ ಸ್ಟ್ಯಾಂಡ್‌, ಕಾರ್ನರ್‌ ಸ್ಟ್ಯಾಂಡ್‌, ಬೇಬಿ ಚೇರ್‌, ಡೈನಿಂಗ್‌ ಟೇಬಲ್, ಡಸ್ಟ್‌ಬಿನ್‌, ತೊಟ್ಟಿಲು ಇತ್ಯಾದಿ ಪೀಠೊಪಕರಣಗಳನ್ನು ತಯಾರಿಸುತ್ತಾರೆ.

ಮಾಡುವ ವಿಧಾನ :

Advertisement

ಲಂಟಾನದಕಡ್ಡಿಗಳನ್ನು ಡ್ರಮ್‌ನಲ್ಲಿ 2 ರಿಂದ 3 ಗಂಟೆ ಕುದಿಯುವ ನೀರಲ್ಲಿ ಬೇಯಿಸಿದ ಮೇಲೆ ಅದರ ಚಿಪ್ಪೆತೆಗೆದು ಎಷ್ಟು ದಿನಗಳಾದರೂ ಹಾಗೇ ಬಿಡಬಹುದು. ಈ ವಿಧಾನವನ್ನುಅನುಸರಿಸುವ ಸೋಲಿಗರು ವಿವಿಧ ರೀತಿಯ ಪೀಠೊಪಕರಣಕ್ಕೆ ಆರ್ಡರ್‌ ಬರುತ್ತಿದ್ದಂತೆ, ಅಗತ್ಯ ವಸ್ತುಗಳ ತಯಾರಿಕೆಗೆ ಮುಂದಾಗುತ್ತಾರೆ. ಲಂಟಾನವನ್ನು ಯಾವ ರೀತಿ ಬೇಕಾದರೂ ಬೆಂಡ್‌ ಮಾಡಿ ಪೀಠೊಪಕರಣ ತಯಾರಿಸಬಹುದು. ವಾರ್ನಿಸ್‌ಗೆ ಟೀಕ್‌ ಪೌಡರ್‌ ಹಾಕಿ ಪಾಲೀಶ್‌ಮಾಡಲಾಗುತ್ತದೆ. ಹೀಗೆ ತಯಾರಿಸಿದ ಪೀಠೊಪಕರಣಗಳಿಗೆಕುಶನ್‌ ಹಾಕುವುದಿಲ್ಲ. ಒಂದು ಸೋಫಾ ಸೆಟ್‌ (ಒಂದು ಸೀಟಿನ) ಬೆಲೆ2500 ರೂ. ಅದನ್ನು ತಯಾರಿಸಲು 2 ದಿನ ಬೇಕಾಗುತ್ತದೆ.500 ರೂ. ಖರ್ಚು ಬರುತ್ತದೆ. ಉಳಿದ 2000 ರೂ.ಗಳನ್ನು ಎಲ್ಲರೂ ಹಂಚಿಕೊಳ್ಳುತ್ತೇವೆ. ಒಂದು ಸೀಟಿನದ್ದು ಮಾತ್ರವಲ್ಲ, ಎರಡು, ಮೂರು ಸೀಟಿನ ಸೋಫಾ ಸೇರಿದಂತೆ ವಿವಿಧ ಪೀಠೊಪಕರಣಕ್ಕೆ ಬೇರೆ ಬೇರೆ ದರ ಇದೆ ಎನ್ನುತ್ತಾರೆ, ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಅರ್ಧ ಕಿ.ಮೀ ಸಮೀಪದಲ್ಲೇ ಇರುವ ಬೆಲ್ಲತಾ ಪೋಡಿಯ (ಗ್ರಾಮ)32 ವರ್ಷದ ಪಾಪಣ್ಣ.

ಡೆಹ್ರಾಡೂನ್‌ನಲ್ಲಿ ತರಬೇತಿ :

ಏಟ್ರಿಯಾ ಸಂಸ್ಥೆಯಿಂದ ದಶಕಗಳ ಹಿಂದೆ ಎಂಎಂ ಹಿಲ್ಸ್ ನ ನಾಲ್ವರು ಸೋಲಿಗರನ್ನು ಡೆಹ್ರಾಡೂನ್‌ಗೆಕರೆದೊಯ್ದು ಒಂದು ವಾರ ತರಬೇತಿ ಕೊಡಿಸಲಾಗಿದೆ. ನಂತರ ಅವರೇ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಹಾಗೂ ಎಂಎಂ ಹಿಲ್ಸ್ ನ ಕೆಲ ಸೋಲಿಗರಿಗೆ ತರಬೇತಿ ನೀಡಿದ್ದಾರೆ. ಸದ್ಯ ಬೆಲ್ಲತ ಹಾಗೂ

ಎಂ.ಎಂ. ಹಿಲ್ಸ್‌ನಲ್ಲಿ2 ಕಡೆ ಸೋಲಿಗರು ಪೀಠೊಪಕರಣ ಮಾಡುತ್ತಿದ್ದರೆ, ಪೊನ್ನಾಚಿ,ಕೋಣನಕೆರೆ, ಪಾಲಾರ್‌ನಲ್ಲಿ ಈ ಕೆಲಸ ಸ್ಥಗಿತಗೊಂಡಿದೆ ಎಂದರು ಪಾಪಣ್ಣ. ಇತ್ತೀಚೆಗೆ ಆರ್ಡರ್‌ ಬರುವುದುಕಡಿಮೆಯಾಗಿದೆ. ತಿಂಗಳಿಗೆ ಒಂದೆರಡು ಆರ್ಡರ್‌ ಬಂದರೆ ಹೆಚ್ಚು. ಆರ್ಡರ್‌ ಮಾಡಿದವರಿಗೆ ಆಟೋ, ಟಾಟಾ ಏಸ್‌ ವಾಹನಗಳಲ್ಲಿ ಪೂರೈಸುತ್ತೇವೆ. ಪೀಠೊಪಕರಣಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳುಕಚೇರಿ ಹಾಗೂ ಮನೆಗಳಿಗೂ ಖರೀದಿಸುವ ಮೂಲಕ ನಮ್ಮಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾ ರೆಂದು ಕೃತಜ್ಞತೆಯಿಂದ ನೆನೆಯುತ್ತಾರೆ ಪಾಪಣ್ಣ.

ಆನೆ ತಯಾರಿಸಲು ತಿಂಗಳು ಬೇಕು! :

ಆನೆ ಹೊರತಾಗಿ ಉಳಿದೆಲ್ಲಾ ಪೀಠೊಪಕರಣಗಳನ್ನು ಆರ್ಡರ್‌ಗೆ ತಕ್ಕಂತೆ ಪಾಪಣ್ಣ ಹಾಗೂ ಅವರ ತಂಡದವರು ತಯಾರಿಸುತ್ತಾರೆ. ಆನೆಗಳ ತಯಾರಿಕೆಯನ್ನು ಮಾತ್ರ ಗೂಂಡ್ಲೂರು ಸಂಸ್ಥೆಯೊಂದರಲ್ಲಿ ತಯಾರಿಸಲಾಗುತ್ತದೆ. ದೊಡ್ಡ ಗಾತ್ರದ ಆನೆ ತಯಾರಿಸಲು ಮೊದಲಿಗೆಕಬ್ಬಿಣದ ಸರಳುಗಳಿಂದ ಫ್ರೇಮ್  ಮಾಡಿ ಬಳಿಕ ಲಂಟಾನದಿಂದ ವಿನ್ಯಾಸ ಮಾಡಲಾಗುತ್ತದೆ. ಇದಕ್ಕಾಗಿ 5 ಜನ ಒಂದು ತಿಂಗಳು ಶ್ರಮಪಡುತ್ತೇವೆ. ದಿನಕ್ಕೆ500 ರೂ.ಕೂಲಿ ಸಿಗುತ್ತದೆ ಎನ್ನುತ್ತಾರೆ ಪಾಪಣ್ಣ.

ಅರಣ್ಯ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಗಳ ವೇಳೆ ಪೀಠೊಪಕರಣತಯಾರಿಸುವ ಸೋಲಿಗರನ್ನು ಕರೆಸಿ, ಅವರ ಉತ್ಪನ್ನಗಳಿಗೆ ಪ್ರಚಾರ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಔಟ್‌ಲೆಟ್‌ಗಳಲ್ಲಿ ಇವರ ಪೀಠೊಪಕರಣಗಳ ಬಗ್ಗೆ ಜನರಿಗೆ ತಿಳಿಸುವಬಗ್ಗೆಯೂ ಯೋಚಿಸುತ್ತಿದ್ದೇವೆ. ಸಂತೋಷ ಕುಮಾರ್‌, ನಿರ್ದೇಶಕರು, ಬಿಆರ್‌ಟಿಹುಲಿಸಂರಕ್ಷಿತ ಅರಣ್ಯ ಪ್ರದೇಶ

 

ನಾಗಪ್ಪ ಎಸ್‌. ಹಳ್ಳಿಹೊಸೂರು

Advertisement

Udayavani is now on Telegram. Click here to join our channel and stay updated with the latest news.

Next